ಲೀಲಮ್ಮನಿಗೆ ಕಲಾವಿದರಿಂದ ಅಂತಿಮ ನಮನ – ಗಣ್ಯರಿಂದ ವಿನೋದ್​ ರಾಜ್‌ಗೆ ಸಾಂತ್ವನ

ಲೀಲಮ್ಮನಿಗೆ ಕಲಾವಿದರಿಂದ ಅಂತಿಮ ನಮನ – ಗಣ್ಯರಿಂದ ವಿನೋದ್​ ರಾಜ್‌ಗೆ ಸಾಂತ್ವನ

ಕನ್ನಡ ಚಿತ್ರರಂಗದ ಖ್ಯಾತ ನಟಿ ಲೀಲಾವತಿ ವಿಧಿವಶರಾಗಿದ್ದಾರೆ. ಹಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಲೀಲಾವತಿ ಶುಕ್ರವಾರ ನಿಧನರಾದ್ದಾರೆ. ಬೆಂಗಳೂರಿನ ನೆಲಮಂಗಲದ ಡಾ.ಬಿ.ಆರ್. ಅಂಬೇಡ್ಕ‌ರ್ ಮೈದಾನದಲ್ಲಿ ಲೀಲಾವತಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಇಡಲಾಗಿದ್ದು ಸ್ಯಾಂಡಲ್‌ವುಡ್‌ನ ನಟ, ನಟಿಯರು ಹಾಗೂ ಗಣ್ಯರು ಅಂತಿಮ ದರ್ಶನ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ರವೀಂದ್ರ ಕಲಾಕ್ಷೇತ್ರದಲ್ಲಿ ನಟಿ ಲೀಲಾವತಿ ಪಾರ್ಥಿವ ಶರೀರ ಅಂತಿಮ ದರ್ಶನಕ್ಕೆ ವ್ಯವಸ್ಥೆ – ಮಧ್ಯಾಹ್ನದ ಬಳಿಕ ಅಂತ್ಯಕ್ರಿಯೆ

ಸ್ಯಾಂಡಲ್‌ವುಡ್‌ ನಟ ನಟ ಉಪೇಂದ್ರ  ಅವರು ನಟಿ ಲೀಲಾವತಿ ಅವರಿಗೆ ಅಂತಿಮ ನಮನ ಸಲ್ಲಿಸಿದರು. ಅಂತಿಮ ದರ್ಶನ ಪಡೆದ ಬಳಿಕ ವಿನೋದ್ ರಾಜ್‌ಗೆ ಸಾಂತ್ವನ ಹೇಳಿದರು. ನಟ ಶಿವರಾಜ್‌ ಕುಮಾರ್‌ ಕೂಡ ಲೀಲಾವತಿ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಶುಕ್ರವಾರ ಸಂಜೆಯೇ ಆಸ್ಪತ್ರೆಗೆ ಭೇಟಿ ನೀಡಿ ಲೀಲಾವತಿ ಅವರ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದ್ದಾರೆ.  ನಟ ಜಗ್ಗೇಶ್‌ ಅವರು ಕೂಡ ಲೀಲಾವತಿ ಅವರ ಅಂತಿಮ ದರ್ಶನ ಪಡೆದರು. “ಲೀಲಾವತಿ ಅಮ್ಮನವರ ಅಂತಿಮ ದರ್ಶನ ಪಡೆದೆ. ಅವರ ಪುತ್ರ ವಿನೋದ್ ರಾಜ್ ಸಿನಿಮಾದಲ್ಲಿ ಖಳನಟ ಪಾತ್ರ ಮಾಡಿದಾಗ ಜಗ್ಗೇಶ್ ನೀನು ಬೇಗ ನಾಯಕ ನಟನಾಗಿ ಅಭಿನಯಿಸಿ ಎಂದು ಹರಸಿದ ಅವರ ಮಾತುಗಳು ನೆನಪಾಯಿತು. ನಮ್ಮ ಹಿರಿಯರು ನಮ್ಮ ಆಸ್ತಿಯಾಗಿದ್ದಾರೆ” ಎಂದು ಹೇಳಿದರು. ನಟಿ ಗಿರಿಜಾ ಲೊಕೇಶ್‌, ನಟ ಕುಮಾ‌ರ್ ಗೋವಿಂದ, ಸಾಹಿತಿ ದೊಡ್ಡರಂಗೇಗೌಡ ಸೇರಿದಂತೆ ಹಲವು ಸಿನಿಮಾ ಗಣ್ಯರು ಲೀಲಾವತಿ ಅವರ ಅಂತಿಮ ದರ್ಶನ ಪಡೆಯುತ್ತಿದ್ದಾರೆ.

ಇನ್ನು ಹಿರಿಯ ನಟಿ ಲೀಲಾವತಿ ನಿಧನದ ಹಿನ್ನೆಲೆ ಕಿಚ್ಚ ಸುದೀಪ್‌ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. “ಮೇರು ನಟಿ ಲೀಲಾವತಿ ಅವರು ಇಹಲೋಕ ತ್ಯಜಿಸಿದ್ದಾರೆ. ಬಹು ಭಾಷಾ ತಾರೆಯಾಗಿದ್ದ ಅವರ ಕಲಾಸೇವೆ ಅನನ್ಯ. ಲೀಲಾವತಿ ಅಮ್ಮನ ನಿಧನಕ್ಕೆ ಕಂಬನಿ ಮಿಡಿಯುತ್ತೇನೆ. ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ” ಎಂದು ಕಿಚ್ಚ ಸುದೀಪ್‌ ಸಾಮಾಜಿಕ ಜಾಲತಾಣವಾದ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಲೀಲಾವತಿ ಅಮ್ಮನವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಮತ್ತು ವಿನೋದ್ ರಾಜ್ ಅವರಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥನೆ ಸಲ್ಲಿಸುತ್ತೇನೆ” ಎಂದು ನಿರ್ದೇಶಕ ಪ್ರೇಮ್ ಸಂತಾಪ ಸೂಚಿಸಿದ್ದಾರೆ. ಇದೇ ರೀತಿ ಹಲವು ನಟ, ನಟಿಯರು ಸಾಮಾಜಿಕ ಜಾಲತಾಣಗಳ ಮೂಲಕ ಹಿರಿಯ ನಟಿ ಲೀಲಾವತಿ ಅವರಿಗೆ ಸಂತಾಪ ಸೂಚಿಸಿದ್ದಾರೆ.

Shwetha M