ಜಲಾಶಯಗಳಲ್ಲಿ ಕುಸಿಯುತ್ತಿದೆ ನೀರಿನ ಮಟ್ಟ – ರಾಜ್ಯಕ್ಕೆ ಎದುರಾಗಲಿದ್ಯಾ ನೀರಿನ ಅಭಾವ?

ಜಲಾಶಯಗಳಲ್ಲಿ ಕುಸಿಯುತ್ತಿದೆ ನೀರಿನ ಮಟ್ಟ – ರಾಜ್ಯಕ್ಕೆ ಎದುರಾಗಲಿದ್ಯಾ ನೀರಿನ ಅಭಾವ?

ಬೆಂಗಳೂರು: ರಾಜ್ಯದಲ್ಲಿ ಒಂದೆಡೆ ಬಿಸಿಲಿನ ಝಳ ಹೆಚ್ಚಾಗಿದ್ರೆ, ಇನ್ನೊಂದೆಡೆ ಮುಂಗಾರು ಪೂರ್ವ ಮಳೆ ಕೊರತೆ ಉಂಟಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಜಲಾಶಯಗಳಲ್ಲಿ ನೀರಿನ ಮಟ್ಟ ಅತ್ಯಂತ ವೇಗವಾಗಿ ಕುಸಿಯುತ್ತಿದ್ದು, ನೀರಿನ ಅಭಾವ ಎದುರಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ  (ಕೆಎಸ್ಎನ್ ಡಿಎಂಸಿ) ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ಜನವರಿ 1 ರಿಂದ ಮೇ 31, 2023 ರವರೆಗೆ 129 ಮಿಮೀ ಸಾಮಾನ್ಯ ಪೂರ್ವ ಮುಂಗಾರು ಮಳೆಯಾಗಬೇಕಿತ್ತು. ಆದರೆ ಈ ರಾಜ್ಯದಲ್ಲಿ ಕೇವಲ 39.7 ಮಿಮೀ ಮಳೆಯಾಗಿದೆ. ಅಲ್ಲದೆ, ಜನವರಿ 1 ರಿಂದ ಮೇ 1, 2023 ರವರೆಗೆ ರಾಜ್ಯದಲ್ಲಿ ಸಾಮಾನ್ಯ 48 ಮಿಮೀ ಮಳೆಗೆ ಹೋಲಿಸಿದರೆ ಕೇವಲ 40 ಮಿಮೀ ಮಳೆಯಾಗಿದೆ.

ಇದನ್ನೂ ಓದಿ: ಕೇದಾರನಾಥದಲ್ಲಿ ಮಳೆ, ಹಿಮಪಾತ – ಮುಂದಿನ 3 ದಿನಗಳ ಕಾಲ ಯೆಲ್ಲೋ ಅಲರ್ಟ್ ಘೋಷಣೆ

ತುಂಗಭದ್ರಾ ಜಲಾಶಯದಲ್ಲಿ ಸದ್ಯ ಶೇ.3ರಷ್ಟು ನೀರಿನ ಸಂಗ್ರಹವಿದೆ. ಈ ಜಲಾಶಯದಲ್ಲಿ 2.81 ಟಿಎಂಸಿ ನೀರು ಇದ್ದು, ಒಟ್ಟು ಸಂಗ್ರಹ ಸಾಮರ್ಥ್ಯ 105.79 ಟಿಎಂಸಿ ಇದೆ. ಕಳೆದ ವರ್ಷ ಇದೇ ಅವಧಿಯಲ್ಲಿ 8.87 ಟಿಎಂಸಿ ನೀರು ಸಂಗ್ರಹವಾಗಿತ್ತು. ವರದಿಯ ಪ್ರಕಾರ, ಪ್ರಸ್ತುತ ರಾಜ್ಯದ ಜಲಾಶಯಗಳ ಜಲವಿದ್ಯುತ್ ಉತ್ಪಾದನಾ ಸಾಮರ್ಥ್ಯವು ಶೇ. 28 ರಷ್ಟು ಇದೆ ಎಂದು ಕೆಎಸ್ಎನ್ ಡಿಎಂಸಿ ತಿಳಿಸಿದೆ.

ಏಪ್ರಿಲ್ 29 ರ ಹೊತ್ತಿಗೆ, ರಾಜ್ಯದ 13 ಜಲಾಶಯಗಳಲ್ಲಿ ನೀರಿನ ಮಟ್ಟ ಸರಾಸರಿ ಶೇ. 27 ರಷ್ಟು ಇದೆ. ಜಲಾಶಯಗಳಲ್ಲಿ ಕಳೆದ ವರ್ಷ ಇದೇ ಅವಧಿಯಲ್ಲಿ 90.41 ಟಿಎಂಸಿ ನೀರು ಸಂಗ್ರಹವಾಗಿತ್ತು. ಆದರೆ ಈ ಬಾರಿ 83.55 ಟಿಎಂಸಿ ನೀರು ಸಂಗ್ರಹವಾಗಿದೆ ಎಂದು ಕೆಎಸ್ಎನ್ ಡಿಎಂಸಿ ಮಾಹಿತಿ ನೀಡಿದೆ.

ಕಾವೇರಿ ಜಲಾನಯನ ಜಲಾಶಯಗಳಲ್ಲಿ 40.74 ಟಿಎಂಸಿ ನೀರು ಸಂಗ್ರಹವಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 57.32 ಟಿಎಂಸಿ ನೀರು ಇತ್ತು. ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಕಳೆದ ವರ್ಷ 132.98 ಟಿಎಂಸಿ ಇತ್ತು. ಈ ವರ್ಷ 99.09 ಟಿಎಂಸಿ ಇದೆ.

suddiyaana