ಬಿಎಂಟಿಸಿ ಬಸ್‌ ಶೆಲ್ಟರ್‌ನೇ ಕದ್ದೊಯ್ದ ಖತರ್ನಾಕ್‌ ಕಳ್ಳರು! – ಖದೀಮರ ಕೈಚಳಕಕ್ಕೆ ಅಧಿಕಾರಿಗಳೇ ಶಾಕ್!

ಬಿಎಂಟಿಸಿ ಬಸ್‌ ಶೆಲ್ಟರ್‌ನೇ ಕದ್ದೊಯ್ದ ಖತರ್ನಾಕ್‌ ಕಳ್ಳರು! – ಖದೀಮರ ಕೈಚಳಕಕ್ಕೆ ಅಧಿಕಾರಿಗಳೇ ಶಾಕ್!

ಬೆಂಗಳೂರು: ಕಳ್ಳರು ಮನೆಗಳಿಗೆ, ಬ್ಯಾಂಕ್‌, ಅಂಗಡಿಗೆ ನುಗ್ಗಿ ಕೈಗೆ ಸಿಕ್ಕಿದ್ದನ್ನೆಲ್ಲಾ ಬಾಚಿಕೊಂಡು ಹೋಗುವುದನ್ನು ಕೇಳಿದ್ದೇವೆ. ಇನ್ನೂ ಕೆಲ ಕಳ್ಳರು ರಸ್ತೆಯಲ್ಲಿ, ಬಸ್‌ ನಿಲ್ದಾಣಗಳಲ್ಲಿ ತಮ್ಮ ಕೈಚಳಕ ತೋರಿಸುತ್ತಾರೆ. ಒಂಟಿ ಮಹಿಳೆಯರನ್ನೇ ಟಾರ್ಗೆಟ್‌ ಮಾಡಿ ಚಿನ್ನಾಭರಣ, ಬ್ಯಾಗ್‌ ದೋಚಿಕೊಂಡು ಹೋಗುತ್ತಾರೆ. ಆದರೆ ಬೆಂಗಳೂರಿನಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಖತರ್ನಾಕ್‌ ಕಳ್ಳರು ಬಸ್‌ ಶೆಲ್ಟರ್‌ಅನ್ನು ಕದ್ದೊಯ್ದಿದ್ದಾರೆ.

ಹೌದು.. ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯ ಕೊಂಚ ದೂರದಲ್ಲಿ ನಿರ್ಮಾಣ ಮಾಡಲಾಗಿದ್ದ ಬಿಎಂಟಿಸಿ ಬಸ್‌ ಶೆಲ್ಟರ್‌ ಅನ್ನು ಕಳ್ಳರು ರಾತ್ರೋ ರಾತ್ರಿ ಕದ್ದೊಯ್ದಿದ್ದಾರೆ. ನಗರದ ಕನ್ನಿಗ್ಯಾಂ ರಸ್ತೆಯ ಬಸ್‌ ತಂಗುದಾಣ ಪರಿಶೀಲನೆಗೆ ಬಂದ ಬಿಬಿಎಂಪಿ ಅಧಿಕಾರಿಗಳು ಸ್ಥಳದಲ್ಲಿ ಬಸ್‌ ಶೆಲ್ಟರ್‌ ಇಲ್ಲದಿರುವುದನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ.

ಇದನ್ನೂ ಓದಿ: ಕಳ್ಳತನ ಕಲಿಸಿದ ಗೆಳೆಯನಿಗೆ ಗುರುದಕ್ಷಿಣೆ ನೀಡಲು ಬೈಕ್ ಕದ್ದ – ದುಬಾರಿ ಗಿಫ್ಟ್ ನೀಡಲು ಹೋಗಿ ಖಾಕಿ ಬಲೆಗೆ ಬಿದ್ದ..!

ಬಿಎಂಟಿಸಿ ಬಸ್‌ ಶೆಲ್ಟರ್‌ ಅನ್ನು ಸುಮಾರು 10 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು. ಸ್ಟೀಲ್‌ ಕಂಬಿಗಳು, ಶೀಟ್‌ಗಳಿಂದ ಈ ನಿಲ್ದಾಣಗಳನ್ನು ನಿರ್ಮಿಸಲಾಗಿತ್ತು. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅನುಮತಿ ಪಡೆದು ಖಾಸಗಿ ಕಂಪನಿಯಿಂದ ಬಸ್‌ ಶೆಲ್ಟರ್‌  ಅನ್ನು ನಿರ್ಮಿಸಲಾಗಿತ್ತು. ಸುಮಾರು ಒಂದೂವರೆ ವರ್ಷಗಳ ಕಾಲ ಪ್ರಯಾಣಿಕರಿಗೆ ನೆರಳಾಗಿದ್ದ ಬಸ್‌ ಶೆಲ್ಟರ್‌ ಈಗ ಕಣ್ಮರೆಯಾಗಿದೆ. ಕಂಪನಿಯಿಂದ ಕಳೆದ ತಿಂಗಳು ಬಂದು ಪರಿಶೀಲನೆ ಮಾಡಿದಾಗ ಅಲ್ಲಿ ಬಸ್‌ ಶೆಲ್ಟರ್‌ ಇಲ್ಲದಿರುವುದನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ.

ಬಸ್ಶೆಲ್ಟರ್ಅನ್ನು ಬಿಬಿಎಂಪಿ ತೆರವುಗೊಳಿಸಿದ್ದಾ?

ಇನ್ನು ಬಿಬಿಎಂಪಿ ವತಿಯಿಂದ ಬಸ್‌ ಶೆಲ್ಟರ್‌ ತೆರವು ಮಾಡಿದ್ದಾರೆ ಎಂದು ಸುಮ್ಮನಾಗಿದ್ದರು. ಖಾಸಗಿ ಕಂಪನಿಯು ಸಿಎಸ್‌ಆರ್‌ ಫಂಡ್‌ನಿಂದ ನಿರ್ಮಿಸಿದ್ದ ಬಸ್‌ ಶೆಲ್ಟರ್‌ ಅನ್ನು ಒಂದು ಮಾಹಿತಿಯೂ ನೀಡದೇ ಬಿಬಿಎಂಪಿ ತೆರವುಗೊಳಿಸದ ಬಗ್ಗೆ ಪಾಲಿಕೆ ಅಧಿಕಾರಿಗಳಿಗೆ ಪ್ರಶ್ನೆ ಮಾಡಿದ್ದಾರೆ. ಆದರೆ, ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಬಸ್‌ ಶೆಲ್ಟರ್‌ ತೆರುವು ಮಾಡಿಲ್ಲ ಎಂದು ತಿಳಿಸಿದ್ದಾರೆ. ಇದಾದ ನಂತರ ಕಂಪಯಿಂದ ಸೆ.30ರಂದು ಪೊಲೀಸ್‌ ಠಾಣೆಗೆ ದುರು ನೀಡಲಾಗಿದೆ. ಈ ಘಟನೆ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಇನ್ನು ಸಿಸಿಟಿವಿ ಹಾಗೂ ಇತರೆ ಮೂಲಗಳಿಂದ ಕಳ್ಳರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ಎಲ್ಲೆಡೆ ಬಸ್‌ ಶೆಲ್ಟರ್‌ ಕಳ್ಳರ ಪತ್ತೆಗೆ ಶೋಧ ಕಾರ್ಯ ನಡೆಸಲಾಗುತ್ತಿದೆ.

ಸಿಸಿಟಿವಿಯಲ್ಲಿ ಬಯಲಾಯ್ತು ಕಳ್ಳರ ಕೈಚಳಕ!

ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ ನಿಲುಗಡೆ ಪ್ರದೇಶದಲ್ಲಿ ಖಾಸಗಿ ಕಂಪನಿಗಳು ತಮ್ಮ ಸಿಎಸ್‌ಆರ್‌ ಫಂಡ್‌ನಲ್ಲಿ ಬಸ್‌ ಶೆಲ್ಟರ್‌ ನಿರ್ಮಿಸಲು ಅವಕಾಶವಿದೆ. ಹೀಗೆ, ನಿರ್ಮಿಸಲಾಗಿದ್ದ ಕಂಪನಿಯ ಬಸ್‌ ಶೆಲ್ಟರ್‌ನ ಕಬ್ಬಿಣದ ಕಂಬಿಗಳು, ಚೇರ್‌ಗಳು, ಬೋರ್ಡ್‌ಗಳು, ಶೀಟ್‌ಗಳನ್ನು ಕಳ್ಳರು ಕಬ್ಬಿಣ ಕತ್ತರಿಸುವ ಯಂತ್ರವನ್ನು ಉಪಯೋಗಿಸಿ ಕತ್ತರಿಸಿದ್ದಾರೆ. ನಂತರ, ಅದನ್ನು ಆಟೋದಲ್ಲಿ ಬಂದು ತುಂಬಿಕೊಂಡು ಹೋಗಿ ಮಾರಾಟ ಮಾಡಿದ್ದಾರೆ.

Shwetha M