ಅದೃಷ್ಟ ಬರುತ್ತದೆಂದು ನಂಬಿ ನರಿ ಸಾಕಿದ – ಬೆಳಗೆದ್ದು ಮುಖ ನೋಡ್ತಿದ್ದವನು ಅದೇ ನರಿಯಿಂದ ಜೈಲುಪಾಲಾದ!

ಅದೃಷ್ಟ ಬರುತ್ತದೆಂದು ನಂಬಿ ನರಿ ಸಾಕಿದ – ಬೆಳಗೆದ್ದು ಮುಖ ನೋಡ್ತಿದ್ದವನು ಅದೇ ನರಿಯಿಂದ ಜೈಲುಪಾಲಾದ!

ಜನರಿಗೆ ಶ್ರಮಕ್ಕಿಂತ ಅದೃಷ್ಟದ ಮೇಲೆಯೇ ನಂಬಿಕೆ ಜಾಸ್ತಿ. ಅದ್ಯಾವ ಮಟ್ಟಿಗೆ ಅಂದ್ರೆ ಕೆಲವರಿಗೆ ಬೆಳಗ್ಗೆ ಹೊತ್ತು ಎದ್ದಾಗ ಕೆಲವನ್ನ ನೋಡಿದ್ರೆ ಒಳಿತಾಗುತ್ತೆ, ಇನ್ನೂ ಕೆಲವನ್ನ ಕಂಡ್ರೆ ಕೆಡುಕಾಗುತ್ತೆ ಎಂದು ನಂಬುತ್ತಾರೆ. ಇನ್ನೂ ಹಲವೆಡೆ ‘ನನ್ನನ್ನ ನೋಡು ಯೋಗ ಬರುತ್ತದೆ’ ಎನ್ನುವ ಫೋಟೋಗಳನ್ನ ಮನೆಗಳಲ್ಲಿ ಹಾಕಿಕೊಳ್ಳುತ್ತಾರೆ. ಆ ಫೋಟೋಗಳಲ್ಲಿ ನರಿ, ಕತ್ತೆ, ಹಸು, ಕುದುರೆ ಸೇರಿದಂತೆ ಹಲವು ಪ್ರಾಣಿಗಳು ಇರುತ್ತವೆ.

ಇದನ್ನೂ ಓದಿ : ‘ಪಕ್ಕದ ಮನೆಯವರಿಂದ ಕೋಳಿ ಕೊಲೆಗೆ ಯತ್ನ’ – ಹುಂಜದ ಸಮೇತ ಠಾಣೆಗೆ ಬಂದ ಮಹಿಳೆ..!

ಹೀಗೆ ಕೆಲವರು ಬೆಳಗ್ಗೆ ಎದ್ದು ನರಿಯ ಮುಖ ನೋಡಿದ್ರೆ ಒಳ್ಳೆಯದಾಗುತ್ತದೆ ಎಂದು ನಂಬುತ್ತಾರೆ. ಹೀಗೆ ಮೌಢ್ಯಕ್ಕೆ ಜೋತು ಬಿದ್ದು ತುಮಕೂರಿನಲ್ಲೊಬ್ಬ ಎಡವಟ್ಟು ಮಾಡಿಕೊಂಡಿದ್ದಾನೆ. ಬೆಳಗ್ಗೆ ಎದ್ದು ನರಿ ಮುಖ ನೋಡಿದರೆ ಅದೃಷ್ಟ ಬರುತ್ತದೆ ಅಂದುಕೊಂಡು ಕೋಳಿ ಫಾರಂ ಮಾಲೀಕ ಅಕ್ರಮವಾಗಿ ನರಿ ಸಾಕಿ ಈಗ ಜೈಲು ಸೇರಿದ್ದಾನೆ. ತುಮಕೂರು ಜಿಲ್ಲೆ ಹೆಬ್ಬೂರು ಹೋಬಳಿಯ ನಾಗವಲ್ಲಿ ಗ್ರಾಮದ ನಿವಾಸಿ ಲಕ್ಷ್ಮೀಕಾಂತ್‌ ಬಂಧಿತನಾಗಿದ್ದು, ಆರೋಪಿಯಿಂದ ನರಿಯನ್ನ ರಕ್ಷಣೆ ಮಾಡಲಾಗಿದೆ. ತನ್ನ ಕೋಳಿ ಫಾರಂನಲ್ಲಿ ಅಕ್ರಮವಾಗಿ ಲಕ್ಷ್ಮೀಕಾಂತ್‌ ನರಿ ಸಾಕಿರುವ ಕುರಿತು ಮಾಹಿತಿ ಪಡೆದ ಸಿಐಡಿ ಅರಣ್ಯ ಸಂಚಾರ ದಳದ ಪೊಲೀಸರು, ದಿಢೀರ್‌ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಏಳು ತಿಂಗಳ ಹಿಂದೆ ತಮ್ಮೂರಿನ ಕೆರೆ ಸಮೀಪ ಲಕ್ಷ್ಮೀಕಾಂತ್‌ಗೆ ನರಿ ಮರಿಗಳು ಸಿಕ್ಕಿದ್ದವು. ಆಗ ಅವುಗಳಲ್ಲಿ ಒಂದು ಮರಿಯನ್ನು ತಂದು ಪಂಜರದಲ್ಲಿಟ್ಟು ಸಾಕುತ್ತಿದ್ದ. ಬೆಳಗ್ಗೆ ಎದ್ದು ನರಿ ಮುಖ ನೋಡಿದರೆ ಅದೃಷ್ಟಬರುತ್ತದೆ ಎಂಬ ಮೂಢನಂಬಿಕೆಯಿಂದ ಈ ರೀತಿ ಮಾಡಿದ್ದಾಗಿ ವಿಚಾರಣೆ ವೇಳೆ ಆರೋಪಿ ಹೇಳಿಕೆ ಕೊಟ್ಟಿದ್ದಾನೆ. ಆದ್ರೆ ಯಾವ ನರಿ ಮುಖ ನೋಡಿ ಅದೃಷ್ಟ ಖುಲಾಯಿಸುತ್ತೆ ಅನ್ಕೊಂಡಿದ್ದನೋ ಅದೇ ನರಿಯಿಂದಾಗಿ ಜೈಲು ಸೇರುವಂತಾಗಿದ್ದಾನೆ.

suddiyaana