ಸಕ್ಕರೆನಾಡು ಕಬ್ಜಾ ಮಾಡಿಕೊಳ್ಳಲು ದಳಪತಿಗಳ ತಂತ್ರ! – ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಹೆಚ್‍ಡಿಕೆ ಇಲ್ಲ ನಿಖಿಲ್ ಸ್ಪರ್ಧೆಗೆ ಬಿಗಿ ಪಟ್ಟು!

ಸಕ್ಕರೆನಾಡು ಕಬ್ಜಾ ಮಾಡಿಕೊಳ್ಳಲು ದಳಪತಿಗಳ ತಂತ್ರ! – ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಹೆಚ್‍ಡಿಕೆ ಇಲ್ಲ ನಿಖಿಲ್ ಸ್ಪರ್ಧೆಗೆ ಬಿಗಿ ಪಟ್ಟು!

ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳು ಮಾತ್ರ ಬಾಕಿ ಉಳಿದಿದೆ. ರಾಜಕೀಯ ಪಕ್ಷಗಳು ಈಗಿನಿದಂಲೇ ಭರ್ಜರಿ ಸಿದ್ದತೆ ಮಾಡಿಕೊಳ್ಳುತ್ತಿವೆ. ಈ ಬಾರಿ ಲೋಕಸಭಾ ಚುನಾವಣೆ ಅಖಾಡದಲ್ಲಿ ಬಿಜೆಪಿ ಜೆಡಿಎಸ್ ದೋಸ್ತಿಗಳಾಗಿವೆ. ಇದೀಗ ಸಕ್ಕರೆನಾಡು ಮಂಡ್ಯ ಕಬ್ಜಾ ಮಾಡಿಕೊಳ್ಳಲು ದಳಪತಿಗಳು ತಂತ್ರ ರೂಪಿಸ್ತಿದ್ದಾರೆ. ಆರಂಭದಲ್ಲಿ ನಿಖಿಲ್‌ ಕುಮಾರಸ್ವಾಮಿ ಅವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ ಎಂದು ಜೆಡಿಎಸ್‌ ನಾಯಕರು ಹೇಳುತ್ತಿದ್ದರು. ಆದ್ರೆ ಇದೀಗ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಿಖಿಲ್‌ ಕುಮಾರಸ್ವಾಮಿ ಸ್ಪರ್ಧಿಸುವುದು ಸೂಕ್ತ ಅಂತಾ ತೀರ್ಮಾನ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಸಿಲಿಕಾನ್‌ ಸಿಟಿಯಲ್ಲಿ ಮತ್ತೊಂದು ಭಯಾನಕ ರೋಡ್‌ ರೇಜ್ ಕೇಸ್‌! – ಕಾರಿನ ಬ್ಯಾನೆಟ್‌ ಮೇಲೆ ವ್ಯಕ್ತಿಯನ್ನು ಎಳೆದೊಯ್ದ ಚಾಲಕ!

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌, ಬಿಜೆಪಿ ಮೈತ್ರಿ ಮಾಡಿಕೊಂಡಿರುವುದರಿಂದಾಗಿ ಮಂಡ್ಯ ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಡೋದು ನಿಶ್ಚಿತವಾಗಿದೆ. ಈ ನಿಟ್ಟಿನಲ್ಲಿ ಜೆಡಿಎಸ್ ನಾಯಕರು ಮಂಡ್ಯ ಲೋಕಸಭಾ ಚುನಾವಣೆಯ ಮೈತ್ರಿ ಅಭ್ಯರ್ಥಿ ಹುಟುಕಾಟದಲ್ಲಿ ಇದ್ದಾರೆ. ಮಂಡ್ಯದಲ್ಲಿ ಮಾಜಿ ಸಚಿವರಾದ ಪುಟ್ಟರಾಜು, ತಮ್ಮಣ್ಣ ಹಾಗೂ ಮಾಜಿ ಶಾಸಕ ಸುರೇಶ್‍ಗೌಡ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಈ ಮಧ್ಯ ಇವರನ್ನು ಹೊರತುಪಡಿಸಿ ಮಂಡ್ಯಗೆ ಪ್ರಬಲ ನಾಯಕನನ್ನೇ ಅಭ್ಯರ್ಥಿಯಾಗಿ ತರಬೇಕೆಂದು ಜೆಡಿಎಸ್ ಲೆಕ್ಕಾಚಾರ ಹಾಕಿಕೊಂಡಿದೆ. ಅಭ್ಯರ್ಥಿ ಹುಟುಕಾಟಕ್ಕಾಗಿ ಸಭೆ ಮೇಲೆ ಸಭೆ ನಡೆಸಿದ್ದಾರೆ. ಅಂತಿಮ ಸಭೆಯಲ್ಲಿ ಮಂಡ್ಯ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿ ಕುಮಾರಸ್ವಾಮಿ ಅಥವಾ ನಿಖಿಲ್ ಇಬ್ಬರಲ್ಲಿ ಒಬ್ಬರು ಬಂದ್ರೆ ಸೂಕ್ತ ಎಂದು ತೀರ್ಮಾನ ಮಾಡಲಾಗಿದೆ.

ಮಂಡ್ಯ ಲೋಕಸಭಾ ಚುನಾವಣೆ ಅಖಾಡಕ್ಕೆ ಹೆಚ್‍ಡಿಕೆ ಅಥವಾ ನಿಖಿಲ್ ಬಂದ್ರೆ ಮಂಡ್ಯದಲ್ಲಿ ಜೆಡಿಎಸ್ ಮತ್ತೆ ಹಳೆ ಲಯಕ್ಕೆ ತಿರುಗಬಹುದು. ಜೊತೆಗೆ ಮಂಡ್ಯ ಕ್ಷೇತ್ರವನ್ನು ಸುಲಭವಾಗಿ ಗೆದ್ದು, ಜಿಲ್ಲೆಯಲ್ಲಿ ನಾಯಕರ ನಡುವೆ ಇರುವ ಅಸಮಧಾನವನ್ನು ಸರಿಪಡಿಸಬಹುದು ಎಂಬ ಲೆಕ್ಕಾಚಾರ ಜಿಲ್ಲಾ ನಾಯಕರಲ್ಲಿ ಇದೆ. ಈ ತೀರ್ಮಾನವನ್ನು ಸದ್ಯ ಪತ್ರದ ಮೂಲಕ ದೊಡ್ಡಗೌಡರಿಗೆ, ಕುಮಾರಸ್ವಾಮಿ ಅವರಿಗೆ ತಲುಪಿಸಲಾಗಿದ್ದು, ಇನ್ನೂ ಎರಡು ಮೂರು ದಿನಗಳಲ್ಲಿ ನಾಯಕರು ನಿಯೋಗದ ಮೂಲಕ ಅಧಿಕೃತವಾಗಿ ಕುಮಾರಸ್ವಾಮಿ ಹಾಗೂ ನಿಖಿಲ್‍ಗೆ ಆಹ್ವಾನ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.

Shwetha M