ಬೇಸಿಗೆಯ ಬಿಸಿಯಲ್ಲಿ ಬದಲಾದ ಹವಾಮಾನ – ರಾಜ್ಯದ ವಿವಿಧೆಡೆ ಮಳೆ, ಶಿವಮೊಗ್ಗದಲ್ಲಿ 5 ಜನ ಬದುಕಿದ್ದೇ ಹೆಚ್ಚು..!

ಬೆಂಗಳೂರು ದಿಢೀರ್ ಕೂಲ್ ಆಗಿದೆ. ಬಿಸಿಲ ಧಗೆಯಿಂದ ಬೆಂದು ಹೋದ ಬೀದರ್ ತಣ್ಣಗಾಗಿದೆ. ಇನ್ನು ಶಿವಮೊಗ್ಗ, ಚಿಕ್ಕಮಗಳೂರಲ್ಲಿ ಮಳೆ ಮಾಡಿದ ಅವಾಂತರ ಒಂದೆರೆಡಲ್ಲ.
ಇದನ್ನೂ ಓದಿ:ಕುಡಿದ ಮತ್ತಿನಲ್ಲಿ ಕತ್ತು ಸೀಳಿ ಹೆಂಡತಿ ಕೊಲೆ – ಗಂಡನ ಕೃತ್ಯಕ್ಕೆ ಬೆಚ್ಚಿ ಬಿದ್ದ ಬೆಂಗಳೂರು
ಕರ್ನಾಟಕ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಹವಾಮಾನ ಯಾರೂ ಊಹಿಸದ ಮಟ್ಟಿಗೆ ಯು-ಟರ್ನ್ ತೆಗೆದುಕೊಂಡಿದೆ. ಮಾರ್ಚ್ನಲ್ಲಿ ಬಿಸಿಲಿನಿಂದ ಬಳಲುತ್ತಿರುವವರರು ಭಾನುವಾರ ಮತ್ತು ಸೋಮವಾರ ತಣ್ಣಗೆ ಇದ್ದಾರೆ. ಇದಕ್ಕೆಲ್ಲಾ ಕಾರಣ ವೇಗವಾಗಿ ಬೀಸುವ ಗಾಳಿ ಮತ್ತು ಅಲ್ಲಲ್ಲಿ ಧಾರಾಕಾರ ಸುರಿದ ಮಳೆ. ಹೌದು. ರಾಜ್ಯದ ಹಲವೆಡೆ ಅಕಾಲಿಕ ಮಳೆ ಶುರುವಾಗಿದೆ. ಚಿಕ್ಕಮಗಳೂರು, ಶಿವಮೊಗ್ಗ, ಹಾವೇರಿ, ಬೆಳಗಾವಿ ಹಾಗೂ ಬೀದರ್ ಜಿಲ್ಲೆಯಲ್ಲಿ ಭಾರೀ ಮಳೆ ಆಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ವಿಪರೀತ ಮಳೆಗೆ ಮರವೊಂದು ರಸ್ತೆಗುರುಳಿ ಚಿಕ್ಕಮಗಳೂರು, ಆಲ್ದೂರು,ಬಾಳೆಹೊನ್ನೂರು ರಸ್ತೆಯಲ್ಲಿ ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಆಗಿತ್ತು. ಚಿಕ್ಕಮಗಳೂರು ತಾಲೂಕಿನ ಮುತ್ತೋಡಿ, ಕಡಬಗೆರೆ ಭಾಗದಲ್ಲೂ ಧಾರಾಕಾರ ಮಳೆ ಸುರಿದಿದೆ. ಮೂಡಿಗೆರೆ, ಓಖಪುರ ತಾಲೂಕಿನ ಹಲವೆಡೆ ಆಲಿಕಲ್ಲು ಮಳೆ ಸುರಿದಿದೆ.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬೆಳ್ಳೂರಿನಲ್ಲಿ ಗಾಳಿ ಮಳೆಗೆ ಮನೆಯ ಮೇಲೆ ತೆಂಗಿನಮರ ಉರುಳಿದೆ. ಅದೃಷ್ಟವಶಾತ್ ಮನೆಯಲ್ಲಿದ್ದ ಐವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮರ ಬಿದ್ದು ಹಲವರಿಗೆ ಗಾಯವಾಗಿದೆ. ಅಲ್ಲದೇ, ಹಾವೇರಿ, ಬೆಳಗಾವಿ, ಬೀದರ್ನಲ್ಲೂ ಜೋರು ಮಳೆ ಸುರಿದಿದೆ. ಮತ್ತೊಂದೆಡೆ ಬೆಂಗಳೂರು ಕೂಲ್ ಕೂಲ್ ಆಗಿದೆ.
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಪಟ್ಟಣದಲ್ಲಿ ಭಾನುವಾರ ಸಂಜೆ ಅಬ್ಬರದ ಗಾಳಿ ಮಳೆ ಸುರಿದಿದೆ. ಜೊತೆಗೆ ಆಲಿಕಲ್ಲು ಮಳೆ ಸುರಿದಿದೆ. ಮುಂಡಗೋಡ–ಪಾಳ–ಹಾನಗಲ್ ರಸ್ತೆಯಲ್ಲಿ ಮರ ಉರುಳಿಬಿದ್ದಿದೆ.ಮರ ಹೆದ್ದಾರಿಯ ಮಧ್ಯೆ ಬಿದ್ದ ಪರಿಣಾಮ ವಾಹನ ಸವಾರರು ಕೆಲಕಾಲ ಪರದಾಡಬೇಕಾಯಿತು. ಇದರ ಮಧ್ಯೆ ಎಲ್ಪಿಜಿ ಗ್ಯಾಸ್ ಕೊರತೆಯಿಂದ ಕಂಗೆಟ್ಟಿರುವ ಜನ ಮರವನ್ನು ಸೌದೆಗಾಗಿ ಕತ್ತರಿಸಿಕೊಳ್ಳಲು ಮುಗಿಬಿದ್ದಿದ್ದು ಕಂಡು ಬಂತು.
ಹವಾಮಾನ ಇಲಾಖೆಯ ಪ್ರಕಾರ, ಹಲವಾರು ರಾಜ್ಯಗಳಲ್ಲಿ ಬಲವಾದ ಗಾಳಿಯೊಂದಿಗೆ ಗುಡುಗು ಸಹಿತ ಮಳೆ ಮತ್ತು ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ. ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ್ ಜೊತೆಗೆ, ಪಂಜಾಬ್, ಹರಿಯಾಣ, ದೆಹಲಿ, ಉತ್ತರ ಪ್ರದೇಶ ಮತ್ತು ರಾಜಸ್ಥಾನದ ಕೆಲವು ಭಾಗಗಳಲ್ಲಿ ಗಂಟೆಗೆ 40 ರಿಂದ 60 ಕಿಲೋಮೀಟರ್ ವೇಗದಲ್ಲಿ ಬಲವಾದ ಗಾಳಿ ಬೀಸಬಹುದು ಮತ್ತು ಕೆಲವು ಸ್ಥಳಗಳಲ್ಲಿ ಗಂಟೆಗೆ 70 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸಬಹುದು.

ನೋಡಿರಿ

