ಪಲಾವ್ ಗೆ ವಿಷ ಹಾಕಿ ತಂದೆ ತಾಯಿಯನ್ನೇ ಕೊಂದ ನೀಚ – ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಿದ್ದವನು ಕೊನೇ ಕ್ಷಣದಲ್ಲಿ ಸಿಕ್ಕಿಬಿದ್ದ

ಪಲಾವ್ ಗೆ ವಿಷ ಹಾಕಿ ತಂದೆ ತಾಯಿಯನ್ನೇ ಕೊಂದ ನೀಚ – ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಿದ್ದವನು ಕೊನೇ ಕ್ಷಣದಲ್ಲಿ ಸಿಕ್ಕಿಬಿದ್ದ

ತಮ್ಮ ಹಸಿವು ಮರೆತು, ತಮ್ಮೆಲ್ಲಾ ನೋವುಗಳನ್ನ ನುಂಗಿಕೊಂಡು ಆ ದಂಪತಿ ಮಗನನ್ನ ಪ್ರೀತಿಯಿಂದ ಬೆಳೆಸಿದ್ದರು. ಕೇಳಿದ್ದನ್ನೆಲ್ಲಾ ಕೊಡಿಸಿ ದೊಡ್ಡವನನ್ನಾಗಿ ಮಾಡಿದ್ರು. ದೇವಸ್ವರೂಪಿಯಾದ ಅಪ್ಪ ಅಮ್ಮನನ್ನ ಜೋಪಾನವಾಗಿ ಕಾಪಾಡಿಕೊಳ್ಳಬೇಕಾದ ಮಗ ಮಾಡಿದ್ದು ಮಾತ್ರ ಮಾನಗೇಡಿ ಕೆಲಸ. ಜನ್ಮ ಕೊಟ್ಟವರನ್ನೇ ವಿಷ ಹಾಕಿ ಕೊಂದಿದ್ದಾನೆ.

ಇದನ್ನೂ ಓದಿ : ಕೈದಿಗಳ ಸಂಖ್ಯೆಯಲ್ಲೂ ಅಮೆರಿಕ ನಂ.1.. ಭಾರತಕ್ಕೆ ಎಷ್ಟನೇ ಸ್ಥಾನ? – ಟಾಪ್ 10 ದೇಶಗಳ ಬಗ್ಗೆ ಇಲ್ಲಿದೆ ಮಾಹಿತಿ

ಹಾಸನದಲ್ಲಿ ಕೆಲ ದಿನಗಳ ಹಿಂದಷ್ಟೇ ದಂಪತಿ ಕಲುಷಿತ ಆಹಾರ ಸೇವಿಸಿ ಸಾವನ್ನಪ್ಪಿದ್ದರು. ಆದ್ರೀಗ ಇದೇ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಸಾವಿನ ರಹಸ್ಯ (Death Secret) ಬಯಲಾಗಿದೆ. ಪುತ್ರನೇ ತಂದೆ-ತಾಯಿಗೆ ವಿಷ (Poison) ಹಾಕಿ ಕೊಲೆ ಮಾಡಿರೋದು ತನಿಖೆಯಲ್ಲಿ ತಿಳಿದು ಬಂದಿದೆ. 27 ವರ್ಷದ ಮಂಜುನಾಥ್ ತಂದೆ-ತಾಯಿಯನ್ನು ಕೊಂದ ಮಗ. ಆಗಸ್ಟ್ 15ರಂದು ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಬಿಸಿಲಹಳ್ಳಿ (Bisilahalli, Hassan) ಗ್ರಾಮದ ಉಮಾ (48) ಮತ್ತು ನಂಜುಂಡಪ್ಪ (55) ಮೃತಪಟ್ಟಿದ್ದರು. ಬೆಳಗ್ಗೆ ತಿಂಡಿ ತಿಂದವವರು ಮೃತರಾಗಿದ್ದರಿಂದ ಕಲುಷಿತ ಆಹಾರ ಸೇವನೆ ಎಂದು ಹೇಳಲಾಗಿತ್ತು. ಆದ್ರೆ ಉಮಾ ಮತ್ತು ನಂಜುಂಡಪ್ಪ ದಂಪತಿಯ ಕಿರಿಯ ಮಗ ಪೋಷಕರ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.

ಗ್ರಾಮಸ್ಥರು ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಂಡ ವೇಳೆ ಪೊಲೀಸರು ಗ್ರಾಮಕ್ಕೆ ಆಗಮಿಸಿದ್ದರು. ಈ ವೇಳೆ ಗ್ರಾಮಸ್ಥರ ಮನವೊಲಿಸಿ ಮೃತದೇಹಗಳ ಮರಣೋತ್ತರ ಶವ ಪರೀಕ್ಷೆ ನಡೆಸಿ, ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ರು. ಆದರೆ ತನಿಖೆ ವೇಳೆ ಸಾವಿನ ಸತ್ಯ ಬಯಲಾಗಿದೆ. ಆರೋಪಿ ಮಂಜುನಾಥ್, ಸಹಕಾರ ಸಂಘಗಳಲ್ಲಿ ತಾಯಿ ಉಮಾ ಮಾಡಿದ್ದ ಸಾಲದ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದನು. ಹಾಗಾಗಿ ತಾಯಿ ಹಣ ಹಿಂದಿರುಗಿಸುವಂತೆ ಪೀಡಿಸುತ್ತಿದ್ದರು. ಇಷ್ಟು ಮಾತ್ರವಲ್ಲದೇ ವಿಧವೆ ಜೊತೆ ಮಂಜುನಾಥ್ ಅಕ್ರಮ ಸಂಬಂಧ ಹೊಂದಿದ್ದನು. ಇದನ್ನು ಸಹ ತಾಯಿ ಉಮಾ ವಿರೋಧಿಸಿದ್ದರು. ಆಗಸ್ಟ್​ 15ರ ಬೆಳಗ್ಗೆ ಉಮಾ ತಿಂಡಿಗೆ ಪುಲಾವ್ ಮಾಡಿದ್ದರು. ಮೊದಲು ಪುಲಾವ್ ತಿಂದು ಅದಕ್ಕೆ ಕಳೆನಾಶಕ ಸೇರಿಸಿದ್ದನು. ಕಳೆನಾಶಕ ಮಿಶ್ರಿತ ಆಹಾರ ಸೇವಿಸಿದ್ದ ಉಮಾ ಮತ್ತು ನಂಜುಂಡಪ್ಪ ಮೃತರಾಗಿದ್ದರು. ತಂದೆ-ತಾಯಿ ಸಾವಿನ ಬಳಿಕ ಕಲುಷಿತ ಆಹಾರ ಸೇವನೆ ಮಾಡಿ ಮೃತರಾಗಿದ್ದಾರೆ ಎಂದು ಸುದ್ದಿ ಹಬ್ಬಿಸಿ ಅಂತ್ಯಕ್ರಿಯೆಗೂ ಸಿದ್ಧತೆ ನಡೆಸಿದ್ದನು. ಆದ್ರೆ ಮತ್ತೋರ್ವ ಮಗನ ದೂರಿನ ಮೇರೆಗೆ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

suddiyaana