ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ ಯುವತಿ – ಆಕೆಯ ತಾಯಿಯನ್ನೇ ವಿವಸ್ತ್ರಗೊಳಿಸಿ ವಿಕೃತಿ ಮೆರೆದ ಪಾಪಿಗಳು!
![ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ ಯುವತಿ – ಆಕೆಯ ತಾಯಿಯನ್ನೇ ವಿವಸ್ತ್ರಗೊಳಿಸಿ ವಿಕೃತಿ ಮೆರೆದ ಪಾಪಿಗಳು!](https://suddiyaana.com/wp-content/uploads/2023/08/12-20.jpg)
ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ನಿರಂತವಾಗಿ ಹೆಚ್ಚುತ್ತಲೇ ಇದೆ. ಮಣಿಪುರದಲ್ಲಿ ಪುರುಷರ ಗುಂಪೊಂದು ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿ ವಿಕೃತಿ ಮೆರೆದಿದ್ದರು. ಇಂತಹದ್ದೇ ಘಟನೆ ಈಗ ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲೂ ನಡೆದಿದೆ. ಯುವತಿಯೊಬ್ಬಳು ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ ವಿಚಾರಕ್ಕೆ ನೂರಾರು ಜನರ ಗುಂಪು ಆಕೆಯ ತಾಯಿಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ದಾರೆ.
18 ವರ್ಷದ ದಲಿತ ಯುವತಿಯೊಬ್ಬಳು ನಾಲ್ವರ ಮೇಲೆ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ್ದಳು. ಆಕೆ ದಾಖಲಿಸಿದ್ದ ಪ್ರಕರಣವನ್ನು ಹಿಂಪಡೆಯುವಂತೆ ಕೆಲವರು ಒತ್ತಡ ಹೇರಿದ್ದಾರೆ. ಆದರೆ ಯುವತಿ ದೂರು ವಾಪಸ್ ಪಡೆಯಲು ಒಪ್ಪದಿದ್ದಾಗ ಆಕೆಯ ಕುಟುಂಬದ ಮೇಲೆ ನೂರಾರು ಜನರ ಗುಂಪೊಂದು ದಾಳಿ ನಡೆಸಿದೆ. ಈ ವೇಳೆ ಯುವತಿಯ ಸಹೋದರನ ಮೇಲೂ ಹಲ್ಲೆ ನಡೆಸಲಾಗಿದ್ದು ಆತ ಸಾವನ್ನಪ್ಪಿದ್ದಾನೆ. ಎಂದು ವರದಿಯಾಗಿದೆ.
ಇದನ್ನೂ ಓದಿ: ಶಾರುಖ್ ಖಾನ್ ಮನೆ ಮುಂದೆ ಭಾರಿ ಪ್ರತಿಭಟನೆ – ನಟನ ಮನೆಗೆ ಪೊಲೀಸರಿಂದ ಹೆಚ್ಚಿನ ಭದ್ರತೆ
ಈ ಪ್ರಕರಣದಲ್ಲಿ ಒಂಬತ್ತು ಜನರ ಮೇಲೆ ಕೊಲೆ ಆರೋಪ ಹೊರಿಸಲಾಗಿದೆ. ಮೂವರ ವಿರುದ್ಧ ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ಪಂಗಡಗಳ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಇಲ್ಲಿಯವರೆಗೂ ಎಂಟು ಜನರನ್ನು ಬಂಧಿಸಲಾಗಿದೆ. ಘಟನೆಯ ನಂತರ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಜಿಲ್ಲಾಡಳಿತ ಸೂಕ್ತ ಕ್ರಮಕೈಗೊಳ್ಳುವುದಾಗಿ ಮಹಿಳೆಗೆ ಭರವಸೆ ನೀಡಿದೆ.
ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಯುವತಿಯ ತಾಯಿ, ಜನರ ಗುಂಪು ನಮ್ಮ ಮನೆಯನ್ನು ಧ್ವಂಸಗೊಳಿಸಿತು. ಮನೆಯ ಯಾವ ಸಾಮಾಗ್ರಿಯನ್ನೂ ಬಿಡದೆ ನಾಶ ಮಾಡಿದ್ದಾರೆ. ಮನೆಯ ಚಾವಣಿಯನ್ನು ಹಾಳು ಮಾಡಿದ್ದಾರೆ. ಬಳಿಕ ಇಬ್ಬರು ಮಕ್ಕಳನ್ನು ಹುಡುಕಿಕೊಂಡು ಮತ್ತೊಂದು ಮನೆಗೆ ಹೋದರು. ಅಲ್ಲಿ ಪತಿ ಹಾಗೂ ಮಕ್ಕಳ ಮೇಲೆ ಹಲ್ಲೆ ನಡೆಸಿ ಅವರನ್ನು ಹತ್ಯೆ ಮಾಡಿದ್ದಾರೆ ಎಂದಿದ್ದಾರೆ.
2019 ರಲ್ಲಿ ನಾಲ್ಕು ಪುರುಷರ ವಿರುದ್ಧ ಮಹಿಳೆಯ ಮಗಳು ಲೈಂಗಿಕ ದೌರ್ಜನ್ಯ ಪ್ರಕರಣವನ್ನು ದಾಖಲಿಸಿದ್ದರು. ಇದೇ ವಿಚಾರಕ್ಕೆ ಗುಂಪು ಅವರ ಮೇಲೆ ಹಲ್ಲೆ ನಡೆಸಿದೆ. ದೂರಿನಲ್ಲಿ ಉಲ್ಲೇಖಿಸಲಾದ ಎಲ್ಲರನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.