ಬೆದರಿಕೆ ಕರೆ ಬಗ್ಗೆ ಸೂಕ್ತ ತನಿಖೆ ನಡೆಸುತ್ತೇವೆ – ಸಿಎಂ ಬಸವರಾಜ ಬೊಮ್ಮಾಯಿ
ಕೇಂದ್ರಸಾರಿಗೆ ಸಚಿವ ನಿತಿನ್ ಗಡ್ಕರಿಗೆ ಜೀವ ಬೆದರಿಕೆ ಕರೆ ಬಂದಿದ್ದು ಜೈಲಿಂದ..!

ಬೆದರಿಕೆ ಕರೆ ಬಗ್ಗೆ ಸೂಕ್ತ ತನಿಖೆ ನಡೆಸುತ್ತೇವೆ – ಸಿಎಂ ಬಸವರಾಜ ಬೊಮ್ಮಾಯಿಕೇಂದ್ರಸಾರಿಗೆ ಸಚಿವ ನಿತಿನ್ ಗಡ್ಕರಿಗೆ ಜೀವ ಬೆದರಿಕೆ ಕರೆ ಬಂದಿದ್ದು ಜೈಲಿಂದ..!

ಹುಬ್ಬಳ್ಳಿ: ಬೆಳಗಾವಿ ಹಿಂಡಲಗಾ ಜೈಲಿನಲ್ಲಿದ್ದ ಕೈದಿಯಿಂದ ಕೇಂದ್ರಸಾರಿಗೆ ಸಚಿವ ನಿತಿನ್ ಗಡ್ಕರಿಗೆ ಜೀವಬೆದರಿಕೆ ಕರೆ ಬಂದಿರುವ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹಿಂಡಲಗಾ ಜೈಲಿನಿಂದ ಕರೆ ಮಾಡಿರುವುದರಿಂದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಖಂಡಿತವಾಗಿಯೂ ಅವರು ಸಿಗುತ್ತಾರೆ. ಅವರಿಗೆ ಯಾರು ಮಾರ್ಗದರ್ಶನ ನೀಡಿದ್ದಾರೆ. ಯಾಕಾಗಿ ಮಾಡಿದ್ದಾರೆ ಅವರ ಹಿನ್ನೆಲೆ ಏನು? ಎಲ್ಲವನ್ನೂ ಸಂಪೂರ್ಣವಾಗಿ ತನಿಖೆ ನಡೆಸಲಾಗುತ್ತಿದೆ ಎಂದರು.

ಇದನ್ನೂ ಓದಿ: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಜೀವ ಬೆದರಿಕೆ ಕರೆ – ಪೊಲೀಸರಿಂದ ತನಿಖೆ

ಜನವರಿ 14ರಂದು ಬೆಳಗ್ಗೆ 11.29ಕ್ಕೆ ನಿತಿನ್‌ ಗಡ್ಕರಿ ಅವರ ನಾಗ್ಪುರದ ಕಚೇರಿಯ ದೂರವಾಣಿ ಸಂಖ್ಯೆಗೆ ಫೋನ್‌ ಮಾಡಿದ ವ್ಯಕ್ತಿಯೊಬ್ಬ, ನಾನು ದಾವೂದ್‌ ಗ್ಯಾಂಗ್‌ನಿಂದ ಮಾತಾಡುತ್ತಿದ್ದೇನೆ. ಗಡ್ಕರಿಗೆ ಹೇಳಿ 100 ಕೋಟಿ ರೂಪಾಯಿ ನಗದು ಹಣವನ್ನು ಕಳಿಸಿಕೊಡಿ. ಇಲ್ಲವಾದರೆ ಗಡ್ಕರಿ ಎಲ್ಲಿ ಸಿಗುತ್ತಾರೋ ಅಲ್ಲಿ ಬಾಂಬ್‌ ಸ್ಫೋಟಿಸಿ ಕೊಲ್ಲುತ್ತೇನೆ. ನನಗೆ ಗಡ್ಕರಿ ಕಚೇರಿ ಗೊತ್ತಿದೆ ಎಂದು ಹಿಂದಿ ಭಾಷೆಯಲ್ಲಿ ಮಾತನಾಡಿ ಪ್ರಾಣ ಬೆದರಿಕೆ ಒಡ್ಡಿದ್ದ. ಕರೆ ಸ್ವೀಕರಿಸಿದ್ದ ಗಡ್ಕರಿ ಅವರ ಕಚೇರಿ ಸಿಬ್ಬಂದಿ ಜಿತೇಂದ್ರ ಶರ್ಮಾ ಅವರು ಹಣವನ್ನು ಎಲ್ಲಿ ಕಳಿಸಬೇಕು ಎಂದು ಕೇಳಿದಾಗ ಬೆಂಗಳೂರಿಗೆ ಎಂದು ಫೋನ್‌ ಮಾಡಿದ್ದ ವ್ಯಕ್ತಿ ತಿಳಿಸಿ ಕರೆ ಕಟ್‌ ಮಾಡಿದ್ದ. ಕೂಡಲೇ ಈ ವಿಷಯವನ್ನು ಗಡ್ಕರಿ ಅವರ ಅಂಗರಕ್ಷಕ ದೀಪಕ್‌ಗೆ ಜಿತೇಂದ್ರ ಶರ್ಮಾ ತಿಳಿಸಿದ್ದರು.
ಬಳಿಕ 11.37ಕ್ಕೆ ಮತ್ತೊಮ್ಮೆ ಕರೆ ಮಾಡಿದ ವ್ಯಕ್ತಿ, ನಾನು ನನ್ನ ಮೊಬೈಲ್‌ ನಂಬರ್‌ ಕೊಡುತ್ತೇನೆ. ಗಡ್ಕರಿಗೆ ನನ್ನನ್ನು ಸಂಪರ್ಕಿಸಲು ಹೇಳಿ ಎಂದು ಮೊಬೈಲ್‌ ನಂಬರ್‌ ಕೊಟ್ಟಿದ್ದಲ್ಲದೆ, ಈ ವಿಚಾರ ಪೊಲೀಸರಿಗೆ ತಿಳಿಸಿದರೆ ನಿಮ್ಮ ಕಚೇರಿಯನ್ನು ಸ್ಫೋಟಿಸುತ್ತೇವೆ, ಎಂದು ಬೆದರಿಕೆ ಹಾಕಿದ್ದ. 12.29ಕ್ಕೆ ಮತ್ತೊಮ್ಮೆ ಕರೆ ಮಾಡಿದ ವ್ಯಕ್ತಿ, ನನ್ನ ಮೆಸೇಜನ್ನು ಗಡ್ಕರಿಗೆ ತಿಳಿಸಿದ್ದೀರಾ, ಎಂದು ಕೇಳಿದ್ದಾನೆ. ಈ ವೇಳೆ ಗಡ್ಕರಿ ಕಚೇರಿಯ ಸಿಬ್ಬಂದಿ, ಸಾಹೇಬರು ಬ್ಯುಸಿ ಇದ್ದಾರೆ. ನಿನ್ನ ಹೆಸರು ವಿಳಾಸ ತಿಳಿಸು, ಎಂದು ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ವ್ಯಕ್ತಿ, ಮೊದಲು ನೀವು ಹಣವನ್ನು ಕರ್ನಾಟಕಕ್ಕೆ ಕಳಿಸಿ ಆಮೇಲೆ ಉಳಿದ ಮಾಹಿತಿ ಹೇಳುತ್ತೇನೆ, ಎಂದಿದ್ದಾನೆ. ಬಳಿಕ ಗಡ್ಕರಿ ಅವರ ಕಚೇರಿಯ ಸಿಬ್ಬಂದಿ ನಾಗ್ಪುರದ ಧನತೋಲಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಧನತೋಲಿ ಠಾಣೆ ಪೊಲೀಸರು ಐಪಿಸಿ ಕಲಂ 1860, 385, 387, 506/2 ಮತ್ತು 507ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

suddiyaana