ಭಾರತದಲ್ಲಿರುವ 5 ಅತ್ಯಂತ ವಿಶಿಷ್ಟ ದೇವಸ್ಥಾನಗಳು ಯಾವೆಲ್ಲಾ ಗೊತ್ತಾ?

ಭಾರತದಲ್ಲಿ ವಿಶಿಷ್ಟವಾದ ದೇವಾಲಯಗಳಿಂದ ತುಂಬಿದೆ. ಅವುಗಳು ಕೇವಲ ಪೂಜಾ ಸ್ಥಳಗಳು ಮಾತ್ರವಲ್ಲ, ಬದಲಾಗಿ ತನ್ನಲ್ಲಿ ಅನೇಕ ನಿಗೂಢ, ರಹಸ್ಯಗಳನ್ನು ಒಳಗೊಂಡಿರುವ ಅದ್ಭುತವಾಗಿವೆ. ಮುಗಿಲನ್ನು ಸ್ಪರ್ಶಿಸುವ ಶಿಖರಗಳಿಂದ ಹಿಡಿದು ಇಂದಿಗೂ ರಹಸ್ಯವನ್ನು ಬೇಧಿಸಲಾಗದ ಆಲಯಗಳವರೆಗೆ ಇಲ್ಲಿ ಸಾಕಷ್ಟು ದೇವಸ್ಥಾನಗಳಿವೆ. ನಂಬಿಕೆ, ಪ್ರಕೃತಿಗಳ ಸಮ್ಮಿಶ್ರಣವನ್ನು ನೀವು ಇಲ್ಲಿ ನೋಡಬಹುದು. ಜನರು ಭಾರತದ ಕೆಲವು ಪ್ರಮುಖ ದೇವಸ್ಥಾನಗಳಿಗೆ ತೀರ್ಥಯಾತ್ರೆ ಕೈಗೊಳ್ಳುವ ಮೂಲಕ ಪುಣ್ಯವನ್ನು ಸಂಪಾದಿಸುತ್ತಾರೆ. ಅಂದಹಾಗೆ, ಭಾರತದಲ್ಲಿರುವ 5 ಅತ್ಯಂತ ವಿಶಿಷ್ಟ ದೇವಸ್ಥಾನಗಳು ಯಾವುವು ಎಂಬುದನ್ನು ನೋಡೋಣ.
ತುಂಗನಾಥ ದೇವಸ್ಥಾನ
ಉತ್ತರಾಖಂಡ ರಾಜ್ಯದಲ್ಲಿ ನೀವು ಪ್ರಸಿದ್ಧ ತುಂಗನಾಥ ದೇವಸ್ಥಾನಕ್ಕೆ ಭೇಟಿ ನೀಡಲೇಬೇಕು. ಈ ಅಲಯವು ಸಮುದ್ರಮಟ್ಟದಿಂದ ಸುಮಾರು 3,680 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ. ಈ ಪ್ರಸಿದ್ಧವಾದ ದೇವಸ್ಥಾನವನ್ನು ‘ಭೂಮಿಯ ಮೇಲಿನ ಅತಿ ಎತ್ತರದ ಶಿವ ದೇವಾಲಯ’ ಎಂದೇ ಪರಿಗಣಿಸಲಾಗಿದೆ. ಇದು ಪಂಚ ಕೇದಾರ ದೇವಾಲಯಗಳಲ್ಲಿ ಒಂದಾಗಿದೆ. ಇದಲ್ಲದೆ, ಇದು ಬರೋಬ್ಬರಿ 5000 ವರ್ಷಗಳಿಗಿಂತಲೂ ಬಹಳ ಹಳೆಯದು ಎಂದು ನಂಬಲಾಗಿದೆ. ಈ ಆಲಯವು ಎತ್ತರವಾದ ಪರ್ವತಗಳಿಂದ ಆವೃತವಾಗಿದೆ. ಇದಲ್ಲದೆ, ಈ ತುಂಗನಾಥ ದೇವಸ್ಥಾನಕ್ಕೆ ತಲುಪಲು ಒಬ್ಬರು ಚೋಪ್ಟಾದಿಂದ ಚಾರಣ ಮಾಡಬೇಕು. ಈ ಆಲಯವು ಹಿಮಪಾತವಾಗುವ ಸಮಯದಲ್ಲಿ ಸಂಪೂರ್ಣವಾಗಿ ಮುಚ್ಚಿರುತ್ತದೆ.
ಉಮಾನಂದ ದೇವಸ್ಥಾನ
ಅಸ್ಸಾಂ ರಾಜ್ಯದಲ್ಲಿ ಶಿವನಿಗೆ ಮುಡಿಪಾದ ಪ್ರಮುಖ ದೇವಸ್ಥಾನಗಳಲ್ಲಿ ಉಮಾನಂದ ದೇವಸ್ಥಾನವು ಒಂದಾಗಿದೆ. ಈ ಆಲಯವು ಪ್ರಬಲ ಬ್ರಹ್ಮಪುತ್ರ ನದಿಯ ಪೀಕಾಕ್ ದ್ವೀಪದಲ್ಲಿ ನೆಲೆಗೊಂಡಿದೆ. ವಿಶ್ವದ ಅತ್ಯಂತ ಚಿಕ್ಕ ಜನವಸತಿ ನದಿ ದ್ವೀಪವೆಂದು ಪರಿಗಣಿಸಲ್ಪಟ್ಟಿರುವ ಸ್ಥಳದಲ್ಲಿ ಈ ದೇವಾಲಯವಿದೆ. ಈ ಆಲಯಕ್ಕೆ ನೀವು ತಲುಪಲು ರಸ್ತೆಯ ಮೂಲಕವಲ್ಲ ಬದಲಾಗಿ ದೋಣಿ ಅಥವಾ ಕೇಬಲ್ ಕಾರಿನ ಮೂಲಕ ತಲುಪಬೇಕಾಗುತ್ತದೆ.
ಅಮರನಾಥ ಗುಹಾ ದೇವಾಲಯ
ಜಮ್ಮು ಮತ್ತು ಕಾಶ್ಮೀರದಲ್ಲಿರುವ ಈ ಅಮರನಾಥ ಗುಹಾ ದೇವಾಲಯದ ಬಗ್ಗೆ ನೀವು ಈಗಾಗಲೇ ಸಾಕಷ್ಟು ತಿಳಿದುಕೊಂಡಿರಬಹುದು. ಇದು ಕೂಡ ಶಿವನ ಪವಿತ್ರ ಯಾತ್ರೆಯಾಗಿದ್ದು, ಈ ಸವಾಲಿನ ಗುಹೆಗೆ ತಲುಪಲು ಒಬ್ಬರು ಸುಮಾರು 3,888 ಮೀಟರ್ ಹತ್ತಬೇಕು. ಇಲ್ಲಿ ನೀವು ನೈಸರ್ಗಿಕವಾಗಿ ರೂಪುಗೊಂಡ ಹಿಮ ಶಿವಲಿಂಗವನ್ನು ದರ್ಶನ ಮಾಡುತ್ತೀರಿ. ಯಾತ್ರಿಕರು ಒರಟಾದ ಪರ್ವತ ಪ್ರದೇಶ, ಹಿಮನದಿಯಿಂದ ತುಂಬಿದ ಹೊಳೆಗಳು, ಹಿಮಭರಿತ ಹಾದಿಗಳು ಮತ್ತು ಎತ್ತರದ ಹಿಮಾಲಯನ್ ಬಂಡೆಗಳಿಂದ ಆವೃತವಾದ ಕಿರಿದಾದ ಹಾದಿಗಳ ಮೂಲ ಚಾರಣ ಮಾಡಬೇಕಾಗುತ್ತದೆ.
ಧೋಲ್ಕಲ್ ಗಣೇಶ ದೇವಸ್ಥಾನ
ಛತ್ತೀಸ್ಗಢ ರಾಜ್ಯದ ಈ ಧೋಲ್ಕಲ್ ಗಣೇಶ ದೇವಸ್ಥಾನವು ಕೂಡ ಭಾರತದ ಅತ್ಯಂತ ವಿಶಿಷ್ಟ ದೇವಸ್ಥಾನಗಳಲ್ಲಿ ಒಂದಾಗಿದೆ.ಈ ಗಣೇಶನ ಆಲಯವು ದಟ್ಟ ಕಾಡುಗಳೊಗೆ ಸುಮಾರು 3,000 ಅಡಿ ಬೆಟ್ಟದ ಮೇಲಿರುತ್ತದೆ. ತಿಳಿದಿಲ್ಲದವರಿಗೆ, ಈ ದೇವಸ್ಥಾನ 2012 ರಲ್ಲಿ ಪತ್ತೆಯಾಗಿದ್ದು, ಸುಮಾರು 1,100 ವರ್ಷ ಹಳೆಯ ಗಣೇಶನ ಕಲ್ಲಿನ ವಿಗ್ರಹವನ್ನು ಹೊಂದಿದೆ. ದೇವಾಲಯವನ್ನು ತಲುಪಲು ಒರಟಾದ ಅರಣ್ಯ ಪ್ರದೇಶದ ಮೂಲಕ ಪಾದಯಾತ್ರೆ ಮಾಡಬೇಕಾಗುತ್ತದೆ. ಈ ಸ್ಥಳವು ಬಹಳ ನಿಗೂಢವಾಗಿರುವಂತೆ ತೋರುತ್ತದೆ.
ಸ್ತಂಭೇಶ್ವರ ಮಹಾದೇವ ದೇವಾಲಯ
ಗುಜರಾತ್ ರಾಜ್ಯದಲ್ಲಿರುವ ಈ ಸ್ತಂಭೇಶ್ವರ ಮಹಾದೇವ ದೇವಾಲಯವು ವಡೋದರಾ ಬಳಿ ಇದೆ. ಇದು ಭಾರತದ ಅತ್ಯಂತ ಅದ್ಭುತವಾದ ದೇವಸ್ಥಾನ ಎಂದು ಕರೆಸಿಕೊಂಡಿದೆ. ಈ ದೇವಾಲಯವು ಹೆಚ್ಚಿನ ಉಬ್ಬರವಿಳಿತ ಹೊಂದಿರುವ ಸಮಯದಲ್ಲಿ ಸಂಪೂರ್ಣವಾಗಿ ಮುಳುಗುತ್ತದೆ ಮತ್ತು ಉಬ್ಬರವಿಳಿತ ಕಡಿಮೆಯಾದಾಗ ಮತ್ತೆ ಹೊರಹೊಮ್ಮುತ್ತದೆ. ಈ ದೇವಾಲಯವು ಕೂಡ ಶಿವನಿಗೆ ಸಮರ್ಪಿತವಾಗಿದ್ದು, ಬಹಳ ವಿಶಿಷ್ಟವಾದ ಆಲಯ ಎಂದು ಗುರುತಿಸಿಕೊಂಡಿದೆ.

ನೋಡಿರಿ

