ಉರಿಗೌಡ-ನಂಜೇಗೌಡ ಹೆಸರಿನಲ್ಲಿ ಸಿನಿಮಾ ಮಾಡಲು ನೋಂದಣಿ – ಸಿಡಿದೆದ್ದ ಒಕ್ಕಲಿಗ ಯುವಬ್ರಿಗೇಡ್!

ಉರಿಗೌಡ-ನಂಜೇಗೌಡ ಹೆಸರಿನಲ್ಲಿ ಸಿನಿಮಾ ಮಾಡಲು ನೋಂದಣಿ – ಸಿಡಿದೆದ್ದ ಒಕ್ಕಲಿಗ ಯುವಬ್ರಿಗೇಡ್!

ರಾಜ್ಯ ರಾಜಕೀಯದಲ್ಲಿ ಈಗ ‘ಉರಿಗೌಡ, ನಂಜೇಗೌಡ’ ವಿಚಾರ ಸಂಚಲನ ಮೂಡಿಸಿದೆ. ನಾಯಕರ ನಡುವೆ ವಾಗ್ಯುದ್ಧಕ್ಕೂ ಕಾರಣವಾಗಿದೆ. ಸಚಿವ ಅಶ್ವತ್ಥ್ ನಾರಾಯಣ್ ಹಚ್ಚಿದ ಕಿಡಿ, ಮೋದಿ ಆಗಮನದ ವೇಳೆ ಹಾಕಿದ್ದ ಪ್ರವೇಶ ದ್ವಾರ ರಾಜ್ಯದಲ್ಲಿ ಕಿಚ್ಚು ಹಚ್ಚಿದೆ.

ವಿಧಾನಸಭಾ ಚುನಾವಣೆ ಹೊತ್ತಲ್ಲೇ  ಉರಿಗೌಡ, ನಂಜೇಗೌಡ ಬಗೆಗಿನ ಚರ್ಚೆ ಜೋರಾಗಿದೆ. ಟಿಪ್ಪು ಸುಲ್ತಾನನನ್ನ ಈ ಇಬ್ಬರೇ ಕೊಂದಿದ್ದಾರೆ ಎಂದು ಬಿಜೆಪಿ ಹೇಳುತ್ತಿದೆ. ಇದರ ನಡುವೆ ಇಬ್ಬರ ಜೀವನ ಆಧರಿಸಿ ನಿರ್ಮಾಪಕ ಮುನಿರತ್ನ ಸಿನಿಮಾ ಮಾಡಲು ಮುಂದಾಗಿದ್ದಾರೆ. ಉರಿಗೌಡ-ನಂಜೇಗೌಡ ಹೆಸರನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಣಿ ಕೂಡ ಮಾಡಿಸಿದ್ದಾರೆ. ವೃಷಭಾದ್ರಿ ಪ್ರೊಡಕ್ಷನ್ಸ್ (Vrushabhadri Productions) ಮೂಲಕ ಸಿನಿಮಾ ಮಾಡಲು ಪ್ಲ್ಯಾನ್ ರೂಪಿಸಿದ್ದಾರೆ. ಆದರೆ, ಈ ಪಾತ್ರಗಳ ಮೇಲೆ ಸಿನಿಮಾ ಮಾಡಬಾರದು ಎಂದು ಈಗ ಅರ್ಜಿ ಸಲ್ಲಿಕೆ ಆಗಿದೆ. ಒಕ್ಕಲಿಗ ಯುವಬ್ರಿಗೇಡ್ ಹಾಗೂ ಅನಿವಾಸಿ ಭಾರತೀಯ ಒಕ್ಕಲಿಗ ಯುವಬ್ರಿಗೇಡ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ಇದನ್ನೂ ಓದಿ : ‘ಉರಿಗೌಡನೂ ಇಲ್ಲ.. ನಂಜೇಗೌಡನೂ ಇಲ್ಲ.. ಡಿಜಿಪಿ ನಾಲಾಯಕ್’ – ಬಿಜೆಪಿ ವಿರುದ್ಧ ಡಿಕೆಶಿ ಕೆಂಡ..!

‘ವೃಷಭಾದ್ರಿ ಪ್ರೊಡಕ್ಷನ್ಸ್ ಅವರು ಉರಿಗೌಡ, ನಂಜೇಗೌಡ ಚಲನಚಿತ್ರ ನಿರ್ಮಿಸಲು ವಾಣಿಜ್ಯ ಮಂಡಳಿಗೆ ಮನವಿಯನ್ನು ಸಲ್ಲಿಸಿರುತ್ತಾರೆ. ಉರಿಗೌಡ, ನಂಜೇಗೌಡ ಎನ್ನುವ ಇಬ್ಬರೂ ವ್ಯಕ್ತಿಗಳ ಮೇಲೆ ಯಾವುದೇ ತರಹದ ಮಾಹಿತಿ ಸರ್ಕಾರದ ದಾಖಲೆಗಳಲ್ಲಿ, ಇತಿಹಾಸದ ದಾಖಲೆಗಳಲ್ಲಿ ಹಾಗೂ ಸ್ಥಳೀಯ ಆಡಳಿತದಲ್ಲಿ ಸಿಗುವ ಕರಡು ಪ್ರತಿಗಳಲ್ಲಿ ಇಲ್ಲ. ಪಟ್ಟಭದ್ರ ಹಿತಾಸಕ್ತಿಗಳು ಒಕ್ಕಲಿಗ ಸಮುದಾಯವನ್ನು ಅಪಮಾನ ಮಾಡಲು ಹಾಗೂ ಮುಸ್ಲಿಂ ಹಾಗೂ ಒಕ್ಕಲಿಗರ ನಡುವೆ ಧರ್ಮ ಸಂಘರ್ಷವನ್ನು ತಂದು ತಮ್ಮ ರಾಜಕೀಯ ಹಿತಾಸಕ್ತಿಗೆ ಪ್ರಯತ್ನಿಸುತ್ತಿದ್ದಾರೆ. ಆದ್ದರಿಂದ ತಾವುಗಳು, ದಯಮಾಡಿ ಇದಕ್ಕೆ ಅವಕಾಶ ನೀಡದೆ, ಸಾಮಾಜಿಕ ಸಾಮರಸ್ಯವನ್ನು ಕಾಪಾಡಲು ಸಹಕರಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ. ಒಕ್ಕಲಿಗ ಯುವಬ್ರಿಗೇಡ್ ಸಮುದಾಯದ ಯುವಕರಿಗೆ ಉದ್ಯೋಗ, ಶಿಕ್ಷಣವನ್ನು ನೀಡಲು ಸ್ಥಾಪಿತವಾದ ಸಂಸ್ಥೆಯಾಗಿದ್ದು, ಸುಮಾರು 13 ರಾಷ್ಟ್ರಗಳಲ್ಲಿ ಸಮುದಾಯ ಸಂಘಟಿಸುವುದರ ಜೊತೆಗೆ ಜನಾಂಗದ ಯುವಕರಿಗೆ ಅನ್ನ, ಶಿಕ್ಷಣ, ಉದ್ಯೋಗ ನೀಡುವುದರ ಮೂಲಕ ಕಾರ್ಯನಿರ್ವಹಿಸುತ್ತಿದೆ’ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಸಚಿವ, ನಿರ್ಮಾಪಕ ಮುನಿರತ್ನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ (Film Chamber) ಟೈಟಲ್ ಗಾಗಿ ಸಲ್ಲಿಸಿದ್ದ ಅರ್ಜಿಯನ್ನ ವಾಣಿಜ್ಯ ಮಂಡಳಿ ಮಾನ್ಯ ಮಾಡಿದೆ. ಈ ಪತ್ರವನ್ನಿಟ್ಟುಕೊಂಡು ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

suddiyaana