ಮುದ್ದಿನ ಮಡದಿಯ ಅಗಲಿಕೆ ನೋವಲ್ಲಿ ರಾಘು – ವಿಜಯ ರಾಘವೇಂದ್ರ ಅಭಿನಯದ ‘ಕದ್ದಚಿತ್ರ’ ರಿಲೀಸ್ ಮುಂದಕ್ಕೆ

ಮುದ್ದಿನ ಮಡದಿಯ ಅಗಲಿಕೆ ನೋವಲ್ಲಿ ರಾಘು – ವಿಜಯ ರಾಘವೇಂದ್ರ ಅಭಿನಯದ ‘ಕದ್ದಚಿತ್ರ’ ರಿಲೀಸ್ ಮುಂದಕ್ಕೆ

ಸ್ಯಾಂಡಲ್‌ ವುಡ್‌ ನಟ ವಿಜಯ್‌ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಆ.6 ರಂದು ಮೃತಪಟ್ಟಿದ್ದಾರೆ. ಥೈಲ್ಯಾಂಡ್‌ ಪ್ರವಾಸಕ್ಕೆ ತೆರಳಿದ್ದ ಅವರು ಜೀವಂತವಾಗಿ ವಾಪಸ್‌ ಬರಲೇ ಇಲ್ಲ. ಸ್ಫಂದನಾ ಅವರ ನಿಧನದಿಂದಾಗಿ ಇಡೀ ಕುಟುಂಬವೇ ದುಖಃದಲ್ಲಿದೆ. ಪತ್ನಿ ಕಳೆದುಕೊಂಡ ನೋವಿನಲ್ಲಿ ರಾಘು ಇದ್ದಾರೆ. ಪ್ರತಿ ಹೆಜ್ಜೆಯಲ್ಲಿ ಜೊತೆಯಾಗಿದ್ದ ಮುದ್ದಿನ ಮಡದಿ ಇಲ್ಲದೇ ತೀವ್ರ ದುಖಃದಲ್ಲಿ ಇದ್ದಾರೆ. ಇದೀಗ ಸ್ಪಂದನಾ ನಿಧನ ಹಿನ್ನೆಲೆ ವಿಜಯ್ ರಾಘವೇಂದ್ರ ನಟನೆಯ ‘ಕದ್ದ ಚಿತ್ರ’ ಸಿನಿಮಾ ರಿಲೀಸ್ ದಿನಾಂಕವನ್ನು ತಂಡ ಮುಂದೂಡಿಕೊಂಡಿದೆ.

ಸ್ಪಂದನಾ ಅಗಲಿಕೆಯಿಂದಾಗಿ ರಾಘು ನೋವಿನಲ್ಲಿದ್ದಾರೆ. ಪ್ರೀತಿಯ ಮಡದಿಯ ನೆನಪಿನಲ್ಲೇ ದಿನಕಳೆಯುತ್ತಿದ್ದಾರೆ. ಕೆಲದಿನಗಳ ಹಿಂದಷ್ಟೇ ವಿಜಯ್‌ ರಾಘವೇಂದ್ರ ಅವರು ತಮ್ಮ ಪತ್ನಿ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಭಾವನಾತ್ಮಕವಾಗಿ ಪೋಸ್ಟ್‌ ಮಾಡಿದ್ದರು. “ಸ್ಪಂದನಾ, ಹೆಸರಿಗೆ ತಕ್ಕ ಜೀವ, ಉಸಿರಿಗೆ ತಕ್ಕ ಭಾವ, ಅಳತೆಗೆ ತಕ್ಕ ನುಡಿ, ಬದುಕಿಗೆ ತಕ್ಕ ನಡೆ, ನಮಗೆಂದೇ ಮಿಡಿದೆ ನಿನ್ನ ಹೃದಯವ, ನಿಲ್ಲದು ನಿನ್ನೊಂದಿಗಿನ ಕಲರವ, ನಾನೆಂದೂ ನಿನ್ನವ ಕೇವಲ ನಿನ್ನವ, ಚಿನ್ನ” ಎಂದು ಹೇಳಿಕೊಂಡಿದ್ದರು. ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ನಿಧನರಾದ ಹಿನ್ನೆಲೆಯಲ್ಲಿ ‘ಕದ್ದ ಚಿತ್ರ’ ಚಿತ್ರವನ್ನು ನಿಗಧಿತ ದಿನಾಂಕದಂದು ರಿಲೀಸ್ ಮಾಡುತ್ತಿಲ್ಲ ಎಂದು ಚಿತ್ರತಂಡ ತಿಳಿಸಿದೆ. ಈ ಮೂಲಕ ಸ್ಪಂದನಾಗೆ ಚಿತ್ರತಂಡ ಗೌರವ ಸೂಚಿಸಿದೆ.

ಇದನ್ನೂ ಓದಿ: ಸ್ಪಂದನ.. ಹೆಸರಿಗೆ ತಕ್ಕ ಜೀವ.. ಉಸಿರಿಗೆ ತಕ್ಕ ಭಾವ…- ನಾನೆಂದೂ ನಿನ್ನವ ಎಂದು ಚಿನ್ನಾರಿಮುತ್ತನ ಮನಮಿಡಿಯುವ ಪೋಸ್ಟ್

‘ಕದ್ದ ಚಿತ್ರ’ ಸಿನಿಮಾ ಆಗಸ್ಟ್ 25ರಂದು ರಿಲೀಸ್ ಆಗಬೇಕಿತ್ತು. ಸ್ಪಂದನಾ ನಿಧನದ ಹಿನ್ನೆಲೆ ರಿಲೀಸ್ ದಿನಾಂಕವನ್ನು ತಂಡ ಮುಂದೂಡಿಕೊಂಡಿದೆ. ಸಿನಿಮಾ ಜನರಿಗೆ ತಲುಪಬೇಕು ಎಂದರೆ ಅದಕ್ಕೆ ಪ್ರಚಾರ ಮುಖ್ಯವಾಗುತ್ತದೆ. ಪ್ರಚಾರವಿಲ್ಲದೆ ಸಿನಿಮಾ ರಿಲೀಸ್ ಮಾಡೋಕೆ ಸಾಧ್ಯವಿಲ್ಲ. ಈ ಕಾರಣದಿಂದ ‘ಕದ್ದ ಚಿತ್ರ’ ತಂಡ ರಿಲೀಸ್ ದಿನಾಂಕವನ್ನು ಮುಂದೂಡಿಕೊಂಡಿದೆ. ಈ ಸಂದರ್ಭದಲ್ಲಿ ವಿಜಯ್ ರಾಘವೇಂದ್ರ ಅವರು ಪ್ರಚಾರದಲ್ಲಿ ಭಾಗಿ ಆಗಲು ಸಾಧ್ಯವಿಲ್ಲ. ಹೀಗಾಗಿ, ಈ ನಿರ್ಧಾರಕ್ಕೆ ಬರಲಾಗಿದೆ.

‘ಸ್ಪಂದನಾ ಅಕ್ಕ, ಪರಿಶುದ್ಧ ಹಾಗೂ ಒಂದು ಸುಂದರವಾದ ಆತ್ಮ. ಬಹುಬೇಗ ನಮ್ಮನ್ನೆಲ್ಲಾ ಶಾಶ್ವತವಾಗಿ ತೊರೆದು ಅನಂತದೆಡೆಗೆ ಸಾಗಿದ್ದೀರಿ. ನೀವಿಲ್ಲದ ನಮ್ಮೆಲ್ಲರ ಪ್ರಪಂಚಕ್ಕೆ ಮಂಕು ಕವಿದಂತಾಗಿದೆ. ಆದರೂ ನೀವಿಟ್ಟ ಮಾರ್ಗದರ್ಶನ ನಮ್ಮೆಲ್ಲರನ್ನು ಬೆಳಕಿನತ್ತ ಕೊಂಡೊಯ್ಯುತ್ತಿದೆ. ಎಲ್ಲರೊಂದಿಗಿನ ನಿಮ್ಮ ಉಪಸ್ಥಿತಿ, ಸಹನೆ, ಉದಾರತೆ ಸದಾ ನೆನಪಿನಲ್ಲಿ ಉಳಿಯುವಂಥದ್ದು. ನಮ್ಮೆಲ್ಲರ ಆತ್ಮೀಯರಾದಂಥ ವಿಜಯ್ ರಾಘವೇಂದ್ರ ಅವರಿಗೆ ನಿಮ್ಮ ಅಗಲಿಕೆಯಿಂದಾಗಿರುವ ನಷ್ಟ, ದುಃಖ, ನಿಮ್ಮ ಅನುಪಸ್ಥಿತಿ, ನೋವಿನ ತೀವ್ರತೆ ತುಂಬಾ ಆಳವಾದದ್ದು. ಅವರಿಗೆ ದೇವರು ಈ ದುಃಖದಿಂದ ಹೊರಬರುವ ಶಕ್ತಿ ನೀಡಲಿ’ ಎಂದು ಬರೆದುಕೊಂಡಿದೆ ಚಿತ್ರತಂಡ.

‘ಒಂದಂತೂ ನಮ್ಮಕಡೆಯಿಂದ ಹೇಳಬಹುದಾದ್ದು ಏನೆಂದರೆ ವಿಜಯ್ ರಾಘವೇಂದ್ರ ಸರ್ ನಾವೆಂದೂ ಸದಾ ನಿಮ್ಮ ಜೊತೆ ಇರುತ್ತೇವೆ. ಈ ಮೊದಲೇ ನಿಗದಿಯಾದಂತೆ ನಮ್ಮ ‘ಕದ್ದ ಚಿತ್ರ’ ಇದೇ ತಿಂಗಳು 25ರಂದು ರಾಜ್ಯಾದ್ಯಂತ ಬಿಡುಗಡೆಯಾಗಬೇಕಿತ್ತು. ಸ್ಪಂದನಾ ಅಕ್ಕನ ಅಗಲಿಕೆಯಿಂದ ಬಿಡುಗಡೆಯ ದಿನಾಂಕವನ್ನು ಮುಂದೂಡುತ್ತಿದ್ದೇವೆ. ಶೀಘ್ರದಲ್ಲಿ ಹೊಸ ದಿನಾಂಕ ಘೋಷಿಸುತ್ತೇವೆ’ ಎಂದು ಬರೆದುಕೊಂಡಿದೆ ಚಿತ್ರತಂಡ.

suddiyaana