‘ದೇವಸ್ಥಾನಕ್ಕೆ ಹೋಗುವವರು ಚಪ್ಪಲಿ ಹಾಕುತ್ತಾರೆಯೇ’? – ಫ್ಯಾನ್ಸ್ ಭೇಟಿ ವೇಳೆ ಚಪ್ಪಲಿ ಹಾಕದ ಗುಟ್ಟು ತಿಳಿಸಿದ ಅಮಿತಾಬ್ ಬಚ್ಚನ್!

‘ದೇವಸ್ಥಾನಕ್ಕೆ ಹೋಗುವವರು ಚಪ್ಪಲಿ ಹಾಕುತ್ತಾರೆಯೇ’? – ಫ್ಯಾನ್ಸ್ ಭೇಟಿ ವೇಳೆ ಚಪ್ಪಲಿ ಹಾಕದ ಗುಟ್ಟು ತಿಳಿಸಿದ ಅಮಿತಾಬ್ ಬಚ್ಚನ್!

ಹಿಂದಿ ಚಿತ್ರರಂಗದ ಪ್ರಖ್ಯಾತ ನಟ, ನಿರ್ಮಾಪಕ, ಕಿರುತೆರೆ ನಿರೂಪಕ ಮತ್ತು ಮಾಜಿ ರಾಜಕಾರಣಿ. ಬಾಲಿವುಡ್‌ ನ ಹಿರಿಯ ಬಿಗ್‌ ಬಿ ಅಮಿತಾಭ್ ಬಚ್ಚನ್‌ಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. 70 ರ ದಶಕದಲ್ಲಿ ಜಂಜೀರ್, ದೀವಾರ್, ಶೋಲೆ ಮುಂತಾದ ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳ ಮೂಲಕ ಭಾರತದ ಮೊದಲ ಆ್ಯಂಗ್ರಿ ಯಂಗ್ ಮ್ಯಾನ್ ಹೀರೋ ಆಗಿ ಗುರುತಿಸಿಕೊಂಡರು. ಹೀಗಾಗೇ ಬಿಗ್ ಬಿಗೆ ಈಗಲೂ ಕೋಟ್ಯಂತರ ಅಭಿಮಾನಿಗಳಿದ್ದಾರೆ.

ಚಿತ್ರರಂಗದಲ್ಲಿ ಈಗಲೂ ತಮ್ಮನ್ನ ತಾವು ತೊಡಗಿಸಿಕೊಂಡಿರುವ ಬಿಗ್ ಬಿ ಅಮಿತಾಬ್ ಬಚ್ಚನ್ ಅವರನ್ನ ನೋಡಲು ಪ್ರತೀ ಭಾನುವಾರ ಅವರ ಮನೆ ಮುಂದೆ ನೂರಾರು ಅಭಿಮಾನಿಗಳು ಜಮಾಯಿಸುತ್ತಾರೆ. ಮನೆ ಹೊರಗೆ ಬರುವ ಬಿಗ್​ ಬಿ ಅವರು ಎಲ್ಲರ ಕಡೆಗೆ ಕೈ ಬೀಸುತ್ತಾರೆ. ಮೊದಲಿನಿಂದಲೂ ಈ ಸಂಪ್ರದಾಯ ನಡೆದುಕೊಂಡು ಬಂದಿದೆ. ವಿಶೇಷ ಏನೆಂದರೆ, ಅಭಿಮಾನಿಗಳನ್ನು ಭೇಟಿ ಮಾಡುವಾಗ ಅಮಿತಾಬ್ ಚಪ್ಪಲಿ ಹಾಕಿಕೊಳ್ಳುವುದಿಲ್ಲ. ಅದಕ್ಕೆ ಕಾರಣ ಏನು ಎಂಬುದನ್ನು ಈಗ ಅವರು ತಿಳಿಸಿದ್ದಾರೆ.

ಇದನ್ನೂ ಓದಿ : ‘ನನ್ನ ನಿನ್ನೆ, ಇಂದು ಹಾಗೂ ನಾಳೆಗಳು ನೀನೆ’ – ಚಿರು ನೆನಪಲ್ಲಿ ಮೇಘನಾ ರಾಜ್ ಭಾವುಕ

ಸೋಶಿಯಲ್​ ಮೀಡಿಯಾದಲ್ಲಿ ಅಮಿತಾಭ್ ಬಚ್ಚನ್​ ಸಕ್ರಿಯರಾಗಿದ್ದಾರೆ. ತಮ್ಮ ದಿನಚರಿಯ ಬಗ್ಗೆ, ಅನುಭವದ ಬಗ್ಗೆ, ಹೊಸ ಸಿನಿಮಾಗಳ ಬಗ್ಗೆ ಸೋಶಿಯಲ್​ ಮೀಡಿಯಾ ಮೂಲಕ ಅವರು ಅಭಿಮಾನಿಗಳಿಗೆ ತಿಳಿಸುತ್ತಾರೆ. ತಮ್ಮ ಆಲೋಚನೆಗಳನ್ನು ಕೂಡ ಅದರಲ್ಲಿ ಹಂಚಿಕೊಳ್ಳುತ್ತಾರೆ. ತಾವು ಫ್ಯಾನ್ಸ್​ ಮೀಟ್​ ಮಾಡುವಾಗ ಯಾಕೆ ಚಪ್ಪಲಿ ಧರಿಸುವುದಿಲ್ಲ ಎಂಬುದನ್ನು ಅವರೀಗ ವಿವರಿಸಿದ್ದಾರೆ. ಈ ಬಗ್ಗೆ ಅವರು ಇನ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದಾರೆ. ಅಭಿಮಾನಿಗಳನ್ನು ಭೇಟಿ ಮಾಡುವಾಗ ಯಾರಾದರೂ ಬರಿಗಾಲಿನಲ್ಲಿ ಹೋಗುತ್ತಾರಾ ಅಂತ ಕೆಲವರು ನನ್ನ ಬಳಿ ವಾದ ಮಾಡುತ್ತಾರೆ. ನಾನು ಬರಿಗಾಲಿನಲ್ಲೇ ಹೋಗುತ್ತೇನೆ. ನೀವು ದೇವಸ್ಥಾನಕ್ಕೆ ಹೋಗುವಾಗ ಚಪ್ಪಲಿ ಹಾಕಿಕೊಳ್ಳುವುದಿಲ್ಲ. ಭಾನುವಾರ ಬರುವ ನನ್ನ ಹಿತೈಷಿಗಳೆಲ್ಲರೂ ನನ್ನ ಪಾಲಿಗೆ ದೇವಸ್ಥಾನ ಇದ್ದಹಾಗೆ’ ಎಂದು ಅಮಿತಾಭ್​ ಬಚ್ಚನ್​ ಅವರು ಪೋಸ್ಟ್​ ಮಾಡಿದ್ದಾರೆ. ಅಭಿಮಾನಿಗಳಿಗೆ ಅವರು ನೀಡಿದ ಈ ಪರಿ ಗೌರವ ಕಂಡು ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.

ಕನ್ನಡ ಚಿತ್ರರಂಗದ ಮೇರು ನಟ ಡಾ. ರಾಜ್​ಕುಮಾರ್​ ಕೂಡ ಅಭಿಮಾನಿಗಳನ್ನು ದೇವರು ಎಂದಿದ್ದರು. ಅಮಿತಾಭ್​ ಬಚ್ಚನ್​ ಅವರ ಮನದಲ್ಲೂ ಫ್ಯಾನ್ಸ್ ಬಗ್ಗೆ ಅದೇ ಭಾವನೆ ಇದೆ. ಅಮಿತಾಭ್ ಬಚ್ಚನ್​ ಅವರು ಬ್ಲಾಗ್​ ಮೂಲಕ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಅದೇ ರೀತಿ ತಮ್ಮ ಹೆಲ್ಮೆಟ್​ ವಿವಾದದ ಬಗ್ಗೆ ಇತ್ತೀಚೆಗೆ ಸ್ಪಷ್ಟನೆ ನೀಡಿದ್ದರು. ‘ಅದು ಭಾನುವಾರ. ಚಿತ್ರೀಕರಣಕ್ಕೆ ಸೂಕ್ತ ಅನುಮತಿಯನ್ನು ತೆಗೆದುಕೊಳ್ಳಲಾಗಿತ್ತು. ಎಲ್ಲಾ ಕಚೇರಿಗಳು ಮುಚ್ಚಿರುವುದರಿಂದ ಮತ್ತು ಸಾರ್ವಜನಿಕರ ಓಡಾಟ ಮತ್ತು ಟ್ರಾಫಿಕ್​ ಇಲ್ಲದ ಕಾರಣ ಭಾನುವಾರ ಅನುಮತಿ ಕೋರಲಾಯಿತು. ಚಿತ್ರೀಕರಣಕ್ಕಾಗಿ ರಸ್ತೆಯ ಒಂದು ಭಾಗವನ್ನು ಪೊಲೀಸರು ನಿರ್ಬಂಧಿಸಿದ್ದರು. ಆ ದಾರಿ ಇರುವುದು 30ರಿಂದ 40 ಮೀಟರ್​ ಮಾತ್ರ. ನಾನು ಧರಿಸಿದ್ದ ಆ ಡ್ರೆಸ್​ ಸಿನಿಮಾದ ಕಾಸ್ಟ್ಯೂಮ್​. ಬೈಕ್​ ಹತ್ತಿ ಹಿಂಬದಿಯಲ್ಲಿ ಕುಳಿತ ರೀತಿಯಲ್ಲಿ ನಾನು ನಟಿಸಿದೆ. ಸವಾರಿ ಮಾಡಲಿಲ್ಲ. ನನ್ನ ಬಗ್ಗೆ ಕಾಳಜಿ ತೋರಿಸಿದ್ದಕ್ಕಾಗಿ ಧನ್ಯವಾದಗಳು’ ಎಂದು ಅಮಿತಾಭ್​ ಬಚ್ಚನ್​ ಬರೆದುಕೊಂಡಿದ್ದರು.

ಅಭಿಮಾನಿಗಳ ಜೊತೆ ಎಲ್ಲವನ್ನೂ ಹಂಚಿಕೊಳ್ಳುವ ಅಮಿತಾಬ್ ಬಚ್ಚನ್ ಹುಟ್ಟಿದ್ದು ಉತ್ತರ ಪ್ರದೇಶದ ಅಲಹಾಬಾದಿನಲ್ಲಿ. ಇವರ ಬಾಲ್ಯದ ಹೆಸರು ಇನ್ಕಿಲಾಬ್ ಶ್ರೀವಾತ್ಸವ್. ಪದ್ಮವಿಭೂಷಣ, ದಾದಾಸಾಹೇಬ್ ಫಾಲ್ಕೆ ಸೇರಿದಂತೆ ಮುಂತಾದ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕನ್ನಡದಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ರವರ ಅಮೃತಧಾರೆ ಚಿತ್ರದಲ್ಲಿ ನಟಿಸಿದ್ದಾರೆ. ಸುಮಾರು 15 ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ಪಡೆದಿರುವ ಅಮಿತಾಭ್ ಹಿಂದಿಯಲ್ಲಿ ಕೌನ್ ಬನೇಗಾ ಕರೋಡಪತಿ ಎಂಬ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರೂಪಿಸಿದ್ದಾರೆ. ಭಾರತ ಸರ್ಕಾರ ನೀಡುವ ಪದ್ಮಶ್ರೀ, ಪದ್ಮಭೂಷಣ ಮತ್ತು ಪದ್ಮ ವಿಭೂಷಣ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಫ್ರಾನ್ಸ್ ಸರ್ಕಾರ ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

suddiyaana