ಹೀರೆಕಾಯಿ ತಿಂದ್ರೆ ದೇಹಕ್ಕೆ ಏನೆಲ್ಲಾ ಲಾಭ? – ರುಚಿ ಜೊತೆ ಆರೋಗ್ಯಕ್ಕೆ ಇದು ಬೊಂಬಾಟ್

ಹೀರೆಕಾಯಿ ತಿಂದ್ರೆ  ದೇಹಕ್ಕೆ ಏನೆಲ್ಲಾ ಲಾಭ? – ರುಚಿ ಜೊತೆ ಆರೋಗ್ಯಕ್ಕೆ ಇದು ಬೊಂಬಾಟ್

ಹೀರೆಕಾಯಿ, ಸೋರೆಕಾಯಿ, ಗೋರಿಕಾಯಿ ಮುಂತಾದ ಹತ್ತು ಹಲವು ದೇಸಿ ತರ ಕಾರಿ ಗಳು ಭಾರತೀಯ ಅಡುಗೆಗಳ ರುಚಿ, ಘಮ ಹಾಗೂ ಆರೋಗ್ಯವನ್ನು ಹೆಚ್ಚಿಸುತ್ತಿವೆ. ಸಮೀಪದ ಯಾವುದೇ ತರಕಾರಿ ಅಂಗಡಿಗಳಲ್ಲಿ ಲಭ್ಯವಾಗುವ ಇವು ಗ್ರಾಹಕರ ಇಷ್ಟದ ಆನ್‌ ಲೈನ್‌ ಆರ್ಡರ್‌ ಗಳ ಮೂಲಕವೂ ಮನೆ ಬಾಗಿಲು ತಲುಪುತ್ತವೆ. ಹೀರೆಕಾಯಿಯಿಂದ ಕೂಡ ಸಾಕಷ್ಟು ಲಾಭವಿದೆ.  ಹಲವಾರು ರೀತಿಯ ಖನಿಜಗಳು, ಸೂಕ್ಷ್ಮ ಪೋಷ ಕಾಂಶಗಳು, ನಾರು ಸೇರಿದಂತೆ ಹಲವಾರು ಸತ್ವಗಳು ಹೀರೆಕಾಯಿ ತಿನ್ನುವುದರಿಂದ ದೊರೆಯುತ್ತದೆ.

ವಿಟಮಿನ್‌ಗಳು: ಇದರಲ್ಲಿರುವ ವಿಟಮಿನ್‌ ಎ ಅಂಶಗಳು ಕಣ್ಣು ಮತ್ತು ಚರ್ಮದ ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿ ಸಿ ವಿಟಮಿನ್‌ ಸಹ ಹೇರಳವಾಗಿದ್ದು, ದೇಹದ ರೋಗ ನಿರೋಧಕ ಶಕ್ತಿಯನ್ನು ಚುರುಕುಗೊಳಿಸುತ್ತದೆ. ಹೀರೆಕಾಯಿಯಲ್ಲಿ ಫೋಲೇಟ್‌ ಸೇರಿದಂತೆ ಹಲವು ರೀತಿಯ ಬಿ ವಿಟಮಿನ್‌ ಗಳಿವೆ. ಭ್ರೂಣದ ಮೆದುಳು ಹಾಗೂ ಬೆನ್ನು ಮೂಳೆಗಳ ಬೆಳವಣಿಗೆಗೆ ಅಗತ್ಯವಾಗಿ ಬೇಕಾದ ಅಂಶ ಫೋಲೇಟ್‌. ಹಾಗಾಗಿ ಗರ್ಭಿಣಿಯರಿಗೂ ಹಿತ-ಮಿತವಾಗಿ ಹೀರೆಕಾಯಿ ಸೇವನೆ ಒಳ್ಳೆಯದು

ಕ್ಯಾಲರಿ ಕಡಿಮೆ: ದೇಹಕ್ಕೆ ಹೆಚ್ಚಿನ ಕ್ಯಾಲರಿ ತುರುಕದೆ, ಕಡಿಮೆ ಕ್ಯಾಲರಿಯಲ್ಲಿ ಹೆಚ್ಚಿನ ಸತ್ವ ಗಳನ್ನು ನೀಡುವಂಥ ತರಕಾರಿಯಿದು. ನಾರಿನಂಶ ಹೇರಳವಾಗಿ ಇರುವುದರಿಂದ, ಬೇಗನೆ ಹೊಟ್ಟೆ ತುಂಬಿದ ಭಾವನೆ ನೀಡುತ್ತದೆ ಮತ್ತು ದೀರ್ಘಕಾಲದವರೆಗೆ ಹಸಿವಾಗದಂತೆ ತಡೆಯುತ್ತದೆ. ಹಾಗಾಗಿ ತೂಕ ಇಳಿಸುವವರಿಗೆ ಅನುಕೂಲಕರವಾದ ತರಕಾರಿಯಿದು. ಮಾತ್ರವಲ್ಲ, ನಾರು ಸಾಕಷ್ಟು ಇರು ವುದರಿಂದ ಜೀರ್ಣಾಂಗಗಳ ಸಾಮರ್ಥ್ಯವನ್ನು ಹೆಚ್ಚಿಸಿ, ಮಲಬದ್ಧತೆಯನ್ನು ದೂರ ಮಾಡುತ್ತದೆ.

ಹೃದಯಕ್ಕೆ ಪೂರಕ: ನಾರಿನಂಶ ಹೆಚ್ಚಿರುವ ತರಕಾರಿಗಳು ರಕ್ತದಲ್ಲಿ ಕೊಬ್ಬು ಶೇಖರವಾಗದಂತೆ ತಡೆಯುತ್ತವೆ. ಈ ಕೆಲಸದಲ್ಲಿ ಹೀರೆಕಾಯಿ ಸಹ ಮುಂದು. ಜೊತೆಗೆ, ಇದರಲ್ಲಿರುವ ಪೊಟ್ಯಾಶಿಯಂ ಅಂಶವು ರಕ್ತದೊತ್ತಡ ಏರದಂತೆ ಕಾಪಾಡುವಲ್ಲಿ ಸಹಕಾರಿ. ಹಾಗಾಗಿ ಒಟ್ಟಾರೆ ಹೃದಯದ ಆರೋಗ್ಯಕ್ಕೆ ಪೂರಕವಾದ ಅಂಶಗಳು ಹೀರೆಕಾಯಿಯಲ್ಲಿವೆ.

ಉತ್ಕರ್ಷಣ ನಿರೋಧಕಗಳು: ದೇಹದಲ್ಲಿ ಉರಿಯೂತ ಹೆಚ್ಚಿದರೆ ರೋಗಗಳೂ ಹೆಚ್ಚಾದಂತೆ. ಇವುಗಳನ್ನು ತಡೆಯಲು ಉತ್ಕರ್ಷಣ ನಿರೋಧಕಗಳು ಬೇಕು. ಉರಿಯೂತ ನಿವಾರಕ ಫ್ಲೆವ ನಾಯ್ಡ್‌ಗಳು ಹೀರೆಕಾಯಿಯಲ್ಲಿ ಸಾಕಷ್ಟಿವೆ. ಬೀಟಾ ಕ್ಯಾರೊಟಿನ್‌ ಸಹ ಇದ್ದು ದೇಹದ ಒಟ್ಟಾರೆ ಸ್ವಾಸ್ಥ್ಯ ಸುಧಾರಣೆಗೆ ಈ ತರಕಾರಿ ಪೂರಕವಾಗಿದೆ.

 ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಈ ತರಕಾರಿ ನೆರವು ನೀಡುತ್ತದೆ. ಹಾಗಾಗಿ ಮಧುಮೇಹದಿಂದ ಬಳಲುವವರಿಗೂ ಹೀರೆಕಾಯಿ ಸೇವನೆ ನಿಷೇಧವೇನಿಲ್ಲ. ಇದರ ಗ್ಲೈಸೆಮಿಕ್‌ ಸೂಚ್ಯಂಕ ಕಡಿಮೆ ಇರುವುದರಿಂದ ಇದನ್ನು ತಿಂದ ಬಳಿಕ, ರಕ್ತದಲ್ಲಿ ಸಕ್ಕರೆಯ ಮಟ್ಟದಲ್ಲಿ ಏರಿಳಿತ ಆಗುವುದಿಲ್ಲ.

  ಕೆಲವು ಹಣ್ಣು ತರಕಾರಿಗಳಲ್ಲಿ ನೀರಿನಂಶ ಭರಪೂರ ಇರುತ್ತದೆ. ಅಂಥ ವುಗಳಲ್ಲಿ ಹೀರೆಕಾಯಿಯೂ ಒಂದು. ಹೀಗೆ ನೀರಿರುವ ತರಕಾರಿಗಳು ಸಾಮಾನ್ಯವಾಗಿ ಜೀರ್ಣಾಂಗ ಗಳನ್ನು ಉದ್ದೀಪಿಸುತ್ತವೆ. ಜೊತೆಗೆ ನಾರೂ ಇರುವುದರಿಂದ, ದೇಹಕ್ಕೆ ಬೇಕಾದಂತೆ ನೀರನ್ನೊದಗಿಸಿ, ಪಚನಕ್ರಿಯೆಯನ್ನು ಸರಾಗವಾಗಿಸಿ, ದೇಹದ ಉಷ್ಣತೆಯನ್ನು ನಿಯಂತ್ರಿಸಿ, ರಕ್ತ ಪರಿಚಲನೆಗೂ ನೆರವಾಗುತ್ತವೆ

ಮೂಳೆಗಳಿಗೆ ಬಲ 

 ನಮ್ಮ ಮೂಳೆಗಳು ಮತ್ತು ಹಲ್ಲುಗಳನ್ನು ಸದೃಢಗೊಳಿಸಲು ಅಗತ್ಯವಾದ ಕ್ಯಾಲ್ಶಿಯಂ ಮತ್ತು ಫಾಸ್ಫರಸ್‌ ಖನಿಜಗಳು ಹೀರೆಕಾಯಿಯಲ್ಲಿವೆ. ಹಾಗಾಗಿ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲಾ ವಯೋಮಾನದವರಿಗೂ ಬೇಕಾದಂಥ ತರಕಾರಿಯಿದು. ಅದರಲ್ಲೂ ಮೂಳೆ ಸಾಂದ್ರತೆ ಕಡಿಮೆ ಇರುವವರಿಗೆ ಇದು ಅಗತ್ಯವಾಗಿ ಬೇಕು.

Kishor KV