ಕಾಡಾನೆ ಸೆರೆಗೆ ಕಾರ್ಯಾಚರಣೆ ದಿಢೀರ್ ಸ್ಥಗಿತ – ಸದ್ದಿಲ್ಲದೆ ಸಾಕಾನೆಗಳ ವಾಪಸ್ ಕಳುಹಿಸಿದ್ಯಾಕೆ ಅರಣ್ಯಾಧಿಕಾರಿಗಳು?

ಕಾಡಾನೆ ಸೆರೆಗೆ ಕಾರ್ಯಾಚರಣೆ ದಿಢೀರ್ ಸ್ಥಗಿತ – ಸದ್ದಿಲ್ಲದೆ ಸಾಕಾನೆಗಳ ವಾಪಸ್ ಕಳುಹಿಸಿದ್ಯಾಕೆ ಅರಣ್ಯಾಧಿಕಾರಿಗಳು?

ಹಾಸನ ಜಿಲ್ಲೆಯಲ್ಲಿ ನಡೆಯುತ್ತಿದ್ದ ಕಾಡಾನೆ ಸೆರೆ ಕಾರ್ಯಾಚರಣೆ ದಿಢೀರ್‌ ಸ್ಥಗಿತಗೊಂಡಿದೆ. ಅರಣ್ಯಾಧಿಕಾರಿಗಳು ಸದ್ದಿಲ್ಲದೇ ಕಾರ್ಯಾಚರಣೆ ಸ್ಥಗಿತಗೊಳಿಸಿ ಸಾಕಾನೆಗಳನ್ನು ವಾಪಸ್‌ ಕಳುಹಿಸಿದ್ದಾರೆ ಎಂದು ವರದಿಯಾಗಿದೆ.

ಡಿಸೆಂಬರ್ 4 ರಂದು ದಸರಾ ಆನೆ ಅರ್ಜುನನ ಸಾವಿನಿಂದ ಕಾರ್ಯಾಚರಣೆ ಸ್ಥಗಿತಗೊಂಡಿತ್ತು. ಜನವರಿ 4ರಂದು ಬೇಲೂರು ತಾಲ್ಲೂಕಿನ ಮತ್ತಾವರ ಬಳಿ‌ ಕಾರ್ಮಿಕರೊಬ್ಬರನ್ನು ಕಾಡಾನೆ ಕೊಂದುಹಾಕಿತ್ತು. ಇದಾದ ನಂತರ ಮಹಿಳೆಯೊಬ್ಬರ ಮೇಲೆ ದಾಳಿ ನಡೆಸಿತ್ತು. ಸ್ಥಳೀಯರಿಂದ ವ್ಯಾಪಕ ಆಗ್ರಹ ವ್ಯಕ್ತವಾದ ಬೆನ್ನಲ್ಲೇ ಜನವರಿ 13 ರಿಂದ ಕಾಡಾನೆ ಸೆರೆ ಕಾರ್ಯಾಚರಣೆ ಮುಂದುವರಿದಿತ್ತು. ಆದರೆ ಇದೀಗ ಅರಣ್ಯಾಧಿಕಾರಿಗಳು ಕಾಡಾನೆ ಸೆರೆ ಕಾರ್ಯಾಚರಣೆಯನ್ನು ಸದ್ದಿಲ್ಲದೆ ನಿಲ್ಲಿಸಿ, ಸಾಕಾನೆಗಳನ್ನು ವಾಪಸ್ ಕಳುಹಿಸುತ್ತಿದ್ದಾರೆ.

ಇದನ್ನೂ ಓದಿ: ಕೌಸಲ್ಯಪುತ್ರನಿಗೆ ವಜ್ರ ವೈ ಅಲಂಕಾರ! – ರಾಮಲಲ್ಲಾ ಧರಿಸಿದ ಪ್ರತೀ ಆಭರಣಗಳ ಮೌಲ್ಯ ಎಷ್ಟು ಗೊತ್ತಾ?

ಎರಡು ಕಾಡಾನೆಗಳನ್ನು ಇತ್ತೀಚೆಗೆ ಸೆರೆಹಿಡಿಲಾಗಿತ್ತು. ಆದರೆ, ಹಂತಕ ಆನೆಗಳ ಪೈಕಿ ಯಾವುದನ್ನೂ ಸೆರೆ ಹಿಡಿಯದೆ ಕಾರ್ಯಾಚರಣೆ ಸ್ಥಗಿತಗೊಳಿಸಿರುವುದು ಇದೀಗ ಮತ್ತೆ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಕಾರ್ಮಿಕ ವಸಂತ್ ಬಲಿ ಪಡೆದಿದ್ದ ಸೀಗೆ ಹೆಸರಿನ ಕಾಡಾನೆ, ಈ ಆನೆ ಜೊತೆಗೆ ಶಾರ್ಪ್ ಶೂಟರ್ ವೆಂಕಟೇಶ ಬಲಿ ಪಡೆದ ಭೀಮಾ ಹಾಗು ದಸರಾ ಆನೆ ಅರ್ಜುನನನ್ನು ಕೊಂದ ಆನೆಗಳ‌ ಸೆರೆಗೆ ಜನ ಒತ್ತಾಯಿಸಿದ್ದರು. ಆದರೆ, ಈ ಯಾವುದೇ ಆನೆಗಳನ್ನು ಸೆರೆ ಹಿಡಿಯದೆ ಕಾರ್ಯಾಚರಣೆ ಸ್ಥಗಿತಗೊಳಿಸಿರುವ ಅಧಿಕಾರಿಗಳು ಸಾಕಾನೆಗಳನ್ನು ವಾಪಸ್ ಕಳುಹಿಸಿದ್ದಾರೆ.

ಕಾರ್ಯಾಚರಣೆ ಸ್ಥಗಿತಕ್ಕೆ ಕಾರಣವೇನು?

ಕೆಲ‌ ಆನೆಗಳು ಕಾರ್ಯಾಚರಣೆಗೆ ಕಷ್ಟವಾಗುವ ಸ್ಥಳದಲ್ಲಿವೆ. ಕೆಲ‌ ಆನೆಗೆ ಮದವೇರಿದೆ, ಹೀಗಾಗಿ ಅವುಗಳನ್ನು ಸೆರೆ ಹಿಡಿಯುವುದು ಸದ್ಯದ ಪರಿಸ್ಥಿತಿಯಲ್ಲಿ ಕಷ್ಟ. ಮದವೇರಿದ ಕಾಡಾನೆ ಸೆರೆಗೆ ಮುಂದಾದರೆ ಮತ್ತೆ ಸಮಸ್ಯೆ ಆಗಬಹುದು ಎಂಬ ಭೀತಿಯಿಂದ‌ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಕಾರ್ಯಾಚರಣೆಗೆ ಬಂದ 8 ಸಾಕಾನೆಗಳು ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ, ಬಿಕ್ಕೋಡು ಗ್ರಾಮದ ಬಳಿ ತಾತ್ಕಾಲಿಕ ಕ್ಯಾಂಪ್‌ನಲ್ಲಿದ್ದವು.

ಇದುವರೆಗೂ ಅರಣ್ಯ ಇಲಾಖೆ ಆರು ಸಲಗಗಳನ್ನು ಸೆರೆ ಹಿಡಿದು ರೇಡಿಯೋ ಕಾಲರ್ ಅಳವಡಿಸಿ ಸ್ಥಳಾಂತರ ಮಾಡಿದೆ. ಮೂರು ಹೆಣ್ಣಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಿ ಅಲ್ಲಿಯೇ ಬಿಟ್ಟಿದೆ.

ಯಾವೆಲ್ಲ ಸಾಕಾನೆಗಳು ಕಾರ್ಯಾಚರಣೆಯಲ್ಲಿ ಭಾಗಿ?

ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ದಸರಾ ಆನೆ ಅಭಿಮನ್ಯು, ಇತರ ಆನೆಗಳಾದ ಪ್ರಶಾಂತ, ಹರ್ಷ, ಸುಗ್ರೀವ, ಅಶ್ವತ್ಥಾಮ, ಕರ್ನಾಟಕ ಭೀಮ, ಧನಂಜಯ, ಮಹೇಂದ್ರ ಭಾಗಿಯಾಗದ್ದವು. ಇವುಗಳು ಇದೀಗ ಮಂಗಳವಾರ ಬೆಳ್ಳಂಬೆಳಗ್ಗೆ ಕ್ಯಾಂಪ್‌ಗಳಿಗೆ ವಾಪಾಸ್ಸಾಗಿವೆ.

Shwetha M