ಸೋಲಿನ ಆಘಾತ.. ಬಿಜೆಪಿಯಲ್ಲಿ ವಿಪಕ್ಷನಾಯಕನ ಆಯ್ಕೆ ಕಗ್ಗಂಟು – ರೇಸ್ ನಲ್ಲಿ ಯಾರ್ಯಾರು..?

ಸೋಲಿನ ಆಘಾತ.. ಬಿಜೆಪಿಯಲ್ಲಿ ವಿಪಕ್ಷನಾಯಕನ ಆಯ್ಕೆ ಕಗ್ಗಂಟು – ರೇಸ್ ನಲ್ಲಿ ಯಾರ್ಯಾರು..?

ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಿದ್ದ ಬಳಿಕ ಕಾಂಗ್ರೆಸ್ ಗೆ ಸ್ಪಷ್ಟ ಬಹುಮತ ಸಿಕ್ಕರೂ ಸಿಎಂ ಆಯ್ಕೆಯೇ ಕಗ್ಗಂಟಾಗಿತ್ತು. ಬರೋಬ್ಬರಿ 5 ದಿನಗಳ ಹಗ್ಗಜಗ್ಗಾಟದ ಬಳಿಕ ಸಿದ್ದರಾಮಯ್ಯ ಸಿಎಂ ಆಗಿ ಹಾಗೂ ಡಿ.ಕೆ ಶಿವಕುಮಾರ್ ಡಿಸಿಎಂ ಆಯ್ಕೆಯಾದ್ರು. ಇದೀಗ ಬಿಜೆಪಿಯಲ್ಲೂ ಕೂಡ ವಿಪಕ್ಷನಾಯಕನ ಆಯ್ಕೆಗೆ ಭಾರೀ ಸರ್ಕಸ್ ನಡೀತಿದೆ. ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದು 4 ದಿನಗಳಾದರೂ ವಿರೋಧ ಪಕ್ಷದ ನಾಯಕ ಆಯ್ಕೆಯಾಗಿಲ್ಲ. ಜೊತೆಗೆ ಯಾರನ್ನ ಮಾಡಲಾಗುತ್ತೆ ಎನ್ನುವ ಪ್ರಶ್ನೆಗೂ ಬಿಜೆಪಿಯಲ್ಲಿ ಉತ್ತರ ಸಿಕ್ಕಿಲ್ಲ. ಚುನಾವಣಾ ಫಲಿತಾಂಶ ಬಂದು 10 ದಿನಗಳಾಗಿದ್ದು, ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆದಿಲ್ಲ. ವಿಪಕ್ಷ ನಾಯಕ, ಉಪನಾಯಕ ಮತ್ತು ಸಚೇತಕನ ಆಯ್ಕೆಯಲ್ಲೂ ಜಾತಿ ರಾಜಕಾರಣ ಕೆಲಸ ಮಾಡುತ್ತಿದೆಯೇ? ಹೈಕಮಾಂಡ್ ನಿರ್ಣಯವೇ ಅಂತಿಮವೇ? ಅಲ್ಲದೆ ನಾಯಕರ ಸ್ಥಾನವನ್ನು ತುಂಬಲು ಯಾವೆಲ್ಲ ಲೆಕ್ಕಾಚಾರಗಳು ಮುಖ್ಯವಾಗುತ್ತವೆ ಎನ್ನುವ ಕುತೂಹಲ ಮನೆ ಮಾಡಿದೆ.

ಇದನ್ನೂ ಓದಿ : ರಾಜ್ಯ ವಿಧಾನಸಭಾ ಅಧಿವೇಶನ – ನೂತನ ಶಾಸಕರ ಪ್ರಮಾಣವಚನ ಸ್ವೀಕಾರ

ವಿಧಾನಸಭಾ ಚುನಾವಣೆಯಲ್ಲಿ ಹಲವು ಘಟಾನುಘಟಿ ನಾಯಕರು ಸೋಲನ್ನಪ್ಪಿದ್ದು, ಬಿಜೆಪಿಗೆ ದೊಡ್ಡ ಹಿನ್ನಡೆಯಾಗಿದೆ. ಇದೇ ಆಘಾತದಲ್ಲಿ ವಿಪಕ್ಷನಾಯಕನ ಸ್ಥಾನಕ್ಕೆ ಬಿಜೆಪಿ ಇನ್ನೂ ಯಾರ ಹೆಸರನ್ನು ಸೂಚಿಸಿಲ್ಲ. ಅದರಲ್ಲೂ ಸದನದಲ್ಲಿ ಆಡಳಿತ ಪಕ್ಷವನ್ನು ಸಮರ್ಥವಾಗಿ ಕಟ್ಟಿ ಹಾಕುವ ಯಾವ ನಾಯಕರು ಇಲ್ಲದಂತಾಗಿದೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai), ಕಾರ್ಕಳ ಶಾಸಕ ಸುನೀಲ್ ಕುಮಾರ್  (Sunil Kumar) ಹಾಗೂ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಅವರ ಹೆಸರು ವಿಪಕ್ಷ ನಾಯಕನ ಸ್ಥಾನದ ರೇಸ್‍ನಲ್ಲಿವೆ. ಉಪನಾಯಕನ ಸ್ಥಾನಕ್ಕೆ ಮಾಜಿ ಸಚಿವ ಆರ್.ಅಶೋಕ್ (R Ashok), ಅಶ್ವತ್ಥ್ ನಾರಾಯಣ್ ಮತ್ತು ಅರವಿಂದ ಬೆಲ್ಲದ್ ಹೆಸರು ಕೇಳಿ ಬಂದಿವೆ.

ಇನ್ನು ವಿಪಕ್ಷ ಮುಖ್ಯ ಸಚೇತಕನ ಸ್ಥಾನಕ್ಕೆ ಅಭಯ್ ಪಾಟೀಲ್ ಹಾಗೂ ಸತೀಶ್ ರೆಡ್ಡಿ ಅವರ ಹೆಸರು ಕೇಳಿಬಂದಿದೆ. ಅಲ್ಲದೆ ವಿಪಕ್ಷ ನಾಯಕನ ಸ್ಥಾನ ಲಿಂಗಾಯತರಿಗೆ, ಉಪನಾಯಕನ ಸ್ಥಾನ ಒಕ್ಕಲಿಗರಿಗೆ ಹಾಗೂ ಸಚೇತಕನ ಸ್ಥಾನ ಒಬಿಸಿಗೆ ನೀಡಲು ಚರ್ಚೆ ನಡೆಸಲಾಗುತ್ತಿದೆ.

suddiyaana