ಅಯೋಧ್ಯೆಯ ಬಾಲರಾಮನ ವಿಗ್ರಹದ ವಿಶೇಷತೆ ಏನು?

ಅಯೋಧ್ಯೆಯ ಬಾಲರಾಮನ ವಿಗ್ರಹದ ವಿಶೇಷತೆ ಏನು?

ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠೆಗೆ ಕ್ಷಣಗಣನೆ ಆರಂಭವಾಗಿದೆ. ಜನವರಿ 22 ರ ಸೋಮವಾರ ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ರಾಮಲಲ್ಲಾ ವಿಗ್ರಹವನ್ನು ಈಗಾಗಲೇ ಆಯ್ಕೆ ಮಾಡಲಾಗಿದ್ದು, ಕನ್ನಡಿಗ ಅರುಣ್ ಯೋಗಿರಾಜ್ ಕೆತ್ತನೆ ಮಾಡಿರುವ ರಾಮಲಲ್ಲಾ ಮೂರ್ತಿಯನ್ನು ಆಯ್ಕೆಯಾಗಿದೆ. ಈ ವಿಗ್ರಹದ ವಿಶೇಷತೆ ಏನು ಅನ್ನೋ ಮಾಹಿತಿ ಇಲ್ಲಿದೆ.

ಕನ್ನಡಿಗ ಅರುಣ್ ಯೋಗಿರಾಜ್ ಕೆತ್ತನೆ ಮಾಡಿರುವ ರಾಮಲಲ್ಲಾ ಮೂರ್ತಿ 51 ಇಂಚು ಎತ್ತರವಿದ್ದು, ಕೃಷ್ಣ ಶಿಲೆ ಅಂದ್ರೆ ಕಪ್ಪು ಕಲ್ಲಿನಿಂದ ನಿರ್ಮಾಣ ಮಾಡಲಾಗಿದೆ. ಗರ್ಭಗುಡಿಯಲ್ಲಿ ಕಮಲದ ಮಾದರಿಯ ಕಲ್ಲಿನ ಮೇಲೆ ರಾಮಲಲ್ಲಾ ನಿಂತಿರ್ತಾನೆ. ಮೂರ್ತಿಯ ಸುತ್ತಲೂ ಅಂದ್ರೆ ಕಮಾನುವಿನಲ್ಲಿ ವಿವಿಧ ರೀತಿಯ ಹಿಂದೂ ಸಂಕೇತಗಳನ್ನ ಕೆತ್ತನೆ ಮಾಡಲಾಗಿದೆ. ಓಂ, ಸ್ವಸ್ತಿಕ, ಚಕ್ರ, ಗದೆ ಜೊತೆಗೆ ವಿಷ್ಣುವಿನ ದಶಾವತಾರಗಳನ್ನ ಕೂಡ ರಾಮನ ಸುತ್ತಲೂ ಚಿತ್ರಿಸಲಾಗಿದೆ. ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ ಮತ್ತು ಹನುಮಂತನ ಕೆತ್ತನೆಗಳು ಮೂರ್ತಿಯ ಒಂದು ಬದಿಯಲ್ಲಿದ್ರೆ, ಇನ್ನೊಂದು ಬದಿಯಲ್ಲಿ ಪರಷುರಾಮ, ರಾಮ, ಕೃಷ್ಣ, ಬುದ್ಧ, ಕಲ್ಕಿ ಮತ್ತು ಗರುಡನ ಕೆತ್ತನೆ ಇದೆ.

ಇದನ್ನೂ ಓದಿ: ರಾಮಜನ್ಮಭೂಮಿಯಲ್ಲಿ ಬಾಲರಾಮನಷ್ಟೇ ಅಲ್ಲ ಗಣಪತಿ ಕೆತ್ತಿದ್ದೂ ಕನ್ನಡಿಗನೇ – ಹೊನ್ನಾವರದ ಶಿಲ್ಪಿಗೂ ಸಿಕ್ಕಿದೆ ಗೌರವ!

ಈ ಪ್ರಧಾನ ಗರ್ಭಗುಡಿಯಲ್ಲಿ ರಾಮನ ಜೊತೆಗೆ ಸೀತೆಯ ವಿಗ್ರಹ ಇರೋದಿಲ್ಲ. ಕೇವಲ ರಾಮಲಲ್ಲಾ ಅಂದ್ರೆ ಬಾಲ ರಾಮನ ಪ್ರತಿಮೆಯನ್ನಷ್ಟೇ ಸ್ಥಾಪಿಸಲಾಗಿದೆ. ಪ್ರಾಣಪ್ರತಿಷ್ಠಾಪನೆ ಸಂದರ್ಭದಲ್ಲಿ ಪ್ರಧಾನಿ ಮೋದಿ ಗರ್ಭಗುಡಿಯೊಳಗೆ ಪ್ರವೇಶಿಸ್ತಾರೆ. ಈಗ ರಾಮಲಲ್ಲಾನ ಕಣ್ಣಿಗೆ ಕಟ್ಟಲಾಗಿರೋ ಬಟ್ಟೆಯಲ್ಲಿ ಪ್ರಧಾನಿ ಮೋದಿ ಕೈಯ್ಯಾರೆ ತೆಗೀತಾರೆ. ಹೀಗಾಗಿಯೇ ಮೋದಿ 11 ದಿನಗಳ ಕಾಲ ಕಠಿಣ ವ್ರತವನ್ನ ಮಾಡ್ತಿದ್ದಾರೆ.

ಇನ್ನು ರಾಮಮಂದಿರದಲ್ಲಿ ಸ್ಥಾಪನೆಯಾಗಿರೋ ರಾಮಲಲ್ಲಾನ ಕೈಯಲ್ಲಿ ಬಿಲ್ಲು ಬಾಣ ಕೂಡ ಇದೆ. ಬಾಲರಾಮನ ಕೈಯಲ್ಲಿ ಬಿಲ್ಲು ಬಾಣ ಯಾಕೆ ಅನ್ನೋದಕ್ಕೂ ಒಂದು ನಿರ್ಧಿಷ್ಟ ಕಾರಣ ಇದೆ. ಇದನ್ನ ಈಗಿನ ಜಮಾನಕ್ಕೆ ಹೋಲಿಕೆ ಮಾಡಿ ಹೇಳೋದಾದ್ರೆ, ಈಗಿನ ಕಾಲದಲ್ಲಿ ಸಣ್ಣ ಮಕ್ಕಳು ಕೂಡ ಕೈಯಲ್ಲಿ ಮೊಬೈಲ್ ಹಿಡಿದುಕೊಂಡಿರ್ತಾರೆ. ಕಂಪ್ಯೂಟರ್ ಆಟಪರೇಟ್ ಮಾಡ್ತಾರೆ. 18-20 ವರ್ಷಕ್ಕೆಲ್ಲಾ ತಮ್ಮದೇ ಸ್ಟಾರ್ಟ್ಅಪ್ ಕಂಪನಿಗಳನ್ನ ಸ್ಥಾಪಿಸುವೆ ಲೆವೆಲ್ಗೆ ಬೆಳೀತಾ ಇದ್ದಾರೆ. ಅದೇ ರೀತಿ ಅಂದಿನ ಕಾಲದಲ್ಲಿ ಶ್ರೀರಾಮ ಒಬ್ಬ ಹುಟ್ಟು ಯೋಧ. ಬಾಲಕನಾಗಿದ್ದಾಗ ವಿದ್ಯೆ ಜೊತೆಗೆ ಶಸ್ತ್ರಾಸ್ತ್ರ ತರಬೇತಿಯನ್ನ ಕೂಡ ನೀಡಲಾಗ್ತಾ ಇತ್ತು. ಅದ್ರಲ್ಲೂ ಶ್ರೀರಾಮನಂತೂ ಬಿಲ್ಲು ಬಾಣದಲ್ಲಿ ಕರಗತನಾಗಿದ್ದ. ರಾವಣನನ್ನ ಹೇಗೆ ರಾಮ ಹೇಗೆ ಕೊಂದ ಅನ್ನೋದು ನಿಮಗೆ ಗೊತ್ತೇ ಇದ್ಯಲ್ಲಾ. ಹೀಗಾಗಿ ಬಿಲ್ಲು ಬಾಣ ಅನ್ನೋದು ರಾಮನ ಅವಿಭಾಜ್ಯ ಅಂಗ. ಶ್ರೀರಾಮನ ಸಂಕೇತ. ಇದೇ ಕಾರಣಕ್ಕೆ ಅಯೋಧ್ಯೆಯ ಮಂದಿರದಲ್ಲಿ ಸ್ಥಾಪನೆಯಾಗಿರೋ ಮೂರ್ತಿಯಲ್ಲಿ ರಾಮಲಲ್ಲಾ ಒಂದು ಕೈಯಲ್ಲಿ ಬಿಲ್ಲು ಹಿಡಿದುಕೊಂಡಿದ್ದು, ಇನ್ನೊಂದು ಕೈಯಲ್ಲಿ ಬಾಣವನ್ನ ಹಿಡಿದು ನಿಂತಿದ್ದಾನೆ.

ಈಗ ಸ್ಥಾಪನೆಯಾಗಿರೋ ರಾಮಲಲ್ಲಾ ಮೂರ್ತಿ ಸುಮಾರು 4 ಅಡಿಗಿಂತಲೂ ಎತ್ತರ ಇದೆ. 5ನೇ ವರ್ಷಕ್ಕೆ ರಾಮ ಅಷ್ಟೊಂದು ಎತ್ತರವಿದ್ನಾ ಅನ್ನೋದು ಇಲ್ಲಿರುವ ಪ್ರಶ್ನೆ. ನಿಮಗೆ ಗೊತ್ತಿರಲಿ, ಸುಂದರಾಕಾಂಡದಲ್ಲಿ ರಾಮನ ದೂತನ ಬಳಿ ಸೀತೆ ಅದೊಮ್ಮೆ ಕೇಳ್ತಾಳಂತೆ. ರಾಮನ ಎತ್ತರ ಎಷ್ಟು ಅನ್ನೋದಾಗಿ. ಆಗ ದೂತ ಹನುಮಂತನ ಬಳಿಗೆ ಬಂದು ಈ ವಿಚಾರವನ್ನ ಕೇಳಿದಾಗ ರಾಮ 8 ಅಡಿ ಎತ್ತರ ಇದ್ದಾನೆ ಅನ್ನೋದಾಗಿ ಹನುಮಂತ ಹೇಳ್ತಾನೆ. ಆಗ ಶ್ರೀರಾಮನಿಗೆ 38 ವರ್ಷ ವಯಸ್ಸು. 39ನೇ ವರ್ಷಕ್ಕೆ ರಾಮನ ಪಟ್ಟಾಭಿಷೇಕವಾಗಿರುತ್ತೆ. ಹೀಗಾಗಿ 38ನೇ ವರ್ಷಕ್ಕೆ ರಾಮ 8 ಅಡಿ ಎತ್ತರ ಇದ್ದ ಅಂದ್ರೆ ಬಾಲರಾಮ 5ನೇ ವರ್ಷಕ್ಕೆಲ್ಲಾ ನಾಲ್ಕು ಅಡಿಯಾದ್ರೂ ಎತ್ತರ ಇದ್ದರಬಹುದು ಅನ್ನೋ ಅಂದಾಜಿನೊಂದಿಗೆ ಈಗ ಅಷ್ಟು ಎತ್ತರದ ಪ್ರತಿಮೆಯನ್ನ ಪ್ರತಿಷ್ಠಾಪಿಸಲಾಗಿದೆ.

ಇಲ್ಲಿ ನಿಮ್ಮ ಮನಸ್ಸಲ್ಲಿ ಒಂದು ಪ್ರಶ್ನೆ ಬಂದಿರಬಹುದು. ಇಷ್ಟು ವರ್ಷಗಳ ಕಾಲ ಅಯೋಧ್ಯೆಯಲ್ಲಿ ಟೆಂಟ್ನೊಳಗೆಯೇ ಪೂಜಿಸಲ್ಪಡ್ತಿದ್ದ, ಭಕ್ತರು ದರ್ಶನ ಮಾಡ್ತಿದ್ದ ರಾಮಲಲ್ಲಾನ ಮೂರ್ತಿ ಮುಂದೇನಾಗುತ್ತೆ ಅನ್ನೋದು. ಆ ಮೂರ್ತಿ ಈಗಿನ ಗರ್ಭಗುಡಿಯಲ್ಲಿ ಇರೋದಿಲ್ಲ. ಈ ವಿಗ್ರವನ್ನ ಅಲ್ಲೇ ಪಕ್ಕದಲ್ಲಿರೋ ಇನ್ನೊಂದು ರಾಮಮಂದಿರದ ಗರ್ಭಗುಡಿಯಲ್ಲಿ ಸ್ಥಾಪಿಸಲಾಗ್ತಿದೆ. ಶೋಭಯಾತ್ರೆ ವೇಳೆ ಆ ಮೂರ್ತಿಯನ್ನೇ ಹೊತ್ತು ಮೆರವಣಿಗೆ ಮಾಡಲಾಗುತ್ತೆ. ಈಗ ಹೊಸ ಮಂದಿರದಲ್ಲಿ ಸ್ಥಾಪನೆಯಾಗಿರೋ ರಾಮಲಲ್ಲಾನ ಮೂರ್ತಿಯನ್ನ ಮೆರವಣಿಗೆಗೆ ಕರೆದೊಯ್ಯೋದಿಲ್ಲ. ಕನ್ನಡಿಗ ಅರುಣ್ ರಾಜ್ ಕೆತ್ತಿದೆ ಆ ಮೂರ್ತಿ ಶಾಶ್ವತವಾಗಿ ಗರ್ಭಗುಡಿಯಲ್ಲೇ ಇರುತ್ತೆ.

Shwetha M