ತುಳು ಭಾಷೆಗೆ ಅಧಿಕೃತ ಮಾನ್ಯತೆ! ದಶಕಗಳ ಹೋರಾಟಕ್ಕೆ ಜಯ?

ತುಳುನಾಡಿನ ಜನರ ದಶಕಗಳ ಸಾಂಸ್ಕೃತಿಕ ಮತ್ತು ಭಾಷಿಕ ಅಸ್ಮಿತೆಯ ಹೋರಾಟಕ್ಕೆ ಮಹತ್ವದ ತಿರುವು ಸಿಕ್ಕಿದೆ. ಕಡಲನಗರಿ ಮಂಗಳೂರಿನಲ್ಲಿ ಮೊದಲ ಬಾರಿಗೆ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ, ತುಳು ಭಾಷೆಗೆ ಐತಿಹಾಸಿಕ ಮಾನ್ಯತೆ ನೀಡುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ವ್ಯಾಪ್ತಿಗೆ ಸೀಮಿತವಾಗಿ ತುಳು ಭಾಷೆಯನ್ನು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಆಡಳಿತ ಭಾಷೆಯನ್ನಾಗಿ ಅಂಗೀಕರಿಸಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಈ ನಿರ್ಧಾರ ತುಳು ಭಾಷಿಕರ ಬಹುಕಾಲದ ಬೇಡಿಕೆಗೆ ಸರ್ಕಾರದ ಅಧಿಕೃತ ಸ್ಪಂದನೆಯಾಗಿ ಪರಿಗಣಿಸಲಾಗಿದೆ.
ಇದನ್ನೂ ಓದಿ: ಆಡದೇ ಕೊಹ್ಲಿ ನಂಬರ್-1 – ವೈಭವ್ ಗೆ ನೋ ಚಾನ್ಸ್ ಎಂದ ಗಂಭೀರ್
ತುಳು ಕೇವಲ ಒಂದು ಭಾಷೆಯಲ್ಲ. ಕರಾವಳಿ ಕರ್ನಾಟಕದ ಜನರ ಸಂಸ್ಕೃತಿ, ಪರಂಪರೆ, ಜನಪದ, ಯಕ್ಷಗಾನ, ಭೂತಾರಾಧನೆ ಹಾಗೂ ಸಾಮಾಜಿಕ ಬದುಕಿನೊಂದಿಗೆ ಆಳವಾಗಿ ಬೆಸೆದುಕೊಂಡಿರುವ ಭಾಷೆಯಾಗಿದೆ. ಹಲವು ವರ್ಷಗಳಿಂದ ತುಳುವನ್ನು ಆಡಳಿತಾತ್ಮಕವಾಗಿ ಗುರುತಿಸಬೇಕು ಎಂಬ ಬೇಡಿಕೆ ಕೇಳಿಬರುತ್ತಿತ್ತು.
ಹೊಸ ನಿರ್ಧಾರ ಜಾರಿಯಾದರೆ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸರ್ಕಾರಿ ಆಡಳಿತದಲ್ಲಿ ತುಳು ಭಾಷೆಯ ಬಳಕೆಗೆ ಹೆಚ್ಚಿನ ಅವಕಾಶ ಸಿಗುವ ನಿರೀಕ್ಷೆಯಿದೆ. ಇದರಿಂದ ಸರ್ಕಾರಿ ಸೇವೆಗಳು ಮತ್ತು ಆಡಳಿತಾತ್ಮಕ ಸಂವಹನದಲ್ಲಿ ತುಳು ಭಾಷಿಕರಿಗೆ ಮತ್ತಷ್ಟು ಅನುಕೂಲವಾಗಬಹುದು.
ತುಳು ಭಾಷೆಯ ಅಧಿಕೃತ ಮಾನ್ಯತೆ ಕುರಿತ ಈ ನಿರ್ಧಾರ ಕರಾವಳಿ ಭಾಗದ ಭಾಷಾ ಮತ್ತು ಸಾಂಸ್ಕೃತಿಕ ಗುರುತಿನ ದೃಷ್ಟಿಯಿಂದ ಮಹತ್ವದ ಬೆಳವಣಿಗೆಯಾಗಿದೆ. ದಶಕಗಳ ಹೋರಾಟದ ಬಳಿಕ ಸರ್ಕಾರದ ಮಟ್ಟದಲ್ಲಿ ತುಳುವಿಗೆ ಸಿಕ್ಕಿರುವ ಈ ಮಾನ್ಯತೆ ಮುಂದಿನ ದಿನಗಳಲ್ಲಿ ಭಾಷೆಯ ಅಭಿವೃದ್ಧಿಗೆ ಹೊಸ ದಾರಿ ತೆರೆದುಕೊಡುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ.

ನೋಡಿರಿ

