ಅಕ್ಕಿ ಬೇಳೆ- ಕಾಳು ಬಲು ದುಬಾರಿ! – ದವಸ ಧಾನ್ಯ ಬೆಲೆ ಏರಿಕೆಗೆ ಕಾರಣ ಏನು?

ಅಕ್ಕಿ ಬೇಳೆ- ಕಾಳು ಬಲು ದುಬಾರಿ! – ದವಸ ಧಾನ್ಯ ಬೆಲೆ ಏರಿಕೆಗೆ ಕಾರಣ ಏನು?

ಬೆಂಗಳೂರು: ಅತಿವೃಷ್ಟಿ, ಅನಾವೃಷ್ಟಿಯಿಂದಾಗಿ ರಾಜ್ಯದಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಭಾರಿ ಮಳೆಯಿಂದಾಗಿ ಬೆಳೆ ನಾಶವಾದರೆ, ಮಳೆ ಕೊರತೆಯಿಂದಾಗಿ ನೀರಿಲ್ಲದೆ ಬೆಳೆಗಳು ನಾಶವಾಗುತ್ತಿದೆ. ಮುಂಗಾರು ಮಳೆ ಕೊರತೆಯಿಂದ ಕೃಷಿ ಬೆಳೆಗಳಿಗೆ ಸಂಕಷ್ಟ ಎದುರಾಗಿದ್ದು, ದಿನಸಿ ಪದಾರ್ಥಗಳ ಬೆಲೆ ಗಗನಕ್ಕೇರುತ್ತಿವೆ. ಅದರಲ್ಲೂ ತೊಗರಿ, ಹೆಸರು, ಉದ್ದು, ಕಡಲೆ, ಗೋಧಿ, ಅಕ್ಕಿ ಸೇರಿದಂತೆ ಹಲವು ಆಹಾರ ಧಾನ್ಯಗಳ ಬೆಲೆ ಕಳೆದ ಎರಡು ತಿಂಗಳಿಂದೀಚೆಗೆ ಶೇ.20-30ರಷ್ಟು ಏರಿಕೆಯಾಗಿದೆ.

ಮಳೆ ಕೊರತೆಯಿಂದಾಗಿ ಧಾನ್ಯಗಳ ಉತ್ಪಾದನೆ ಪ್ರಮಾಣ ಶೇ.30 ರಿಂದ 40ರಷ್ಟು ಕುಸಿಯುವ ಆತಂಕವಿದೆ. ಕಾವೇರಿ ಕೊಳ್ಳದ ಅಚ್ಚುಕಟ್ಟು ಪ್ರದೇಶದಲ್ಲಿಒಂದು ಬೆಳೆಗೂ ನೀರಿನ ತತ್ವಾರವಿದೆ. ಐಆರ್‌ 64, ಜಯ ಮುಂತಾದ ಸಾಮಾನ್ಯ ಭತ್ತದ ಇಳುವರಿ ಉತ್ಪಾದನೆ ಇಳಿಮುಖವಾಗಲಿದೆ. ಮಾರುಕಟ್ಟೆಗೂ ತಡವಾಗಿ ಪ್ರವೇಶಿಸುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಸಂಕಷ್ಟದಲ್ಲಿ ಸಿಲುಕಿದ್ದಾನೆ ಅನ್ನದಾತ! – ರಾಜ್ಯದಲ್ಲಿ ಒಂದೂವರೆ ವರ್ಷದಲ್ಲಿ 1,219 ರೈತರ ಆತ್ಮಹತ್ಯೆ!

ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.20ರಷ್ಟು ಏರಿಕೆಯಾಗಿದೆ. ತೊಗರಿಬೇಳೆ ಕೆ.ಜಿ.ಗೆ ಸಗಟು ದರದಲ್ಲಿ160 ರಿಂದ 170 ರೂ. ಇದೆ. ಚಿಲ್ಲರೆ ಮಾರಾಟದಲ್ಲಿ 200 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಎರಡು ತಿಂಗಳ ಹಿಂದೆ 130-135 ರೂ. ಇತ್ತು. ಹೆಸರು ಕಾಳು ಒಂದೇ ತಿಂಗಳಲ್ಲಿಸಗಟು ದರದಲ್ಲಿ ಕೆ.ಜಿ.ಗೆ 30 ರೂ. ಏರಿದೆ. 100-120 ರೂ. ಇದ್ದುದು ಇದೀಗ 150 ರೂ.ವರೆಗೆ ಏರಿಕೆಯಾಗಿದೆ. ಅಕ್ಕಿ, ಗೋಧಿ ಹಾಗೂ ಬೇಳೆಕಾಳುಗಳು ತಲಾ ಶೇ.20-25 ರಷ್ಟು ಏರಿಕೆಯಾಗಿವೆ. ಮಳೆ ಕೊರತೆಯಿಂದಾಗಿ ಬೆಳೆಯಿಲ್ಲ. ಹೀಗಾಗಿ, ಪೂರೈಕೆ ಕಡಿಮೆಯಾಗಿರುವುದರಿಂದ ಬೆಲೆಗಳು ಏರಿಕೆಯಾಗಿವೆ.

ಇನ್ನು ರಾಜ್ಯದಲ್ಲಿ ವಾರ್ಷಿಕ 65 ಲಕ್ಷ ಟನ್‌ ಭತ್ತ ಉತ್ಪಾದನೆಯಾಗುತ್ತದೆ. ಮಳೆ ಕೊರತೆಯಿಂದ 45 ಲಕ್ಷ ಟನ್‌ಗೆ ಕುಸಿಯುವ ಅಂದಾಜಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಅಕ್ಕಿ ರಫ್ತು ನಿಷೇಧಿಸಲಾಗಿದೆ. ಮುಂದಿನ ದಿನಗಳಲ್ಲಿಉತ್ತಮ ಗುಣಮಟ್ಟದ ಹಾಗೂ ಸಾಮಾನ್ಯ ಅಕ್ಕಿ ದರ ಮತ್ತಷ್ಟು ಏರಿಕೆಯಾಗುವ ದಿಗಿಲು ವ್ಯಕ್ತವಾಗುತ್ತಿದೆ.

ಪ್ರಸಕ್ತ ವರ್ಷದ ಪರಿಸ್ಥಿತಿ ಪ್ರಸಕ್ತ ವರ್ಷದ ಮುಂಗಾರು ಹಂಗಾಮಿಗೆ 82.35 ಲಕ್ಷ, ಹಿಂಗಾರಿನಲ್ಲಿ 25.38 ಲಕ್ಷ ಹಾಗೂ ಬೇಸಿಗೆ ಹಂಗಾಮಿನಲ್ಲಿ 6.54 ಲಕ್ಷ ಹೆಕ್ಟೇರ್‌ ಸೇರಿ ಒಟ್ಟು 114.27 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿಯಿದೆ. ಒಟ್ಟು 148.16 ಲಕ್ಷ ಟನ್‌ ಆಹಾರ ಧಾನ್ಯ, 13.84 ಲಕ್ಷ ಟನ್‌ ಎಣ್ಣೆಕಾಳುಗಳ ಉತ್ಪಾದನೆ ಗುರಿಯಿಟ್ಟುಕೊಳ್ಳಲಾಗಿದೆ. ಆದರೆ, ಮುಂಗಾರು ಹಂಗಾಮಿನಲ್ಲಿ ಶೇ. 26ರಷ್ಟು ಮಳೆ ಕೊರತೆಯಾಗಿದೆ. ನಿಗದಿತ 82.35 ಲಕ್ಷ ಹೆಕ್ಟೇರ್‌ ಪೈಕಿ ಆಗಸ್ಟ್‌ ಅಂತ್ಯದವರೆಗೆ 44.48 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿರುವ ಅಂದಾಜಿದೆ. ಸೆಪ್ಟೆಂಬರ್‌ 30ಕ್ಕೆ ಮುಂಗಾರು ಹಂಗಾಮಿನ ಅವಧಿ ಮುಗಿಯಲಿದ್ದು, ನಂತರ ಬಿತ್ತನೆ ಪ್ರದೇಶದ ಮಾಹಿತಿ ನಿಖರವಾಗಿ ತಿಳಿಯಲಿದೆ ಎನ್ನಲಾಗುತ್ತಿದೆ.

Shwetha M