ಬಿಪರ್‌ಜಾಯ್‌ ಚಂಡಮಾರುತದಿಂದ ಬೀಸುತ್ತಿದೆ ಬಿರುಗಾಳಿ – 5 ದಿನ ಸಮುದ್ರಕ್ಕೆ ಇಳಿಯದಂತೆ ಕರಾವಳಿಯಲ್ಲಿ ಎಚ್ಚರಿಕೆ

ಬಿಪರ್‌ಜಾಯ್‌ ಚಂಡಮಾರುತದಿಂದ ಬೀಸುತ್ತಿದೆ ಬಿರುಗಾಳಿ – 5 ದಿನ ಸಮುದ್ರಕ್ಕೆ ಇಳಿಯದಂತೆ ಕರಾವಳಿಯಲ್ಲಿ ಎಚ್ಚರಿಕೆ

ಬಿಪರ್‌ಜಾಯ್ ಚಂಡಮಾರುತ ತೀವ್ರಸ್ವರೂಪ ಪಡೆದಿದೆ. ಕರ್ನಾಟಕದ ಕರಾವಳಿ ತೀರಗಳಲ್ಲೂ ಬಿಪರ್‌ಜಾಯ್ ಎಫೆಕ್ಟ್ ಜೋರಾಗಿದ್ದು, ಹೈ ಅಲರ್ಟ್ ಘೋಷಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ಸಮುದ್ರ ತೀರದಲ್ಲಿ ಮುಂದಿನ ಐದು ದಿನಗಳ ಕಾಲ ಬಿರುಗಾಳಿ ಬೀಸುವ ಸಾಧ್ಯತೆಯಿದೆ ಎಂದು ಜಿಲ್ಲಾಡಳಿತ ಎಚ್ಚರಿಸಿದೆ. ಸಮುದ್ರದಲ್ಲಿ 3 ರಿಂದ 4 ಮೀಟರ್‌ನಷ್ಟು ಎತ್ತರದ ಅಲೆಗಳು ಏಳಲಿವೆ. ಇದರಿಂದ ಪ್ರವಾಸಿಗರು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.

ಇದನ್ನೂ ಓದಿ: ತೀವ್ರಸ್ವರೂಪ ಪಡೆದ ಬಿಪರ್‌ಜಾಯ್‌ ಚಂಡಮಾರುತ – ಕರ್ನಾಟಕದ ಕರಾವಳಿ ಭಾಗಗಳಲ್ಲಿ ಹೈ ವೇವ್ ಅಲರ್ಟ್ ಘೋಷಣೆ

ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಮುಂದಿನ ಐದು ದಿನಗಳು ಬಿರುಗಾಳಿ ಬೀಸುವ ಸಾಧ್ಯತೆ ಇದೆ ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಬಿಪರ್ ಜಾಯ್ ಚಂಡಮಾರುತದ ಪ್ರಭಾವದಿಂದ ಜಿಲ್ಲೆಯ ಕರಾವಳಿ ತೀರದಲ್ಲಿ ಬಿರುಗಾಳಿ ಬೀಸಲಿದೆ. 3-4 ಮೀಟರ್‌ನಷ್ಟು ಎತ್ತರದ ಅಲೆಗಳು ಏಳಲಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕರಾವಳಿ ತೀರದ ಜನರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದೆ. ಕಡಲ ತೀರದಲ್ಲಿ ಓಡಾಡುವುದು ಕೂಡಾ ಅಪಾಯ ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಅಲ್ಲದೆ, ಅಪಾಯ ನಿಯಂತ್ರಿಸಲು ತುರ್ತು ನಿರ್ವಹಣಾ ಕೇಂದ್ರ ಕೂಡ ತೆರೆಯಲಾಗಿದೆ. ಸಮುದ್ರದಲ್ಲಿ ಪ್ರಕ್ಷುಬ್ಧ ವಾತಾವರಣದಿಂದಾಗಿ ಮುಂದಿನ ಐದು ದಿನಗಳವರೆಗೆ ಅಂದರೆ ಜೂನ್ 19 ರವರೆಗೆ ಕರಾವಳಿ ತೀರದಲ್ಲಿ ಅಪಾಯಕಾರಿ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಜಿಲ್ಲೆಯ 12 ತಾಲೂಕಿನಲ್ಲಿಯೂ ಸಹಾಯವಾಣಿ ಕೇಂದ್ರ ತೆಗೆಯಲಾಗಿದೆ. ನೋಡಲ್ ಅಧಿಕಾರಿಗಳನ್ನೂ ನೇಮಿಸಲಾಗಿದೆ. ಜಿಲ್ಲಾ ಕೇಂದ್ರದಲ್ಲಿಯೂ ಸಹಾಯವಾಣಿ ಕೆಲಸ ಮಾಡಲಿದೆ. ತುರ್ತು ಸಂದರ್ಭದಲ್ಲಿ ಜನರು ಉತ್ತರ ಕನ್ನಡ ಜಿಲ್ಲಾ ಕಂಟ್ರೋಲ್ ರೂಮ್ 08382-229857/ 1077 ವಾಟ್ಸ್ಆ್ಯಪ್- 9483511015 ಸಂಖ್ಯೆಗೆ ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

suddiyaana