ಜನರ ಸಂಕಟ ಕೇಳುವವರಿಲ್ಲ..  ಸಿದ್ದರಾಮಯ್ಯ ಸರ್ಕಾರಕ್ಕೆ ಕುರ್ಚಿಯೇ ಎಲ್ಲಾ!! – ಕಾಂಗ್ರೆಸ್‌ ವಿರುದ್ಧ ಬಿಜೆಪಿ ಲೇವಡಿ!

ಜನರ ಸಂಕಟ ಕೇಳುವವರಿಲ್ಲ..  ಸಿದ್ದರಾಮಯ್ಯ ಸರ್ಕಾರಕ್ಕೆ ಕುರ್ಚಿಯೇ ಎಲ್ಲಾ!! – ಕಾಂಗ್ರೆಸ್‌ ವಿರುದ್ಧ ಬಿಜೆಪಿ ಲೇವಡಿ!

ಬೆಂಗಳೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ಜೋರಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಲೇವಡಿ ಮಾಡುತ್ತಲೇ ಬಂದಿದೆ. ಇದೀಗ ರಾಜ್ಯದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅವಾಂತರಗಳು ಶುರುವಾಗಿದ್ದು, ಜನರ ಸಂಕಟ ಕೇಳುವವರಿಲ್ಲದಂತಾಗಿದೆ. ಆದರೆ, ಕಾಂಗ್ರೆಸ್ ಸರ್ಕಾರಕ್ಕೆ ಕುಚ್ಚಿಯೇ ಎಲ್ಲವಾಗಿದೆ ಎಂದು ಬಿಜೆಪಿ ಲೇವಡಿ ಮಾಡಿದೆ.

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ರಾಜ್ಯ ಬಿಜೆಪಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅವಾಂತರಗಳು ಶುರುವಾಗಿದೆ. ಸರ್ಕಾರಿ ಮಹಿಳಾ ಅಧಿಕಾರಿಗಳ ಕೊಲೆ, ಸರ್ಕಾರಿ ಅಧಿಕಾರಿಗಳ ಮೇಲೆ ಗುಂಪು ಹಲ್ಲೆ, ಭಯೋತ್ಪಾದಕರ ಅಡಗುತಾಣವಾಗುತ್ತಿರುವ ಕರ್ನಾಟಕ, ರಾಜ್ಯದೆಲ್ಲೆಡೆ ಹೆಚ್ಚುತ್ತಿರುವ ಮತೀಯ ಶಕ್ತಿಗಳ ಅಪರಾಧ ಚಟುವಟಿಕೆ, ಮಿತಿ ಮೀರಿದ ಭ್ರಷ್ಟಾಚಾರ, ಕಾಂಗ್ರೆಸ್ ಕರ್ನಾಟಕವನ್ನು ಎಲ್ಲಾ ವಲಯಗಳಲ್ಲಿಯೂ ದಿವಾಳಿ ಮಾಡಲು ಅಧಿಕಾರಕ್ಕೆ ಬಂದಿದೆ. ರಾಜ್ಯದ ಆರ್ಥಿಕ ಸ್ಥಿತಿಯನ್ನು ಹದಗೆಡಿಸುವ ಜೊತೆ ಕಾನೂನು ಸುವ್ಯವಸ್ಥೆಯನ್ನು ಹದಗೆಡಿಸುತ್ತಿರುವುದು ನಿಜಕ್ಕೂ ಆತಂಕಕಾರಿ ಎಂದು ಬಿಜೆಪಿ ಹೇಳಿದೆ.

ಇದನ್ನೂ ಓದಿ: ಕೆಲಸಕ್ಕಾಗಿ ಕಾಲು ಹಿಡಿದ ಪಾಪಿಯಿಂದಲೇ ಕೊಲೆ – ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಪ್ರತಿಮಾ ಕೊಲೆ ಆರೋಪಿ ಬಂಧನ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಮಹಿಳೆಯರ ಮೇಲೆ ಹಲ್ಲೆ, ಕೊಲೆಗಳು ಮತ್ತೊಮ್ಮೆ ಶುರುವಾಗಿದೆ. 2018 ರ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಹಿಳಾ ಅಧಿಕಾರಿಗಳು, ಮಹಿಳಾ ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆಗಳಾಗುತ್ತಿದ್ದವು, ಈಗ ಒಂದು ಹೆಜ್ಜೆ ಮುಂದೆ ಹೋಗಿ ಮಹಿಳಾ ಅಧಿಕಾರಿಗಳ ಕೊಲೆಗಳು ನಡೆಯುತ್ತಿವೆ. ಡಿಸಿಎಂ ಡಿಕೆ.ಶಿವಕೂಮಾರ್ ಅವರೇ, ಇದೇನಾ ನಿಮ್ಮ ಬ್ರ್ಯಾಂಡ್ ಬೆಂಗಳೂರಿನ ಅಸಲಿಯತ್ತು? ಎಂದು ಪ್ರಶ್ನಿಸಿದೆ.

ರಾಜ್ಯದ ಆರ್ಥಿಕತೆಯನ್ನು ಬೇಜವಾಬ್ದಾರಿಯಿಂದ ನಿರ್ವಹಿಸಿ ಕಾಂಗ್ರೆಸ್ ಸರ್ಕಾರ ಬೊಕ್ಕಸ ಬರಿದು ಮಾಡಿ ಕೂತಿದೆ. ಹಣ ಹೊಂದಿಸಲು ಚಿಟ್ ಫಂಡ್ ವ್ಯವಹಾರದಿಂದ ಹಣ ಎತ್ತಲು ಸಜ್ಜಾಗಿರುವುದು ವಿಪರ್ಯಾಸ ಮಾತ್ರವಲ್ಲ, ಕಳವಳಕಾರಿ. ಚಿಟ್ ಫಂಡ್ ಹೆಸರಿನಲ್ಲಿ ಸಾವಿರಾರು ಕೋಟಿ ಲೂಟಿ ಮಾಡಿ ಜನರಿಗೆ ಟೋಪಿ ಹಾಕಲು ಸಿದ್ದರಾಮಯ್ಯ  ಅವರ ಸರ್ಕಾರ ಕಂಡುಕೊಳ್ಳುತ್ತಿರುವ ಹೊಸ ಮಾರ್ಗವಿದು ಎಂದು ಕಿಡಿಕಾರಿದೆ.

Shwetha M