ತಂದೆ ಮೃತದೇಹದ ಮುಂದೆಯೇ ಮದುವೆಯಾದ ಮಗ! – ಕಾರಣವೇನು ಗೊತ್ತಾ?

ತಂದೆ ಮೃತದೇಹದ ಮುಂದೆಯೇ ಮದುವೆಯಾದ ಮಗ! – ಕಾರಣವೇನು ಗೊತ್ತಾ?

ಮದುವೆ ಅನ್ನೋದು ಪ್ರತಿಯೊಬ್ಬರ ಜೀವನದಲ್ಲಿ ಬರುವ ಪ್ರಮುಖ ಘಟ್ಟ. ಹೀಗಾಗಿ ತಮ್ಮ ಕನಸಿನಂತೆ ಮದುವೆಯಾಗಬೇಕು ಅಂತಾ ಅನೇಕ ಯೋಜನೆಗಳನ್ನು ಮಾಡಿಕೊಂಡಿರುತ್ತಾರೆ. ಮದುವೆ ಹಾಲ್ ಬುಕ್ ಮಾಡಿ ಶುಭ ಮುಹೂರ್ತದಲ್ಲಿ ವಧು- ವರ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಆದರೆ ಇಲ್ಲೊಬ್ಬ ತಂದೆ ಅಂತ್ಯಕ್ರಿಯೆ ನಡೆಯುತ್ತಿರುವಾಗಲೇ ಮದುವೆ ಆಗಿದ್ದಾನೆ.

ಹೌದು, ಚೆನ್ನೈನ ಕಲ್ಲಕುರಿಚಿಯಲ್ಲಿ ಈ ವಿಚಿತ್ರ ಘಟನೆ ಸೋಮವಾರ ಮಧ್ಯಾಹ್ನ ನಡೆದಿದ್ದು, ವ್ಯಕ್ತಿಯೊಬ್ಬ ತನ್ನ ತಂದೆಯ  ಕೊನೆಯ ಆಸೆಯಂತೆ ಅವರ ಮೃತದೇಹದ ಎದುರೇ ವಿವಾಹವಾಗಿದ್ದಾನೆ.

ಇದನ್ನೂ ಓದಿ: ಕಳ್ಳರ ಪತ್ತೆಗೆ ಕಾಲೇಜು ಶೌಚಾಲಯದಲ್ಲಿ ಸಿಸಿಟಿವಿ! – ಬೆಚ್ಚಿ ಬಿದ್ದ ಸ್ಟೂಡೆಂಟ್ಸ್

ಸಾಮಾಜಿಕ ಕಾರ್ಯಕರ್ತ ಹಾಗೂ ಡಿಎಂಕೆಯ ಸಕ್ರಿಯ ಸದಸ್ಯ ವಿ ರಾಜೇಂದ್ರನ್ ಅವರು ಕಳೆದ ಎರಡು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಕೆಲ ತಿಂಗಳ ಹಿಂದೆ ರಾಜೇಂದ್ರನ್ ಬಾತ್ ರೂಮ್ ನಲ್ಲಿ ಕಾಲು ಜಾರಿ ಬಿದ್ದಿದ್ದಾರೆ. ಇದರಿಂದಾಗಿ ಅವರ ಆರೋಗ್ಯ ಸ್ಥಿತಿ ಇನ್ನಷ್ಟು ಹದಗೆಟ್ಟಿತ್ತು. ಹೀಗಾಗಿ ತಾನು ಸಾಯುವ ಮೊದಲು ಮಗನ ಮದುವೆ ನೋಡಬೇಕೆಂದು ಆಸೆಪಟ್ಟಿದ್ದಾರೆ. ಅದರಂತೆ ಅವರ ಮಗ ಆರ್.ಪ್ರವೀಣ್ ಹಾಗೂ ಆತನ ಸಹೋದ್ಯೋಗಿ ಎಸ್ ಸೌರ್ನಮಾಲಿಯಾ ಜೊತೆ ಮಾರ್ಚ್ 27 ರಂದು ಮದುವೆ ನಿಶ್ಚಯವಾಗಿತ್ತು. ದುರಾದೃಷ್ಟವಶಾತ್ ರಾಜೇಂದ್ರನ್‌ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟು,  ಭಾನುವಾರ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅಂದೇ ರಾತ್ರಿ ನಿಧನರಾಗಿದ್ದಾರೆ.

ಪ್ರವೀಣ್ ತನ್ನ ತಂದೆಯ ಕೊನೆಯ ಆಸೆಯನ್ನು ಪೂರೈಸಬೇಕೆಂದು ನಿರ್ಧರಿಸಿದ್ದಾರೆ. ತಂದೆ ಅಂತಿಮ ವಿಧಿವಿಧಾನ ನೆರವೇರಿಸುವ ಮೊದಲು ತಾನು ಮದುವೆಯಾಗಬೇಕೆಂದು ನಿರ್ಧರಿಸಿದ್ದಾರೆ. ಬಳಿಕ ವಧು ಹಾಗೂ ಆಕೆಯ ಮನೆಯವರೊಂದಿಗೆ ತನ್ನ ನಿರ್ಧಾರವನ್ನು ತಿಳಿಸಿದ್ದಾರೆ. ಪ್ರವೀಣ್ ನಿರ್ಧಾರಕ್ಕೆ ವಧುವಿನ ಕುಟುಂಬಸ್ಥರು ಒಪ್ಪಿಗೆ ಸೂಚಿಸಿದ್ದು, ತಂದೆ ಮೃತದೇಹದ ಮುಂದೆಯೇ ಪ್ರವೀಣ್ ಮದುವೆಯಾಗಿದ್ದಾರೆ.

ಮದುವೆಯಲ್ಲಿ ರಾಜೇಂದ್ರನ್ ಅವರ ಆಶಯದಂತೆ ಬೌದ್ಧ ವಿಧಾನದ ಆಚರಣೆಗಳನ್ನು ಅನುಸರಿಸಲಾಗಿದೆ. ನಂತರ ರಾಜೇಂದ್ರನ್ ಅವರ ಪಾರ್ಥಿವ ಶರೀರವನ್ನು ಸ್ಮಶಾನಕ್ಕೆ ಕೊಂಡೊಯ್ದು ಅಂತಿಮ ಮೆರವಣಿಗೆ ನಡೆಸಲಾಗಿದೆ ಎಂದು  ರಾಜೇಂದ್ರನ್ ಸಂಬಂಧಿಕರು ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಪ್ರವೀಣ್, ‘ಗ್ರಾಮಸ್ಥರು ಮತ್ತು ಸಂಬಂಧಿಕರ ಮಾತಿಗೆ  ನಾನು ಹೆದರುವುದಿಲ್ಲ. ಮಗನಾಗಿ ನಾನು ನನ್ನ ಕರ್ತವ್ಯ ಮಾಡಿದ್ದೇನೆ’ ಎಂದು ಹೇಳಿದ್ದಾರೆ.

suddiyaana