ಮಳೆಗಾಲದಲ್ಲಿ ಕಡಿಮೆ ನೀರು ಕುಡಿಯುತ್ತೀರಾ? – ಹಾಗಾದ್ರೆ ನಿಮ್ಮ ಕಿಡ್ನಿ ಹುಷಾರು!

ಮಳೆಗಾಲದಲ್ಲಿ ಕಡಿಮೆ ನೀರು ಕುಡಿಯುತ್ತೀರಾ? – ಹಾಗಾದ್ರೆ ನಿಮ್ಮ ಕಿಡ್ನಿ ಹುಷಾರು!

ಈಗಾಗಲೇ ದೇಶದ ಹಲವು ಕಡೆಗಳಲ್ಲಿ ಭಾರಿ ಮಳೆಯಾಗ್ತಿದೆ. ಭಾರಿ ಮಳೆಯಿಂದಾಗಿ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ಇನ್ನು ಮಳೆಯ ಜೊತೆಗೆ ಒಂದೊಂದೇ ಕಾಯಿಲೆಗಳು ಕೂಡ ಶುರುವಾಗುತ್ತಿದೆ. ಹೆಚ್ಚಿನವರಿಗೆ ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ. ಇನ್ನು ಮಳೆಗಾಲ ಅಂತ ಹೆಚ್ಚು ನೀರು ಕುಡಿಯದಿದ್ರೆ ಆಪತ್ತು ಗ್ಯಾರೆಂಟಿ.

ಇದನ್ನೂ ಓದಿ: ಮುಖದ ಕಾಂತಿ ಹೆಚ್ಚಾಗಬೇಕಾ? – ಮನೆಯಲ್ಲೇ ಟ್ರೈ ಮಾಡಿ ರವೆ, ಕಾಫಿಪುಡಿಯ ಈ ಫೇಸ್‌ಪ್ಯಾಕ್!

ಮಳೆ ಇದೆ ಅನ್ನೋ ಕಾರಣಕ್ಕೆ ಜನ ಸಾಮಾನ್ಯವಾಗಿ ನೀರು ಕುಡಿಯೋದನ್ನ ಕಡಿಮೆ ಮಾಡ್ತಾರೆ. ಆದ್ರೆ, ಇದು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಅಂತ ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಮಳೆಗಾಲದಲ್ಲೂ ನಮ್ಮ ದೇಹಕ್ಕೆ ನೀರಿನ ಅಗತ್ಯವಿದೆ. ಮೆದುಳು, ಕಿಡ್ನಿ, ಜೀರ್ಣಾಂಗ ವ್ಯವಸ್ಥೆ ಸರಿಯಾಗಿ ಕೆಲಸ ಮಾಡೋಕೆ ಸಾಕಷ್ಟು ನೀರು ಬೇಕೇಬೇಕು. ನೀರು ಕುಡಿಯದಿದ್ದರೆ ಅನಾರೋಗ್ಯ ನಿಮ್ಮನ್ನು ಕಾಡುತ್ತದೆ.

ಜೀರ್ಣಕ್ರಿಯೆ ಸಮಸ್ಯೆಗಳು ಹೆಚ್ಚಾಗಬಹುದು

ಮಳೆಗಾಲದಲ್ಲಿ ಆಹಾರ ಪದ್ಧತಿಯಲ್ಲಿನ ಬದಲಾವಣೆ ಮತ್ತು ದೈಹಿಕ ಚಟುವಟಿಕೆ ಕಡಿಮೆಯಾಗುವುದರಿಂದ ಜೀರ್ಣಕ್ರಿಯೆ ಸಮಸ್ಯೆಗಳು ಸಾಮಾನ್ಯ. ಸಾಕಷ್ಟು ನೀರು ಕುಡಿಯದೇ ಇರುವುದು ಮಲಬದ್ಧತೆ, ಹೊಟ್ಟೆ ಉಬ್ಬರ ಮತ್ತು ಅಸಿಡಿಟಿಯಂತಹ ಸಮಸ್ಯೆಗಳಿಗೆ ಕಾರಣವಾಗುತ್ತೆ. ದೇಹದಲ್ಲಿ ಸರಿಯಾದ ನೀರಿನಂಶ ಜೀರ್ಣರಸಗಳ ಸಮತೋಲನ ಕಾಪಾಡಲು ಮತ್ತು ಪೋಷಕಾಂಶಗಳನ್ನು ಸರಿಯಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತೆ.

ಡೀಹೈಡ್ರೇಷನ್ ಮತ್ತು ಇತರ ತೊಂದರೆಗಳು

ದೇಹದಲ್ಲಿ ಸ್ವಲ್ಪ ಪ್ರಮಾಣದ ನೀರಿನಂಶ ಕಡಿಮೆಯಾದರೂ, ಅದು ದೈಹಿಕ ಮತ್ತು ಮಾನಸಿಕ ಶಕ್ತಿಯ ಮೇಲೆ ಪರಿಣಾಮ ಬೀರುತ್ತೆ. ತೀವ್ರ ಆಯಾಸ, ತಲೆನೋವು, ತಲೆಸುತ್ತು ಮತ್ತು ಸಿಟ್ಟು ಇವೆಲ್ಲವೂ ಡೀಹೈಡ್ರೇಷನ್‌ನ (ನಿರ್ಜಲೀಕರಣ) ಲಕ್ಷಣಗಳಾಗಿರಬಹುದು. ಮಕ್ಕಳು, ವಯಸ್ಸಾದವರು, ಗರ್ಭಿಣಿಯರು ಮತ್ತು ಇತರ ಕಾಯಿಲೆಗಳಿರುವವರಿಗೆ ಡೀಹೈಡ್ರೇಷನ್ ಅಪಾಯ ಹೆಚ್ಚು. ಹಾಗಾಗಿ ಇವರು ನೀರು ಕುಡಿಯುವ ವಿಷಯದಲ್ಲಿ ಹೆಚ್ಚು ಜಾಗರೂಕರಾಗಿರಬೇಕು.

ಕಿಡ್ನಿಗಳ ಕಾರ್ಯನಿರ್ವಹಣೆ ಮೇಲೆ ಪರಿಣಾಮ

ದೇಹದಲ್ಲಿ ನೀರಿನಂಶ ಕಡಿಮೆಯಾದ್ರೆ, ಮೊದಲು ಅದರ ಪರಿಣಾಮ ಬೀರೋದು ಕಿಡ್ನಿಗಳ ಮೇಲೆ. ರಕ್ತದಲ್ಲಿರುವ ಕಲ್ಮಶ ಮತ್ತು ವಿಷಕಾರಿ ಅಂಶಗಳನ್ನು ಹೊರಹಾಕಲು ಕಿಡ್ನಿಗಳಿಗೆ ನೀರು ಸಹಾಯ ಮಾಡುತ್ತೆ. ನೀರು ಕುಡಿಯುವುದು ಕಡಿಮೆಯಾದಾಗ, ಮೂತ್ರದ ಸಾಂದ್ರತೆ ಹೆಚ್ಚಾಗುತ್ತೆ. ಇದು ಯೂರಿನರಿ ಟ್ರ್ಯಾಕ್ಟ್ ಇನ್‌ಫೆಕ್ಷನ್ (UTI) ಮತ್ತು ಕಿಡ್ನಿಯಲ್ಲಿ ಕಲ್ಲುಗಳಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತೆ.

ಮಳೆಗಾಲದಲ್ಲಿ ದೇಹದಲ್ಲಿ ನೀರಿನಂಶ ಕಾಪಾಡಿಕೊಳ್ಳಲು ಕೆಲವು ಟಿಪ್ಸ್

ನಿಯಮಿತವಾಗಿ ನೀರು ಕುಡಿಯಿರಿ: ಬಾಯಾರಿಕೆ ಆಗುವವರೆಗೂ ಕಾಯಬೇಡಿ. ದಿನವಿಡೀ ಸ್ವಲ್ಪ ಸ್ವಲ್ಪ ನೀರು ಕುಡಿಯುತ್ತಲೇ ಇರಿ.

ದಿನಕ್ಕೆ 2–3 ಲೀಟರ್ ನೀರು ಕುಡಿಯಿರಿ: ಆರೋಗ್ಯವಂತ ವ್ಯಕ್ತಿ ದಿನಕ್ಕೆ 2 ರಿಂದ 3 ಲೀಟರ್ ನೀರು ಕುಡಿಯಬೇಕು. ವಯಸ್ಸು, ದೇಹದ ತೂಕ ಮತ್ತು ಮಾಡುವ ಕೆಲಸಕ್ಕೆ ಅನುಗುಣವಾಗಿ ಈ ಪ್ರಮಾಣದಲ್ಲಿ ಬದಲಾವಣೆಯಾಗಬಹುದು.

ಇತರ ಪಾನೀಯಗಳನ್ನೂ ಸೇರಿಸಿಕೊಳ್ಳಿ: ಎಳನೀರು, ಮನೆಯಲ್ಲೇ ಮಾಡಿದ ಸೂಪ್, ಮಜ್ಜಿಗೆ, ಹಾಗೂ ಕಿತ್ತಳೆ, ಪೇರಳೆ, ಕಲ್ಲಂಗಡಿಯಂತಹ ಹೆಚ್ಚು ನೀರಿನಂಶವಿರುವ ಹಣ್ಣುಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದು ಒಳ್ಳೆಯದು.

ಮಳೆಗಾಲದಲ್ಲಿ ಬಾಯಾರಿಕೆ ಕಡಿಮೆ ಅನಿಸಿದರೂ, ದೇಹಕ್ಕೆ ನೀರಿನ ಅವಶ್ಯಕತೆ ಕಡಿಮೆಯಾಗುವುದಿಲ್ಲ. ಆದ್ದರಿಂದ, ಕುದಿಸಿ ಆರಿಸಿದ ಶುದ್ಧ ನೀರನ್ನು ನಿಯಮಿತವಾಗಿ ಕುಡಿದು ರೋಗನಿರೋಧಕ ಶಕ್ತಿ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಿ.

Shwetha M

Leave a Reply

Your email address will not be published. Required fields are marked *