ಕೊಹ್ಲಿಯನ್ನೂ ಕಾಡಿತ್ತು Imposter Syndrome – 9 ವರ್ಷ ವಿರಾಟ್ ನರಕಯಾತನೆ
KING ಕಾಪಾಡಿದ್ದೇ ದ್ರಾವಿಡ್

ವಿರಾಟ್ ಕೊಹ್ಲಿ. ಕ್ರಿಕೆಟ್ ಲೋಕದ ಸೆನ್ಸೇಷನಲ್ ಸ್ಟಾರ್.. ಅಸಾಧ್ಯ ಅನ್ನೋದನ್ನೂ ಸಾಧಿಸಿ ತೋರಿಸಿದ ಅಸಮಾನ್ಯ ಆಟಗಾರ. ಕಿಂಗ್, ರನ್ ಮಷಿನ್, ಚೇಸ್ ಮಾಸ್ಟರ್, ಫಿಟ್ನೆಸ್ ಫ್ರೀಕ್ ಹೀಗೆ ಹೆಜ್ಜೆಗೊಂದು ಬಿರುದು ಹೊತ್ತು ಕೊಹ್ಲಿ ನಡೆದಿದ್ದೆಲ್ಲಾ ದಾಖಲೆಗಳ ದಾರಿಯಲ್ಲೇ. ಬೆಳೆದ್ರೆ ವಿರಾಟ್ ಕೊಹ್ಲಿ ಥರ ಬೆಳೀಬೇಕು ಅನ್ನೋ ಮಟ್ಟಿಗೆ ಬೆಳೆದ ಕೊಹ್ಲಿ ಜಗತ್ತಿಗೇ ಮಾದರಿ. ಆದ್ರೆ ಕೊಹ್ಲಿಯ ಹಾದಿ ಅಷ್ಟು ಸುಲಭ ಇರಲಿಲ್ಲ. ಯಾಕಂದ್ರೆ ವರ್ಷಗಟ್ಟಲೆ ಇಂಪೋಸ್ಟರ್ ಸಿಂಡ್ರೋಮ್ ಅನ್ನೋ ಮಾನಸಿಕ ಸಮಸ್ಯೆಯಿಂದ ಬಳಲಿದ್ದಾರೆ. ಇಂಥಾ ಟೈಮಲ್ಲಿ ವಿರಾಟ್ ಪಾಲಿಗೆ ಬೆಳಗಾಗಿ ಬಂದದ್ದು ಕನ್ನಡಿಗ. ಸ್ವತಃ ಕೊಹ್ಲಿಯವ್ರೇ ಇದನ್ನ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ : RCB ಓಪನರ್ಸ್ ಕೊಹ್ಲಿ ಮತ್ತು ವೆಂಕಟೇಶ್ ಅಯ್ಯರ್? – ಲಕ್ನೋ ನಾಯಕ ರಿಷಭ್ ಪಂತ್ ಮಾತಿಗೆ ಆಕ್ರೋಶ
ಬ್ಯಾಟಿಂಗ್ನಲ್ಲಿ ಬೆಂಕಿಯುಂಡೆಯಂತೆ ಸಿಡಿಯುತ್ತಾ ಎದುರಾಳಿಗಳ ಎದೆ ನಡುಗಿಸುವಂತೆ ಘೀಳಿಡುತ್ತಾ ಮೈದಾನದಲ್ಲಿ ಸದಾ ಅಗ್ರೆಸ್ಸಿವ್ ಆಗಿ ಕಾಣೋ ಕೊಹ್ಲಿ ಆಟ ಮುಗಿದ್ಮೇಲೆ ಶಾಂತಚಿತ್ತದ ಹಸನ್ಮುಕಿ. ಎಲ್ಲರೊಂದಿಗೂ ಬೆರೆಯುತ್ತಾ ಡೌನ್ ಟು ಅರ್ತ್ ಅಂತಾರಲ್ಲ ಅಂತಾ ಕ್ಯಾರೆಕ್ಟರ್. ಕಾನ್ಫಿಡೆನ್ಸ್ಗೆ ಮತ್ತೊಂದು ಹೆಸರೇ ವಿರಾಟ್ ಕೊಹ್ಲಿ. ಆದ್ರೆ ಇಂಥಾ ವಿರಾಟ್ ಹಿಂದೊಮ್ಮೆ ತೀವ್ರವಾದ ಮಾನಸಿಕ ಆತಂಕಕ್ಕೆ ಒಳಗಾಗಿದ್ರು. ಇದನ್ನ ಸ್ವತಃ ಕೊಹ್ಲಿಯವ್ರೇ ಬೆಂಗಳೂರಿನಲ್ಲಿ ನಡೆದ ಆರ್ಸಿಬಿ ಸ್ಪೋರ್ಟ್ಸ್ ಸಮ್ಮಿಟ್ನಲ್ಲಿ ಬಿಚ್ಚಿಟ್ಟಿದ್ದಾರೆ. ಇಂಪೋಸ್ಟರ್ ಸಿಂಡ್ರೋಮ್ ಎಂಬ ಮಾನಸಿಕ ಸಮಸ್ಯೆಯಿಂದ ಬಳಲ್ತಿದ್ದೆ ಅನ್ನೋದನ್ನ ಒಪ್ಪಿಕೊಂಡಿದ್ದಾರೆ. ಹಾಗೇ ಇಂಥಾ ಟೈಮಲ್ಲಿ ಕೊಹ್ಲಿಗೆ ಜೊತೆಯಾಗಿ ನಿಂತದ್ದು ಕನ್ನಡಿಗ ರಾಹುಲ್ ದ್ರಾವಿಡ್.
ಜಗತ್ತನ್ನೇ ಗೆದ್ದ ಕಿಂಗ್ ಕೊಹ್ಲಿಗೆ ಕ್ಯಾಪ್ಟನ್ಸಿಯೇ ಹೊರೆಯಾಗಿತ್ತಾ?
ಆರ್ಸಿಬಿ ಇನೋವೇಶನ್ ಲ್ಯಾಬ್ನ ಭಾರತೀಯ ಕ್ರೀಡಾ ಶೃಂಗಸಭೆಯ ಮೂರನೇ ಆವೃತ್ತಿಯಲ್ಲಿ ಮಾತನಾಡಿದ ಕೊಹ್ಲಿ ಹಲವು ವಿಚಾರಗಳನ್ನ ಹಂಚಿಕೊಂಡಿದ್ದಾರೆ. ಹಾಗೇ ನಾಯಕತ್ವವು ತನಗೆ ಅರಿವಿಲ್ಲದೆಯೇ ತನ್ನ ಅಂತರಂಗವನ್ನು ನುಂಗಿತ್ತು ಎಂದಿದ್ದಾರೆ. ವಿಶ್ವ ಕ್ರಿಕೆಟ್ನಲ್ಲಿ ಭಾರತ ಬಾಸ್ ಆಗುವಲ್ಲಿ ಕಿಂಗ್ ವಿರಾಟ್ ಕೊಹ್ಲಿಯವ್ರ ಪಾತ್ರವೂ ದೊಡ್ಡದಿದೆ. ಅದ್ರಲ್ಲೂ ಟೆಸ್ಟ್ ಕ್ರಿಕೆಟ್ನಲ್ಲಿ ಭಾರತ ನಂಬರ್ 1 ಆಗಿದ್ದೂ ಕೊಹ್ಲಿಯವ್ರ ನಾಯಕತ್ವದಲ್ಲೇ. 7 ವರ್ಷಗಳ ಕಾಲ ಭಾರತೀಯ ಟೆಸ್ಟ್ ತಂಡ ಲೀಡ್ ಮಾಡಿದ ವಿರಾಟ್ 2022ರ ಜನವರಿಯಲ್ಲಿ ಟೆಸ್ಟ್ ನಾಯಕತ್ವದಿಂದ ಕೆಳಗಿಳಿದಿದ್ರು. 68 ಪಂದ್ಯಗಳಲ್ಲಿ 40 ಪಂದ್ಯಗಳನ್ನು ಗೆಲ್ಲುವ ಮೂಲಕ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾದರು. ಆದ್ರೆ ಕ್ಯಾಪ್ಟನ್ಸಿ ಬಿಡೋ ಹೊತ್ತಿಗೆ ವಿರಾಟ್ ಬಳಲಿ ಬೆಂಡಾಗಿದ್ದರು. ಯಾಕಂದ್ರೆ ಬ್ಯಾಟಿಂಗ್ ಲೈನಪ್ ಹಾಗೇ ಕ್ಯಾಪ್ಟನ್ಸಿಯ ಸೆಂಟ್ರ್ ಆಫ್ ಅಟ್ರ್ಯಾಕ್ಷನ್ ಅವ್ರೇ ಆಗಿದ್ರಿಂದ ಮೈದಾನದ ಹೊರೆಗೆ ಅವ್ರ ಮೇಲೆ ತುಂಬಾನೇ ಎಕ್ಸ್ಪೆಕ್ಟೇಷನ್ಸ್ ಇತ್ತು. ನಾನು ರನ್ ಗಳಿಸಲೇಬೇಕು. ಶತಾಯ ಗತಾಯ ಪಂದ್ಯಗಳನ್ನ ಗೆಲ್ಲಲೇಬೇಕೆಂಬ ಹಠಕ್ಕೆ ಬಿದ್ದಿದ್ರು. ಇದಕ್ಕಾಗಿ ನನಗೊಂದು ಪರ್ನಸಲ್ ಲೈಫ್ ಇದೆ ಅನ್ನೋದನ್ನೂ ಮರೆತಿದ್ರಂತೆ. ಜವಾಬ್ದಾರಿಗಳು ನನ್ನನ್ನು ಬಹಳಷ್ಟು ಒತ್ತಡಕ್ಕೆ ಒಳಪಡಿಸಿದವು. ನಾನು ಆಡಿದ ಪ್ರತಿಯೊಂದು ಪಂದ್ಯದಲ್ಲೂ ನನ್ನ ಬ್ಯಾಟಿಂಗ್ ಮೇಲೆ ಹೆಚ್ಚಿನ ನಿರೀಕ್ಷೆಗಳಿದ್ದವು. ಇದು ನನ್ನ ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡಿತು. ನಾನು ನನ್ನ ಸ್ವಂತ ಭಾವನೆಗಳ ಕಡೆಗೆ ಗಮನ ಕೊಡೋದನ್ನೇ ಬಿಟ್ಟಿದ್ದೆ. ಎಲ್ಲವನ್ನೂ ನಿಭಾಯಿಸ್ತಾ ಇದ್ದೇನೆ ಅನ್ಕೊಂಡಿದ್ದೆ. ಆದ್ರೆ ನಾಯಕತ್ವದ ಆ 9 ವರ್ಷಗಳಲ್ಲಿ ಯಾರೊಬ್ಬರೂ ನನ್ನ ಬಳಿ ಬಂದು ‘ನೀನು ಹೇಗಿದ್ದೀಯಾ?’ ಎಂಬ ಕನಿಷ್ಠ ಪ್ರಶ್ನೆಯನ್ನೂ ಕೇಳಲಿಲ್ಲ ಅನ್ನೋದು ಆಮೇಲೆ ಗೊತ್ತಾಯ್ತು ಎಂದಿದ್ದಾರೆ. ಅದಕ್ಕಾಗಿಯೇ ನಾನು ನಿಧಾನವಾಗಿ ನಾಯಕತ್ವದ ಜವಾಬ್ದಾರಿಗಳಿಂದ ಕೆಳಗಿಳಿದೆ ಎಂದಿದ್ದಾರೆ. ಹಾಗೇ ಇಂಥಾ ಟೈಮಲ್ಲಿ ನನಗೆ ಬೆನ್ನೆಲುಬಾಗಿ ನಿಂತದ್ದು ರಾಹುಲ್ ದ್ರಾವಿಡ್ ಮತ್ತು ವಿಕ್ರಮ್ ರಾಥೋಡ್ ಎಂದಿದ್ದಾರೆ. ಅವ್ರಿಬ್ಬರ ಜೊತೆ ಸಾಕಷ್ಟು ಮಾತಾಡಲು ಶುರು ಮಾಡಿದ್ದೆ. ನನ್ನ ಬಗ್ಗೆ ತುಂಬಾ ಕಾಳಜಿ ವಹಿಸಿದರು. ಅಲ್ಲಿಯವರೆಗೆ ನಾನು ಸಾಧಿಸಿದ ಸಾಧನೆಗಳು ಮತ್ತು ದಾಖಲೆಗಳನ್ನು ನೆನಪಿಸಿದರು ಎಂದಿದ್ದಾರೆ. ಅಷ್ಟಕ್ಕೂ ವಿರಾಟ್ರನ್ನ ಕಾಡಿದ ಇಂಪೋಸ್ಟರ್ ಸಿಂಡ್ರೋಮ್ ಅಂದ್ರೆ ಏನು ಅಂತಾ ಕೆಲವರಿಗೆ ಗೊಂದಲ ಇರ್ಬೋದು.
ಏನಿದು ಇಂಪೋಸ್ಟರ್ ಸಿಂಡ್ರೋಮ್?
ತಾನು ಸಾಧಿಸಿದ ಯಶಸ್ಸನ್ನು ನಂಬದೆ ತನ್ನ ಮೇಲೆಯೇ ತನಗೆ ಅಪನಂಬಿಕೆ ಸ್ಥಿತಿ
ನಾನು ಇದಕ್ಕೆ ಅರ್ಹನಲ್ಲ ಎಂದು ಒಳಗೊಳಗೇ ಭಯಪಡುವುದೇ ಈ ಸಿಂಡ್ರೋಮ್
ನೂರಾರು ಯಶಸ್ಸಿನ ನಡುವೆಯೂ ಒಂದು ಸಣ್ಣ ಫೇಲ್ಯೂರ್ ಬಗ್ಗೆ ಕೊರಗುವುದು
ಬೇರೆಯವರು ನನ್ನನ್ನು ಜಡ್ಜ್ ಮಾಡುತ್ತಾರೆ ಎಂದು ಸದಾ ಆತಂಕದಲ್ಲಿ ಇರುವುದು
ಇದನ್ನೆಲ್ಲಾ ಕೇಳಿದಾಗ ಕೆಲವ್ರಿಗೆ ಇದೇನ್ ಮಹಾ ಅನ್ನಿಸ್ಬೋದು. ಆದ್ರೆ ಈ ರೀತಿಯ ಭಾವನೆಗಳು ಬಂದಾಗ ಕೆಲವರು ತಮ್ಮ ಬಗ್ಗೆ ತಾವೇ ಕೀಳರಿಮೆ ಬಂದು ಕಳೆದು ಹೋಗುವ ಸಾಧ್ಯತೆಗಳೂ ಇರುತ್ತೆ. ಹೊರಗೆ ಕಾಣುವ ಸಮಸ್ಯೆಗಳನ್ನ ದಿಟ್ಟವಾಗಿ ಎದುರಿಸಿ ನಿಂತುಬಿಡಬಹುದು. ಆದ್ರೆ ಮನಸ್ಸಿನಲ್ಲಿ ಆಗುವ ಅಲ್ಲೋಲ ಕಲ್ಲೋಲಗಳನ್ನ ಅವ್ರೇ ಎದುರಿಸಿ ನಿಲ್ಲಬೇಕಾಗುತ್ತೆ. ಇದೇ ಸ್ಥಿತಿಯನ್ನ ಕೊಹ್ಲಿ ಎದುರಿಸಿದ್ದಾರೆ. ಌಂಡ್ ಸ್ಟಿಲ್ ಈಗ್ಲೂ ಕೂಡ ಆ ಆತಂಕ ಅವ್ರ ಮನಸ್ಸಿಂದ ಹೋಗಿಲ್ಲ. ಇಷ್ಟೆಲ್ಲಾ ಸಾಧನೆ ಮಾಡಿದ ಮೇಲೂ ನೆಟ್ಸ್ನಲ್ಲಿ ಬ್ಯಾಟಿಂಗ್ ಮಾಡುವಾಗ ಯುವ ಆಟಗಾರರು ತನ್ನನ್ನು ಹೇಗೆ ಅಳೆಯಬಹುದು ಎಂಬ ಆತಂಕ ಇಂದಿಗೂ ಕಾಡುತ್ತದೆ ಅನ್ನೋದನ್ನ ಒಪ್ಪಿಕೊಂಡಿದ್ದಾರೆ. ಹಾಗೇ ಇಂಥಾ ಟೈಮಲ್ಲಿ ಜೊತೆಯಾಗಿ ನಿಂತವರನ್ನೂ ಸ್ಮರಿಸಿದ್ದಾರೆ. ಥ್ಯಾಂಕ್ಯೂ ರಾಹುಲ್ ದ್ರಾವಿಡ್ ಭಾಯ್ ಅನ್ನೋದನ್ನ ಮರೆತಿಲ್ಲ.

ನೋಡಿರಿ

