ಆಕಳಿನ ತುಪ್ಪವನ್ನುಕೆಜಿಗೆ 5 ಸಾವಿರ ರೂಪಾಯಿಯಂತೆ ಮಾರುತ್ತಿದ್ದೇನೆ! – ಸದನದಲ್ಲಿ ಯತ್ನಾಳ್ ಹೇಳಿಕೆ

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಜೋಳಕ್ಕೆ ಬೆಂಬಲ ಕೊಡಿ ಎಂದು ಅಧಿವೇಶನದಲ್ಲಿ ಮನವಿ ಮಾಡಿದ್ದಾರೆ. ಈ ವೇಳೆ ‘ನಾನು ದೇಶೀಯ ಆಕಳಿನ ತುಪ್ಪವನ್ನು ಕೆಜಿಗೆ 5,000 ರೂ.ನಂತೆ ಮಾರುತ್ತಿದ್ದೇನೆ’ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಬೆಳಗಾವಿಯಲ್ಲಿ ವಿಧಾನಸಭೆ ಅಧಿವೇಶನ ನಡೆಯುತ್ತಿದೆ. ಮಂಗಳವಾರ ಅಧಿವೇಶನದ ವೇಳೆ ಮಾತನಾಡಿದ ಯತ್ನಾಳ್, ಜೋಳ ಬೆಳೆದರೆ ಗೋ ಸಂಪತ್ತು ಉಳಿಯುತ್ತದೆ. ತೊಗರಿಯಿಂದ ಗೋ ಸಂಪತ್ತು ಉಳಿಯುವುದಿಲ್ಲ. ನನ್ನದೇ ಒಂದು ಗೋಶಾಲೆ ಇದೆ. ತುಪ್ಪ ಮಾರುವುದರೊಂದಿಗೆ ವಿಭೂತಿ, ಕರ್ಪೂರ ಹಾಗೂ ಕುಂಕುಮವನ್ನು ತಯಾರಿಸುತ್ತಿದ್ದೇನೆ. ಅಲ್ಲದೇ ಸಾಬೂನು ಕೂಡಾ ತಯಾರು ಮಾಡುತ್ತಿದ್ದೇನೆ.ನಾನು ದೇಶೀಯ ಆಕಳಿನ ತುಪ್ಪವನ್ನು ಕೆಜಿಗೆ 5,000 ರೂ.ನಂತೆ ಮಾರುತ್ತಿದ್ದೇನೆ. ನನ್ನ ಬಳಿ ಗಿರ್ ತಳಿಯ 250 ಹಸುಗಳಿವೆ. ಅದರ ತುಪ್ಪವನ್ನು ಕೆಜಿಗೆ 2,500 ರೂ. ನಂತೆ ಮಾರುತ್ತಿದ್ದೇನೆ. ಗೋಮೂತ್ರವನ್ನು ಸಹ 130 ರೂ.ಗೆ ಮಾರುತ್ತಿದ್ದೇನೆ. ಆಕಳಿನ ಮಜ್ಜಿಗೆಯನ್ನು 30 ರೂ.ಗೆ ಹಾಗೂ ದೇಶೀಯ ಆಕಳಿನ ಹಾಲನ್ನು 100 ರೂ.ಗೆ ಮಾರುತ್ತಿದ್ದೇನೆ. ನಮ್ಮಲ್ಲಿ ಗೋ ಸಂಪತ್ತು ಉಳಿಯ ಬೇಕಾದರೆ ಜೋಳಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡಬೇಕು ಅಂತಾ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಇತಿಹಾಸದಲ್ಲೇ ಮೊದಲ ಬಾರಿಗೆ ಕೆರೆ ಸೀಜ್! – ಕಾರಣ ಏನು ಗೊತ್ತಾ?
ನಮ್ಮ ಭಾಗದಲ್ಲಿ ಅಕ್ಕಿಯ ಬದಲಾಗಿ ಜೋಳ ಕೊಡಿ. 10 ಕೆಜಿ ಅಕ್ಕಿ ಇನ್ನೂ ಬಂದಿಲ್ಲ. ನರೇಂದ್ರ ಮೋದಿ 5 ವರ್ಷ 5 ಕಿಲೋ ಅಕ್ಕಿಯನ್ನು ಈ ದೇಶದ ಬಡವರಿಗೆ ಕೊಡುವಂತಹ ಕೆಲಸ ಮಾಡಿದ್ದಾರೆ. 5 ಕಿಲೋ ಅಕ್ಕಿಯ ಬದಲು ಜೋಳ ಕೊಡಿ ಎಂದು ನಾನು ಆಹಾರ ಸಚಿವರಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ. ಇವತ್ತು ವಿದೇಶಕ್ಕೆ ಹೋದರೂ ಜೋಳದ ರೊಟ್ಟಿ ಸಿಗುತ್ತದೆ. ಕೆಲವರು ಜೋಳದ ರೊಟ್ಟಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಇಂದು ಬರಗಾಲದಿಂದ ರೈತರು ಹಸುಗಳನ್ನು ಸಾಕಲಾಗದೆ ಗೋಶಾಲೆಗೆ ಅಥವಾ ರಸ್ತೆಯ ಬದಿಯಲ್ಲಿ ಬಿಡುತ್ತಾರೆ. ಇನ್ನೂ ಕೆಲವರು ಕಟುಕರ ಕೈಗೆ ಕೊಡುತ್ತಾರೆ. ಆದ್ದರಿಂದ ಜೋಳಕ್ಕೆ ಬೆಂಬಲ ಬಲ ಕೊಡಿ ಎಂದು ಮನವಿ ಮಾಡಿದರು.

ನೋಡಿರಿ

