ಉಪ್ಪಿನಕಾಯಿ ಕೇಳುವ ನೆಪದಲ್ಲಿ ಮನೆಗೆ ನುಗ್ಗಿದ ಪಾಪಿ – ಮಹಿಳೆಯ ಮೈ, ಕೈ ಮುಟ್ಟಿ ಕೆನ್ನೆ ಕಚ್ಚಿ ಪರಾರಿ

ಉಪ್ಪಿನಕಾಯಿ ಕೇಳುವ ನೆಪದಲ್ಲಿ ಮನೆಗೆ ನುಗ್ಗಿದ ಪಾಪಿ – ಮಹಿಳೆಯ ಮೈ, ಕೈ ಮುಟ್ಟಿ ಕೆನ್ನೆ ಕಚ್ಚಿ ಪರಾರಿ

ಸಿಟಿಗಳಲ್ಲಿ ವಾಸವಿರುವ ಜನ ಅವರು ಮನೆಯೊಳಗೆ ಇದ್ದರೂ ಸಹ ಬಾಗಿಲು ಹಾಕಿಕೊಳ್ಳುತ್ತಾರೆ. ಅಕ್ಕ ಪಕ್ಕದ ಮನೆಯವರ ಜೊತೆಯೂ ಬೆರೆಯೋದಿಲ್ಲ. ಆದರೆ ಹಳ್ಳಿಗಳ ಕಡೆ ತೋಟ, ಗದ್ದೆಗಳ ಕಡೆ ಹೋದರೂ ಮನೆ ಬಾಗಿಲು ತೆರೆದೇ ಹೋಗುತ್ತಾರೆ. ನೀರು, ಊಟ ಅಂತಾ ಕೇಳಿಕೊಂಡು ಬಂದರೆ ಸಹಾಯ ಮಾಡುತ್ತಾರೆ. ಆದರೆ ಇಲ್ಲೊಬ್ಬ ಕಾಮುಕ ಉಪ್ಪಿನಕಾಯಿ ಕೇಳೋ ನೆಪದಲ್ಲಿ ಬಂದು ಮಹಿಳೆಯ ಕೆನ್ನೆ ಕಚ್ಚಿದ್ದಾನೆ.

ಇದನ್ನೂ ಓದಿ : ಬಿಗ್‌ಬಾಸ್‌ನಲ್ಲಿ ರೈತನ ಮಗ ವಿನ್ನರ್! – ಸ್ಟುಡಿಯೋದಲ್ಲಿಯೇ ಹೊಡೆದಾಟ!

ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಹಳೇಬಾತಿ ಗುಡ್ಡದ ಗ್ರಾಮವೊಂದರಲ್ಲಿ ಇಂಥಾದ್ದೊಂದು ಘಟನೆ ನಡೆದಿದೆ.‌ ವ್ಯಕ್ತಿಯೊಬ್ಬ ಉಪ್ಪಿನಕಾಯಿ ಕೇಳಲು ಬಂದು ಮಹಿಳೆಯೊಬ್ಬಳ ಕೆನ್ನೆ ಕಚ್ಚಿದ್ದಾನೆ. ಮಂಜಪ್ಪ ಅಲಿಯಾಸ್ ಮಂಜುನಾಥ್ ಡಿ.ಹೆಚ್ ಎಂಬಾತನೇ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗುತ್ತಿದೆ. ಮನೆಯೊಂದರಲ್ಲಿ ಒಬ್ಬಂಟಿ ಮಹಿಳೆ ಇರುವುದನ್ನು ಗಮನಿಸಿದ ಕಾಮುಕ ನನಗೆ ಉಪ್ಪಿನಕಾಯಿ ಬೇಕು ಎಂದು ಕೇಳುತ್ತಾ ಮನೆಯೊಳಗೆ ನುಗ್ಗಿದ್ದಾನೆ. ಬಳಿಕ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆದರೆ ಅದು ಸಾಧ್ಯವಾಗದಿದ್ದಾಗ ಮಹಿಳೆಯ ಕೆನ್ನೆಯನ್ನು ಕಚ್ಚಿ ಪರಾರಿಯಾಗಿದ್ದಾನೆ. ಡಿಸೆಂಬರ್ 2 ರಂದು ಈ ಘಟನೆ ನಡೆದಿದ್ದು, ಪೊಲೀಸರಿಗೆ ದೂರು ಕೊಟ್ಟರೂ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಮಹಿಳೆಯರು ಎಸ್ಪಿ ಕಚೇರಿ ಬಳಿ ಪ್ರತಿಭಟನೆ ನಡೆಸಿದ್ದಾರೆ.

ಮಹಿಳೆ ಮನೆಯಲ್ಲಿ ಒಬ್ಬಳೇ ಇರುವುದನ್ನು ಗಮನಿಸಿ ಅತ್ಯಾಚಾರಕ್ಕೆ ಯತ್ನ ಮಾಡಿದ ಆರೋಪಿಯನ್ನು ಬಂಧಿಸಿ ಆತನಿಗೆ ತಕ್ಕ ಶಿಕ್ಷೆ ಕೊಡಬೇಕು. ದೂರು ಕೊಟ್ಟು 18 ದಿನಗಳಾದರೂ ಆತನನ್ನು ಬಂಧಿಸದ ಹಿನ್ನೆಲೆಯಲ್ಲಿ ದಾವಣಗೆರೆ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದ ಹಲವು ಮಹಿಳೆಯರು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಗೆ ಮನವಿ ಸಲ್ಲಿಸಿದರು‌. ಆದಷ್ಟು ಬೇಗ ಆರೋಪಿಯನ್ನು ಬಂಧಿಸುವ ಭರವಸೆಯನ್ನು ಎಸ್ಪಿ ನೀಡಿದರು. ಬಳಿಕ ಪ್ರತಿಭಟನೆಯನ್ನು ವಾಪಸ್‌ ಪಡೆಯಲಾಯಿತು.

Shantha Kumari