ಹಾವು ಮನೆ ಸೇರಿತು ಅಂತಾ ಹೊಗೆ ಹಾಕಿದ್ರು.. – ನಾಗಪ್ಪನ ಶಾಪಕ್ಕೆ ಇಡೀ ಮನೆಯೇ ಭಸ್ಮ!

ಹಾವು ಮನೆ ಸೇರಿತು ಅಂತಾ ಹೊಗೆ ಹಾಕಿದ್ರು.. – ನಾಗಪ್ಪನ ಶಾಪಕ್ಕೆ ಇಡೀ ಮನೆಯೇ ಭಸ್ಮ!

ಮನೆಯ ಸುತ್ತಮುತ್ತ ಹಾವುಗಳು ಓಡಾಡುವುದು ಸಾಮಾನ್ಯ. ಆಹಾರ ಅರಸುತ್ತಾ ಜನವಸತಿ ಪ್ರದೇಶದಲ್ಲಿ ಓಡಾಡುತ್ತವೆ. ಈ ವೇಳೆ ಮನುಷ್ಯರನ್ನು ಕಂಡಾಗ ಸಂದಿ- ಗೊಂದಿಗಳಲ್ಲಿ ಸೇರಿಕೊಳ್ಳುತ್ತವೆ. ಇಲ್ಲೊಂದು ಹಾವು ಮನೆ ಬಳಿ ಬಂದಿದೆ. ಮನುಷ್ಯರನ್ನು ಕಂಡ ಕೂಡಲೇ ಮನೆಯೊಳಗೆ ಹೋಗಿ ಸೇರಿಕೊಂಡಿದೆ. ಮನೆ ಮಂದಿ ಹಾವನ್ನು ಓಡಿಸಲು ಹೋಗಿ ಮನೆಯನ್ನೇ ಕಳೆದುಕೊಳ್ಳುವಂತೆ ಆಗಿದೆ.

ಏನಿದು ಘಟನೆ?

ನಾಗರ ಹಾವೊಂದು ಮನೆಯೊಳಗೆ ಸೇರಿಕೊಂಡಿದೆ. ಹಾವನ್ನು ಓಡಿಸುವ ಸಲುವಾಗಿ ಮನೆ ಮಂದಿ ಹೊಗೆ ಹಾಕಿದ್ದಾರೆ. ಆದರೆ ಈ ಹೊಗೆ ಇಡೀ ಮನೆಯನ್ನೇ ಭಸ್ಮವಾಗಿಸಿದೆ. ಈ ಪ್ರಕರಣವೊಂದು ಉತ್ತರಪ್ರದೇಶದ ಬಂದ ಎಂಬಲ್ಲಿ  ಭಾನುವಾರ ನಡೆದಿದೆ.

ಭಾನುವಾರ ಬೆಳಗ್ಗೆ ಕುಟುಂಬದ ಸದಸ್ಯರೊಬ್ಬರು ಮನೆಯೊಳಗೆ ಹಾವು ಸೇರಿಕೊಂಡಿದ್ದನ್ನು ಗಮನಿಸಿದ್ದಾರೆ. ಕೂಡಲೇ ಮನೆ ಮಂದಿಗೆ ಅವರು ತಿಳಿಸಿದ್ದಾರೆ. ಹೀಗಾಗಿ ಮನೆಮಂದಿ ಎಲ್ಲರೂ ಸೇರಿ ಹಾವನ್ನು ಓಡಿಸುವ ಪ್ರಯತ್ನ ಮಾಡಿದ್ದಾರೆ. ಏನೇ ಮಾಡಿದರೂ ಹಾವು ಮನೆಯಿಂದ ಹೊರ ಹೋಗಲೇ ಇಲ್ಲ. ಹೀಗಾಗಿ ಹಸುವಿನ ಸೆಗಣಿ (ಭರಣಿ) ಮೂಲಕ ಹೊಗೆ ಹಾಕಿದ್ದಾರೆ. ಈ ಹೊಗೆಯಿಂದ ಬೆಂಕಿ ಮನೆಪೂರ್ತಿ ಹರಡಿಕೊಂಡಿದೆ. ಇಡೀ ಮನೆಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಮನೆಯಲ್ಲಿದ್ದ ನಗದು, ಚಿನ್ನಾಭರಣ ಹಾಗೂ ಹಲವಾರು ಕ್ವಿಂಟಾಲ್ ಇದ್ದ ಧಾನ್ಯಗಳು ಭಸ್ಮವಾಗಿದೆ.

ಇದನ್ನೂ ಓದಿ: ಕೇರಳದ ಬಾಂಬ್‌ ಸ್ಪೋಟ ಪ್ರಕರಣ – ಸಾವಿನ ಸಂಖ್ಯೆ 3 ಕ್ಕೆ ಏರಿಕೆ, ಸರ್ವಪಕ್ಷ ಸಭೆ ಕರೆದ ಸಿಎಂ ಪಿಣರಾಯಿ ವಿಜಯನ್

ದೆಹಲಿಯಲ್ಲಿ ಕೂಲಿ ಕೆಲಸ ಮಾಡುತ್ತಿರುವ ರಾಜ್‍ಕುಮಾರ್, ಪತ್ನಿ ಮತ್ತು ಐವರು ಮಕ್ಕಳೊಂದಿಗೆ ಮನೆಯಲ್ಲಿ ವಾಸವಾಗಿದ್ದರು. ಕುಟುಂಬದ ಜೀವಮಾನದ ಉಳಿತಾಯ, ಆಸ್ತಿ ಸೇರಿದಂತೆ ಲಕ್ಷಗಟ್ಟಲೆ ಹಣ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಪೊಲೀಸರು ಮತ್ತು ಅಗ್ನಿಶಾಮಕ ದಳದ ತಂಡದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಕಂದಾಯ ಇಲಾಖೆಗೂ ಮಾಹಿತಿ ನೀಡಲಾಗಿದ್ದು, ಸದ್ಯ ಹಾನಿಯ ಪ್ರಮಾಣವನ್ನು ಅಂದಾಜಿಸಲಾಗುತ್ತಿದೆ.

ಹಾವನ್ನು ಓಡಿಸುವ ಸಲುವಾಗಿ ಮನೆಯೊಳಗೆ ಹೊಗೆ ಹಾಕಿರುವುದಾಗಿ ಕುಟುಂಬದವರು ತಿಳಿಸಿದ್ದು, ಈ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Shwetha M