ಉತ್ತರಾಖಂಡದಲ್ಲಿ ಭಾರಿ ಮಳೆ, ಭೂಕುಸಿತ – 10 ಕ್ಕೂ ಹೆಚ್ಚು ಮಂದಿ ಸಿಲುಕಿರುವ ಶಂಕೆ

ಉತ್ತರಾಖಂಡದಲ್ಲಿ ಭಾರಿ ಮಳೆ, ಭೂಕುಸಿತ – 10 ಕ್ಕೂ ಹೆಚ್ಚು ಮಂದಿ ಸಿಲುಕಿರುವ ಶಂಕೆ

ಉತ್ತರಾಖಂಡದಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ರುದ್ರಪ್ರಯಾಗದಲ್ಲಿ ಭಾರಿ ಭೂಕುಸಿತ ಸಂಭವಿಸಿದ್ದು, ಹಲವು ಮಂದಿ ಮಣ್ಣಿನ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ರುದ್ರಪ್ರಯಾಗದಲ್ಲಿ ಗುರುವಾರ ತಡರಾತ್ರಿ ಈ ಅವಘಡ ಸಂಭವಿಸಿದೆ. ಭಾರಿ ಮಳೆಯಿಂದಾಗಿ ಗುಡ್ಡ ಕುಸಿದಿದೆ. ಈ ದುರ್ಘಟನೆಯಲ್ಲಿ 10ಕ್ಕೂ ಹೆಚ್ಚು ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಜಿಲ್ಲಾಡಳಿತ ತಂಡ, ವಿಪತ್ತು ನಿರ್ವಹಣಾ ತಂಡ, ಪೊಲೀಸ್ ತಂಡ, ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್ ಮತ್ತು ಇತರ ತಂಡಗಳು ಸ್ಥಳದಲ್ಲಿವೆ.

ಇದನ್ನೂ ಓದಿ: ಕಂದಕಕ್ಕೆ ಉರುಳಿಬಿದ್ದ ಬಸ್‌ – ಭಾರತೀಯರು ಸೇರಿ 18 ಮಂದಿ ಸಾವು

ಎಸ್‌ಪಿ ರುದ್ರಪ್ರಯಾಗ, ಡಾ.ವಿಶಾಖಾ ಮಾತನಾಡಿ, ನಾಪತ್ತೆಯಾದವರ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದೆ ಎಂದರು. ಭಾರಿ ಮಳೆಯಿಂದಾಗಿ ಅಂಗಡಿಗಳ ಮೇಲೆ ಕಲ್ಲು ಬಂಡೆಗಳು ಬಿದ್ದಿದ್ದು, ಮೂರು ಅಂಗಡಿಗಳು ಹಾನಿಗೀಡಾಗಿವೆ. ಈ ಪ್ರದೇಶದಲ್ಲಿ ಸುಮಾರು 10-12 ಜನ ಇದ್ದರು ಎಂದು ಹೇಳಲಾಗಿದೆ. ಇಲ್ಲಿವರೆಗೆ ಯಾರೊಬ್ಬರೂ ಪತ್ತೆಯಾಗಿಲ್ಲ.

ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯ ಕೇದಾರನಾಥ ಯಾತ್ರೆ ಮಾರ್ಗದಲ್ಲಿ ಗೌರಿಕುಂಡ್ ಬಳಿ ದೊಡ್ಡ ಭೂಕುಸಿತದಿಂದಾಗಿ ನಾಶವಾದ ಅಂಗಡಿಗಳ ಅವಶೇಷಗಳಲ್ಲಿ ಹಲವರು ಹೂತುಹೋಗಿದ್ದಾರೆ ಎಂದು ಶಂಕಿಸಲಾಗಿದೆ.

ಉತ್ತರಾಖಂಡದ 7 ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಡೆಹ್ರಾಡೂನ್, ಹರಿದ್ವಾರ, ತೆಹ್ರಿ, ನೈನಿತಾಲ್, ಪೌರಿ, ಉತ್ತರಕಾಶಿ, ಚಮೋಲಿಯಲ್ಲಿ ಭಾರೀ ಮಳೆಯಾಗುವ ಎಚ್ಚರಿಕೆ ಇದೆ. ಹವಾಮಾನ ಇಲಾಖೆಯು ಎಲ್ಲಾ ಜಿಲ್ಲೆಗಳಿಗೆ ಎಚ್ಚರಿಕೆಯನ್ನು ರವಾನಿಸಲು ಸೂಚಿಸಿದೆ.

suddiyaana