ಸಿಬಿಐ ಕೇಸ್ ವಾಪಸ್ – ಕಳ್ಳ ಯಾವತ್ತಿದ್ದರೂ ಕಳ್ಳನೇ.. ಡಿಕೆಶಿ ಸಲುವಾಗಿ ಸಿದ್ದರಾಮಯ್ಯ ಕಪ್ಪು ಚುಕ್ಕೆ ಅಂಟಿಸಿಕೊಂಡಿದ್ದಾರೆ ಎಂದು ಈಶ್ವರಪ್ಪ ಕಿಡಿ

ಸಿಬಿಐ ಕೇಸ್ ವಾಪಸ್ – ಕಳ್ಳ ಯಾವತ್ತಿದ್ದರೂ ಕಳ್ಳನೇ.. ಡಿಕೆಶಿ ಸಲುವಾಗಿ ಸಿದ್ದರಾಮಯ್ಯ ಕಪ್ಪು ಚುಕ್ಕೆ ಅಂಟಿಸಿಕೊಂಡಿದ್ದಾರೆ ಎಂದು ಈಶ್ವರಪ್ಪ ಕಿಡಿ

ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆಯನ್ನು ವಾಪಸ್ ಪಡೆಯುವ​ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದೆ.  ಇದಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ. ಕಳ್ಳ ಯಾವತ್ತಿದ್ದರೂ ಕಳ್ಳನೇ. ಸಿದ್ದರಾಮಯ್ಯ ರಾಜಕೀಯ ಜೀವನದಲ್ಲಿ ಇದೊಂದು ಕಪ್ಪು ಚುಕ್ಕೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಭಾರತಕ್ಕೆ ಬರುತ್ತಿದ್ದ ಹಡಗು ಕೆಂಪು ಸಮುದ್ರದಲ್ಲಿ ಹೌತಿಗಳಿಂದ ಹೈಜಾಕ್ – ಇಸ್ರೇಲ್ ಮೇಲಿನ ಸಿಟ್ಟಿಗೆ ಜಲಮಾರ್ಗ ಬಂದ್?

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸಿಬಿಐ ತನಿಖೆಗೆ ವಹಿಸಿರುವ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಪ್ರಕರಣವನ್ನು ಸಚಿವ ಸಂಪುಟ ಹಿಂಪಡೆಯುವ ನಿರ್ಧಾರ ಮಾಡಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನ. ಕಳ್ಳ ಯಾವತ್ತಿದ್ದರೂ ಕಳ್ಳನೇ. ಸಿದ್ದರಾಮಯ್ಯ ರಾಜಕೀಯ ಜೀವನದಲ್ಲಿ ಇದೊಂದು ಕಪ್ಪು ಚುಕ್ಕೆ. ಡಿಕೆಶಿ ಸಲುವಾಗಿ ಸಿದ್ದರಾಮಯ್ಯ ಕಪ್ಪು ಚುಕ್ಕೆ ಅಂಟಿಸಿಕೊಂಡಿದ್ದಾರೆ. 135 ಸೀಟ್ ಬಂದಿದೆ ಅಂತ ಮಾಡಬಾರದ್ದನ್ನೆಲ್ಲಾ ಮಾಡ್ತಿದ್ದಾರೆ. 23 ಕೋಟಿ ಇದ್ದ ವರಮಾನ 163 ಕೋಟಿಗೆ ಹೆಚ್ಚಳವಾಗಿದೆ. ಯಡಿಯೂರಪ್ಪ ಸಿಎಂ ಆಗಿದ್ದಾಗ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಟ್ಟಿದ್ದರು. ಡಿಕೆಶಿ ನ್ಯಾಯಾಲಯಕ್ಕೆ ಹೋದರೂ ಅಲ್ಲಿ ತಿರಸ್ಕಾರವಾಯ್ತು. ಇದು ಇಡೀ ದೇಶಕ್ಕೆ ಗೊತ್ತು. ಸಿಬಿಐ ತನಿಖೆ ಅಂತಿಮ ಹಂತಕ್ಕೆ ಬಂದಿರುವಾಗ ಈ ರೀತಿ ಮಾಡೋದು ಸರಿಯಲ್ಲ. ಕೇಡಿ ಸಿದ್ದು ಸಚಿವ ಸಂಪುಟ ಕಳ್ಳರ ಗುಂಪಾಗಿದೆ, ಕೇಡಿ ಸಿದ್ದು ಅವರ ದರೋಡೆಕೋರರ ತಂಡ ದುರುಪಯೋಗ ಮಾಡಿಕೊಂಡಿದೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ಸಚಿವ ಕೆ.ಜೆ ಜಾರ್ಜ್ ಮೇಲೆ ಆಪಾದನೆ ಬಂದಾಗ ರಾಜೀನಾಮೆ ಕೊಟ್ಟು ನಂತರ ಸಚಿವ ಸಂಪುಟಕ್ಕೆ ಸೇರಿದರು. ನನ್ನ ಮೇಲೆ ಆಪಾದನೆ ಬಂತು ನಾನು ರಾಜೀನಾಮೆ ಕೊಟ್ಟೆ. ಸುಪ್ರೀಂ ಕೋರ್ಟ್ ತಜ್ಞರು ಹೇಳ್ತಿದ್ದಾರೆ ಸಿಬಿಐಗೆ ತನಿಖೆಗೆ ವಹಿಸಲು ಅನುಮತಿ ಇದೆ, ಆದ್ರೆ ಹಿಂಪಡೆಯಲು ಅನುಮತಿ ಬೇಕಿಲ್ಲ. ಸಿದ್ದರಾಮಯ್ಯ ಅವರಿಗೆ ಈ ವಿಷಯ ಗೊತ್ತಿಲ್ವಾ. ಡಿಕೆಶಿ ಕೇಸನ್ನ ವಾಪಸ್ ಪಡೆಯಬೇಕು ಅಂತಾ ಸಚಿವ ಸಂಪುಟ ಸಭೆಗೆ ಹೋಗಿಲ್ಲ. ಇದು ದೇಶದಲ್ಲೇ ದೊಡ್ಡ ಅಪರಾಧ ಎಂದು ವಾಗ್ದಾಳಿ ನಡೆಸಿದ್ದಾರೆ.

ಸಚಿವ ಸಂಪುಟ ದುರ್ಬಳಕೆ ಮಾಡಿಕೊಳ್ಳುತ್ತಿರುವ ಮೊದಲ ವ್ಯಕ್ತಿ ಡಿಕೆಶಿ, ನಮಗೂ ಮುಂದೆ ಇಂತಹ ಸ್ಥಿತಿ ಬರಬಹುದು ಅಂತ ಅವರ ಕೇಂದ್ರದ ನಾಯಕರು ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಒಪ್ಪಿಕೊಂಡಿರಬಹುದು. ಸಿದ್ದರಾಮಯ್ಯ ಅವರಿಗೆ ಕುರ್ಚಿ ಮುಖ್ಯವೇ ಹೊರತು ನ್ಯಾಯವಲ್ಲ. ಸಂವಿಧಾನದ ಬಗ್ಗೆ ಉದ್ದುದ್ದ ಭಾಷಣ ಮಾಡುವ ನಾಯಕರಿಗೆ ಇದು ಗೊತ್ತಿಲ್ಲವೇ? ಕಾಂಗ್ರೆಸ್ ನಾಯಕರಿಗೆ ನಾಚಿಕೆ ಆಗಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.

ಕಾಂಗ್ರೆಸ್ ಸರ್ಕಾರ ಗೂಂಡಾಗಳಿಗೆ ರಕ್ಷಣೆ ಕೊಡುವ ಸರ್ಕಾರವಾಗಿದೆ. ಕರ್ನಾಟಕದ ಗ್ಯಾರಂಟಿ ಯೋಜನೆಯಲ್ಲಿ ಮೋಸ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಜನ ಬುದ್ಧಿ ಕಲಿಸುತ್ತಾರೆ. ಸಚಿವ ಸಂಪುಟಕ್ಕೆ ಬೆಲೆ ಇಲ್ಲ ಅಂತಾ ಇವರು ತೀರ್ಮಾನ ಮಾಡಿದ್ರು. ಸಂವಿಧಾನಕ್ಕೆ ಬೆಲೆ ಇದೆ ಅಲ್ಲಿ ಸರಿಯಾದ ತೀರ್ಪು ಬರುತ್ತದೆ, ಸಿಬಿಐ ತನಿಖೆಯಿಂದ ಡಿಕೆಶಿ ಕೇಸನ್ನು ಹಿಂಪಡೆಯುವ ನಿರ್ಧಾರವನ್ನು ಕೈಬಿಡಬೇಕು. ಸಿಬಿಐ ತಪ್ಪಿತಸ್ಥನಲ್ಲ ಅಂದ್ರೆ ಡಿಕೆಶಿ ಡಿಸಿಎಂ ಅಲ್ಲ ಸಿಎಂ ಬೇಕಾದರೂ ಆಗಲಿ ಎಂದು ಹೇಳಿದ್ದಾರೆ.

Shwetha M