ಬಸ್ಸಿನಲ್ಲಿ ನಿತ್ಯ ಕಾಲೇಜಿಗೆ 50 ಕಿ.ಮೀ ಪ್ರಯಾಣ – ರಾಜ್ಯಕ್ಕೇ 2ನೇ ರ್ಯಾಂಕ್ ಪಡೆದ ಕೂಲಿ ಕಾರ್ಮಿಕನ ಪುತ್ರಿ!

ಬಸ್ಸಿನಲ್ಲಿ ನಿತ್ಯ ಕಾಲೇಜಿಗೆ 50 ಕಿ.ಮೀ ಪ್ರಯಾಣ – ರಾಜ್ಯಕ್ಕೇ 2ನೇ ರ್ಯಾಂಕ್ ಪಡೆದ ಕೂಲಿ ಕಾರ್ಮಿಕನ ಪುತ್ರಿ!

ಪ್ರತಿಭೆಗೆ ಬಡತನ ಅಡ್ಡಿಯಾಗಲ್ಲ. ಸಾಧಿಸಬೇಕು ಅನ್ನೋ ಛಲ ಇದ್ರೆ ತಡೆಯೋಕೆ ಯಾರಿಂದಲೂ ಸಾಧ್ಯವಿಲ್ಲ. ಇದಕ್ಕೆ ತಾಜಾ ಉದಾಹರಣೆ ಅಂದರೆ ಈ ವಿದ್ಯಾರ್ಥಿನಿ. ತಂದೆ- ತಾಯಿ ಕೂಲಿ ಮಾಡುತ್ತಿದ್ದರೂ ಪುತ್ರಿ ದ್ವಿತೀಯ ಪಿಯುಸಿಯಲ್ಲಿ ಇಡೀ ರಾಜ್ಯವೇ ಹೆಮ್ಮೆ ಪಡುವಂಥ ಸಾಧನೆ ಮಾಡಿದ್ದಾಳೆ.

ವಿಜಯನಗರ ಜಿಲ್ಲೆಯ ಹರಪನಹಳ್ಳ ಪಟ್ಟಣದ ಎಸ್‌ಯುಜೆಎಂ ಕಾಲೇಜಿನ ವಿದ್ಯಾರ್ಥಿನಿ ಮುತ್ತೂರು ಮಲ್ಲಮ್ಮ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ 600ಕ್ಕೆ 592 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಎರಡನೇ ರ್ಯಾಂಕ್‌ ಪಡೆದು ಜಿಲ್ಲೆ, ತಾಲೂಕಿಗೆ ಕೀರ್ತಿ ತಂದಿದ್ದಾಳೆ. ಹಗರಿಬೊಮ್ಮನಹಳ್ಳಿ ತಾಲೂಕಿನ ಕನ್ನಿಹಳ್ಳಿ ಗ್ರಾಮದ ನಿವಾಸಿ ಎಂ.ದುರುಗಪ್ಪ, ತಾಯಿ ಎಂ.ಸಾವಿತ್ರಮ್ಮ ಅವರಿಗೆ ಐವರು ಮಕ್ಕಳಿದ್ದು, ಕೊನೆಯ ಮಗಳು ಮಲ್ಲಮ್ಮ ಪಿಯುಸಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿನಿ. ಮಲ್ಲಮ್ಮ ಕನ್ನಡ- 100, ಸಂಸ್ಕೃತ 100, ಐಚ್ಛಿಕ ಕನ್ನಡ 97, ಇತಿಹಾಸ 97, ರಾಜ್ಯಶಾಸ್ತ್ರ 98, ಶಿಕ್ಷಣ 100 ಅಂಕ ಪಡೆದಿದ್ದಾರೆ.

ಇದನ್ನೂ ಓದಿ : ಸೆಕೆಂಡ್ ಪಿಯುಸಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಫಸ್ಟ್.. ಯಾದಗಿರಿ ಲಾಸ್ಟ್ – ರ್ಯಾಂಕ್ ಬಂದವರ ಬಗ್ಗೆ ಇಲ್ಲಿದೆ ಮಾಹಿತಿ

ವಿಶೇಷ ಅಂದ್ರೆ ಈ ವಿದ್ಯಾರ್ಥಿನಿ ಗ್ರಾಮದಿಂದ 50 ಕಿ.ಮೀ. ದೂರದ ಹರಪನಹಳ್ಳಿಗೆ ನಿತ್ಯ ಕಾಲೇಜಿಗೆ ಬಸ್‌ನಲ್ಲಿ ಸಂಚರಿಸುತ್ತಾ ಇಂಥದ್ದೊಂದು ಸಾಧನೆ ಮಾಡಿದ್ದಾಳೆ. ಮಲ್ಲಮ್ಮ ಎಸ್ಸೆಸ್ಸೆಲ್ಸಿಯಲ್ಲಿ ಶೇ.98 ಫಲಿತಾಂಶ ಪಡೆದಿದ್ದರು. ನಿತ್ಯ ಕಾಲೇಜು ಅವಧಿ ಹೊರತುಪಡಿಸಿ 6 ಗಂಟೆ ಅಭ್ಯಾಸ ಮಾಡುತ್ತಿದ್ದೆ. ಹಿಂದಿನ ವರ್ಷದ ಎಲ್ಲ ಪರೀಕ್ಷೆಯ ಪತ್ರಿಕೆಗಳನ್ನು ಮನನ ಮಾಡಿಕೊಳ್ಳುತ್ತಿದ್ದೆ. ನನಗೆ ರ್ಯಾಂಕ್‌ ಬರುವ ನಿರೀಕ್ಷೆ ಇತ್ತು. ಅದರಂತೆ 2ನೇ ರ್ಯಾಂಕ್‌ ಬಂದಿದ್ದು, ಕೆಎಎಸ್‌ ಮಾಡಿ ತಹಸೀಲ್ದಾರ್‌ ಆಗುವ ಗುರಿ ಹೊಂದಿದ್ದೇನೆ ಎಂದಿದ್ದಾಳೆ. ಮಗಳ ಈ ಸಾಧನೆಗೆ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ. ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿರುವ ವೇಳೆ ಕಾಲೇಜಿನ ದೂರವಾಣಿ ಮೂಲಕ ನನ್ನ ಮಗಳು ರಾಜ್ಯಕ್ಕೆ 2ನೇ ರ್ಯಾಂಕ್‌ ಬಂದಿದ್ದಾಳೆ ಎಂದು ತಿಳಿಸಿದ್ದು ಖುಷಿಯಾಗಿದೆ ಎಂದು ಹೇಳಿ ಮಗಳಿಗೆ ಸಿಹಿ ತಿನ್ನಿಸಿ ತಂದೆ- ತಾಯಿ ಸಂಭ್ರಮಿಸಿದ್ದಾರೆ.

suddiyaana