ಯಕ್ಷಗಾನದ ಬಗ್ಗೆ ಯುವಪೀಳಿಗೆಯಲ್ಲಿ ಕಾಣದ ಆಸಕ್ತಿ – ದೈವಕಲೆ ಉಳಿವಿಗೆ ಬೇಕಿದೆ ಪ್ರೋತ್ಸಾಹ

ಯಕ್ಷಗಾನದ ಬಗ್ಗೆ ಯುವಪೀಳಿಗೆಯಲ್ಲಿ ಕಾಣದ ಆಸಕ್ತಿ – ದೈವಕಲೆ ಉಳಿವಿಗೆ ಬೇಕಿದೆ ಪ್ರೋತ್ಸಾಹ

ಯಕ್ಷಗಾನ. ನೃತ್ಯ, ಹಾಡುಗಾರಿಕೆ, ಮಾತುಗಾರಿಕೆ, ವೇಷ-ಭೂಷಣಗಳನ್ನೊಳಗೊಂಡ ಒಂದು ಸ್ವತಂತ್ರವಾದ ಶಾಸ್ತ್ರೀಯ ಕಲೆ. ಕರ್ನಾಟಕದ ಸಾಂಪ್ರದಾಯಿಕ ಕಲಾ ಪ್ರಕಾರಗಳಲ್ಲಿ ಅತ್ಯಂತ ಪ್ರಮುಖವಾದದ್ದು. ಹೀಗಾಗೇ ಯಕ್ಷಗಾನ ಅನ್ನೋ ಪದ ಕೇಳಿದ್ರೆ ಕರಾವಳಿ ಭಾಗದ ನಿವಾಸಿಗಳಲ್ಲಿ ಮೈ ರೋಮಾಂಚನವಾಗುತ್ತದೆ. ವಿಭಿನ್ನ ವೇಷಭೂಷಣ, ಲಯಬದ್ಧವಾದ ಸಂಗೀತ, ನೃತ್ಯ, ಸಂಭಾಷಣೆಗಳ ಸಮ್ಮಿಲನವಾದ ಯಕ್ಷಗಾನವನ್ನು ನೋಡುವುದು ಒಂದು ವಿಶಿಷ್ಟ ಅನುಭವ.

ಯಕ್ಷಗಾನದಲ್ಲಿ ಬಳಸುವ ವೇಷಭೂಷಣಗಳು ಬಹಳ ವಿಶಿಷ್ಟ ಮತ್ತು ವಿಸ್ತಾರವಾದವು. ದೊಡ್ಡ ಗಾತ್ರದ ಕಿರೀಟ, ಮುಖದ ಮೇಲೆ, ಸುತ್ತಮುತ್ತ ಹಲವು ಬಣ್ಣಗಳು, ಕೈ ಕಾಲುಗಳಿಗೆ ಹಲವು ಪರಿಕರಗಳು, ಕಾಲಿಗೆ ಗೆಜ್ಜೆ, ಸಂದರ್ಭಕ್ಕೆ ತಕ್ಕಂತೆ ಕತ್ತಿ, ಗದೆ, ಗುರಾಣಿ ಮತ್ತಿತರ ಆಯುಧಗಳು ಯಕ್ಷಗಾನ ಕಲಾವಿದರ ವೇಷ ಭೂಷಣಗಳ ಭಾಗವಾಗಿರುತ್ತದೆ. ಭಾರವಾದ ವೇಷಭೂಷಣ ಧರಿಸಿ ಹಲವಾರು ಗಂಟೆಗಳ ಕಾಲ  ನಟನೆ  ನೃತ್ಯ ಕೌಶಲ್ಯಗಳನ್ನು ಪ್ರದರ್ಶಿಸಲು ಯಕ್ಷಗಾನ ಕಲಾವಿದರಿಗೆ ಸದೃಢ ಮೈಕಟ್ಟು ಬೇಕಾಗುತ್ತದೆ. ಹೀಗೆ ಯಕ್ಷಗಾನ ಎಂದರೆ ಬರೀ ಕಲೆಯಲ್ಲ. ಅದೊಂದು ನಂಬಿಕೆ, ಆಚಾರ, ಸಂಪ್ರದಾಯ, ಅಸ್ತಿತ್ವ. ಎಲ್ಲಕ್ಕಿಂತ ಹೆಚ್ಚಾಗಿ ದೈವದ ಆಚರಣೆ. ತಲತಲಾಂತಗಳಿಂದ ನಡೆದುಕೊಂಡು ಬಂದಿರುವ ಇದೇ ಆಚರಣೆ ಬಗ್ಗೆ ಇತ್ತೀಚಿನ ಪೀಳಿಗೆಯಲ್ಲಿ ಆಸಕ್ತಿ ಕಡಿಮೆಯಾದಂತಾಗಿದೆ. ಸರ್ಕಾರದಿಂದಲೂ ಹೇಳಿಕೊಳ್ಳುವಷ್ಟರ ಮಟ್ಟಿಗೆ ಪ್ರೋತ್ಸಾಹವೂ ಸಿಗುತ್ತಿಲ್ಲ. ಹೀಗೆ ನಮ್ಮ ಸಂಸ್ಕೃತಿಯ ಧಾರ್ಮಿಕ ಇತಿಹಾಸಗಳು ಉಳಿಯಬೇಕಾದರೆ ಯಕ್ಷಗಾನದಂತಹ ಕಲೆಗಳ ಪಾತ್ರ ಅತೀ ಮಹತ್ವದ್ದಾಗಿದೆ. ಇಂದಿನ ಕಾಲಘಟ್ಟದಲ್ಲಿ ಯುವ ಸಮುದಾಯವು ಯಕ್ಷಗಾನ ಕಲೆಯತ್ತ ಹೆಚ್ಚಿನ ಆಸಕ್ತಿ ಮತ್ತು ಅಭಿರುಚಿಯನ್ನು ಹೊಂದದೇ ಇರುವುದರಿಂದ ಅವರಲ್ಲಿ ಸಂಸ್ಕಾರಗಳ ಕೊರತೆ ಎದ್ದು ಕಾಣುವಂತಾಗಿದೆ. ಯಕ್ಷಗಾನ ಕಲೆಯು ನಮ್ಮ ಪುರಾಣದಲ್ಲಿ ನಡೆದ ಘಟನೆಯನ್ನು ಮೆಲುಕು ಹಾಕುವುದರ ಜತೆಗೆ ಸಂಸ್ಕೃತಿ, ಸಂಸ್ಕಾರ ಹಾಗೂ ಸಮಾಜದಲ್ಲಿ ಸಜ್ಜನಿಕೆಯ ನಡವಳಿಕೆಗಳಿಗೆ ಪ್ರೇರಣಾದಾಯಕವಾಗಿದೆ.

ಇದನ್ನೂ ಓದಿ : ಮಳೆ ಬಾರದೇ ಇದ್ದಿದ್ದಕ್ಕೆ ದೇವರಿಗೆ ಜಲ ದಿಗ್ಬಂಧನ! – ಈ ಗ್ರಾಮದಲ್ಲಿ 7 ದಿನ ದೇವರಿಗೆ ಪೂಜೆ ಇಲ್ಲ 

ತಾಳಬದ್ಧವಾದ ನಾಟ್ಯದಿಂದ, ಪ್ರಾಸ ಬದ್ಧವಾದ ಸಂಗೀತ ಗಾಯನದಿಂದ ಪಾರಂಪರಿಕವಾಗಿ ಯಕ್ಷಗಾನ ಕಲೆಯು ಬೆಳೆದು ಬಂದಿದೆ. ಪಾರಮಾರ್ಥಿಕ ಹಾಗೂ ಆಧ್ಯಾ ತ್ಮಿಕವಾದ ಒಂದು ದೈವಿಕ ಶಕ್ತಿಯು ಯಕ್ಷಗಾನ ಕಲೆಯಲ್ಲಿ ಅಂತರ್ಗತವಾಗಿದೆ. ಗತಕಾಲದಲ್ಲಿ ನಡೆದಂತಹ ಮಹಾಭಾರತ, ರಾಮಾಯಾಣ ಹಾಗೂ ಅನೇಕ ಪುಣ್ಯ ಕಥೆಗಳನ್ನು ನಾವು ಯಕ್ಷಗಾನದ ಮೂಲಕ ಕಣ್ತುಂಬಿಕೊಂಡು ಧಾರ್ಮಿಕ ಭಾವನೆಗಳಿಂದ ಕೃತಾರ್ಥರಾಗುತ್ತೇವೆ. ಯಕ್ಷಗಾನವನ್ನು ನಾವು ನಿರಂತರ ವಾಗಿ ಪ್ರೋತ್ಸಾಹಿಸಿದ್ದೇ ಆದರೆ ಈ ಕಲೆಯನ್ನು ಶಾಶ್ವತವಾಗಿ ಉಳಿಸಬಹುದು. ಯಕ್ಷಗಾನ ಕಲೆಗೆ ನಾವು ಪ್ರೋತ್ಸಾಹದ ಮೂಲಕ ನೆಲೆಯನ್ನು ಕೊಟ್ಟು ಅಮೃತ ಶಿಲೆಯಾಗಿ ಉಳಿಸಿದರೆ ಧರ್ಮದ ಸಾಮ್ರಾಜ್ಯವನ್ನು ನಮ್ಮ ಆಧುನಿಕತೆಯಲ್ಲಿ ಕಾಣಲು ಸಾಧ್ಯ. ಕಲಾಕ್ಷೇತ್ರದಲ್ಲಿ ಒಂದು ವ್ಯಕ್ತಿಯ ಸೃಜನಶೀಲ ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ಕ್ರಿಯಾಶೀಲ ಮನೋಭಾವನೆಯಿಂದ ಕಲೆಗೆ ವಿಶೇಷ ಆಸಕ್ತಿಯನ್ನು ಕೊಟ್ಟಲ್ಲಿ ಕಲಾ ಸರಸ್ವತಿಯು ಬಹಳ ಬೇಗನೆ ಒಲಿಯುತ್ತಾಳೆ ಎಂಬ ನಂಬಿಕೆಯಲ್ಲಿ ಎರಡು ಮಾತಿಲ್ಲ. ಶ್ರದ್ಧಾಪೂರ್ವಕ ಭಕ್ತಿ ಮಾರ್ಗದಿಂದ ಯಕ್ಷಗಾನ ಸೇವೆಯ ಮುಖೇನ ಭಗವಂತನ ಸಾಮೀಪ್ಯಕ್ಕೆ ಹೋಗಬಹುದು.

ಯಕ್ಷಗಾನ, ನಾಟಕ, ಭಜನೆ, ಪೂಜೆ-ಪುನಸ್ಕಾರಗಳು, ಯಜ್ಞ-ಯಾಗಾದಿಗಳು ಭಗವಂತನ ಸಾನಿಧ್ಯವನ್ನು ಬೇಗನೆ ತಲುಪಿ ಭಕ್ತರಿಗೆ ಸಾಕ್ಷಾತ್ಕಾರದ ಮೂಲಕ ಆರೋಗ್ಯಪೂರ್ಣ ಜೀವನಕ್ಕೆ ಪ್ರೇರಣೆಯಾಗುತ್ತದೆ. ಆಂತರಿಕವಾಗಿ ಧಾರ್ಮಿಕ ಪ್ರಜ್ಞೆಯುಂಟಾಗಿ ಜೀವನದಲ್ಲಿ ಧರ್ಮವನ್ನು ಪರಿಪಾಲಿಸಲು ಪರೋಕ್ಷವಾದ ಸಂದೇಶವು ನಮ್ಮಲ್ಲಿ ಜಾಗೃತಿಯನ್ನು ಉಂಟು ಮಾಡುತ್ತದೆ.

ಕಲಾಭಿಮಾನಿಗಳಾಗಿ ಕಲಾವಿದರಿಗೆ ಪ್ರೋತ್ಸಾಹ ನೀಡುವ ಮೂಲಕ ಕಲಾ ಕ್ಷೇತ್ರಕ್ಕೆ ನಾವು ಶಾಶ್ವತವಾದ ಕೊಡುಗೆಯನ್ನು ಕೊಟ್ಟಲ್ಲಿ ಸಮಾಜದಲ್ಲಿ ಧರ್ಮ ಜಾಗೃತಿ ಉಂಟಾಗಿ ಒಂದು ಸುವ್ಯಸ್ಥಿತ ನೆಮ್ಮದಿಯ ಮಾನವ ಜೀವನಕ್ಕೆ ನಾಂದಿಯಾಗಬಹುದು. ಒಬ್ಬ ಕಲಾವಿದನನ್ನು ಸಮಾಜವು ಬೇಗನೆ ಗುರುತಿಸಿ ಗೌರವವನ್ನು ಕೊಡುವಷ್ಟರ ಮಟ್ಟಿಗೆ ಕಲೆಗೆ ತನ್ನದೇ ದೈವಿಕವಾದ ಶಕ್ತಿಯು ಇದೆ. ತಮ್ಮದೇ ಆದ ಆಕರ್ಷಕ ಕಲಾ ಶೈಲಿಯಿಂದ ಅನೇಕ ಕಲಾವಿದರು, ಕಲಾಭಿಮಾನಿ ಬಳಗದ ಸ್ಮತಿ ಪಟಲದ ನೆನಪಿನಂಗಳದಲ್ಲಿ ಉಳಿದಿರುತ್ತಾರೆ. ಕನಿಷ್ಠ ಶಿಕ್ಷಣ ಪಡೆದವರೂ ಕಲಾಕ್ಷೇತ್ರದಲ್ಲಿ ಮೇರು ಕಲಾವಿದರಾಗಿ ಬೆಳೆದು ಇಂದಿನ ಯುವ ಸಮುದಾಯಕ್ಕೆ ಪ್ರೇರಕರಾಗಿದ್ದಾರೆ.

ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡುತ್ತ ಬಂದಿರುವ ಯಕ್ಷಗಾನ ಕಲೆ ಮತ್ತು ಕಲಾವಿದರಿಗೆ ಸರಕಾರವು ನಿರೀಕ್ಷಿತ ಪ್ರಮಾಣದಲ್ಲಿ ಪ್ರೋತ್ಸಾಹ ನೀಡುತ್ತಿಲ್ಲ. ಕಲಾವಿದರಿಗೆ ಜೀವನ ನಿರ್ವಹಣೆಗೆ ಬೇಕಾದ ಸೌಲಭ್ಯಗಳು ಮತ್ತು ಆವಶ್ಯಕತೆಗಳಿಗೆ ಸ್ಪಂದಿಸದಿರುವುದು ಬಹಳ ಬೇಸರದ ಸಂಗತಿ. ಕಳೆದ ಹಲವಾರು ವರ್ಷಗಳಿಂದ ಸರಕಾರವು ಕಲಾಕ್ಷೇತ್ರವನ್ನು ಅವಗಣಿಸುತ್ತಲೇ ಬಂದಿದೆ. ಅನೇಕ ಪ್ರಸಿದ್ಧ ಮೇಳಗಳು ಆರ್ಥಿಕವಾಗಿ ಒಳ್ಳೆಯ ರೀತಿಯಲ್ಲಿ ನಡೆಯುತ್ತಿದ್ದರೂ ಕಲಾವಿದರಿಗೆ ಸಮರ್ಪಕವಾದ ಸೌಲಭ್ಯಗಳು ಸಿಗುತ್ತಿಲ್ಲ. ಯಕ್ಷಗಾನ ಪರಂಪರೆ ಉಳಿಯಬೇಕಾದರೆ ಸರಕಾರವು ಈ ಬಗ್ಗೆ ವಿಶೇಷ ಕಾಳಜಿಯನ್ನು ತೋರಬೇಕಿದೆ. ಬಡ ಕಲಾವಿದರ ಬದುಕಿಗೆ ಗುಣಾತ್ಮಕವಾಗಿ ಸ್ಪಂದಿಸಬೇಕು. ಮುಖ್ಯವಾಗಿ ನಿವೃತ್ತಿ ವೇತನ, ಗೃಹ ಸಾಲ, ಮಕ್ಕಳ ಶಿಕ್ಷಣ ಮೊದಲಾದ ಸೌಲಭ್ಯಗಳನ್ನು ಕಾರ್ಮಿಕ ಕಾನೂನು ನಿಬಂಧನೆಗಳಿಗೆ ಒಳಪಟ್ಟು ಜಾರಿ ಮಾಡಬೇಕು. ಸಾತ್ವಿಕ ಬದುಕಿಗೆ ಸಾರ್ಥಕತೆಯನ್ನು ಕೊಡುವ ಯಕ್ಷಗಾನವನ್ನು ಉಳಿಸಿ, ಬೆಳೆಸಿ ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕಿದೆ.

suddiyaana