ಹುಲಿ ಉಗುರು ಪ್ರಕರಣ: ವರ್ತೂರು ಸಂತೋಷ್​ ಬಳಿಕ ಸೆಲೆಬ್ರಿಟಿಗಳಿಗೂ ಶಾಕ್!‌ –‌ ನಟ ದರ್ಶನ್, ವಿನಯ್​ ಗುರೂಜಿ ವಿರುದ್ಧ ದೂರು ದಾಖಲು

ಹುಲಿ ಉಗುರು ಪ್ರಕರಣ: ವರ್ತೂರು ಸಂತೋಷ್​ ಬಳಿಕ ಸೆಲೆಬ್ರಿಟಿಗಳಿಗೂ ಶಾಕ್!‌ –‌ ನಟ ದರ್ಶನ್, ವಿನಯ್​ ಗುರೂಜಿ ವಿರುದ್ಧ ದೂರು ದಾಖಲು

ಬಿಗ್ ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿ ವರ್ತೂರು ಸಂತೋಷ್ ಅವರು ಜೈಲು ಸೇರಿದ್ದಾರೆ. ವರ್ತೂರು ಸಂತೋಷ್‌ಗೆ ತನ್ನ ಕೊರಳಲ್ಲಿ ಧರಿಸಿದ್ದ ಹುಲಿ ಉಗುರೇ ಈಗ ಜೈಲು ಸೇರುವಂತೆ ಮಾಡಿದೆ. ವರ್ತೂರು ಸಂತೋಷ್‌ ಜೈಲು ಪಾಲಾಗುತ್ತಿದ್ದಂತೆ ಈಗ ಹುಲಿ ಉಗುರಿನ ಪೆಂಡೆಂಟ್‌ ಧರಿಸುತ್ತಿರುವ ಸೆಲೆಬ್ರಿಟಿಗಳ ಹೆಸರು ಕೇಳಿ ಬರುತ್ತಿವೆ. ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್, ವಿನಯ್‌ ಗುರೂಜಿ ವಿರುದ್ಧ ಪ್ರಕರಣ ದಾಖಲಾಗಿದೆ.

ಹೌದು, ವರ್ತೂರು ಸಂತೋಷ್‌ ಅವರು ಜೈಲು ಪಾಲಾಗುತ್ತಿದ್ದಂತೆ ಸೋಶಿಯಲ್‌ ಮೀಡಿಯಾದಲ್ಲಿ ಸೆಲೆಬ್ರಿಟಿಗಳು ಹುಲಿ ಉಗುರು ಧರಿಸಿರುವ ಫೋಟೋಗಳು ಸಿಕ್ಕಾಪಟ್ಟೆ ವೈರಲ್‌ ಆಗುತ್ತಿವೆ. ಸಾಮಾನ್ಯ ಜನರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಸೆಲೆಬ್ರಿಟಿಗಳ ವಿರುದ್ಧ ಯಾಕೆ ಕ್ರಮಕೈಗೊಳ್ಳುತ್ತಿಲ್ಲ ಎಂದು ಅನೇಕರು ಪ್ರಶ್ನಿಸಿದ್ದರು. ಸೋಶಿಯಲ್‌ ಮೀಡಿಯಾದಲ್ಲಿ ದರ್ಶನ್ ಅವರು ಹುಲಿ ಉಗುರಿನ ಲಾಕೆಟ್​ ಧರಿಸಿರುವ ಫೋಟೋ, ವಿನಯ್​ ಗುರೂಜಿ ಅವರು ಹುಲಿ ಚರ್ಮದ ಮೇಲೆ ಕುಳಿತಿರುವ ಫೋಟೋಗಳು ವೈರಲ್‌ ಆಗುತ್ತಿವೆ. ಇದಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌ ಹಾಗೂ ವಿನಯ್‌ ಗುರೂಜಿ ವಿರುದ್ಧ ಸರ್ವ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಿವಕುಮಾರ್​ ಅವರು ಅರಣ್ಯಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಇದರಿಂದ ದರ್ಶನ್​ ಹಾಗೂ ವಿನಯ್​ ಗುರೂಜಿಗೆ ಕಾನೂನಿನ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ವನ್ಯಜೀವ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಅರೆಸ್ಟ್ ಆಗಿದ್ದರು ಸೆಲೆಬ್ರೆಟಿಗಳು – ಇಂಥಾ ಪ್ರಕರಣದಲ್ಲಿ ಜೈಲು ಶಿಕ್ಷೆಯ ಪ್ರಮಾಣ ಎಷ್ಟು?

ದರ್ಶನ್ ಬಂಗಾರದ ಚೈನ್ ಹಾಕಿದ್ದಾರೆ. ಅದರಲ್ಲಿ ಹುಲಿಯ ಉಗುರು ಇದೆ. ಅವರಿಂದ ಕಾನೂನಿನ ಉಲ್ಲಂಘನೆ ಆಗಿದೆ. ವಿನಯ್ ಗುರೂಜಿ ಹುಲಿಯ ಚರ್ಮದ ಮೇಲೆ ಕೂತಿದ್ದಾರೆ. ಹುಲಿಯ ಉಗುರು ಇದ್ದ ಕಾರಣಕ್ಕೆ ವರ್ತೂರು ಸಂತೋಷ ಅವರನ್ನು ಬಂಧಿಸಿದ್ದೀರಿ. ಅದೇ ರೀತಿ ನಟ ದರ್ಶನ್, ವಿನಯ್ ಗುರೂಜಿಯನ್ನೂ ಕರೆಸಿ ವಿಚಾರಿಸಿ. ಅವರು ಧರಿಸಿದ್ದು ಅಸಲಿನೋ ಅಥವಾ ನಕಲಿಯೋ ಎಂಬುದು ಅಧಿಕಾರಿಗಳು ಪರಿಶೀಲಿಸಬೇಕು. ದರ್ಶನ್ ಅವರು ಅರಣ್ಯ ರಾಯಭಾರಿ ಆಗಿದ್ದಾರೆ. ಅವರಿಗೆ ಕನಿಷ್ಠ ಪ್ರಜ್ಞೆ ಇಲ್ಲವೇ? ಅವರು ಧರಿಸಿದ ಹುಲಿ ಉಗುರು ಅಸಲಿಯೋ ಅಥವಾ ನಕಲಿಯೋ ಅನ್ನೋದನ್ನು ಪರಿಶೀಲನೆ ಮಾಡೋದು ಅರಣ್ಯಾಧಿಕಾರಿಗಳ ಕಾರ್ಯ ಎಂದು ಶಿವಕುಮಾರ್​ ಹೇಳಿದ್ದಾರೆ.

ಹಳ್ಳಿಕಾರ್ ತಳಿ ಸಂರಕ್ಷಣೆ ಮಾಡುತ್ತಾ ಹೆಸರುವಾಸಿ ಆಗಿರುವ ವರ್ತೂರು ಸಂತೋಷ್​ ಅವರು ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ರಲ್ಲಿ ಸ್ಪರ್ಧಿ ಆಗಿದ್ದರು. ಅವರು ಹುಲಿ ಉಗುರು ಇರುವ ಲಾಕೆಟ್​ ಧರಿಸಿದ್ದರು. ಅದಕ್ಕೆ ಸಂಧಿಸಿದಂತೆ ದೂರು ದಾಖಲಾದ ಪರಿಣಾಮವಾಗಿ ಅರಣ್ಯಾಧಿಕಾರಿಗಳು ಬಿಗ್​ ಬಾಸ್​ ಮನೆಗೆ ಹೋಗಿ ಸಂತೋಷ್ ಅವರನ್ನು ಬಂಧಿಸಿದರು. ನಂತರ ನ್ಯಾಯಾಲಯದ ಆದೇಶದಂತೆ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅದಾದ ಬಳಿಕ ಹುಲಿ ಉಗುರು ಧರಿಸಿದ ಇನ್ನಿತರ ಸೆಲೆಬ್ರಿಟಿಗಳ ಫೋಟೋ ಕೂಡ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

ಈ ಹಿಂದೆ ದರ್ಶನ್​ ಮತ್ತು ರಾಕ್​ಲೈನ್​ ವೆಂಕಟೇಶ್​ ಅವರು ಹುಲಿ ಉಗುರಿನ ಲಾಕೆಟ್​ ಧರಿಸಿದ್ದರು. ಆ ಫೋಟೋಗಳನ್ನು ಇಟ್ಟುಕೊಂಡು ಈಗ ಸೋಶಿಯಲ್​ ಮೀಡಿಯಾದಲ್ಲಿ ಟೀಕೆ ಮಾಡಲಾಗುತ್ತಿದೆ. ಈಗ ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತಾ ಎಂಬುದನ್ನು ಕಾದು ನೋಡಬೇಕು. ಇನ್ನೂ ಹಲವು ಸೆಲೆಬ್ರಿಟಿಗಳ ಫೋಟೋಗಳು ಕೂಡ ಹೊರಬರುವ ಸಾಧ್ಯತೆ ಇದೆ.

Shwetha M