ಡಿಜಿಟಲ್ ಪತ್ರಕರ್ತರಿಗೂ ಕೇಂದ್ರದಿಂದ ಶೀಘ್ರದಲ್ಲೇ ಮಾನ್ಯತೆ

ಡಿಜಿಟಲ್ ಪತ್ರಕರ್ತರಿಗೂ ಕೇಂದ್ರದಿಂದ ಶೀಘ್ರದಲ್ಲೇ ಮಾನ್ಯತೆ

ನವದೆಹಲಿ: ದೇಶದಲ್ಲಿ ಡಿಜಿಟಲ್ ಮಾಧ್ಯಮಗಳ ನೊಂದಣಿ, ಕಾರ್ಯನಿರ್ವಹಣೆ ಹಾಗೂ ನಿಯಂತ್ರಣದ ಬಗ್ಗೆ ಹೊಸ ಕಾನೂನನ್ನು ಕೇಂದ್ರ ಸರ್ಕಾರ ಶೀಘ್ರದಲ್ಲಿ ಜಾರಿಗೆ ತರಲಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.

ವಿಶೇಷವಾಗಿ ಡಿಜಿಟಲ್ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರ್ಹ ಪತ್ರಕರ್ತರಿಗೆ ಕೇಂದ್ರ ಸರ್ಕಾರದಿಂದ ಮಾನ್ಯತೆ ನೀಡುವ ಬಗ್ಗೆ ಚಿಂತಿಸಲಾಗುತ್ತಿದೆ. ಕೋವಿಡ್ ನಿಂದ ಮೃತಪಟ್ಟ ಎಲ್ಲಾ ಪತ್ರಕರ್ತರಿಗೆ ಪರಿಹಾರ ನೀಡುವ ಬಗ್ಗೆ ಚರ್ಚಿಸಲಾಗುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಭಾರತದಲ್ಲಿ ಮೊದಲ ಬಾರಿಗೆ ಮನಿ ಸ್ಫೈಡರ್ ಪತ್ತೆ- ಅದೃಷ್ಟ ತರುತ್ತಾ ಈ ಜೇಡ

ಈ ಹಿಂದೆ “ಸುದ್ದಿಗಳ ಏಕಮುಖ ಸಂವಹನ” ಇತ್ತು. ಆದರೆ ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ಮಾಧ್ಯಮಗಳ ಅಭಿವೃದ್ಧಿಯೊಂದಿಗೆ, ಸುದ್ದಿಗಳ ಸಂವಹನವು ಬಹು ಆಯಾಮವಾಗಿದೆ. ಈಗ ಒಂದು ಹಳ್ಳಿಯ ಸಣ್ಣ ಸುದ್ದಿಯೂ ಡಿಜಿಟಲ್ ಮಾಧ್ಯಮದ ಮೂಲಕ ರಾಷ್ಟ್ರೀಯ ವೇದಿಕೆಗೆ ತಲುಪುತ್ತದೆ. ಸದ್ಯ ದೇಶದಲ್ಲಿ ಡಿಜಿಟಲ್ ಮಾಧ್ಯಮಕ್ಕೆ ಉತ್ತಮ ಭವಿಷ್ಯವಿದೆ ಹಾಗೂ ಸವಾಲುಗಳು ಇವೆ. ಇವೆರಡನ್ನು ಸರಿದೂಗಿಸಲು ಹೊಸ ಕಾನೂನಿನ ಅವಶ್ಯಕತೆ ಇದೆ ಎಂದು ಠಾಕೂರ್ ತಿಳಿಸಿದ್ದಾರೆ.

ಇನ್ನು ಮುಂದೆ ಪತ್ರಿಕೆಗಳ ನೊಂದಣಿ ಪ್ರಕ್ರಿಯೆಯನ್ನು ಸರಳಗೊಳಿಸಲಾಗುವುದು. ಕೇಂದ್ರ ಸರ್ಕಾರವು ಪ್ರೆಸ್ ಮತ್ತು ರಿಜಿಸ್ಟ್ರೇಶನ್ ಕಾಯ್ದೆ 1867ರ ಬದಲಿಗೆ ಹೊಸ ಕಾನೂನನ್ನು ಶೀಘ್ರದಲ್ಲೇ ಜಾರಿಗೆ ತರಲಿದೆ. ಒಂದು ವಾರದಲ್ಲಿ ನೋಂದಣಿಗೆ ಅವಕಾಶ ನೀಡಲಾಗುವುದು. ಇದು ಸದ್ಯ ನಾಲ್ಕು ತಿಂಗಳು ಕಾಲವಕಾಶ ತೆಗೆದುಕೊಳ್ಳುತ್ತದೆ. ಮುದ್ರಣ, ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮಕ್ಕೆ ಸಂಬಂಧಿಸಿದ ನೀತಿ ನಿರೂಪಣೆಗಳನ್ನು ಒಂದೇ ಸೂರಿನಡಿ ತರಲಾಗುವುದು ಎಂದು ಹೇಳಿದರು.

ಪತ್ರಿಕೆಗಳು ಸರಿಯಾದ ಸಮಯದಲ್ಲಿ ಸಾಮಾನ್ಯ ಜನರ ಮುಂದೆ ನಿಖರ ಸುದ್ದಿಯನ್ನು ಬಿತ್ತರಿಸಬೇಕು. ಸರಕಾರದ ಲೋಪದೋಷಗಳ ಜೊತೆಗೆ ಜನಕಲ್ಯಾಣ ಯೋಜನೆ, ಸರಕಾರದ ನೀತಿಗಳ ಸುದ್ದಿ ಜನಸಾಮಾನ್ಯರಿಗೆ ತಲುಪುವಂತಾಗಬೇಕು ಎಂದು ಹೇಳಿದರು. .

suddiyaana