ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ – 13 ಗಂಟೆಗಳ ಬಳಿಕ ವಿಮಾನ ಹಾರಾಟ!

ಮಂಗಳೂರು: ಬಂದರು ನಗರಿ ಮಂಗಳೂರು ವಿಮಾನ ನಿಲ್ದಾಣದಿಂದ ಸೋಮವಾರ (ಜುಲೈ 10) ತಡರಾತ್ರಿ 11 ಗಂಟೆಗೆ ದುಬೈ ಗೆ ಹೊರಡಬೇಕಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ತಾಂತ್ರಿಕ ದೋಷದಿಂದ ನಿಲ್ದಾಣದಲ್ಲಿಯೇ ಉಳಿದಿತ್ತು. ಇದರಿಂದಾಗಿ ಪ್ರಯಾಣಿಕರು ಪರದಾಡುವಂತಾಗಿತ್ತು. ಇದೀಗ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಕೊನೆಗೂ ಟೇಕ್ ಆಫ್ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೋಮವಾರ ತಡರಾತ್ರಿ 11 ಗಂಟೆಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ(ಎಂಐಎ) ಸೋಮವಾರ ಟೇಕಾಫ್ ಆಗಬೇಕಿದ್ದ ಮಂಗಳೂರು – ದುಬೈ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ತಾಂತ್ರಿಕ ದೋಷದಿಂದ ನಿಲ್ದಾಣದಲ್ಲೇ ಉಳಿದುಕೊಂಡಿತ್ತು. ಇದರಿಂದಾಗಿ ವಿಮಾನದಲ್ಲಿದ್ದ ಒಟ್ಟು 161 ಪ್ರಯಾಣಿಕರು ಇಡೀ ರಾತ್ರಿ ವಿಮಾನ ನಿಲ್ದಾಣದಲ್ಲಿಯೇ ಉಳಿದುಕೊಂಡಿದ್ದು, ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಸುಮಾರು 13 ಗಂಟೆಗಳ ನಂತರ ಕೊನೆಗೂ ವಿಮಾನ ಟೇಕಾಫ್ ಆಗಿದೆ.
ಇದನ್ನೂ ಓದಿ: ಪ್ರತಿಕೂಲ ಹವಾಮಾನ – ಸತತ ನಾಲ್ಕನೇ ದಿನವೂ ಅಮರನಾಥ ಯಾತ್ರೆ ಸ್ಥಗಿತ
ತಿರುವನಂತಪುರಂನಿಂದ ಪರ್ಯಾಯ ವಿಮಾನದ ವ್ಯವಸ್ಥೆ ಮಾಡಲಾಗಿತ್ತು. ಅದು ಅಂತಿಮವಾಗಿ ಇಂದು ಮಧ್ಯಾಹ್ನ 12.20ಕ್ಕೆ ಟೇಕಾಫ್ ಆಗಿದೆ. ಏರ್ ಇಂಡಿಯಾ ವಿಮಾನ ಅತಿ ಹೆಚ್ಚು ವಿಳಂಬವಾದ ಕಾರಣ ಪ್ರಯಾಣಿಕರಲ್ಲಿ ಏಳು ಜನ ಇತರ ವಿಮಾನಗಳಲ್ಲಿ ಹೊರಟರು ಎಂದು ಮೂಲಗಳು ತಿಳಿಸಿವೆ. ವಿಮಾನ 13 ಗಂಟೆ ವಿಳಂಬವಾಗಿದ್ದಕ್ಕೆ ಆಕ್ರೋಶಗೊಂಡ ಪ್ರಯಾಣಿಕರು ವಿಮಾನ ನಿಲ್ದಾಣದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.