ಬೆಂಗಳೂರಲ್ಲಿ ರಸ್ತೆ ಗುಂಡಿ, ಕಸದ ಅದ್ವಾನ – ಇನ್ಮುಂದೆ ನಾವು ತೆರಿಗೆ ಕಟ್ಟಲ್ಲ  ಎಂದು CM, DCMಗೆ ಪತ್ರ ಬರೆದ ಐಟಿ-ಬಿಟಿ ಮಂದಿ

ಬೆಂಗಳೂರಲ್ಲಿ ರಸ್ತೆ ಗುಂಡಿ, ಕಸದ ಅದ್ವಾನ – ಇನ್ಮುಂದೆ ನಾವು ತೆರಿಗೆ ಕಟ್ಟಲ್ಲ  ಎಂದು CM, DCMಗೆ ಪತ್ರ ಬರೆದ ಐಟಿ-ಬಿಟಿ ಮಂದಿ

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಟ್ರಾಫಿಕ್‌ ಸಮಸ್ಯೆ ಒಂದ್ಕಡೆಯಾದ್ರೆ, ಮತ್ತೊಂದ್ಕಡೆ ಎಲ್ಲಿ ನೋಡಿದ್ರೂ ರಸ್ತೆಯಲ್ಲಿ ಗುಂಡಿಗಳೇ ಕಾಣಿಸುತ್ತಿದೆ. ಬೆಂಗಳೂರಿನ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು, ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇದೀಗ ರಾಜ್ಯ ಸರ್ಕಾರ ವಿರುದ್ಧ ಬೆಂಗಳೂರಿನ ಉದ್ಯಮಿಗಳು ಗರಂ ಆಗಿದ್ದಾರೆ. ಇನ್ನುಮುಂದೆ ನಾವು ಆಸ್ತಿ ತೆರಿಗೆ ಕಟ್ಟುವುದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: 2026-28ರ ಅವಧಿಗೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ ಆಯ್ಕೆಯಾದ ಭಾರತ

ವರ್ತೂರು, ಪಣತ್ತೂರು ಭಾಗದಲ್ಲಿ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಎಲ್ಲಿ ನೋಡಿದರೂ ಬರಿ ಗುಂಡಿಗಳೇ ಕಾಣುತ್ತಿವೆ. ಇಂತಹ ರಸ್ತೆಗಳಲ್ಲಿ ಸರಾಗವಾಗಿ ಸಂಚರಿಸಲು ಸಾಧ್ಯವಾಗದ ಕಾರಣ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಸ್ಕೂಲ್​ ಬಸ್​ಗಳ ಅಪಘಾತ ದಿನನಿತ್ಯ ಮಾಮೂಲು ಎಂಬಂತಾಗಿದೆ. ಗುಂಡಿ ಮುಕ್ತ ರಸ್ತೆ , ಮೂಲ ಸೌಕರ್ಯ ಕೊಟ್ಟು ತೆರಿಗೆ ಕೇಳಿ ಎಂದು Individual Tax Payers Forumನಿಂದ ಸಿಎಂ, ಡಿಸಿಎಂಗೆ ಪತ್ರ ಬರೆಯಲಾಗಿದೆ.

ರಸ್ತೆ ಸಮಸ್ಯೆ ಮಾತ್ರವಲ್ಲದೆ ಈ ಭಾಗದಲ್ಲಿ ಸಮರ್ಪಕ ಚರಂಡಿಗಳ ಕೊರತೆಯೂ ಇದೆ. ಮಳೆ ಬಂದರೆ ನೀರು ವರ್ತೂರು ಕೆರೆಗೆ ಹರಿದು ಹೋಗಲು ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ರಸ್ತೆಗಳು ಜಲಾವೃತವಾಗುತ್ತಿವೆ. ಇತ್ತೀಚೆಗೆ ಮಳೆ ಬಂದ ಸಂದರ್ಭವೂ ಇದೇ ರೀತಿಯ ಸಮಸ್ಯೆ ಉಂಟಾಗಿ, ಜನ ಜೀವನ ಅಸ್ತವ್ಯಸ್ತವಾಗಿತ್ತು. ಹೀಗಾಗಿ ಈ ಪ್ರದೇಶದಲ್ಲಿ ಸರಿಯಾದ ರಸ್ತೆ, ಒಳಚರಂಡಿ ವ್ಯವಸ್ಥೆ ಸೇರಿ ಮೂಲ ಸೌಕರ್ಯಗಳನ್ನು ಕಲ್ಪಿಸದ ಹಿನ್ನಲೆ ಗೃಹ ನಿರ್ಮಾಣ ಪ್ರಾಧಿಕಾರ ಅಥವಾ GBA ಆಸ್ತಿ ತೆರಿಗೆ ಸಂಗ್ರಹಿಸದಂತೆ ಆದೇಶಿಸಿ ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ. ಈ ಭಾಗದಿಂದ ವಾರ್ಷಿಕವಾಗಿ 800 ಕೋಟಿ ತೆರಿಗೆ ಪಾವತಿಯಾಗಲಿದ್ದು, ಇದೇ ವಿಚಾರವಾಗಿ ಈ ಹಿಂದೆ ಹಲವು ಬಾರಿ ಸ್ಥಳೀಯರು ಪ್ರತಿಭಟನೆಗಳನ್ನೂ ನಡೆಸಿದ್ದರು.

Shwetha M