ರಾಜ್ಯದಲ್ಲಿ ನೀರಿನ ಕೊರತೆ ಇರುವಾಗಲೇ ತಮಿಳುನಾಡಿಗೆ ನೀರು ಬಿಡಲು ಮುಂದಾಗಿರುವುದರ ಹಿಂದಿನ ಅಸಲಿ ಸತ್ಯವೇನು..? – ಬಿಜೆಪಿ ಪ್ರಶ್ನೆ

ರಾಜ್ಯದಲ್ಲಿ ನೀರಿನ ಕೊರತೆ ಇರುವಾಗಲೇ ತಮಿಳುನಾಡಿಗೆ ನೀರು ಬಿಡಲು ಮುಂದಾಗಿರುವುದರ ಹಿಂದಿನ ಅಸಲಿ ಸತ್ಯವೇನು..? – ಬಿಜೆಪಿ ಪ್ರಶ್ನೆ

ಬೆಂಗಳೂರು: ಕಾವೇರಿ ನೀರು ಹಂಚಿಕೆ ವಿಚಾರವಾಗಿ ರಾಜ್ಯದಲ್ಲಿ ವಿವಾದ ಭುಗಿಲೆದ್ದಿದೆ. ಕರ್ನಾಟಕದಲ್ಲಿ ನೀರಿನ ಅಭಾವವಿದ್ದರೂ ಹೆಚ್ಚುವರಿ ನೀರನ್ನು ತಮಿಳುನಾಡಿದೆ ಬಿಡಲಾಗುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ರಾಜ್ಯದ ನಡೆಯನ್ನು ಪ್ರಶ್ನಿಸಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಬೆನ್ನಲ್ಲೇ ರಾಜ್ಯ ಬಿಜೆಪಿ ಟ್ವೀಟ್‌ ಮಾಡಿ, ಅಧಿಕಾರದ ಲಾಲಸೆಗಾಗಿ ದೇಶದ ಭದ್ರತೆಯ ವಿಚಾರದಲ್ಲಿ ಕೇಂದ್ರ ಕಾಂಗ್ರೆಸ್ ರಾಜಿಯಾದ ಮಾದರಿಯಲ್ಲಿ, ಈಗ ರಾಜ್ಯ ಕಾಂಗ್ರೆಸ್ ರಾಜ್ಯದ ನೆಲ, ಜಲದ ವಿಷಯದಲ್ಲಿ ಯಾವುದೇ ಪ್ರತಿರೋಧ ತೋರದೆ ರಾಜಿಯಾಗುತ್ತಿದೆ ಎಂದು ಕಿಡಿಕಾರಿದೆ.

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ರಾಜ್ಯ ಬಿಜೆಪಿ, ಅಧಿಕಾರದಲ್ಲಿದ್ದಾಗ ದೇಶದ ಹಿತಾಸಕ್ತಿಯನ್ನು ಬಲಿ ಕೊಟ್ಟಿದ್ದ ಕೇಂದ್ರ ಕಾಂಗ್ರೆಸ್‌ ರೀತಿಯಲ್ಲಿಯೇ, ರಾಜ್ಯದ ಹಿತಾಸಕ್ತಿಯನ್ನು ರಾಜ್ಯ ಕಾಂಗ್ರೆಸ್‌ ಬಲಿ ಕೊಡುತ್ತಿದೆ. ಅಧಿಕಾರದ ಲಾಲಸೆಗಾಗಿ ದೇಶದ ಭದ್ರತೆಯ ವಿಚಾರದಲ್ಲಿ ಕೇಂದ್ರ ಕಾಂಗ್ರೆಸ್ ರಾಜಿಯಾದ ಮಾದರಿಯಲ್ಲಿ, ಈಗ ರಾಜ್ಯ ಕಾಂಗ್ರೆಸ್ ರಾಜ್ಯದ ನೆಲ, ಜಲದ ವಿಷಯದಲ್ಲಿ ಯಾವುದೇ ಪ್ರತಿರೋಧ ತೋರದೆ ರಾಜಿಯಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದೆ.

ಇದನ್ನೂ ಓದಿ: ಕಾವೇರಿ ನೀರಿಗಾಗಿ ಮತ್ತೆ ಕ್ಯಾತೆ ತೆಗೆದ ತಮಿಳು ನಾಡು – ಸುಪ್ರೀಂ ಕೋರ್ಟ್ ಗೆ ಇಂದು ಕರ್ನಾಟಕ ಮೇಲ್ಮನವಿ ಸಲ್ಲಿಕೆ

ಕಾವೇರಿ ನೀರಿನ ವಿವಾದದ ಬಗ್ಗೆ ಕಾವೇರಿ ನ್ಯಾಯಾಧಿಕರಣವು ಜಲಾಶಯದ ನೀರಿನ ಬಳಕೆಯ ಬಗ್ಗೆ ಈಗಾಗಲೇ ಆದೇಶ ನೀಡಿದೆ. ತಮಿಳುನಾಡಿನಲ್ಲಿ ಬೆಳೆಯುವ 1 ಲಕ್ಷ 80 ಸಾವಿರ ಹೆಕ್ಟೇರ್ ಕುರುವೈ ಬೆಳೆಗೆ, ಒಟ್ಟು 32 ಟಿಎಂಸಿ ನೀರು ಬಿಡಬೇಕೆಂಬ ಅಂಶ ಆದೇಶದಲ್ಲಿದೆ. ಆದರೆ ಈ ಬಾರಿ ತಮಿಳುನಾಡಿನಲ್ಲಿ ಒಟ್ಟು 4 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕುರುವೈ ಬೆಳೆಯನ್ನು ಬೆಳೆಯುತ್ತಿದ್ದು, ಇದಕ್ಕಾಗಿ ಈಗಾಗಲೇ ಒಟ್ಟು 60 ಟಿಎಂಸಿ ನೀರು ಬಳಕೆಯಾಗಿದೆ ಎಂದು ಬಿಜೆಪಿ ಹೇಳಿದೆ.

ತಮಿಳುನಾಡು ಸರ್ಕಾರ ತಮಗೆ 10 ಟಿಎಂಸಿ ನೀರು ಬಿಡಿ ಎಂದು ಪ್ರಾಧಿಕಾರದ ಮುಂದೆ ಹೇಳಿದಾಗ, ರಾಜ್ಯ ಸರ್ಕಾರದ ಅಧಿಕಾರಿಗಳು ಈ ಅಂಶವನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ, ಅಂಕಿ ಅಂಶಗಳ ಸಮೇತ ಮಂಡಿಸಬೇಕಿತ್ತು. ಆದರೆ ಈ ಯಾವ ಅಂಶಗಳನ್ನೂ ಪ್ರಸ್ತಾಪಿಸದೆ ಮೌನಕ್ಕೆ ಶರಣಾಗಿದ್ದು ಏಕೆ..? ಕಾವೇರಿ ಜಲಾನಯನ ಪ್ರದೇಶದಲ್ಲಿ ಈ ಬಾರಿ ವಾಡಿಕೆಯಂತೆ ಮಳೆಯಾಗಿಲ್ಲ. ಹೀಗಾಗಿ ನಮ್ಮ ರಾಜ್ಯದ ರೈತರ ಬೆಳೆಗಳಿಗೆ ಸಮರ್ಪಕವಾಗಿ ನೀರು ಒದಗಿಸಲು ಸಾಧ್ಯವಿಲ್ಲ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ, ತಮಿಳುನಾಡಿಗೆ ನೀರು ಬಿಡಲು, ರಾಜ್ಯದ ಕಾಂಗ್ರೆಸ್ ಸರ್ಕಾರ ಯಾವುದೇ ವಿರೋಧ ವ್ಯಕ್ತಪಡಿಸದೇ ಮುಂದಾಗಿರುವುದರ ಹಿಂದಿನ ಅಸಲಿ ಸತ್ಯವಾದರೂ ಏನು..? ಎಂದು ಬಿಜೆಪಿ ಪ್ರಶ್ನಿಸಿದೆ.

ವಿಪರ್ಯಾಸವೆಂದರೆ ಈ ಬಾರಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಅತಿ ಹೆಚ್ಚು ಶಾಸಕರು ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದಾರೆ. ವೋಟು ಹಾಕಿದ ಮತದಾರನಿಗೆ ಕಾಂಗ್ರೆಸ್ ಸರ್ಕಾರ ಈಗ ಬಳುವಳಿ ಎಂಬಂತೆ ತಮಿಳುನಾಡಿಗೆ ನೀರು ಹರಿಸುತ್ತಿದೆ. ರಾಜ್ಯದ ಕಾಂಗ್ರೆಸ್ ಪಕ್ಷಕ್ಕೂ, ತಮಿಳುನಾಡಿನ ಡಿ.ಎಂ.ಕೆಗೂ ಎಂತಹ ಸಹೋದರ ಸಂಬಂಧವಿದ್ದರೂ, ಅದನ್ನು ರಾಜ್ಯದ ಜನರ ಹಿತ ಕಾಪಾಡಲು ಬಳಸಬೇಕಿತ್ತು. ಆದರೆ, ರಾಜ್ಯದ ಕಾಂಗ್ರೆಸ್ ಸರ್ಕಾರ ತನ್ನ ಮಿತ್ರ ಡಿ.ಎಂ‌.ಕೆ ಪಕ್ಷವನ್ನು ಸಂತೃಪ್ತಿಗೊಳಿಸಲು ರಾಜ್ಯದ ಹಿತವನ್ನು ಬಲಿ ಕೊಡುತ್ತಿದೆ. ರೈತರ ಕನಸುಗಳಿಗೆ ಬೆಂಕಿ ಇಡುತ್ತಿದೆ. ಇದು ನಾಡದ್ರೋಹದ ಕೆಲಸ. ರಾಜ್ಯದ ನೆಲ-ಜಲದ ಹಿತವನ್ನು ಕಾಪಾಡಲು ಅರ್ಹತೆಯಿಲ್ಲದ ನಾಡದ್ರೋಹಿ ಕಾಂಗ್ರೆಸ್, ಒಂದು ನಿಮಿಷವೂ ಅಧಿಕಾರದಲ್ಲಿ ಉಳಿಯಲು ಅನರ್ಹ ಎಂದು ಕಿಡಿಕಾರಿದೆ.

  • ಇನ್ನು ಬಿಜೆಪಿ, ಜೀವಜಲ ಕಾವೇರಿ ವಿಚಾರದಲ್ಲಿ ಕಾಂಗ್ರೆಸ್ ಇದುವರೆಗೆ ಮಾಡಿದ‌ ನಾಡದ್ರೋಹದ ಕೆಲಸಗಳು‌ ಎಂಬ ಪಟ್ಟಿಯೊಂದನ್ನು ಮಾಡಿದೆ. ಈ ಕೆಳಗಿನಂತಿದೆ.
  • ಕಾಂಗ್ರೆಸ್‌ಗೆ ರಾಜ್ಯದ ರೈತರ ಹಿತಕ್ಕಿಂತಲೂ ಮುಖ್ಯವಾದದ್ದು ರಾಹುಲ್ ಗಾಂಧಿಗಾಗಿ ತಮಿಳುನಾಡು ಸರ್ಕಾರದ ಓಲೈಕೆ.
  •  ತಮಿಳು‌ನಾಡು‌ ಸರ್ಕಾರಕ್ಕೆ ರಾಜಕೀಯ ಲಾಭ ಮಾಡಿಕೊಡಲು ಕಾವೇರಿ ನ್ಯಾಯಾಧಿಕರಣದಲ್ಲಿ ಕರ್ನಾಟಕದ ವಾದವನ್ನು ಮಂಡಿಸದೆ ಪಲಾಯನ.
  • ಮೇಕೆದಾಟು ಯೋಜನೆ ವಿರೋಧಿಸಿದ ಸ್ಟಾಲಿನ್‌ ಅವರಿಗೆ ಬೆಂಗಳೂರಿನಲ್ಲಿ‌ I.N.D.I.A. ಹೆಸರಲ್ಲಿ ಕೆಂಪು ಹಾಸಿನ ಸ್ವಾಗತ‌..!
  • ಮೇಕೆದಾಟಿಗಾಗಿ ಪಾದಯಾತ್ರೆ ಮಾಡಿದ ಡಿ.ಕೆ ಶಿವಕುಮಾರ್‌ ಅವರಿಂದು ತಮಿಳು‌ನಾಡು ಸರ್ಕಾರ ಹಾಕಿದ ಗೆರೆಯನ್ನೂ ದಾಟುತ್ತಿಲ್ಲ..!
  • ಈಗಾಗಲೇ ಒಪ್ಪಂದಕ್ಕಿಂತ ದುಪ್ಪಟ್ಟು ಪ್ರಮಾಣದಲ್ಲಿ ಕಾವೇರಿ ನೀರು ತಮಿಳುನಾಡಿಗೆ ಹರಿಸಲಾಗಿದೆ…!

ಇವೆಲ್ಲದರ ಪರಿಣಾಮವಾಗಿ ರಾಜ್ಯದ ಅನ್ನದಾತರ ಬದುಕು ಕಸಿದುಕೊಂಡದ್ದೂ ಅಲ್ಲದೆ ಮುಂದಿನ ದಿನಗಳಲ್ಲಿ ಬೆಂಗಳೂರಿಗೆ‌ ಕುಡಿಯುವ ನೀರೂ ಇಲ್ಲದಂತಾಗುವ ಅಪಾಯ ಎದುರಾಗಿದೆ ಎಂದು ರಾಜ್ಯ ಬಿಜೆಪಿ ಟ್ವೀಟ್‌ ಮಾಡಿ ಕಿಡಿಕಾರಿದೆ.

suddiyaana