ರಂಗಸ್ಥಳದಲ್ಲೇ ಹೃದಯಾಘಾತ – ಯಕ್ಷಗಾನ ಕಲಾವಿದ ನಿಧನ

ರಂಗಸ್ಥಳದಲ್ಲೇ ಹೃದಯಾಘಾತ – ಯಕ್ಷಗಾನ ಕಲಾವಿದ ನಿಧನ

ಮಂಗಳೂರು: ಕಟೀಲು ಮೇಳದ ಕಲಾವಿದ ಗುರುವಪ್ಪ ಬಾಯಾರು(58) ರಂಗಸ್ಥಳದಲ್ಲೇ ಹೃದಯಾಘಾತದಿಂದ ಕುಸಿದು ಬಿದ್ದು ನಿಧನರಾಗಿದ್ದಾರೆ.

ಕಟೀಲು 4ನೇ ಮೇಳದ ಹಿರಿಯ ಕಲಾವಿದ ಗುರುವಪ್ಪ ಬಾಯಾರು ಅವರು ದ.ಕ ಜಿಲ್ಲೆಯ ಮಂಗಳೂರು ತಾಲೂಕಿನ ಕಟೀಲು ಬಳಿಯ ಸರಸ್ವತೀ ಸದನದಲ್ಲಿ ಕಟೀಲು ನಾಲ್ಕನೇ ಮೇಳದ ಯಕ್ಷಗಾನ ಬಯಲಾಟ ನಡೆಯುತ್ತಿತ್ತು. ತ್ರಿಜನ್ಮ ಮೋಕ್ಷ ಪ್ರಸಂಗದ ಕೊನೆಯ ಭಾಗ ಪ್ರದರ್ಶನಗೊಳ್ಳುತ್ತಿತ್ತು. ಈ ವೇಳೆ ರಂಗಸ್ಥಳದಲ್ಲಿ ನಿಂತಿದ್ದ ಶಿಶುಪಾಲನ ಪಾತ್ರದಾರಿಯಾಗಿದ್ದ ಗುರುವಪ್ಪ ಬಾಯಾರು ಅವರು ಸ್ಥಳದಲ್ಲೇ ಕುಸಿದು ಬಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದರು ಚಿಕಿತ್ಸೆ ಫಲಕಾರಿಯಾಗದೇ ನಿಧನರಾದರು.

ಇದನ್ನೂ ಓದಿ: ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಕೋವಿಡ್ ಕಂಟ್ರೋಲ್ ಮೀಟಿಂಗ್..!

ಗುರುವಪ್ಪ ಬಾಯಾರು ಅವರು ಬಹಳ ಸರಳ ವ್ಯಕ್ತಿತ್ವದ ಹಿರಿಯ ಕಲಾವಿದರಾಗಿ ಒಡನಾಡಿಗಳೊಡನೆ ಸ್ನೇಹಶೀಲರಾಗಿದ್ದು ಒದಗಿದ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ಕಲಾಸೇವೆ ಮಾಡುತ್ತಿದ್ದ ಉತ್ತಮ ಕಲಾವಿದರಾಗಿದ್ದರು. ಜೊತೆಗೆ ಒಳ್ಳೆಯ ಪ್ರಸಂಗಕರ್ತರೂ ಕೂಡ. ಮುತ್ತು ಪೋಣಿಸಿದಂತಾ ಹಸ್ತಾಕ್ಷರ. ಇವರ ಸುಭಗ ಸುಂದರ ಶೈಲಿಯ ಯಕ್ಷಗಾನದ ಹಾಡುಗಳು ಹೃದ್ಯ. ಡಾ. ಶಿಮಂತೂರು ನಾರಾಯಣ ಶೆಟ್ಟಿ ಅವರಿಂದ ಯಕ್ಷಗಾನ ಛಂದಸ್ಸಿನ ಮರ್ಮವನ್ನರಿತಿದ್ದ ಅವರು ಛಂದೋವಿಲಂಘನೆಯಾಗದಂತೆ ಸರಳವಾದ ಶೈಲಿಯಲ್ಲಿ ಸೊಗಸಾದ ಭಾಷೆಯಲ್ಲಿ ಹಾಡುಗಳನ್ನು ಹೊಸೆಯುತ್ತಿದ್ದರು. ಇವರ ಅನೇಕ ಪ್ರಸಂಗಗಳು ರಂಗದಲ್ಲಿ ಯಶಸ್ಸು ಕಂಡಿವೆ. ತುಳು – ಕನ್ನಡ ಭಾಷೆಗಳಲ್ಲಿ ಚೆಂದದ ಕವಿತೆ ಕಟ್ಟುತ್ತಿದ್ದ ಗುರುವಪ್ಪ ಬಾಯಾರು ಅವರ ಅನಿರೀಕ್ಷಿತ ನಿರ್ಗಮನದಿಂದ ಯಕ್ಷಗಾನ ರಂಗಭೂಮಿ ಒಬ್ಬ ಉತ್ತಮ ಪ್ರಸಂಗಕರ್ತನನ್ನು, ಉತ್ತಮ ಕಲಾವಿದನನ್ನು, ಉತ್ತಮ ವ್ಯಕ್ತಿಯನ್ನು ಕಳೆದುಕೊಂಡಂತಾಗಿದೆ. ನಶ್ವರ ಬದುಕಿಗೊಂದು ಜ್ವಲಂತ ನಿದರ್ಶನವಾಗಿ ಅನೂಹ್ಯ ಲೋಕಕ್ಕೆ ತೆರಳಿದ ಬಾಯಾರು ಅವರಿಗೆ ಭಾಷ್ಪಾಂಜಲಿ ಎಂದು ಖ್ಯಾತ ಯಕ್ಷಗಾನ ಕಲಾವಿದ ತಾರಾನಾಥ ವರ್ಕಾಡಿ ಅವರು ಸಾಮಾಜಿಕ ಮಾಧ್ಯಮದ ಮೂಲಕ ಪ್ರತಿಕ್ರಿಯಿಸಿದ್ದಾರೆ.

suddiyaana