ಆರೆಂಜ್ ಆರ್ಮಿಗೆ ಸೋಲುಣಿಸುತ್ತಾ ಆರ್‌ಸಿಬಿ? – ಆರ್‌ಸಿಬಿ ಫೇಲ್ಯೂರ್‌ಗೆ ಆ ಇಬ್ಬರೇ ಕಾರಣನಾ..?

ಆರೆಂಜ್ ಆರ್ಮಿಗೆ ಸೋಲುಣಿಸುತ್ತಾ ಆರ್‌ಸಿಬಿ? – ಆರ್‌ಸಿಬಿ ಫೇಲ್ಯೂರ್‌ಗೆ ಆ ಇಬ್ಬರೇ ಕಾರಣನಾ..?

ಹೊಸ ಅಧ್ಯಾಯ ಅಂತಾ ಐಪಿಎಲ್ ಸೀಸನ್ 17ಗೆ ಕಾಲಿಟ್ಟಿದ್ದ ಆರ್​ಸಿಬಿ ಹಳೇ ಸಂಪ್ರದಾಯಕ್ಕಿಂತ್ಲೂ ಕೆಟ್ಟದಾಗಿ ಪ್ರದರ್ಶನ ನೀಡ್ತಿದೆ. ಟ್ರೋಫಿ ಗೆಲ್ಲೋದಿರಲಿ ಪ್ಲೇಆಫ್​ಗೂ ಹೋಗೋ ಕನಸನ್ನೇ ಕೈ ಬಿಟ್ಟಿದ್ದಾರೆ ಅನ್ಸುತ್ತೆ. ಒಂದೊಂದ್ ಸಲ ಆರ್​ಸಿಬಿ ಬೌಲರ್​ಗಳು ನಮಗೋಸ್ಕರ ಆಡ್ತಾರೋ ಇಲ್ಲ ಎದುರಾಳಿ ಟೀಂ ಗೆಲ್ಲಲಿ ಅಂತಾ ಆಡ್ತಾರೋ ಗೊತ್ತೇ ಆಗಲ್ಲ. ಆಡಿರೋ ಆರು ಮ್ಯಾಚಲ್ಲಿ ಒಂದೇ ಒಂದು ಪಂದ್ಯ ಗೆದ್ದು ಐದು ಪಂದ್ಯಗಳಲ್ಲಿ ಕೈ ಚೆಲ್ಲಿ ಕೂತಿದ್ದಾರೆ. ಇವತ್ತು ಎಸ್​​ಆರ್​ಹೆಚ್ ವಿರುದ್ಧ ಆರ್​ಸಿಬಿ ಅಖಾಡಕ್ಕೆ ಇಳೀತಿದ್ದು, ಈ ಪಂದ್ಯ ಗೆದ್ದಿಲ್ಲ ಅಂದ್ರೆ ಆರ್​ಸಿಬಿ ಬಹುತೇಕ ಫ್ಲೇಆಫ್ ಕನಸನ್ನ ಕೈ ಬಿಟ್ಟಂತೆ. ಆರ್​ಸಿಬಿ ಫೇಲ್ಯೂರ್​ಗೆ ಆ ಇಬ್ಬರೇ ಕಾರಣನಾ..? ಇಂದಿನ ಮ್ಯಾಚ್ ಎಷ್ಟು ಮುಖ್ಯ..? ಟೀಮ್​ನಿಂದ ಯಾರೆಲ್ಲಾ ಔಟ್ ಆಗಬಹುದು..? ಪ್ಲೇಆಫ್​ಗೆ ಹೋಗೋ ಚಾನ್ಸ್ ಇದ್ಯಾ..?. ಈ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: MI ಫ್ಯಾನ್ಸ್‌ಗೆ ಕೊಹ್ಲಿ ಪಾಠ! – T20 ವರ್ಲ್ಡ್ ಕಪ್‌ಗೆ DK? – ಇಂತಾ ಬೌಲರ್ಸ್ ಬೇಕಾ?

ಸನ್ ರೈಸರ್ಸ್ ಹೈದ್ರಾಬಾದ್ ತಂಡ ಒಳ್ಳೇ ಫಾರ್ಮ್​ನಲ್ಲಿದ್ದು ಈ ಬಾರಿ ಇತಿಹಾಸ ಸೃಷ್ಟಿಸಿದೆ. ಮುಂಬೈ ವಿರುದ್ಧದ ಪಂದ್ಯದಲ್ಲಿ ಐಪಿಎಲ್ ಐತಿಹಾಸದಲ್ಲೇ ಅತೀ ಹೆಚ್ಚು ರನ್ ಹೊಡೆದಿದ್ದು, ಬೌಲಿಂಗ್ ಮತ್ತು ಬ್ಯಾಟಿಂಗ್​ನಲ್ಲೂ ಸ್ಟ್ರಾಂಗ್ ಆಗಿದ್ದಾರೆ. ಇನ್ನು ಆರ್​ಸಿಬಿ ಕಥೆಯಂತೂ ಹೇಳೋದೇ ಬೇಡ. ಆರು ಮ್ಯಾಚ್ ಆಡಿ  5 ಮ್ಯಾಚ್​ಗಳಲ್ಲಿ ಸೋಲು ಕಂಡಾಗಿದೆ. ಸಿಎಸ್​ಕೆ ವಿರುದ್ಧ ಸೀಸನ್​ನ ಫಸ್ಟ್ ಮ್ಯಾಚ್​ನಲ್ಲೇ ಮುಗ್ಗರಿಸಿದ್ದ ಆರ್​ಸಿಬಿ ಬಳಿಕ ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದಿತ್ತು. ಆಮೇಲೆ ಕೆಕೆಆರ್, ಎಲ್​ಎಸ್​ಜಿ, ರಾಜಸ್ಥಾನ್ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್ ವಿರುದ್ಧ ಸೋತು ಸುಣ್ಣವಾಗಿದ್ರು. ವಿಪರ್ಯಾಸ ಅಂದ್ರೆ ಹೋಂ ಗ್ರೌಂಡ್​ನಲ್ಲೂ ಆಡಿಲ್ಲ. ಹೊರಗಿನ ನೆಲದಲ್ಲೂ ಗೆಲ್ಲೋಕೆ ಆಗಿಲ್ಲ. ಇದೀಗ ಮೊದಲಾರ್ಧದ ಕೊನೆಯ ಪಂದ್ಯದಲ್ಲಿ ಎಸ್​ಆರ್​ಹೆಚ್ ವಿರುದ್ಧ ಕಣಕ್ಕಿಳಿಯಲು ಆರ್​ಸಿಬಿ ಪಡೆ ಸಜ್ಜಾಗಿದೆ. ಏಪ್ರಿಲ್ 15 ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಆರ್​ಸಿಬಿ ತಂಡದ ಎದುರಾಗಿ ಸನ್​ರೈಸರ್ಸ್ ಹೈದರಾಬಾದ್ ತಂಡ ಕಣಕ್ಕಿಳಿಯಲಿದೆ.

ಈ ಬಾರಿಯ ಐಪಿಎಲ್​ನಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡವು ಅದ್ಭುತ ಪ್ರದರ್ಶನ ನೀಡುತ್ತಿದೆ. ಆಡಿರುವ 5 ಪಂದ್ಯಗಳಲ್ಲಿ ಎಸ್​ಆರ್​​ಹೆಚ್ ತಂಡವು 3 ಮ್ಯಾಚ್​ಗಳಲ್ಲಿ ಗೆಲುವು ದಾಖಲಿಸಿದರೆ, 2 ಪಂದ್ಯಗಳಲ್ಲಿ ವಿರೋಚಿತ ಹೋರಾಟ ಪ್ರದರ್ಶಿಸಿತ್ತು. ಹೀಗಾಗಿ ಆರ್​ಸಿಬಿ ತಂಡಕ್ಕೆ ಎಸ್​ಆರ್​ಹೆಚ್ ಕಠಿಣ ಪೈಪೋಟಿ ನೀಡಲಿದೆ. ಅದರಲ್ಲೂ ಈ ಪಂದ್ಯವು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರೋದ್ರಿಂದ ರನ್​ ಮಳೆ ಹರಿಯುವ ಸಾಧ್ಯತೆಯಿದೆ. ಏಕೆಂದರೆ ಈ ಬಾರಿಯ ಐಪಿಎಲ್​ನಲ್ಲಿ 277 ರನ್​ ಕಲೆಹಾಕುವ ಮೂಲಕ ಎಸ್​ಆರ್​ಹೆಚ್ ತಂಡ ಹೊಸ ಇತಿಹಾಸವನ್ನೇ ನಿರ್ಮಿಸಿದೆ. ಇತ್ತ ಬ್ಯಾಟರ್​ಗಳ ಸ್ವರ್ಗ ಎನಿಸಿಕೊಂಡಿರುವ ಚಿನ್ನಸ್ವಾಮಿ ಮೈದಾನದಲ್ಲಿ ಸನ್​ರೈಸರ್ಸ್ ಬ್ಯಾಟ್ಸ್​ಮನ್​ಗಳು ಅಬ್ಬರಿಸುವ ನಿರೀಕ್ಷೆಯಿದೆ. ಮತ್ತೊಂದೆಡೆ ಆರ್​ಸಿಬಿ ಕೂಡ ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದೆ. ಮೊದಲಾರ್ಧದ ಕೊನೆಯ ಪಂದ್ಯದಲ್ಲಿ ಆರ್​ಸಿಬಿ ತಂಡಕ್ಕೆ ಗೆಲುವು ಅನಿವಾರ್ಯ.

ಆರ್​ಸಿಬಿ ಸೋಲಿಗೆ ಆರ್​ಸಿಬಿ ಬೌಲರ್​ಗಳೇ ಕಾರಣ. ಹಾಗಂತ ಬ್ಯಾಟಿಂಗ್ ಏನು ಫಸ್ಟ್​ ಕ್ಲಾಸ್​​ ಆಗಿದೆ ಅಂತೇನಿಲ್ಲ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳ ಪ್ಲೇಯರ್ಸ್ ಕಳಪೆ ಫಾರ್ಮ್​ನಲ್ಲಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಡಿಕೆ ಇಬ್ರನ್ನ ಬಿಟ್ರೆ ಮುಂಬೈ ವಿರುದ್ಧದ ಪಂದ್ಯದಲ್ಲಿ ಕ್ಯಾಪ್ಟನ್ ಡುಪ್ಲೆಸ್ಸಿ ಮತ್ತು ಪಟೀದಾರ್ ಸ್ವಲ್ಪ ಅಬ್ಬರಿಸಿದ್ರು. ಇನ್ನು ಗ್ರೀನ್ ಮತ್ತು ಮ್ಯಾಕ್ಸ್​ವೆಲ್ ಅಂತೂ ಟೀಮ್​ನಲ್ಲಿ ಇದ್ದೂ ಇಲ್ಲದಂತೆಯೇ ಇದ್ದಾರೆ. ಸಸ್ಟಾರ್ ಬ್ಯಾಟ್ಸ್​​ಮನ್ ಅಂತಾ ಕರೆಸಿಕೊಳ್ಳೋ ಗ್ಲೆನ್ ಮ್ಯಾಕ್ಸ್​ವೆಲ್ ಗಾಯಗೊಂಡಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ವೇಳೆ ಮ್ಯಾಕ್ಸ್​ವೆಲ್ ಅವರ ಹೆಬ್ಬೆರಳಿಗೆ ಗಾಯವಾಗಿದ್ದು, ಹೀಗಾಗಿ ಅವರು ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುವುದು ಅನುಮಾನ ಎನ್ನಲಾಗ್ತಿದೆ. ಮ್ಯಾಕ್ಸಿ ಏನಾದ್ರೂ ಟೀಮ್​ನಿಂದ ಹೊರಗೆ ಉಳಿದ್ರೆ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 4ನೇ ಕ್ರಮಾಂಕದಲ್ಲಿ ಕ್ಯಾಮರೋನ್ ಗ್ರೀನ್ ಕಣಕ್ಕಿಳಿಯುವ ಸಾಧ್ಯತೆಯಿದೆ. ಯಾಕಂದ್ರೆ ಕಳೆದ ಪಂದ್ಯದಲ್ಲಿ  ಗ್ರೀನ್ ಬದಲಿಗೆ ವಿಲ್ ಜಾಕ್ಸ್ ಕಣಕ್ಕಿಳಿದಿದ್ದರು. ಇದೀಗ ಮ್ಯಾಕ್ಸ್​ವೆಲ್ ಹೊರಗುಳಿದರೆ ಅವರ ಸ್ಥಾನ ತುಂಬಬಲ್ಲ ಸಮರ್ಥ ಆಟಗಾರ ಆರ್​ಸಿಬಿ ತಂಡದಲ್ಲಿಲ್ಲ. ಹೀಗಾಗಿ ಔಟ್ ಆಫ್ ಫಾರ್ಮ್​ನಲ್ಲಿರುವ ಗ್ರೀನ್ ಅವರನ್ನೇ ಮತ್ತೆ ಕಣಕ್ಕಿಳಿಸಬೇಕಾದ ಅನಿವಾರ್ಯತೆ ಆರ್​ಸಿಬಿ ಮುಂದಿದೆ. ಮತ್ತೊಂದೆಡೆ ಮೊಹಮ್ಮದ್ ಸಿರಾಜ್ ಕೂಡ ಆರ್​ಸಿಬಿ ಪಾಲಿಗೆ ಬಿಎಂಟಿಸಿಯಲ್ಲಿರೋ ಎಸಿ ಬಸ್​ಗಳ ಥರ ಆಗಿದ್ದಾರೆ. ಮೇಂಟೇನೆನ್ಸ್ ಜಾಸ್ತಿ ಆದ್ರೆ ಲಾಭ ಮಾತ್ರ ಕಡಿಮೆ. ಜೊತೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಮ್​ಗೆ ಸ್ಟ್ರೆಂಥ್ ಮತ್ತು ವೀಕ್ನೆಸ್ ಎರಡೂ ಈ ಮ್ಯಾಕ್ಸ್​ವೆಲ್ ಮತ್ತು ಮೊಹಮ್ಮದ್ ಸಿರಾಜ್.. ಕಳೆದ ಆವೃತ್ತಿಯಲ್ಲಿ ಗೇಮ್ ಚೇಂಜಿಂಗ್ ಪರ್ಫಾಮೆನ್ಸ್ ನೀಡಿದ್ದ ಇವರ ಮೇಲೆ, ಈ ಸಲ ಬೆಟ್ಟದಷ್ಟು ನಿರೀಕ್ಷೆಗಳನ್ನೇ ಇಡಲಾಗಿತ್ತು. ಆದ್ರೆ ಆ ನಿರೀಕ್ಷೆಗಳೆಲ್ಲಾ ಹುಸಿಯಾಗಿ ಈ ಇಬ್ಬರು ಆಟಗಾರರೇ ಆರ್​ಸಿಬಿ ಪಾಲಿಗೆ ವಿಲನ್​ಗಳಾಗಿದ್ದಾರೆ. ಕಳೆದ ಸೀಸನ್​​ನಲ್ಲಿ ಆಕ್ಷರಶಃ ಆರ್​ಸಿಬಿಯ ಆಪದ್ಬಾಂಧವರಾಗಿದ್ದ ಮ್ಯಾಕ್ಸಿ ಈ ಸಲ ಫ್ರಾಡ್​ವೆಲ್ ಅಂತಾ ಟ್ರೋಲ್ ಆಗ್ತಿದ್ದಾರೆ. ಆಡಿದ್ದು 6 ಪಂದ್ಯ.. ಮೂರು ಡಕೌಟ್​.. ಒಟ್ಟು ರನ್​​​​​​​​​ 32.. ಸೋ ಕಾಲ್ಡ್ ಸ್ಫೋಟಕ ದಾಂಡಿಗ​ ಮ್ಯಾಕ್ಸಿಯ​ ಬ್ಯಾಟಿಂಗ್ ಕಥೆ ಇದು. ಗೇಮ್ ಚೇಂಜರ್, ಪವರ್ ಸ್ಟ್ರೈಕರ್ ಎನಿಸಿಕೊಂಡ ಮ್ಯಾಕ್ಸಿಯ ಪವರ್​​ಲೆಸ್​ ಬ್ಯಾಟಿಂಗ್ ಕಥೆ. ಆಡಿರುವ 6 ಇನಿಂಗ್ಸ್​ಗಳಿಂದ ಮ್ಯಾಕ್ಸಿ ಕಲೆಹಾಕಿದ್ದು ಕೇವಲ 32 ರನ್​ಗಳು ಮಾತ್ರ. ಈ ಆರು ಇನಿಂಗ್ಸ್​ಗಳಲ್ಲಿ ಅವರು ಕಲೆಹಾಕಿದ ಗರಿಷ್ಠ ಸ್ಕೋರ್ 28 ರನ್​ಗಳು. ಇನ್ನುಳಿದ 5 ಇನಿಂಗ್ಸ್​ಗಳಲ್ಲಿ ಕ್ರಮವಾಗಿ 0, 1, 0, 3, 0 ಗೆ ವಿಕೆಟ್ ಒಪ್ಪಿಸಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ ಮ್ಯಾಕ್ಸಿ ಕ್ರೀಸ್​ನಲ್ಲಿ ಉಳಿದಿದ್ದಕ್ಕಿಂತ ಡಕೌಟ್​ ಆಗಿ ಡಗೌಟ್​​​ನಲ್ಲಿ ಕೂಲ್​ ಡ್ರಿಂಕ್ಸ್​ ಕುಡಿದಿದ್ದೇ ಹೆಚ್ಚು.. ಇಷ್ಟಾದ ಮೇಲೂ  ನಿರ್ಣಾಯಕ ಪಂದ್ಯಗಳ ವೇಳೆ ಮ್ಯಾಕ್ಸ್​ವೆಲ್ ಫಾರ್ಮ್​ಗೆ ಮರಳುವ ನಿರೀಕ್ಷೆಯಿತ್ತು. ಆದ್ರೆ ಇಂಥಾ ಟೈಮಲ್ಲೇ ಮ್ಯಾಕ್ಸಿ ಗಾಯಗೊಂಡಿದ್ದಾರೆ. ಇನ್ನು ಬೌಲರ್ ಮೊಹಮ್ಮದ್ ಸಿರಾಜ್ ಬಗ್ಗೆ ಹೇಳಲೇಬೇಕು. ಸಿರಾಜ್​​ರ ಪವರ್ ಲೆಸ್ ಬೌಲಿಂಗ್ ಅಂತೂ ತಂಡಕ್ಕೆ ಮಾರಕವಾಗಿದೆ. ಪವರ್ ಪ್ಲೇ, ಡೆತ್​ ಓವರ್​ಗಳಲ್ಲಿ ದಾರಾಳ ರನ್ ನೀಡುವ ಸಿರಾಜ್, ವಿಕೆಟ್ ಬೇಟೆಯಾಡಲು ಇನ್ನಿಲ್ಲದ ಕಸರತ್ತು ನಡೆಸ್ತಿದ್ದಾರೆ. ಎದುರಾಳಿಗಳ ಪಾಲಿನ್ ರನ್ ಮಷಿನ್ ಆಗಿದ್ದಾರೆ. ಐಪಿಎಲ್ ಸೀಸನ್ 17 ಆವೃತ್ತಿಯಲ್ಲಿ 6 ಪಂದ್ಯಗಳಿಂದ 4 ವಿಕೆಟ್ ಉರುಳಿಸಿರುವ ಸಿರಾಜ್, 26 ರನ್ ನೀಡಿ 2 ವಿಕೆಟ್ ತೆಗೆದಿರುವುದು ಬೆಸ್ಟ್ ಪರ್ಫಾಮೆನ್ಸ್​ ಆಗಿದೆ. 10.40ರ ಎಕಾನಮಿಯಲ್ಲಿ ರನ್ ನೀಡಿದ್ದಾರೆ. ಇದಿಷ್ಟೇ ಅಲ್ಲ.! ಪ್ರಸಕ್ತ ಆವೃತ್ತಿಯಲ್ಲಿ ಪವರ್​​ ಪ್ಲೇನಲ್ಲಿ ಗರಿಷ್ಠ 10 ಸಿಕ್ಸರ್​ ಬಿಟ್ಟುಕೊಟ್ಟ ಅಪಖ್ಯಾತಿಯೂ ಸಿರಾಜ್​​ಗೆ ಸೇರುತ್ತೆ. ಸಿರಾಜ್​ರ ಈ ದುಬಾರಿ ಸ್ಪೆಲ್, ಆರ್​ಸಿಬಿಗೆ ಮಾತ್ರವಲ್ಲ. ಮುಂದಿನ ಟಿ20 ವಿಶ್ವಕಪ್ ದೃಷ್ಟಿಯಿಂದ ಟೀಮ್ ಇಂಡಿಯಾಗೂ ದುಬಾರಿಯಾಗಲಿದೆ.

ಇನ್ನು ಮುಂಬೈ ವಿರುದ್ಧದ ಹೀನಾಯ ಸೋಲಿನ ಬಳಿಕ ಆರ್​ಸಿಬಿ ಫ್ಯಾನ್ಸ್ ರೊಚ್ಚಿಗೆದ್ದಿದ್ದಾರೆ. ಬೌಲರ್ಸ್ ಪ್ಲಾಪ್ ಶೋ ಅಂತೂ ಆಕ್ರೋಶಕ್ಕೆ ಕಾರಣವಾಗಿದ್ದು, ಆರ್​ಸಿಬಿ ಆಟಗಾರರನ್ನ ಟ್ರೋಲ್ ಮಾಡಲಾಗುತ್ತಿದೆ. ನಮಗೆ ಬ್ಯಾಟಿಂಗ್​ ಮಾತ್ರ ಸಾಕು.. ಬೌಲಿಂಗ್​ ಬೇಡವೇ ಬೇಡ ಅಂತಿದ್ದಾರೆ. ಪ್ರತೀ ಬಾರಿ ಆರ್​​ಸಿಬಿ ಮ್ಯಾಚ್ ಇದ್ದಾಗ ಈ ಸಲ ಕಪ್​ ನಮ್ದೇ ಅನ್ನೋದಂತೂ ಸಖತ್​​ ಟ್ರೆಂಡ್​ ಆಗುತ್ತೆ. ಆದ್ರೆ ಅಂತ್ಯದಲ್ಲಿ ಆಟಗಾರರ ಫ್ಲಾಫ್​ ಶೋ ನಿರಾಸೆ ಉಂಟು ಮಾಡ್ತಿದೆ. ಕನ್ನಡಿಗರನ್ನ ಕೂರಿಸಿ ಬೇರೆ ರಾಜ್ಯದ ಆಟಗಾರರನ್ನ ಆಡಿಸೋದು, ಫಾರಿನ್​ ಪ್ಲೇಯರ್​ ಮೇಲೆ ಕೋಟಿ-ಕೋಟಿ ಸುರಿಯೋದು ಇದೇ ಆರ್​​ಸಿಬಿಯ ಹೊಸ ಅಧ್ಯಾಯ ಅಂತಾ ಫ್ಯಾನ್ಸ್​ ಕಿಡಿ ಕಾರ್ತಿದ್ದಾರೆ.

ಬ್ಯಾಕ್ ಟು ಬ್ಯಾಕ್ ಸೋತು ಪಾಯಿಂಟ್ಸ್ ಟೇಬಲ್​ನಲ್ಲಿ ಕೊನೇ ಸ್ಥಾನದಲ್ಲಿ ಕುಳಿತಿರೋ ಆರ್​ಸಿಬಿ ಪ್ಲೇಆಫ್​ಗೆ ಹೋಗುತ್ತಾ ಅನ್ನೋದೇ ಡೌಟ್ ಆಗಿದೆ. ಕೋಟ್ಯಾಂತರ ಅಭಿಮಾನಿಗಳು ಆರ್​ಸಿಬಿ ಕಪ್ ಗೆಲ್ಲುತ್ತೆ ಅನ್ನೋ ಆಸೆಯನ್ನೇ ಕೈಬಿಟ್ಟಿದ್ದಾರೆ. ಆದ್ರೆ, ಆರ್​ಸಿಬಿಯ ಪ್ಲೇಆಫ್ ದಾರಿ ಇನ್ನೂ ಮುಚ್ಚಿಲ್ಲ. ಆದ್ರೆ ದಾರಿ ಮಾಡಿಕೊಳ್ಬೇಕು ಅಷ್ಟೇ.. ಸದ್ಯ 6 ಪಂದ್ಯಗಳನ್ನಾಡಿರುವ ಆರ್​ಸಿಬಿ ಕೇವಲ ಒಂದರಲ್ಲಷ್ಟೇ ಗೆದ್ದು ಬೀಗಿದೆ. ಹೀಗಾಗಿ ಮುಂದಿನ ಪ್ರತಿ ಮ್ಯಾಚ್​ ಡು ಆರ್​ ಡೈ ಆಗಿದೆ. ಮುಂದಿನ 8 ಪಂದ್ಯಗಳ ಪೈಕಿ ಕನಿಷ್ಠ 7ರಲ್ಲಿ ಗೆಲುವಿನ ದಡ ಸೇರಿದ್ರಷ್ಟೇ ಆರ್​ಸಿಬಿಯ ಪ್ಲೇ-ಆಫ್ ಕನಸು ಜೀವಂತವಾಗಿರಲಿದೆ. ಒಂದು ಮ್ಯಾಚ್ ಸೋತ್ರೂ ಫ್ಲೇ-ಆಫ್​ ಡೋರ್ ಕಂಪ್ಲೀಟ್​ ಕ್ಲೋಸ್ ಆಗೋದು ಗ್ಯಾರಂಟಿ. ಹೀಗಾಗಿ ಮುಂದಿನ ಪಂದ್ಯಗಳಲ್ಲಿ ಗೆಲುವೊಂದೇ ಆರ್​ಸಿಬಿಯ ಗುರಿ.. ಹಾಗಂತ ಗೆಲುವೊಂದೇ ಟಾರ್ಗೆಟ್​ ಅಲ್ಲ.. ಗೆಲುವಿನ ಜೊತೆಗೆ ರನ್​ರೇಟ್ ಕಾಯ್ದಕೊಳ್ಳುವುದು ಮೋಸ್ಟ್​ ಇಂಪಾರ್ಟೆಂಟ್. ಈಗಾಗಲೇ ಮೈನಸ್ ಹೊಂದಿರುವ ಆರ್​ಸಿಬಿ, ಮುಂದಿನ ಪಂದ್ಯಗಳನ್ನ ಭಾರೀ ಅಂತರದಲ್ಲಿ ಗೆಲುವು ಕಾಣಬೇಕಿದೆ. ಆರ್​ಸಿಬಿ  ಇನ್ನೂ ಲೀಗ್​ನ 8 ಪಂದ್ಯಗಳನ್ನ ಆಡಲಿದ್ದು, ಈ ಎಲ್ಲಾ ಪಂದ್ಯಗಳ ಪೈಕಿ ತವರಿನಾಚೆಯ ಪಂದ್ಯಗಳನ್ನ ಗೆಲ್ಲಬೇಕಾದ ಸವಾಲು ಇದೆ. ತವರಿನಲ್ಲಿ ಕೇವಲ ಒಂದು ಮ್ಯಾಚ್ ಗೆದ್ದಿರುವ ಆರ್​ಸಿಬಿ, ತವರಿನ ಹೊರಗೆ ಆಡಿರೋ ಮೂರು ಪಂದ್ಯಗಳನ್ನ ಕೈಚೆಲ್ಲಿದೆ. ಹಾಗಂತ ತವರಿನಾಚೆ ಮಾತ್ರವಲ್ಲ. ತವರಿನ ಚಿನ್ನಸ್ವಾಮಿಯಲ್ಲೂ ಆರ್​ಸಿಬಿ ಗೆಲ್ಲೋಕೆ ಪರದಾಡುತ್ತಿದೆ. ತವರಿನಲ್ಲಿ ಆಡಿದ 4ರಲ್ಲಿ ಕೇವಲ 1ರಲ್ಲಷ್ಟೇ ಗೆದ್ದಿದೆ. ಹೀಗಾಗಿ ಬೆಂಗಳೂರಲ್ಲಿ ಇಂದಿನ ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧದ ಪಂದ್ಯ, ಮುಂಬರುವ ಗುಜರಾತ್ ಟೈಟನ್ಸ್, ಡೆಲ್ಲಿ, ಚೆನ್ನೈ ಎದುರು ಗೆಲ್ಲಲೇಬೇಕು. ಕೊನೆ 3 ಪಂದ್ಯಗಳನ್ನ ಚಿನ್ನಸ್ವಾಮಿಯಲ್ಲೇ ಆಡಲಿರುವ ಆರ್​ಸಿಬಿಗೆ, ಈ ಪಂದ್ಯಗಳೇ ಕ್ರೂಶಿಯಲ್ ರೋಲ್ ಪ್ಲೇ ಮಾಡುತ್ತೆ. ಆದ್ರೆ, ಇದಕ್ಕೂ ಹಿಂದಿನ 5 ಪಂದ್ಯಗಳ ಗೆಲುವು ಇಂಪಾರ್ಟೆಟ್​ ಆಗಲಿದೆ. ಆರ್​ಸಿಬಿಗೆ ಗೆಲುವಿನ ಜೊತೆಗೆ ಲಕ್ ಕೂಡ ಕೈಹಿಡಿಯಬೇಕಿದೆ. 10ನೇ ಸ್ಥಾನದಲ್ಲಿರುವ ಆರ್​ಸಿಬಿ 4ನೇ ಸ್ಥಾನಕ್ಕೇರಬೇಕಾದ್ರೆ, ಆರ್​ಸಿಬಿ ಮೇಲಿನ ತಂಡಗಳ ಸೋಲು ಕೂಡ ಸಾಥ್ ನೀಡಬೇಕು. ಆ ಸೋಲುಗಳು ಆರ್​ಸಿಬಿಗೆ ವರವಾಗಿ ಪರಣಮಿಸಬೇಕು. ಇದೆಲ್ಲವೂ ನಡೆದರಷ್ಟೇ ಆರ್​ಸಿಬಿಗೆ ಉಳಿಗಾಲ. ಒಟ್ನಲ್ಲಿ ಸಾಲು ಸಾಲು ಸೋಲು ಕಂಡಿರೊ ಆರ್​ಸಿಬಿ, ಪ್ಲೇ-ಆಫ್​​ಗೇರಲು ಅವಕಾಶವೇನೋ ಇದೆ. ಆಟದ ಜೊತೆ ಅದೃಷ್ಟವೂ ಕೈ ಹಿಡಿಯಬೇಕಿದೆ. ಇಲ್ದಿದ್ರೆ ದೃಶ್ಯ ಸಿನಿಮಾದ ಡೈಲಾಗ್ ಥರ ಈ ವರ್ಷ ಐಪಿಎಲ್​ ನಡೆದೇ ಇಲ್ಲ. ನಡೆದ್ರೂ ಆರ್​ಸಿಬಿ ಆಡೇ ಇಲ್ಲ ಅಂತಾ ಅಭಿಮಾನಿಗಳು ಹೃದಯನ ಕಲ್ಲು ಮಾಡ್ಕೊಳ್ಬೇಕು. ಮುಂದಿನ ವರ್ಷ ಈ ಸಲ ಕಪ್ ನಮ್ದೇ ಅಂತಾ ಹೇಳೋಕೆ ಸಿದ್ಧರಾಗ್ಬೇಕು.

Sulekha