ಬಿಗ್‌ಬಾಸ್‌ನಿಂದ ವರ್ತೂರು ಸಂತೋಷ್ ಎಲಿಮಿನೇಟ್? – ಹಳ್ಳಿಕಾರ್ ಒಡೆಯ ಎಡವಿದ್ದು ಹೇಗೆ?

ಬಿಗ್‌ಬಾಸ್‌ನಿಂದ ವರ್ತೂರು ಸಂತೋಷ್ ಎಲಿಮಿನೇಟ್? – ಹಳ್ಳಿಕಾರ್ ಒಡೆಯ ಎಡವಿದ್ದು ಹೇಗೆ?

ಬಿಗ್ ಬಾಸ್ ಮನೆಯಲ್ಲಿ ಹಳ್ಳಿಕಾರ್ ಒಡೆಯ ವರ್ತೂರು ಸಂತೋಷ್ ಹವಾ ಜೋರಾಗಿಯೇ ಇತ್ತು. ವರ್ತೂರು ಸಂತೋಷ ನಾನು ರೈತ, ಇದರ ಜೊತೆಗೆ ನಾನು ಶೋಕಿ ಮಾಡುವ ಶ್ರೀಮಂತ ಅಂತಾನೇ ಹೇಳಿಕೊಂಡಿದ್ದರು. ಈಗ ಪೊಲೀಸರ ಬಲೆಗೆ ಬಿದ್ದಿರುವ ವರ್ತೂರು ಸಂತೋಷ್ ಬಿಗ್‌ಬಾಸ್ ಮನೆಯ ಆಟ ಮುಕ್ತಾಯವಾಯ್ತಾ? ವರ್ತೂರು ಸಂತೋಷ್ ಎಲಿಮಿನೇಟ್ ಆಗಿರುವ ಲೆಕ್ಕಕ್ಕೆ ಸೇರ್ತಾರಾ ಎಂಬ ವಿವರ ಇಲ್ಲಿದೆ.

ಇದನ್ನೂ ಓದಿ: ತಪ್ಪೊಪ್ಪಿಕೊಂಡ ಬಿಗ್‌ಬಾಸ್ ಸ್ಪರ್ಧಿ ವರ್ತೂರು ಸಂತೋಷ್ – ಆರೋಪ ಸಾಬೀತಾದರೆ ಶಿಕ್ಷೆ ಪ್ರಮಾಣ ಎಷ್ಟು?

ಅಖಿಲ ಭಾರತ ಹಳ್ಳಿಕಾರ್‌ ತಳಿ ಸಂರಕ್ಷಣಾ ಸಮಿತಿಯ ಅಧ್ಯಕ್ಷರಾಗಿರುವ ಸಂತೋಷ್ ಹಳ್ಳಿಕಾರ್ ತಳಿಗಳ ಉಳಿವಿಗೆ ಹೋರಾಟ ಮಾಡುತ್ತಿದ್ದಾರೆ.  ಹಳ್ಳಿಕಾರ್‌ ತಳಿಯ ಜಾನುವಾರು ಸಾಕಾಣಿಕೆ ಮೂಲಕವೇ ವರ್ತೂರು ಸಂತೋಷ್‌ ಜನಪ್ರಿಯತೆ ಪಡೆದಿದ್ದರು. ಇವರು ಅಖಿಲ ಭಾರತ ಹಳ್ಳಿಕಾರ್‌ ತಳಿ ಸಂರಕ್ಷಣಾ ಸಮಿತಿಯ ಅಧ್ಯಕ್ಷರೂ ಹೌದು. ಹಳ್ಳಿಕಾರ್‌ ಒಡೆಯ ಎಂದೇ ಫೇಮಸ್ ಆಗಿದ್ದಾರೆ ವರ್ತೂರು ಸಂತೋಷ್. ಎಜುಕೇಷನ್‌ ಎನ್ನುವುದು ಮಾಹಿತಿ, ಅದೇ ಜೀವನವಲ್ಲ ಎಂಬ ಮಾತನ್ನು ಪದೇ ಪದೇ ವರ್ತೂರು ಸಂತೋಷ್ ಹೇಳುತ್ತಿದ್ದರು. ಅಷ್ಟೇ ಅಲ್ಲ ಬಿಗ್‌ಬಾಸ್ ಮನೆಯಲ್ಲೂ ನಾನು ರೈತ. ನಾನು ರೈತನಾಗಿದ್ದೇ ತುಂಬಾ ಸಂಪಾದಿಸಿದ್ದೇನೆ. ನನ್ನ ಮೈಮೇಲೆ ಇರುವ ಬಂಗಾರವೂ ನಾನು ರೈತನಾಗಿದ್ದುಕೊಂಡೇ ಸಂಪಾದಿಸಿದ್ದು. ನೀವು ನೋಡುತ್ತಿರುವ ಈ ಚಿನ್ನ ಕಡಿಮೆ. ನನ್ನ ಜೊತೆ ಇನ್ನೂ ಸಾಕಷ್ಟು ಬಂಗಾರವಿದೆಯೆಂದು ಹೇಳಿದ್ದರು. ಅಷ್ಟೇ ಅಲ್ಲ, ಈಗ ನಮ್ಮ ಮಕ್ಕಳು ತುಂಬಾ ಓದಬೇಕು. ಎಂಜಿನಿಯರೋ ಡಾಕ್ಟರೋ ಆಗಬೇಕು ಎಂದು ಪೋಷಕರು ಹೇಳ್ತಾರೆ. ಯಾರಾದರೂ ಒಬ್ಬ ಪೋಷಕ ಮಕ್ಕಳು ರೈತರಾಗಬೇಕು ಎಂದು ಬಯಸುತ್ತೀರಾ ಎಂದು ಹೇಳುವ ಮೂಲಕ ರಾಜ್ಯದ ರೈತರ ಮನಸನ್ನು ಗೆದ್ದಿದ್ದರು. ರೈತರು ಎಂಬುದು ಹೆಮ್ಮೆ ಎಂಬ ಬಗ್ಗೆ ಬಿಗ್‌ಬಾಸ್ ಮನೆಯಲ್ಲಿ ಸಂತೋಷ್ ಹೇಳಿದ್ದರು.

ಹಸು ಸಾಕಲು ಸಾಧ್ಯವಿರುವವರು ಹಸು ಸಾಕ್ರಿ, ಹೋರಿ ಸಾಕೋರು ಹೋರಿ ಸಾಕ್ರಿ, ಒಟ್ಟಾರೆ ಹಳ್ಳಿಕಾರ್‌ ತಳಿ ಉಳಿಸಿ. ಮನೆಯಲ್ಲಿ ಮೂಕ ಜೀವಗಳು ಇರಬೇಕು ಎಂದು ನನ್ನ ಅಜ್ಜಿ ಹೇಳಿದ್ದರು. ಹಳ್ಳಿಕಾರ್‌ ದನ ಸಾಕಲು ಇವರೇ ನನಗೆ ಸ್ಪೂರ್ತಿ ಎಂದು ಹೇಳುವ ಮೂಲಕ ವರ್ತೂರು ಸಂತೋಷ್ ರಾಜ್ಯದ ಜನತೆಯ ಗಮನ ಸೆಳೆದಿದ್ದರು. ಹಳ್ಳಿಕಾರ್ ತಳಿಯನ್ನು ಉಳಿಸಬೇಕು ಎಂಬ ಗುರಿ ಇಟ್ಟುಕೊಂಡಿರುವ ಶ್ರೀಮಂತ ರೈತ ವರ್ತೂರು ಸಂತೋಷ್  ಬಿಗ್‌ಬಾಸ್ ಮನೆಗೆ ಎಂಟ್ರಿಕೊಟ್ಟಿದ್ದರು. ಹಳ್ಳಿಕಾರ್ ಎಂಬ ಗೋವಿನ ತಳಿ ಉಳಿಸುವ ಸಲುವಾಗಿ ಇವರ ಹೋರಾಟ. ಇತ್ತೀಚೆಗೆ ಈ ತಳಿಯ ಹೋರಿಗಳು ಎಲ್ಲಿಯೂ ಕಾಣಸಿಗೋದಿಲ್ಲ. ಇರುವಷ್ಟು ತಳಿಗಳನ್ನು ಉಳಿಸಿಕೊಳ್ಳೋ ಪ್ರಯತ್ನ ಮಾಡಬೇಕು ಎಂದು ವರ್ತೂರ್ ಸಂತೋಷ್ ಕರೆ ನೀಡಿದ್ದರು.

ಇಷ್ಟೆಲ್ಲಾ ಹೇಳುವ ಸಂತೋಷ್ ಗೆ ಬಂಗಾರ ಶೋಕಿಯೇ ಮುಳುವಾಗಿದೆ. ಮೈಮೇಲೆ ಒಡವೆ ಧರಿಸುವ ಶೋಕಿಯಿಂದಲೇ ಈಗ ಬಂಧನಕ್ಕೊಳಗಾಗಿದ್ದಾರೆ ಸಂತೋಷ್. ಅದು ಕೂಡಾ ಪ್ರಾಣಿಗಳ ಮೇಲೆ ವಿಪರೀತ ಪ್ರೀತಿ ಎಂದು ಹೇಳುವ ಸಂತೋಷ್ ಒರ್ಜಿನಲ್ ಹುಲಿ ಉಗುರು ಧರಿಸಿದ ಆರೋಪದ ಮೇಲೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಬಿಗ್‌ಬಾಸ್ ಮನೆಯಲ್ಲಿ ಎರಡು ವಾರಗಳ ಕಾಲ ಹಳ್ಳಿಕಾರ್ ಒಡೆಯನ ಹವಾ ಜೋರಾಗಿಯೇ ಇತ್ತು. ಜೊತೆಗೆ ಉಳಿದ ಸ್ಪರ್ಧಿಗಳ ಜೊತೆಗೂ ಸಿಕ್ಕಾಪಟ್ಟೆ ಬಿಲ್ಡಪ್ ಕೊಟ್ಕೊಂಡು ತುಂಬಾ ಚೆನ್ನಾಗಿಯೇ ಇದ್ದರು. ಈಗಾಗಲೇ ಬಿಗ್ ಬಾಸ್ ಮನೆಯಲ್ಲಿ ಎರಡು ಎಲಿಮಿನೇಷನ್ ನಡೆದಿದೆ. ವರ್ತೂರು ಸಂತೋಷ್ ಇನ್ನು ಕೆಲಕಾಲ ಬಿಗ್‌ಬಾಸ್ ಮನೆಯಲ್ಲಿ ಇರುವ ಆಸೆ ಹೊಂದಿದ್ದರು. ಆದರೆ, ಈಗ ಅರೆಸ್ಟ್ ಮಾಡಲು ಅರಣ್ಯಾಧಿಕಾರಿಗಳು ಬಿಗ್‌ಬಾಸ್ ಮನೆಯಿಂದ ಹಳ್ಳಿಕಾರ್ ಒಡೆಯನನ್ನು ಬಿಗ್‌ಬಾಸ್ ಮನೆಯಿಂದ ಹೊರಗೆ ಕರೆದುಕೊಂಡು ಬಂದಿದ್ದಾರೆ. ನಂತರ ಬಂಧಿಸಿದ್ದಾರೆ. ಈಗ ವರ್ತೂರು ಸಂತೋಷ್ ಅವರು ಕೂಡ ಎಲಿಮಿನೇಟ್ ಆಗಿದ್ದಾರೆ ಎಂದೇ ಪರಿಗಣಿಸಬಹುದು. ಮತ್ತೆ ಬಿಗ್ ಬಾಸ್ ಮನೆಗೆ ಬರೋದು ಅನುಮಾನವೇ. ಒಮ್ಮೆ ಬಿಗ್ ಬಾಸ್ ಮನೆಯಿಂದ ಹೊರಬಿದ್ದರೆ ಅವರಿಗೆ ಮತ್ತೆ ಮನೆ ಒಳಗೆ ಪ್ರವೇಶ ನೀಡುವುದಿಲ್ಲ. ಈಗ ವರ್ತೂರು ಸಂತೋಷ್ ಅವರು ಅರೆಸ್ಟ್ ಆಗಿರುವುದರಿಂದ ಅವರಿಗೆ ಮತ್ತೆ ಬಿಗ್ ಬಾಸ್ ಮನೆ ಒಳಗೆ ಬರೋಕೆ ಅವಕಾಶ ಸಿಗುವುದು ತುಂಬಾ ಕಡಿಮೆ. ಅವರು ಎಲಿಮಿನೇಟ್ ಆದ ಲೆಕ್ಕವೇ. ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಹೆಸರು ಮಾಡಿದ್ದ ವರ್ತೂರು ಸಂತೋಷ್ ಈಗ ಹುಲಿ ಉಗುರು ಧರಿಸಿ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ. ವರ್ತೂರು ಸಂತೋಷ್ ಬಂಗಾರದ ಶೋಕಿಯೇ ಈಗ ಅವರಿಗೆ ಮುಳುವಾಗಿದೆ.

 

Sulekha