ಪ್ರೀತಿಯನ್ನೇ ಕೊಂದಳಾ ಕೊಲೆಗಾತಿ – ದುಡ್ಡಿಗಾಗಿ ಗಂಡನ ಪ್ರಾಣವನ್ನೇ ಬಲಿಕೊಟ್ಟ ಮಾಯಗಾತಿ..!

ಪ್ರೀತಿಯನ್ನೇ ಕೊಂದಳಾ ಕೊಲೆಗಾತಿ – ದುಡ್ಡಿಗಾಗಿ ಗಂಡನ ಪ್ರಾಣವನ್ನೇ ಬಲಿಕೊಟ್ಟ ಮಾಯಗಾತಿ..!

ಪ್ರೀತಿ ಮಾಡಿದ್ದು ತಪ್ಪಲ್ಲ. ಆದರೆ, ಪ್ರೀತಿಸಿದವಳು ಹೇಗೆ ಎಂದು ತಿಳಿದುಕೊಳ್ಳುವಲ್ಲಿ ಈತ ಸೋತಿದ್ದೇ ಜೀವನದಲ್ಲಿ ಮಾಡಿದ ದೊಡ್ಡ ತಪ್ಪು. ಹೋಗಲಿ, ತಾನು ಪ್ರೀತಿ ಮಾಡಿದವಳಿಗೆ ತನಗಿಂತ ದುಡ್ಡೇ ಮುಖ್ಯ ಎಂದು ಗೊತ್ತಾದ ಮೇಲೆ ಆಕೆಯ ಜೀವನದಿಂದ ದೂರ ಆದರೂ ಹೋಗಬಹುದಿತ್ತು. ಆದರೆ, ಈ ಅಮಾಯಕ ಪ್ರೇಮಿ, ನಂಬಿಕೆ ದ್ರೋಹಿ ಪ್ರೇಯಸಿ ಕೊಟ್ಟ ಹಿಂಸೆಗೆ ತನ್ನ ಜೀವವನ್ನೇ ಬಿಟ್ಟಿದ್ದಾನೆ.

ಇದನ್ನೂ ಓದಿ: ಮೊಬೈಲ್ ಚಾರ್ಜರ್ ಬಾಯಿಗೆ ಇಟ್ಟುಕೊಂಡ 8 ತಿಂಗಳ ಕೂಸು – ಕರೆಂಟ್ ಶಾಕ್ ನಿಂದ ಕಂದಮ್ಮ ಸಾವು

ಚನ್ನರಾಯಪಟ್ಟಣದ ಕರಿಯಪ್ಪನಗುಡಿ ಗ್ರಾಮದ 26 ವರ್ಷದ ಯುವಕ ಕಿರಣ್ ಬಿ.ಬಿ ಉದಯಪುರದಲ್ಲಿ ಬೇಕರಿ ನಡೆಸುತ್ತಿದ್ದ. ಈತ ವಗರಹಳ್ಳಿ ಗ್ರಾಮದ 24 ವರ್ಷದ ಸ್ಪಂದನಾ ಎಂಬಾಕೆಯ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದ. ಈಕೆ ಕೂಡಾ ಮಳ್ಳಿ ತರ ಕಿರಣ್ ಜೊತೆ ಪ್ರೀತಿಯ ನಾಟಕವಾಡುತ್ತಾ ಮದುವೆಯಾಗುತ್ತಾಳೆ. ಕಳೆದ ಫೆಬ್ರವರಿ 19 ರಂದು ಕಿರಣ್ ಮತ್ತು ಸ್ಪಂದನಾ ಮದುವೆಯಾಗುತ್ತೆ. ಪ್ರೀತಿಸಿದವಳ ಜೊತೆ ಜೀವನ ಹಂಚಿಕೊಳ್ಳುವ ಖುಷಿಯಲ್ಲಿದ್ದ ಕಿರಣ್. ಆದರೆ, ಸ್ಪಂದನಾ ಮದುವೆಯಾದ ಮರುಕ್ಷಣವೇ ತನ್ನ ಕಿಲಾಡಿ ಬುದ್ದಿ ತೋರಿಸಿದ್ದಾಳೆ. ಸಂಸಾರ ನಡೆಸದೇ ತವರು ಮನೆ ಸೇರಿದ್ದಳು. ಬಳಿಕ ಆಕೆಯ ತಂದೆ ವಾಸು, ತಾಯಿ ಗೀತಾ, ಅಜ್ಜಿ ರತ್ನಮ್ಮ ಕಿರಣ್ ಬಳಿ ಹಣಕ್ಕಾಗಿ ಬೇಡಿಕೆಯಿಟ್ಟಿದ್ದರು. ಅಲ್ಲದೇ ಮೂವರು ಸೇರಿ ಕಿರಣ್‌ಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ನೀಡಿದ್ದಾರೆ ಎಂದು ಮೃತನ ಪೋಷಕರು ಆರೋಪಿಸಿದ್ದಾರೆ. ಕಿರಣ್ ಹಣ ನೀಡದೇ ಇದ್ದಾಗ ಜುಲೈ 2 ರಂದು ಸ್ಪಂದನಾ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ವರದಕ್ಷಿಣೆ ಕಿರುಕುಳ ದೂರು ನೀಡಿ ಜೈಲಿಗೆ ಕಳುಹಿಸಿದ್ದಳು. ಬಳಿಕ ಕಿರಣ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಕಳೆದ ಎರಡು ದಿನಗಳ ಹಿಂದೆ ಸ್ಪಂದನಾಳ ಪೋಷಕರು ಬೇಕರಿ ಬಳಿ ಬಂದು ಆತನೊಂದಿಗೆ ಜಗಳ ಮಾಡಿ ಹಲ್ಲೆ ಮಾಡಿದ್ದರು. ಇದರಿಂದ ಮನನೊಂದು ಕಿರಣ್ ಜು.31 ರಂದು ಮನೆಯಿಂದ ಹೊರ ಹೋದವನು ವಾಪಸ್ ಬಂದಿರಲಿಲ್ಲ ಎಂದು ಪೋಷಕರು ಹೇಳಿದ್ದಾರೆ. ನಾಪತ್ತೆಯಾಗಿದ್ದ ಆತನನ್ನು ಪೋಷಕರು ಹುಡುಕಾಡಿದಾಗ ಗ್ರಾಮದ ದೂಳಪ್ಪ ಎಂಬುವವರ ತೋಟದಲ್ಲಿ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ. ಈ ಸಂಬಂಧ ಹೊಳೇನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅದೇನೇ ಇರಲಿ, ಪ್ರೀತಿ ಮಾಡುವ ತನಕ ನಂಬಿಕೆ ಬರುವಂತೆ ಮಾಡಿದ ಪ್ರೇಯಸಿ ಪ್ರೀತಿಸಿ ಮದುವೆಯಾದ ಗಂಡನ ಸಾವಿಗೆ ಕಾರಣವಾಗಿದ್ದು ದುರಂತವೇ ಸರಿ.

suddiyaana