ಹಿಂದೂ ವಿರೋಧಿ ಸಂಘಟನೆಗಳಿಗೆ ರೆಡ್ ಕಾರ್ಪೆಟ್ ಹಾಸುತ್ತಿದೆ ರಾಜ್ಯಸರ್ಕಾರ! – ಬಿಜೆಪಿ ಕಿಡಿ

ಹಿಂದೂ ವಿರೋಧಿ ಸಂಘಟನೆಗಳಿಗೆ ರೆಡ್ ಕಾರ್ಪೆಟ್ ಹಾಸುತ್ತಿದೆ ರಾಜ್ಯಸರ್ಕಾರ! – ಬಿಜೆಪಿ ಕಿಡಿ

ಬೆಂಗಳೂರು: ರಾಜ್ಯ ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಬಂದಿದೆ. ಕಾಂಗ್ರೆಸ್‌ನ ಐದು ಗ್ಯಾರಂಟಿ ಜಾರಿ ವಿಳಂಬ, ಬೆಲೆ ಏರಿಕೆ ಮುಂತಾವದವುಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಾ ಬಂದಿದೆ. ಇದೀಗ ಕಾಂಗ್ರೆಸ್‌ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಕರ್ನಾಕಟ ಶಾಂತಿ ನೆಮ್ಮದಿ ಹಾಳು ಮಾಡಿದೆ ಮತ್ತೆ ಎಂದು ಕಿಡಿಕಾರಿದೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ಸಕಲ ಜೀವರಾಶಿಗಳಿಗೂ ಶಾಂತಿ, ನೆಮ್ಮದಿಯ ತವರೂರಾಗಿದ್ದ ಕರ್ನಾಟಕವನ್ನು, ಕಾಂಗ್ರೆಸ್‌ ಸರ್ಕಾರ ತನ್ನ ಸ್ವಾರ್ಥ ರಾಜಕಾರಣದ ಸಿದ್ಧಾಂತಗಳನ್ನು ಈಡೇರಿಸಲು ಅಶಾಂತಿಯ ಬೀಡನ್ನಾಗಿಸುತ್ತಿದೆ. ತಾನು ಅಧಿಕಾರ‌ಕ್ಕೇರಿದ್ದು ಜನಕಲ್ಯಾಣಕ್ಕೆ ಎಂಬುದನ್ನು ಮರೆತು, ಮೊದಲ ದಿನದಿಂದಲೂ ತನ್ನ ಹಿಂದು ವಿರೋಧಿ ನಿಲುವನ್ನು ಪ್ರದರ್ಶಿಸುತ್ತಾ, ಪೋಷಿಸಿಕೊಂಡು ಬರುತ್ತಿದೆ ಎಂದು ಕಿಡಿಕಾರಿದೆ.

ಇದನ್ನೂ ಓದಿ: ಇನ್ನುಮುಂದೆ ಪಿಯುಸಿ ವಿದ್ಯಾರ್ಥಿಗಳಿಗೆ 80 ಅಂಕಗಳಿಗೆ ಎಕ್ಸಾಂ – ಪಾಸ್‌ ಮಾರ್ಕ್ಸ್ ಗೆ ಷರತ್ತು ಅನ್ವಯ!

ಸರ್ಕಾರದ ಶುರುವಾತಿನಲ್ಲಿಯೇ ಸಚಿವ ಪ್ರಿಯಾಂಕ್‌ ಖರ್ಗೆ ಹಿಂದೂಪರ ಸಂಘಟನೆಗಳನ್ನು ಮುಲಾಜಿಲ್ಲದೆ ಬಂಧಿಸಿ ಎಂಬ ಸಂದೇಶವನ್ನು ಪೊಲೀಸ್ ಇಲಾಖೆಗೆ ನೀಡಿದ್ದರು. ಅಷ್ಟೇ ಅಲ್ಲದೇ, ಸಾರ್ವಜನಿಕ ಪೂಜೆ ಪ್ರಾರ್ಥನೆಗಳಿಗೆ ಅನಾವಶ್ಯಕ ಅನುಮತಿಗಳನ್ನು ಪಡೆಯುವ ಆದೇಶಗಳೆಲ್ಲವೂ ಸರ್ಕಾರದ ಹಿಂದೂ ವಿರೋಧಿ ನಿಲುವಿಗೆ ಸ್ಪಷ್ಟ ಉದಾಹರಣೆ. ಹಿಂದೂಪರ/ರಾಷ್ಟ್ರಪರ ಸಂಘಟನೆಯ ಕಾರ್ಯಕರ್ತರನ್ನು ಗುರುತಿಸಿ, ನೋಟಿಸ್‌ಗಳನ್ನು ನೀಡಿ, ಮಾನಸಿಕ ಕಿರುಕುಳ ನೀಡಲು ಆರಂಭಿಸಿದ್ದಾರೆ. ಹಿಂದೂ ಸಂಘಟನೆಗಳನ್ನು ಪ್ರತ್ಯಕ್ಷವಾಗಿ ವಿರೋಧಿಸುತ್ತಾ, ಹಿಂದೂ ವಿರೋಧಿ ಸಂಘಟನೆಗಳನ್ನು ಪರೋಕ್ಷವಾಗಿ ಬೆಂಬಲಿಸುವ ನೀತಿಯಿಂದ, ಸಮಾಜಘಾತುಕ ಶಕ್ತಿಗಳು ಈಗ ಸಂಪೂರ್ಣ ಬಾಲ ಬಿಚ್ಚಿವೆ ಎಂದು ಆಕ್ರೋಶ ಹೊರಹಾಕಿದೆ.

ಬಿಜೆಪಿ ಸರ್ಕಾರ ತಂದಿದ್ದ ಮತಾಂತರ ನಿಷೇಧ ಕಾಯ್ದೆ & ಗೋ ಹತ್ಯೆ ನಿಷೇಧ ಕಾಯ್ದೆಯನ್ನು ವಾಪಸ್ ಪಡೆಯುತ್ತೇವೆಂದು ಹೇಳುವ ಮೂಲಕ, ಸಮಾಜದಲ್ಲಿ ಅಶಾಂತಿ ಸೃಷ್ಟಿಸಲೆಂದೇ ಇರುವಂತಹ ಮತಾಂಧರಿಗೆ ಉತ್ತೇಜನ ನೀಡುತ್ತಿದ್ದಾರೆ. ಸಾಲು ಸಾಲು ಹಿಂದೂಪರ ಸಂಘಟನೆಯ ಕಾರ್ಯಕರ್ತರ ಮೇಲೆ ಹಲ್ಲೆ ಹಾಗೂ ಕೊಲೆಗಳು ನಡೆದರೂ, ಸರ್ಕಾರ ಮಾತ್ರ ಕಣ್ಣಿಗೆ ಬಟ್ಟೆ ಕಟ್ಟಿಕೊಂಡಂತೆ ವರ್ತಿಸುವ ಮೂಲಕ, ಹಿಂದೂ ವಿರೋಧಿ ಸಂಘಟನೆಗಳಿಗೆ ರಾಜ್ಯದಲ್ಲಿ ರೆಡ್ ಕಾರ್ಪೆಟ್ ಹಾಸುತ್ತಿದೆ ಎಂದು ಕಿಡಿಕಾರಿದೆ.

ತನ್ನ ಆಡಳಿತದ ದಯನೀಯ ವೈಫಲ್ಯವನ್ನು ಜನರ ಗಮನದಿಂದ ಬೇರೆಡೆ ಸೆಳೆಯಲು, ಕಾಂಗ್ರೆಸ್‌ ಸರ್ಕಾರ ರಾಜ್ಯದ ಕಾನೂನು & ಸುವ್ಯವಸ್ಥೆಯನ್ನು ಅಡವಿಟ್ಟಿದೆ. ಈ ಕಾರಣಕ್ಕಾಗಿ ರಾಜ್ಯಾದ್ಯಂತ ಮತಾಂಧರು, ಜಿಹಾದಿಗಳು ಸರ್ಕಾರದ ಬೆಂಬಲ ತಮಗಿದೆ ಎಂದು ಹಿಂದೂ ಸಮಾಜದ ಮೇಲೆ ಕ್ರೌರ್ಯ ಮೆರೆಯುತ್ತಿದ್ದಾರೆ ಎಂದು ಬಿಜೆಪಿ ಟ್ವೀಟ್‌ ಮುಖಾಂತರ ಕಿಡಿಕಾರಿದೆ.

suddiyaana