ಚುನಾವಣೆ ನಡೆಸಲು ವಿಫಲವಾದ ಭಾರತೀಯ ಕುಸ್ತಿ ಫೆಡರೇಶನ್ –ಸದಸ್ಯತ್ವ ರದ್ದು ಮಾಡಿದ ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್
![ಚುನಾವಣೆ ನಡೆಸಲು ವಿಫಲವಾದ ಭಾರತೀಯ ಕುಸ್ತಿ ಫೆಡರೇಶನ್ –ಸದಸ್ಯತ್ವ ರದ್ದು ಮಾಡಿದ ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್](https://suddiyaana.com/wp-content/uploads/2023/08/9-15.jpg)
ಭಾರತೀಯ ಕುಸ್ತಿ ಫೆಡರೇಷನ್ ನಿಗದಿತ ಸಮಯಕ್ಕೆ ಚುನಾವಣೆ ನಡೆಸಲು ವಿಫಲವಾಗಿದೆ. ಈ ಹಿನ್ನೆಲೆ ಫೆಡರೇಷನ್ ವಿರುದ್ಧ ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ ಕಠಿಣ ಕ್ರಮ ಕೈಗೊಂಡಿದೆ. ಭಾರತದ ಕುಸ್ತಿ ಫೆಡರೇಶನ್ ಸದಸ್ಯತ್ವವನ್ನು ಅನಿರ್ದಿಷ್ಟಾವಧಿಗೆ ಅಮಾನತುಗೊಳಿಸುವುದಾಗಿ ತಿಳಿಸಿದೆ.
ಭಾರತದ ಕುಸ್ತಿ ಆಡಳಿತ ಮಂಡಳಿಯಾಗಿರುವ ಡಬ್ಲ್ಯುಎಫ್ಐ ಜೂನ್ 2023 ರಲ್ಲಿ ಚುನಾವಣೆಗಳನ್ನು ನಡೆಸಬೇಕಿತ್ತು. ಆದರೆ ಡಬ್ಲ್ಯುಎಫ್ಐ ಸಾಕಷ್ಟು ವಿವಾದಗಳ ಸರಣಿಯಲ್ಲಿ ಸಿಲುಕಿಕೊಂಡಿದೆ. ಭಾರತೀಯ ಕುಸ್ತಿಪಟುಗಳ ಸರಣಿ ಪ್ರತಿಭಟನೆಗಳು ಮತ್ತು ವಿವಿಧ ರಾಜ್ಯ ಘಟಕಗಳ ಕಾನೂನು ಅರ್ಜಿಗಳ ಕಾರಣದಿಂದಾಗಿ ಚುನಾವಣೆಗಳನ್ನು ಪದೇ ಪದೆ ಮುಂದೂಡಲಾಗಿದೆ. ನಿಗದಿತ ಸಮಯಕ್ಕೆ ಚುನಾವಣೆಗಳನ್ನು ನಡೆಸಲುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ ಈ ಕ್ರಮವನ್ನು ಕೈಗೊಂಡಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಪೀಣ್ಯದ ಇಸ್ರೋ ನಿಯಂತ್ರಣ ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ – ಇಸ್ರೋ ಅಧ್ಯಕ್ಷರಿಗೆ ಪೇಟ ತೊಡಿಸಿ ಸನ್ಮಾನ
ಭಾರತದ ಪ್ರಮುಖ ಕುಸ್ತಿಪಟುಗಳು ಅದರ ಕಾರ್ಯನಿರ್ವಹಣೆಯ ವಿರುದ್ಧ ಪ್ರತಿಭಟಿಸಿದ ನಂತರ ಹಾಗೂ ಅದರ ಆಗಿನ ಅಧ್ಯಕ್ಷ ಬ್ರಿಜ್ ಭೂಷಣ್, ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದಾಗ ಡಬ್ಲ್ಯುಎಫ್ ಐ ಅನ್ನು ಮೊದಲು ಜನವರಿಯಲ್ಲಿ ಹಾಗೂ ನಂತರ ಮೇ ತಿಂಗಳಲ್ಲಿ ಅಮಾನತುಗೊಳಿಸಲಾಯಿತು. ಡಬ್ಲ್ಯುಎಫ್ಐ ನ ದಿನನಿತ್ಯದ ವ್ಯವಹಾರಗಳನ್ನು ಪ್ರಸ್ತುತ ಭಾರತೀಯ ಒಲಿಂಪಿಕ್ ಅಸೋಸಿಯೇಶನ್-ರಚಿತವಾದ ಭೂಪೇಂದರ್ ಸಿಂಗ್ ಬಾಜ್ವಾ ನೇತೃತ್ವದ ನಿರ್ದಿಷ್ಟ ಉದ್ದೇಶಕ್ಕಾಗಿನ ಸಮಿತಿಯು ನಿರ್ವಹಿಸುತ್ತಿದೆ. ಚುನಾವಣೆಗಳು ವಿಳಂಬವಾದರೆ ಅಮಾನತುಗೊಳಿಸುವುದಾಗಿ WFI ಗೆ ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ ಈ ಹಿಂದೆ ಎಚ್ಚರಿಕೆ ನೀಡಿತ್ತು.