ನಾನೀಗ ಮಗುವಿನಂತೆ ನಿದ್ರಿಸಬಹುದು! -ಯೌವ್ವನವನ್ನೇ RCBಗಾಗಿ ಕೊಟ್ಟಿದ್ದೇನೆ! -ಕಣ್ಣೀರ ಹಿಂದಿನ ಸತ್ಯ ಬಿಚ್ಚಿಟ್ಟ ಕೊಹ್ಲಿ!

ಕಾಯುವಿಕೆ ಅಂದ್ರೆ ಹೇಗಿರುತ್ತೆ ಎನ್ನುವುದಕ್ಕೆ ಸಾಕ್ಷಿಯಾಗಿತ್ತು ವಿರಾಟ್ ಕೊಹ್ಲಿಯ ಕಣ್ಣೀರು.. ಕಮಿಟ್ಮೆಂಟ್ ಎನ್ನುವುದಕ್ಕೆ ಸಾಕ್ಷಿಯಾಗಿತ್ತು ಕ್ರಿಕೆಟ್ ದಿಗ್ಗಜನ ಕಣ್ಣೀರು.. ಕನಸು ನನಸಾಗುವ ಕ್ಷಣ ಹೇಗಿರುತ್ತೆ ಅನ್ನೋದಕ್ಕೆ ಸಾಕ್ಷಿಯಾಗಿತ್ತು ಕಿಂಗ್ ಕೊಹ್ಲಿಯ ಕಣ್ಣೀರು.. ಇನ್ನೂ ನಾಲ್ಕು ಬಾಲ್ ಬಾಕಿ ಉಳಿದಿತ್ತು.. ಆಗಲೇ ಆರ್ಸಿಬಿ ಗೆಲುವು ಕನ್ಫರ್ಮ್ ಆಗಿತ್ತು.. ಅಷ್ಟಾಗುತ್ತಿದ್ದಂತೆ ಕಣ್ಣೀರ ಧಾರೆಯಲ್ಲಿ ಮಿಂದೆದ್ದಿದ್ದರು ವಿರಾಟ್ ಕೊಹ್ಲಿ.. ಮೈದಾನದಲ್ಲಿ ಎಲ್ಲಾ ಕ್ಯಾಮರಾ ಕಣ್ಣುಗಳು ತನ್ನ ಮೇಲೆಯೇ ಫೋಕಸ್ ಆಗಿರುತ್ತವೆ ಎಂದು ಗೊತ್ತಿದ್ದರೂ ಚಿಕ್ಕ ಮಗುವಿನಂತೆ ಅಳೋದಿಕ್ಕೆ ಶುರು ಮಾಡಿದ್ದರು ಕೊಹ್ಲಿ..
ಇದನ್ನೂ ಓದಿ: ಕಪ್ ಗೆದ್ದು ಕೊಹ್ಲಿ ಕಣ್ಣೀರ ಅಭಿಷೇಕ.. ಸಾಲ್ಟ್ ಕ್ಯಾಚ್.. ಕೃನಾಲ್ ಹೀರೋ -18ರ ನಂಟು.. ಹೇಗಿತ್ತು RCB ಗೇಮ್?
ತಾನು ಕಂಡ ಕನಸು.. ತಾನು ಐಪಿಎಲ್ನಲ್ಲಿ ಕಾಲಿಟ್ಟ ಮೊದಲ ತಂಡ.. ಪ್ರತಿ ಬಾರಿ ಟೂರ್ನಮೆಂಟ್ ಶುರುವಾದಾಗ್ಲೂ ಈ ಸಲ ಕಪ್ ನಮ್ದೇ ಅಂತ ಹೇಳ್ಕೊಂಡು ಚಿನ್ನಸ್ವಾಮಿ ಸ್ಟೇಡಿಯಂಗೆ ಬರುತ್ತಿದ್ದ ಆರ್ಸಿಬಿ ಅಭಿಮಾನಿಗಳು.. ಅದೇ ಅಭಿಮಾನಿಗಳ ಮಾತನ್ನೇ ತಂಡದ ಟ್ಯಾಗ್ಲೈನ್ ರೀತಿಯಲ್ಲಿ ಬಳಸಿಕೊಂಡ ಟೀಂ ಮ್ಯಾನೇಜ್ಮೆಂಟ್.. 18 ವರ್ಷಗಳ ಕಾಯುವಿಕೆ.. ಬಹುಷಃ ವಿರಾಟ್ ಕೊಹ್ಲಿಯ ಜರ್ಸಿ ನಂಬರ್ ಬರಲಿ ಅಂತಲೇ ಐಪಿಎಲ್ ಕಪ್ ಇಷ್ಟರವರೆಗೆ ಮರೀಚಿಕೆ ಆಗಿತ್ತೇನೋ.. ಪ್ರತಿಬಾರಿ ಹತ್ತಿರ ಬಂದಾಗ್ಲೂ ದೂರ ಓಡ್ತಿತ್ತು.. ಮೂರು ಬಾರಿ ಫೈನಲ್ನಲ್ಲಿ ಎಡವಿದ್ದು.. ಅದರ ಜೊತೆಗೆ ಎರಡು ಬಾರಿ ಎಲಿಮಿನೇಟರ್ – ಟೂ ನಲ್ಲಿ ಸೋಲು ಕಂಡಿದ್ದು.. ಹೀಗೆ ಐದು ಬಾರಿ ಕಪ್ನ ಹತ್ತಿರ ಹತ್ತಿರಕ್ಕೆ ಬಂದು ನಿಂತಿದ್ದರೂ ಐಪಿಎಲ್ ಮತ್ತು ಅದೃಷ್ಟದೇವತೆ ಎರಡೂ ಕೊಹ್ಲಿಯ ಜೊತೆ ಜೂಟಾಟ ಆಡಿದಂಗೆ ಇತ್ತು.. ಇಲ್ದೇ ಹೋಗಿದ್ರೆ ಹದಿನೆಂಟು ವರ್ಷ ಕಾಯೋದಿಕ್ಕೆ ಕಾರಣವೇ ಇರಲಿಲ್ಲ.. ಕಡೆಗೂ ಮಹಾಭಾರತದ ಹದಿನೆಂಟು ಪರ್ವಗಳ ರೀತಿಯಲ್ಲೇ ಐಪಿಎಲ್ನ ಹದಿನೆಂಟನೇ ಪರ್ವದಲ್ಲಿ ಆರ್ಸಿಬಿ ಗೆಲುವಿನ ನಗಾರಿ ಬಾರಿಸಿದೆ.. ಇದುವರೆಗೆ ಈ ಸಲ ಕಪ್ ನಮ್ದೇ ಅಂತ ಹೇಳ್ತಿದ್ದ ಫ್ಯಾನ್ಸ್.. ಈಗ ಈ ಸಲ ಕಪ್ ನಮ್ದು ಅಂತ ಹೆಮ್ಮೆಯಿಂದ.. ಅಭಿಮಾನದಿಂದ.. ಅತ್ಯುತ್ಸಾಹದಿಂದ.. ಅಮೋಘ ಹರ್ಷದಿಂದ ಹೇಳಿಕೊಳ್ಳುವಂತಾಗಿದೆ.. ಇದಕ್ಕೆಲ್ಲಾ ಕಾರಣ ಕೊಹ್ಲಿ ಎಂಬ ಅದ್ಭುತ.. ಕೊಹ್ಲಿ ಎಂಬ ಕ್ರಿಕೆಟ್ನ ಕಿಂಗ್.. ಈ ಕ್ರಿಕೆಟ್ ರಾಜನ ಕಿರೀಟದಲ್ಲಿ ಎಲ್ಲಾ ಗರಿಗಳು ಇದ್ದವು.. ಒನ್ಡೇ ವರ್ಲ್ಡ್ ಕಪ್.. ಟಿ20 ವರ್ಲ್ಡ್ ಕಪ್.. ಚಾಂಪಿಯನ್ಸ್ ಟ್ರೋಫಿ.. ಆದ್ರೆ ಇಷ್ಟು ವರ್ಷ.. ಮಿಸ್ಸಾಗಿದ್ದದ್ದು ಐಪಿಎಲ್ ಕಪ್.. ಈಗ ಅದು ಸೇರಿಕೊಳ್ಳೊದ್ರೊಂದಿಗೆ ಕ್ರಿಕೆಟ್ ರಾಜನ ಕಿರೀಟ ಪರಿಪೂರ್ಣಗೊಂಡಿದೆ..
ವಿರಾಟ್ ಕೊಹ್ಲಿ ಪಂದ್ಯದ ನಂತರ ಹೇಳಿದ್ದ ಮಾತುಗಳು ಅವರೆಷ್ಟು ಬೆಂಗಳೂರಿಯನ್ ಆಗಿದ್ದರು ಎನ್ನುವುದಕ್ಕೆ ಸಾಕ್ಷಿಯಾಗಿತ್ತು.. ಸಂಪೂರ್ಣ ಬೆಂಗಳೂರಿನವರೇ ಆಗಿದ್ದರು.. ಬೆಂಗಳೂರಿನ ಹುಡುಗನೇ ಆಗಿಬಿಟ್ಟಿದ್ದರು.. ಬೆಂಗಳೂರನ್ನೇ ತನ್ನ ಮಾತಿನ ಮೂಲಕ ಮಂತ್ರಮುಗ್ದ ಮಾಡಿದ್ರು.. ನನ್ನ ಯೌವ್ವನವನ್ನು.. ನನ್ನ ಪ್ರೈಮ್ ಟೈಮ್ ಅನ್ನು.. ನನ್ನ ಅನುಭವವನ್ನು ನಾನು ಈ ತಂಡಕ್ಕೆ ಕೊಟ್ಟಿದ್ದೇನೆ ಎಂದು ಗೆಲುವಿನ ನಂತರ ಕೊಹ್ಲಿಯ ಫಸ್ಟ್ ರಿಯಾಕ್ಷನ್ ಆಗಿತ್ತು.. ಎಷ್ಟು ತೂಕದ ಮಾತುಗಳಿವು.. ಇನ್ನೂ ಅಂಡರ್ 19 ವರ್ಲ್ಡ್ ಕಪ್ ಮುಗಿಸಿ ಬಂದಿದ್ದ ವಿರಾಟ್ ಕೊಹ್ಲಿಯನ್ನು ಮೊದಲ ಐಪಿಎಲ್ ಸೀಸನ್ನಲ್ಲಿ ಹುಡುಗರನ್ನು ಅನುಭವಕ್ಕಾಗಿ ಒಂದೊಂದು ತಂಡಕ್ಕೆ ಹಂಚಿಕೆ ಮಾಡಿದಾಗ ಬೆಂಗಳೂರು ತಂಡ ಸೇರಿಕೊಂಡವರು ವಿರಾಟ್.. ಆದ್ರೆ ಅಂದು ಆಕಸ್ಮಿಕವಾಗಿ ತಂಡ ಸೇರಿದ್ದ ವಿರಾಟ್ ಕೊಹ್ಲಿ.. ನಂತರ ತಂಡದ ಅವಿಭಾಜ್ಯ ಅಂಗವಾಗಿ ಬೆಳೆದಿದ್ದು ಕ್ರಿಕೆಟ್ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಾಖಲೆ.. ಅದೇ ಕಾರಣಕ್ಕೆ ಕಪ್ ಗೆದ್ದ ನಂತರ ವಿರಾಟ್ ಹೇಳಿದ್ದ ಒಂದೊಂದು ಮಾತು ಕೂಡ ಗಮನಾರ್ಹ.. ಕೊಹ್ಲಿ ಹೇಳಿದ್ದ ಮಾತುಗಳನ್ನೊಮ್ಮೆ ಗಮನಿಸಿ..
(ನಾನು ಬೆಂಗಳೂರಿನ ಪರವಾಗಿ 18 ವರ್ಷದಿಂದ ಆಡಿದ್ದೇನೆ.. 18 ವರ್ಷಗಳಿಂದಲೂ ಕಪ್ ಗೆಲ್ಲಬೇಕು ಎಂದು ಸಂಪೂರ್ಣ ಪರಿಶ್ರಮ ಹಾಕಿದ್ದೇನೆ.. ಗೆದ್ದರೆ ಇದೇ ತಂಡದಲ್ಲಿದ್ದೇ ಗೆಲ್ಲಬೇಕು ಎಂದು ನಿರ್ಧರಿಸಿದ್ದೆ.. ಕೆಲವೊಮ್ಮೆ ಮನಸ್ಸು ಬದಲಾಗುವುದು ಸಹಜ.. ಬೇರೆ ತಂಡಗಳಿಗೆ ಹೋಗುವ ಯೋಚನೆಗಳು ಬರುವುದ ಸಹಜ. ಆದರೆ ಬೆಂಗಳೂರಿನ ಅಭಿಮಾನಿಗಳು ನೀಡಿದ ಅಭಿಮಾನಕ್ಕೆ.. ನಾನು ಕಪ್ ಗೆಲ್ಲುವುದಿದ್ದರೆ ಇದೇ ತಂಡದಲ್ಲಿದ್ದು ಗೆಲ್ಲಬೇಕು ಎಂದು ನಿರ್ಧರಿಸಿದ್ದೆ.. ಇದೇ ತಂಡದ ಮೂಲಕ ಮಾತ್ರ ಐಪಿಎಲ್ ಕಪ್ ಎತ್ತಿ ಹಿಡಿಯಬೇಕು ಎಂದು ನಿರ್ಧರಿಸಿದ್ದೆ.. ಇಂದು ರಾತ್ರಿ ನಾನು ಮಗುವಿನಂತೆ ನಿದ್ರಿಸಬಹುದು..)
- ವಿರಾಟ್ ಕೊಹ್ಲಿ, ಐಪಿಎಲ್ ಆಟಗಾರ
ಇದು ಕೊಹ್ಲಿಯ ಕಮಿಟ್ಮೆಂಟ್.. ಇದು ಬೆಂಗಳೂರಿನ ಬಗ್ಗೆ ಕೊಹ್ಲಿ ಹೊಂದಿದ್ದ ಹೆಮ್ಮೆ.. ಇದು ಕೊಹ್ಲಿ ಎಂಬ ದಿಗ್ಗಜನ ಒಳಗಿದ್ದ ಪುಟ್ಟ ಮಗುವಿನ ಮಾತು.. ನಿಜಕ್ಕೂ ವಿರಾಟ್ ಕೊಹ್ಲಿ ಎಂಬ ವಿರಾಟ್ ರೂಪದ ಕ್ರಿಕೆಟ್ ದಿಗ್ಗಜ ಐಪಿಎಲ್ ಟೂರ್ನಿಯನ್ನು ತನ್ನ ಬದುಕಿನ ಅತಿದೊಡ್ಡ ಪ್ರತಿಷ್ಠೆಯಾಗಿ ಇಟ್ಟುಕೊಂಡಿದ್ದರು.. ಬೆಂಗಳೂರು ತಂಡಕ್ಕೆ ತನ್ನನ್ನು ಸಂಪೂರ್ಣವಾಗಿ ಧಾರೆ ಎರೆದಿದ್ದರು.. ಬೆಂಗಳೂರು ತಂಡದ ಕನಸನ್ನು ತನ್ನ ಕನಸಾಗಿ ಕಂಡಿದ್ದರು.. ಬೆಂಗಳೂರಿನ ಜನರ ಬೆಂಬಲವನ್ನು ತನ್ನ ಮೇಲಿನ ಋಣಭಾರ ಎಂಬಂತೆ ಹೊತ್ತು ಸಾಗಿದ್ದರು.. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆ ಋಣವನ್ನು ಕೊಹ್ಲಿ ತೀರಿಸಿದ್ದಾರೆ.. ತಂಡದ ಪರವಾಗಿ ಅತಿಹೆಚ್ಚು ರನ್ 18ನೇ ಸೀಸನ್ನಲ್ಲೂ ಬಾರಿಸಿದ್ದಾರೆ ಅಂದ್ರೆ ಕೊಹ್ಲಿ ಯಾವ ರೀತಿಯಲ್ಲಿ ತಂಡವನ್ನು ಗೆಲ್ಲಿಸುವ ಭಾರವನ್ನು ತನ್ನ ಹೆಗಲ ಮೇಲೆ ಹೊತ್ತು ಬಂದಿದ್ದರು ಎನ್ನುವುದು ಅರ್ಥವಾಗುತ್ತದೆ.. ಹೇಗೆ 2011ರ ವರ್ಲ್ಡ್ ಕಪ್ ಅನ್ನು ಸಚಿನ್ ತೆಂಡೂಲ್ಕರ್ಗಾಗಿ ಗೆಲ್ಲಬೇಕು ಎಂದು ಇಡೀ ಟೀಂ ಇಂಡಿಯಾ ಬಯಸಿತ್ತೋ.. ಅದೇ ಸ್ವರೂಪದಲ್ಲಿ 18ನೇ ಸೀಸನ್ನ ಐಪಿಎಲ್ಅನ್ನು ವಿರಾಟ್ ಕೊಹ್ಲಿಗಾಗಿ ಗೆಲ್ಲಬೇಕು ಎಂದು ಆರ್ಸಿಬಿ ತಂಡದ ಆಟಗಾರರು ಬಯಸಿದ್ದರು.. ಕಡೆಗೂ ಆರು ರನ್ಗಳ ಅಂತರದಿಂದ ಪಿಬಿಕೆಎಸ್ ಅನ್ನು ಸೋಲಿಸಿ, ಐಪಿಎಲ್ನ ಚಾಂಪಿಯನ್ ಆಗಿ ಆರ್ಸಿಬಿ ಮೆರೆದಿದೆ.. ಕಿಂಗ್ ಕೊಹ್ಲಿ ತನ್ನ ಕುಚಿಕು ಗೆಳೆಯರಾದ ಎಬಿ ಡಿವಿಲಿಯರ್ಸ್ ಮತ್ತು ಕ್ರಿಸ್ ಗೇಲ್ ಜೊತೆ ಪುಟ್ಟ ಮಗುವಿನಂತೆ ಕಪ್ ಗೆದ್ದಿದ್ದನ್ನು ಸಂಭ್ರಮಿಸಿದ್ದಾರೆ. ತಾವು ಮೂವರು ಕೂಡ ಐಪಿಎಲ್ ಚಾಂಪಿಯನ್ ಆಗೋದಿಕ್ಕೆ ಎಲ್ಲಾ ಸ್ವರೂಪದಲ್ಲೂ ಆಡಿದ್ದೆವು.. ನಮ್ಮ ತಂಡದಲ್ಲಿ ಯಾವುದೇ ಕೊರತೆ ಇರಲಿಲ್ಲ.. ಆದ್ರೂ ಕಪ್ ಗೆಲ್ಲೋದಿಕ್ಕೆ ಸಾಧ್ಯವಾಗಿರಲಿಲ್ಲ.. ನಾವು ಮೂವರೂ ನಮ್ಮ ಪ್ರೈಂ ಟೈಮನ್ನು ಆರ್ಸಿಬಿಗಾಗಿ ಕೊಟ್ಟಿದ್ದೆವು ಎಂದು ಕೊಹ್ಲಿ ತನ್ನಿಬ್ಬರು ಗೆಳೆಯರ ಜೊತೆ ಸೇರಿ ಹೇಳಿದ್ದರು.. ದಿಗ್ಗಜ ಆಟಗಾರ ವಿರಾಟ್ ಕೊಹ್ಲಿ ಕಡೆಗೂ ಐಪಿಎಲ್ ಬರ ನೀಗಿಸಿಕೊಂಡಿದ್ದಾರೆ.. ಇಷ್ಟು ದಿನ ಈ ಸಲ ಕಪ್ ನಮ್ದೇ ಅಂತ ಆರ್ಸಿಬಿ ಹೇಳ್ತಿದ್ದಾಗ, ತಮಾಷೆ ಮಾಡ್ತಿದ್ದವರ ಎದುರು, ಈ ಸಲ ಕಪ್ ನಮ್ದು ಅಂತ ವಿರಾಟ್ ಕೊಹ್ಲಿ ಎಬಿಡಿ ಮತ್ತು ಗೇಲ್ ಹೇಳಿದ್ದು ನಿಜಕ್ಕೂ ಆರ್ಸಿಬಿ ಅಭಿಮಾನಿಗಳಿಗೆ ಸಂತಸದ ಕಣ್ಣೀರು ತರಿಸಿತ್ತು.. ಅಂತೂ ಕೊಹ್ಲಿ ಕಪ್ ಎತ್ತಿ ಹಿಡಿದಿದ್ದಾರೆ.. ಆರ್ಸಿಬಿ ಅಭಿಮಾನಿಗಳು ಕಂಡ ಸುದೀರ್ಘ ಕನಸು ನನಸಾಗಿದೆ.. ಅದನ್ನು ಕೊಹ್ಲಿಯ ಜರ್ಸಿ ನಂಬರ್ 18ರ ಜೊತೆಗೇ ಆಚರಿಸಿಕೊಂಡಿದ್ದು ಮಾತ್ರ ರಿಯಲ್ಲೀ ವೆರಿ ವೆರಿ ಸ್ಪೆಷಲ್..