‘ಅಮೃತ ವರ್ಷಿಣಿ’ ಖ್ಯಾತಿಯ ಶರತ್ ಬಾಬು ಇನ್ನಿಲ್ಲ – ಒಂಟಿಯಾಗಿಯೇ ಬದುಕಿನ ಯಾತ್ರೆ ಮುಗಿಸಿದ ನಟ!

‘ಅಮೃತ ವರ್ಷಿಣಿ’ ಖ್ಯಾತಿಯ ಶರತ್ ಬಾಬು ಇನ್ನಿಲ್ಲ – ಒಂಟಿಯಾಗಿಯೇ ಬದುಕಿನ ಯಾತ್ರೆ ಮುಗಿಸಿದ ನಟ!

ಅಮೃತವರ್ಷಿಣಿ ಸಿನಿಮಾ ಖ್ಯಾತಿಯ ಬಹುಭಾಷಾ ನಟ ಶರತ್ ಬಾಬು ವಿಧಿವಶರಾಗಿದ್ದಾರೆ. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಶರತ್ ಬಾಬು ಹೈದರಾಬಾದ್ ನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಶರತ್ ಬಾಬು ಅವರಿಗೆ ಏಪ್ರಿಲ್ ಮೊದಲ ವಾರದಲ್ಲಿ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆರೋಗ್ಯದಲ್ಲಿ ಚೇತರಿಕೆ ಕಂಡ ಬಳಿಕ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು.

ಕಳೆದ ಕೆಲವು ದಿನಗಳಿಂದ ಬಹು ಅಂಗಾಂಗ ವೈಫಲ್ಯದಿಂದ ಶರತ್ ಬಾಬು ಅವರು ಬಳಲುತ್ತಿದ್ದರು. ಈಗ ಚಿಕಿತ್ಸೆ ಫಲಕಾರಿಯಾಗದೇ ನಟ ಶರತ್ ಇಹಲೋಕ ತ್ಯಜಿಸಿದ್ದಾರೆ. ನಾಲ್ಕು ದಶಕಗಳ ಕಾಲ ಚಿತ್ರೋದ್ಯಮದಲ್ಲಿ ಕಲಾವಿದರಾಗಿ ಗುರುತಿಸಿಕೊಂಡಿರುವ ಶರತ್ ಬಾಬು, ಹುಟ್ಟಿದ್ದು ಆಂಧ್ರಪ್ರದೇಶದಲ್ಲಿ. ಆದರೂ, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಅವರು ನಟಿಸಿದ್ದಾರೆ. ಕನ್ನಡದಲ್ಲಿ ಅವರು ‘ಅಮೃತವರ್ಷಿಣಿ’ ಶರತ್ ಬಾಬು ಎಂದೇ ಫೇಮಸ್ ಆಗಿದ್ದಾರೆ. ಇನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಹೆಗ್ಗಳಿಕೆ ಅವರದಾಗಿತ್ತು. ಶಕ್ತಿ, ಕಂಪನ, ರಣಚಂಡಿ, ತುಳಸಿದಳ ಸೇರಿದಂತೆ ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು ಹಿರಿಯ ನಟ ಶರತ್ ಬಾಬು ಅವರ ನಿಧನಕ್ಕೆ ಚಿತ್ರರಂಗದ ನಟ- ನಟಿಯರು ಸಂತಾಪ ಸೂಚಿಸಿದ್ದಾರೆ. ನೆಚ್ಚಿನ ನಟನ ನಿಧನಕ್ಕೆ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

ಇದನ್ನೂ ಓದಿ : ಬದುಕು ನುಂಗಿದ ಮಹಾಮಳೆ – ಜ್ಯುವೆಲ್ಲರಿ ಶಾಪ್‌ಗೆ ನೀರು ನುಗ್ಗಿ ಕೊಚ್ಚಿ ಹೋಯ್ತು ಆಭರಣ

ತಮ್ಮ ನಟನೆಯಿಂದ ಹೆಸರುವಾಸಿಯಾಗಿದ್ದ ಶರತ್‌ ಅವರು ತಮ್ಮ ಕೊನೆಗಾಲದವರೆಗೂ ಒಂಟಿಯಾಗಿ ಜೀವನ ನಡೆಸುತ್ತಿದ್ದರು ಎನ್ನುವುದೇ ವಿಪರ್ಯಾಸ. ಶರತ್‌ ಅವರು 1974ರಲ್ಲಿ ರಮಾಪ್ರಭ ಜೊತೆ ವಿವಾಹವಾಗಿದ್ದರು. 1988ರಲ್ಲಿ ವಿಚ್ಛೇದನ ಪಡೆದು ಅವರಿಂದ ದೂರವಾದರು. ಬಳಿಕ 1990ರಲ್ಲಿ ಸ್ನೇಹ ನಂಬಿಯಾರ್ ಜೊತೆ 2ನೇ ವಿವಾಹವಾದರು. ಆದರೆ ಕಾರಣ ನಿಮಿತ್ತ 2011ರಲ್ಲಿ ಅವರಿಂದಲೂ ದೂರವಾಗಿ ಒಂಟಿ ಜೀವನ ನಡೆಸುತ್ತಿದ್ದರು. ಕನ್ನಡದ ತುಳಸಿದಳ, ರಣಚಂಡಿ, ಶಕ್ತಿ, ಕಂಪನ, ಗಾಯ, ಹೃದಯ-ಹೃದಯ, ನೀಲ, ನಮ್ಮೆಜಮಾನ್ರು, ಅಮೃತವರ್ಷಿಣಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಶರತ್‌ ನಟಿಸಿದ್ದಾರೆ. ಅಮೃತವರ್ಷಿಣಿ ಸಿನಿಮಾದಲ್ಲಿನ ಅವರ ಪಾತ್ರ ಇಂದಿಗೂ ಕನ್ನಡ ಸಿನಿ ಪ್ರೇಮಿಗಳು ಅಚ್ಚು ಮೆಚ್ಚು.

suddiyaana