ಮಂಡ್ಯದಲ್ಲಿ ‘ಬುಲ್ಡೋಜರ್ ಬಾಬಾ’ ರೋಡ್ ಶೋ – ಜೆಡಿಎಸ್ ಭದ್ರಕೋಟೆಯಲ್ಲಿ ಯೋಗಿ ಆದಿತ್ಯನಾಥ್ ಅಬ್ಬರ

ಮಂಡ್ಯದಲ್ಲಿ ‘ಬುಲ್ಡೋಜರ್ ಬಾಬಾ’ ರೋಡ್ ಶೋ – ಜೆಡಿಎಸ್ ಭದ್ರಕೋಟೆಯಲ್ಲಿ ಯೋಗಿ ಆದಿತ್ಯನಾಥ್ ಅಬ್ಬರ

ಉತ್ತರ ಪ್ರದೇಶ ಸಿಎಂ, ಹಿಂದುತ್ವದ ಫೈರ್ ಬ್ರ್ಯಾಂಡ್ ಯೋಗಿ ಆದಿತ್ಯನಾಥ್ ಮಂಡ್ಯಕ್ಕೆ ಆಗಮಿಸಿದ್ದಾರೆ. ಜೆಡಿಎಸ್ ಭದ್ರಕೋಟೆಯಲ್ಲಿ ಸಿಎಂ ಆದಿತ್ಯನಾಥ್ ಭರ್ಜರಿ ರೋಡ್ ಶೋ ನಡೆಸಿದ್ದಾರೆ. ಯೋಗಿ ಆದಿತ್ಯನಾಥ್‌ಗೆ ಸಂಸದೆ ಸುಮಲತಾ, ಮಂಡ್ಯ ಬಿಜೆಪಿ ಅಭ್ಯರ್ಥಿ ಅಶೋಕ್ ಜಯರಾಮ್, ಶ್ರೀರಂಗಪಟ್ಟಣ ಅಭ್ಯರ್ಥಿ ಹಿಂಡುವಾಳ ಸಚ್ಚಿದಾನಂದ ಸಾಥ್ ನೀಡಿದ್ದಾರೆ.

ಇದನ್ನೂ ಓದಿ: ಮತಶಿಕಾರಿ ಜೊತೆ ದೋಸೆ ತಯಾರಿ – ಮೈಲಾರಿ ಹೋಟೆಲ್‌ನಲ್ಲಿ ದೋಸೆ ಹಾಕಿದ ಪ್ರಿಯಾಂಕಾ ಗಾಂಧಿ

ಹೆಲಿಕಾಪ್ಟರ್ ಮೂಲಕ ಮಂಡ್ಯದ ಸಂಜಯ್ ವೃತ್ತಕ್ಕೆ ಆಗಮಿಸಿದ ಯೋಗಿ ಆದಿತ್ಯನಾಥ್‌ಗೆ ಭರ್ಜರಿ ಸ್ವಾಗತ ಕೋರಲಾಯಿತು. ಯೋಗಿ ಜೊತೆಗೆ ಹೆಲಿಕಾಪ್ಟರ್ ಮೂಲಕ ಸಂಸದ ಪ್ರತಾಪ್ ಸಿಂಹ, ಸಚಿವ ಅಶ್ವತ್ಥ್ ನಾರಾಯಣ್ ಆಗಮಿಸಿದ್ದರು. ಮಂಗಳವಾದ್ಯ, ವೇದಘೋಷಗಳೊಂದಿಗೆ ಪೂರ್ಣಕುಂಭ ಸ್ವಾಗತ ಕೋರಲಾಗಿದೆ. ಇದಾದ ಬಳಿಕ ತೆರೆದ ವಾಹನದ ಏರಿದ ಯೋಗಿ ರೋಡ್ ಶೋ ನಡೆಸಿದ್ದಾರೆ. ಜೆಡಿಎಸ್ ಭದ್ರಕೋಟೆಯಲ್ಲಿ ಅಬ್ಬರದ ರೋಡ್ ಶೋ ನಡೆಸಿದ ಯೋಗಿಗೆ ಸಂಸದೆ ಸುಮಲತಾ ಕೂಡಾ ಸಾಥ್ ನೀಡಿದ್ದಾರೆ. ಮಂಡ್ಯ ಜಿಲ್ಲೆಯ 7 ಕ್ಷೇತ್ರದ ಅಭ್ಯರ್ಥಿಗಳು ಯೋಗಿಗೆ ಸಾಥ್ ನೀಡಿದರು. ಇದೇ ವೇಳೆ ಕಾಂಗ್ರೆಸ್ ವಿರುದ್ಧ ಗುಡುಗಿದ ಯೋಗಿ, ಮತ್ತೆ ಡಬಲ್ ಎಂಜಿನ್ ಸರ್ಕಾರ ಬರಲು ಸಹಾಯ ಮಾಡುವಂತೆ ಕರೆ ನೀಡಿದರು.

ಇಂದಿನ ಪ್ರಚಾರ ಬಳಿಕ ಮತ್ತೆ ಏಪ್ರಿಲ್ 30 ರಂದು ಯೋಗಿ ಆದಿತ್ಯನಾಥ್ ಮತ್ತೆ ಕರ್ನಾಟಕಕ್ಕೆ ಆಗಮಿಸಲಿದ್ದಾರೆ.  30ರಂದು ಶೃಂಗೇರಿ, ಪುತ್ತೂರು, ಕಾರ್ಕಳ, ಬೈಂದೂರು, ಭಟ್ಕಳ, 3ರಂದು ಗಂಗಾವತಿ, ಜೇವರ್ಗಿ, ಶಹಾಪುರ, ಭಾಲ್ಕಿ ಕ್ಷೇತ್ರಗಳಲ್ಲಿ ಮತಯಾಚನೆ ಮಾಡಲಿದ್ದಾರೆ.

suddiyaana