ಜುಲೈ 1 ರಿಂದಲೇ ಶ್ರೀರಂಗಪಟ್ಟಣದ ಗಣಂಗೂರು ಬಳಿ ಟೋಲ್ ಪ್ಲಾಜಾ ಓಪನ್ – ಟೋಲ್ ರೇಟ್ ಕೇಳಿದ್ರೆ ಬೆಚ್ಚಿ ಬೀಳ್ತೀರಾ..!
![ಜುಲೈ 1 ರಿಂದಲೇ ಶ್ರೀರಂಗಪಟ್ಟಣದ ಗಣಂಗೂರು ಬಳಿ ಟೋಲ್ ಪ್ಲಾಜಾ ಓಪನ್ – ಟೋಲ್ ರೇಟ್ ಕೇಳಿದ್ರೆ ಬೆಚ್ಚಿ ಬೀಳ್ತೀರಾ..!](https://suddiyaana.com/wp-content/uploads/2023/07/Toll-Gate_08.jpg)
ಮೈಸೂರು-ಬೆಂಗಳೂರು ಎಕ್ಸ್ಪ್ರೆಸ್ ವೇನಲ್ಲಿ ಅಪಘಾತಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವುದು ಸವಾರರಿಗೆ ತಲೆನೋವಾಗಿ ಪರಿಣಮಿಸಿದೆ. ಇದರ ಮಧ್ಯೆ, ಟೋಲ್ ರೇಟ್ ಕೂಡಾ ಜಾಸ್ತಿಯಾಗಿರುವುದು ಕೂಡಾ ಕಸಿವಿಸಿಗೆ ಕಾರಣವಾಗಿದೆ. ದಶಪಥ ರಸ್ತೆಯಲ್ಲಿ ಸಮಯ ಉಳಿಯುತ್ತದೆ ನಿಜ. ಆದರೆ, ಇದೀಗ ಮತ್ತೊಂದು ಟೋಲ್ ಪ್ಲಾಜಾ ಕೂಡಾ ಓಪನ್ ಆಗಿರುವುದು ಪ್ರಯಾಣಿಕರಿಗೆ ಬರೆ ಎಳೆದಂತಾಗಿದೆ. ಎಕ್ಸ್ಪ್ರೆಸ್ ವೇನಲ್ಲಿ ಉಳಿಸಿದ ದುಡ್ಡು ಟೋಲ್ ಕಟ್ಟಲು ಸರಿಯಾಗುತ್ತದೆ ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ. ಜುಲೈ ಒಂದರಿಂದ ಮಂಡ್ಯ ವ್ಯಾಪ್ತಿಯ ಟೋಲ್ ಸಂಗ್ರಹ ಆರಂಭಗೊಂಡಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಬಳಿ ಇರುವ ಟೋಲ್ ಪ್ಲಾಜಾದಲ್ಲಿ 55.13 ಕಿಮೀ ವ್ಯಾಪ್ತಿಗೆ ಟೋಲ್ ಬೀಳಲಿದೆ. ಆದರೆ, ಟೋಲ್ ಶುಲ್ಕ ಕೇಳಿ ಪ್ರಯಾಣಿಕರು ಫುಲ್ ಗಾಬರಿಯಾಗಿದ್ದಂತೂ ನಿಜ.
ಇದನ್ನೂ ಓದಿ: ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯಲ್ಲಿ ಮತ್ತೊಂದು ಟೋಲ್ ಪ್ಲಾಜಾ – ಜುಲೈ 1ರಿಂದಲೇ ಟೋಲ್ ಸಂಗ್ರಹ
ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಬಳಿ ಇರುವ ಟೋಲ್ ಪ್ಲಾಜಾದಲ್ಲಿ 55.13 ಕಿಮೀ ವ್ಯಾಪ್ತಿಗೆ ಟೋಲ್ ಸಿಗಲಿದೆ.
ಟೋಲ್ ಶುಲ್ಕ ಹೀಗಿದೆ.
ಏಕಮುಖ ಸಂಚಾರ: ಕಾರು, ಜೀಪು, ವ್ಯಾನು – 155 ರೂ
ಲಘು ವಾಣಿಜ್ಯ ವಾಹನ, ಲಘು ಸರಕು ವಾಹನ/ಮಿನಿ ಬಸ್ – 250 ರೂ
ಟ್ರಕ್/ಬಸ್ (ಎರಡು ಆಕ್ಸಲ್ ಗಳದ್ದು) 525 ರೂ
ಮೂರು ಆಕ್ಸಲ್ ವಾಣಿಜ್ಯ ವಾಹನ – 575 ರೂ
ಭಾರಿ ನಿರ್ಮಾಣ ಯಂತ್ರಗಳು / ಭೂ ಅಗೆತದ ಸಾಧನಗಳು / ಬಹು ಆಕ್ಸಲ್ ವಾಹನ (4ರಿಂದ 6 ಆಲೆಕ್ಸ್ಗಳದ್ದು) – 825 ರೂ
ದೊಡ್ಡ ಗಾತ್ರದ ವಾಹನ (7 ಅಥವಾ ಹೆಚ್ಚು ಆಕ್ಸಲ್ ಗಳದ್ದು) – 1005 ರೂ
ಅದೇ ದಿನ ವಾಪಸ್ಸು:
ಕಾರು, ಜೀಪು, ವ್ಯಾನು – 235 ರೂ
ಲಘು ವಾಣಿಜ್ಯ ವಾಹನ, ಲಘು ಸರಕು ವಾಹನ/ಮಿನಿ ಬಸ್ – 375 ರೂ
ಟ್ರಕ್/ಬಸ್ (ಎರಡು ಆಕ್ಸಲ್ ಗಳದ್ದು) 790 ರೂ
ದಶಪಥ ಹೆದ್ದಾರಿ ನಡುವೆ ಇರುವ ಶ್ರೀರಂಗಪಟ್ಟಣದಲ್ಲಿ ಟೋಲ್ ಶುಲ್ಕ ವಿಧಿಸಿರುವ ಸಂಬಂಧ ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಿ, ಇದಕ್ಕೆ ತಡೆ ನೀಡಬೇಕು. ಸರ್ವಿಸ್ ರಸ್ತೆಗಳು ಇನ್ನಿತರ ಕಾಮಗಾರಿಗಳು ಪೂರ್ಣಗೊಳ್ಳುವವರೆಗೆ ಟೋಲ್ ಸಂಗ್ರಹ ಮಾಡದಂತೆ ತಡೆ ನೀಡಲು ಕೇಂದ್ರ ಸರ್ಕಾರದ ಗಮನ ಸೆಳೆಯಬೇಕು ಎಂದು ಮಂಡ್ಯ ಶಾಸಕರಾದ ದಿನೇಶ್ ಗೂಳಿಗೌಡ, ರವಿಕುಮಾರ್ ಗಾಣಿಗ ಹಾಗೂ ರಮೇಶ್ ಬಂಡಿಸಿದ್ದೇಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಅಪರ ಮುಖ್ಯ ಕಾರ್ಯದರ್ಶಿ ಪಿಡಬ್ಲ್ಯುಡಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಈಗಾಗಲೇ ಬೆಂಗಳೂರಿನಿಂದ ಹೊರಡಬೇಕಾದರೆ ಅಥವಾ ಮೈಸೂರಿನಿಂದ ಹೊರಡಬೇಕಾದರೆ ಒಂದು ಬಾರಿ ಟೋಲ್ ಶುಲ್ಕವನ್ನು ಕಟ್ಟಿಸಿಕೊಳ್ಳಲಾಗುತ್ತದೆ. ಈಗ ಶ್ರೀರಂಗಪಟ್ಟಣದಲ್ಲಿಯೂ ಟೋಲ್ ಕಟ್ಟಿಸಿಕೊಳ್ಳುತ್ತಿರುವುದು ಸಾರ್ವಜನಿಕರಿಗೆ ಡಬಲ್ ಹೊರೆಯಾಗಲಿದೆ. ಅಲ್ಲದೆ ಇನ್ನೂ ಕಾಮಗಾರಿಗಳೇ ಪೂರ್ಣಗೊಂಡಿಲ್ಲ. ಹೀಗಾಗಿ ಮುಖ್ಯಮಂತ್ರಿಗಳು ಈ ಸಂಬಂಧ ಕೇಂದ್ರ ಸರ್ಕಾರದ ಗಮನಕ್ಕೆ ತಂದು ಸಮಸ್ಯೆಯನ್ನು ಬಗೆಹರಿಸಬೇಕು. ಸರ್ವಿಸ್ ರಸ್ತೆ ಸೇರಿದಂತೆ ಇನ್ನಿತರ ಕಾಮಗಾರಿ ಮುಗಿಯುವವರೆಗೂ ಶ್ರೀರಂಗಪಟ್ಟಣ ಟೋಲ್ನಲ್ಲಿ ಶುಲ್ಕವನ್ನು ಸಂಗ್ರಹ ಮಾಡದಂತೆ ಕ್ರಮ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.