ದುಬೈಗೆ ಕರೆದುಕೊಂಡು ಹೋಗಿಲ್ಲ ಅಂತಾ ಗಂಡನ ಮುಖಕ್ಕೆ ಪಂಚ್.. -ಪತ್ನಿ ಏಟಿಗೆ ಸ್ಥಳದಲ್ಲೇ ಸಾವನ್ನಪ್ಪಿದ ಪತಿರಾಯ!

ದುಬೈಗೆ ಕರೆದುಕೊಂಡು ಹೋಗಿಲ್ಲ ಅಂತಾ ಗಂಡನ ಮುಖಕ್ಕೆ ಪಂಚ್.. -ಪತ್ನಿ ಏಟಿಗೆ ಸ್ಥಳದಲ್ಲೇ ಸಾವನ್ನಪ್ಪಿದ ಪತಿರಾಯ!

ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಸಹಜ. ಅದು ಲವ್ ಮ್ಯಾರೇಜ್ ಆಗಿರಲಿ ಅಥವಾ ಆರೆಂಜ್ಡ್ ಮ್ಯಾರೇಜ್ ಆಗಿರಲಿ ಗಂಡ ಹೆಂಡತಿ ಜಗಳ ಆಡುವುದು ಸಾಮಾನ್ಯ. ಸಣ್ಣ ಪುಟ್ಟ ವಿಚಾರಕ್ಕೆ ಆರಂಭವಾದ ಮನಸ್ತಾಪ ಕೆಲವೊಂದು ಬಾರಿ ದೊಡ್ಡ ಅವಾಂತರವನ್ನೇ ಸೃಷ್ಟಿಸಿ ಬಿಡುತ್ತದೆ. ಕೆಲವು ದಂಪತಿ ಒಟ್ಟಿಗೆ ಇರಲು ಸಾಧ್ಯ ಇಲ್ಲ ಅಂತಾ ವಿಚ್ಛೇದನ ಪಡೆಯುವುದನ್ನು ನಾವು ಕೇಳಿದ್ದೇವೆ. ಇನ್ನು ಕೆಲವು ಜಗಳ ಕೊಲೆಯಲ್ಲಿ ಅಂತ್ಯವಾಗಿದ್ದು ಇದೆ. ಇದೀಗ ಇಲ್ಲೊಬ್ಬಳು ತನ್ನನ್ನು ದುಬೈಗೆ ಕರೆದುಕೊಂಡು ಹೋಗಿಲ್ಲ ಅಂತಾ ತನ್ನ ಗಂಡನಿಗೆ ಗುದ್ದಿ ಕೊಲೆ ಮಾಡಿದ್ದಾಳೆ.

ಇದನ್ನೂ ಓದಿ: 2 ವರ್ಷದಲ್ಲಿ ಸುಮಾರು 900 ಹೆಣ್ಣು ಭ್ರೂಣ ಹತ್ಯೆ! – ಐವರು ವೈದ್ಯರ ಸೇರಿ 9 ಮಂದಿ ಅರೆಸ್ಟ್

ಹೌದು, ಇತ್ತೀಚಿನ ದಿನಗಳಲ್ಲಿ ಗಂಡ-ಹೆಂಡತಿಯ ನಡುವೆ ವೈಮನಸ್ಯ ಉಂಟಾಗುತ್ತಿರುವುದು ಸಹಜವಾಗಿಬಿಟ್ಟಿದೆ. ಸಣ್ಣ ಸಣ್ಣ ಕಾರಣಕ್ಕೆ ಭಿನ್ನಾಭಿಪ್ರಾಯ ಮೂಡುತ್ತಿದ್ದು, ಕೊಲೆಯಲ್ಲಿ ಅಂತ್ಯವಾಗುತ್ತಿದೆ. ಇದಕ್ಕೆ ಪುಣೆಯಲ್ಲಿ ನಡೆದಿರುವ ಘಟನೆ ತಾಜಾ ಉದಾಹರಣೆಯಾಗಿದೆ. ಪುಣೆಯ ವನವಡಿ ಪ್ರದೇಶದಲ್ಲಿರುವ ಅಪಾರ್ಟ್‌ಮೆಂಡ್‌ನಲ್ಲಿ ತನ್ನ ಹುಟ್ಟುಹಬ್ಬಕ್ಕೆ ದುಬೈಗೆ ಕರೆದುಕೊಂಡು ಹೋಗಲಿಲ್ಲ ಅಂತಾ, ಹೆಂಡತಿ ತನ್ನ ಗಂಡನನ್ನ ಹೊಡೆದೇ ಕೊಂದಿದ್ದಾಳೆ. ಗಂಡನ ಮುಖಗ್ಗೆ ಮನಬಂದಂತೆ ಗುದ್ದಿ ಸಾಯಿಸಿದ್ದಾಳೆ.

ಮೃತ ವ್ಯಕ್ತಿಯನ್ನು ನಿಖಿಲ್‌ ಘನ್ನಾ (36) ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಉದ್ಯಮಿಯಾಗಿದ್ದ ಈತ 6 ವರ್ಷಗಳ ಹಿಂದೆ ರೇಣುಕಾ ಎಂಬ ಮಹಿಳೆಯೊಂದಿಗೆ ಪ್ರೇಮ ವಿವಾಹವಾಗಿದ್ದರು. ಪ್ರಾಥಮಿಕ ತನಿಖೆ ಪ್ರಕಾರ, ರೇಣುಕಾ ತನ್ನ ಹುಟ್ಟುಹಬ್ಬ ಆಚರಿಸಿಕೊಳ್ಳಲು ಪತಿ ನಿಖಿಲ್‌ ದುಬೈಗೆ ಕರೆದುಕೊಂಡು ಹೋಗದ ಕಾರಣ ಇಬ್ಬರ ನಡುವೆ ಜಗಳವಾಗಿತ್ತು. ಅಲ್ಲದೇ ತನ್ನ ಹುಟ್ಟುಹಬ್ಬ ಮತ್ತು ವಾರ್ಷಿಕೋತ್ಸವಕ್ಕೂ ದುಬಾರಿ ಉಡುಗೊರೆ ನೀಡಲಿಲ್ಲ. ತಮ್ಮ ಸಂಬಂಧಿಕರ ಹುಟ್ಟುಹಬ್ಬಕ್ಕೆ ರೇಣುಕಾ ಹೋಗಬೇಕು ಅಂದಾಗಲೂ ನಿಖಿಲ್‌ ಆಕೆಯನ್ನು ತಡೆದಿದ್ದರು. ಇದರಿಂದ ರೇಣುಕಾ ಅಸಮಾಧಾನಗೊಂಡಿದ್ದಳು.

ಹೀಗಾಗಿ ಶುಕ್ರವಾರ ದುಬೈಗೆ ಕರೆದುಕೊಂಡು ಹೋಗದಿರುವ ಬಗ್ಗೆ ಇಬ್ಬರ ನಡುವೆ ಜಗಳವಾಗಿದೆ. ಆಗ ಕೋಪದಲ್ಲಿ ರೇಣುಕಾ ನಿಖಿಲ್‌ನ ಮುಖಕ್ಕೆ ಗುದ್ದಿದ್ದಾಳೆ. ಗುದ್ದಿದ ರಭಸಕ್ಕೆ ನಿಖಿಲ್‌ನ ಮೂಗು ಮತ್ತು ಕೆಲವು ಹಲ್ಲುಗಳು ಮುರಿದಿವೆ. ತೀವ್ರ ರಕ್ತಸ್ರಾವದಿಂದ ನಿಖಿಲ್ ಪ್ರಜ್ಞೆ ಕಳೆದುಕೊಂಡು, ಕೆಲ ಸಮಯದ ನಂತರ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯ ಪೊಲೀಸರು ರೇಣುಕಾ ವಿರುದ್ಧ ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಮತ್ತು ಹೆಚ್ಚಿನ ತನಿಖೆಗಾಗಿ ಆಕೆಯನ್ನ ಬಂಧಿಸಿದ್ದಾರೆ.

Shwetha M