ತೋಟಕ್ಕೆ ಮೇಯಲು ಬಂದ ಹಸುಗಳ ಮೇಲೆ ಗುಂಡು ಹಾರಿಸಿದ ಮಾಲೀಕ – ಉಡುಪಿಯಲ್ಲಿ 4 ರಾಸುಗಳು ಬಲಿ

ತೋಟಕ್ಕೆ ಮೇಯಲು ಬಂದ ಹಸುಗಳ ಮೇಲೆ ಗುಂಡು ಹಾರಿಸಿದ ಮಾಲೀಕ – ಉಡುಪಿಯಲ್ಲಿ 4 ರಾಸುಗಳು ಬಲಿ

ಹಸು, ಮೇಕೆ, ಕುರಿಗಳಿಗೆ ಮನುಷ್ಯರಂತೆ ಬೇಧವಿಲ್ಲ. ಇದು ನನ್ನದು ಇದು ನಿನ್ನದು ಎನ್ನುವ ದುರ್ಬುದ್ಧಿಯೂ ಇಲ್ಲ. ಹೀಗಾಗೇ ಮೇವು ಸಿಕ್ಕ ಕಡೆ ಹಸಿವು ನೀಗಿಸಿಕೊಳ್ಳುತ್ತವೆ. ಹೊಟ್ಟೆ ತುಂಬಿದ ಬಳಿಕ ಎಲ್ಲಾದರೂ ಒಂದು ಕಡೆ ಕುಳಿತು ಬಿಡುತ್ತವೆ. ಆದರೆ ಇಲ್ಲೊಬ್ಬ ಪಾಪಿ ತನ್ನ ತೋಟಕ್ಕೆ ಬಂದ ಹಸುಗಳಿಗೆ ಗುಂಡಿಟ್ಟಿದ್ದಾನೆ. ಬರೋಬ್ಬರಿ 6 ಹಸುಗಳ ಮೇಲೆ ಫೈರಿಂಗ್ ಮಾಡಿ ವಿಕೃತಿ ಮೆರೆದಿದ್ದಾನೆ.

ಹಸುಗಳು ಅಂದ್ರೆ ಸೌಮ್ಯ ಸ್ವಭಾವದ ಪ್ರಾಣಿಗಳು. ಆದರೆ ಅಂತಹ ಮುಗ್ದ ಹಸುಗಳ ಮೇಲೆ ತೋಟದ ಮಾಲೀಕನೊಬ್ಬ ಗುಂಡಿನ ದಾಳಿ (Shoot out) ನಡೆಸಿ ರಾಕ್ಷಸೀ ಕೃತ್ಯ ಮೆರೆದ್ದಿದ್ದಾನೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಬೆಳ್ಳಾಲ ಗ್ರಾಮದಲ್ಲಿ ಇಂತಹದೊಂದು ಪೈಶಾಚಿಕ ಕೃತ್ಯ ನಡೆದಿದೆ. ಸ್ಥಳೀಯ ನಿವಾಸಿ ನರಸಿಂಹ ಎಂಬಾತ ಪಕ್ಕದ ಮನೆಯ ಗೋವುಗಳ ಮೇಲೆ ಕೃತ್ಯ ಎಸಗಿದ್ದಾನೆ. ತನ್ನ ತೋಟಕ್ಕೆ ಮೇಯಲು ಬಂದಿವೆ ಎನ್ನುವ ಕಾರಣಕ್ಕೆ ಆರು ಹಸುಗಳ ಮೇಲೆ ಕೋವಿಯಿಂದ ಗುಂಡು ಹೊಡೆದಿದ್ದಾನೆ ಎಂದು ತಿಳಿದು ಬಂದಿದೆ. ಕೃತ್ಯದಿಂದ ಗುಲಾಬಿ ಎಂಬ ಮಹಿಳೆಗೆ ಸೇರಿದ 4 ಹಸುಗಳು ಸಾವನ್ನಪ್ಪಿದ್ದು, 2  ಹಸುಗಳಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಸದ್ಯ ಗಾಯಗೊಂಡಿರುವ ಹಸುಗಳಿಗೆ ಸ್ಥಳೀಯ ಪಶು ಚಿಕಿತ್ಸಾಲಯದಲ್ಲಿ ಚಿಕಿತ್ಸೆ ನೀಡಲಾಗಿದೆ.

ಇದನ್ನೂ ಓದಿ : ಮದುವೆಯಾಗದೇ ಗರ್ಭಿಣಿಯಾದ ಅಪ್ರಾಪ್ತ ಮಗಳು – ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ ಕುಟುಂಬಸ್ಥರು

ಕಿಡಿಗೇಡಿ ನರಸಿಂಹ ಎಂಬಾತ ನಾಡ ಕೋವಿಯಿಂದ ಗುಂಡು ಹಾರಿಸಿ ಹಸುಗಳನ್ನು ಕೊಂದಿದ್ದು, ಈವರೆಗೆ ಗುಂಡು ಬಿದ್ದು ನಾಲ್ಕು ಹಸುಗಳು ಸಾವನ್ನಪ್ಪಿವೆ ಎಂದು ತಿಳಿದು ಬಂದಿದೆ. ಸದ್ಯ ಹಸುಗಳ ಮಾಲೀಕರಾದ ಗುಲಾಬಿ ಎಂಬ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ನರಸಿಂಹ ನಾಪತ್ತೆಯಾಗಿದ್ದಾನೆ. ತನ್ನ ತೋಟಕ್ಕೆ ಹಸುಗಳು ಬರುತ್ತವೆ ಎಂಬ ಕಾರಣಕ್ಕೆ ಕೋವಿಯಿಂದ ಶೂಟ್ ಮಾಡಿರುವ ನರಸಿಂಹ, ಪ್ರಕರಣ ದಾಖಲಾಗುವುದಕ್ಕೂ ಮೊದಲು ಆರೋಪಿ ನರಸಿಂಹ ಹಸುಗಳ ಮಾಲೀಕರಿಗೆ ಜೀವ ಬೆದರಿಕೆ ಹಾಕಿದ್ದಾನೆ ಎಂಬ ಆರೋಪ ಕೇಳಿ ಬಂದಿದ್ದು, ಹಸುಗಳ ಮಾಲೀಕರ ತಲೆಗೆ ಕೋವಿಯಿಂದ ಗುರಿಯಿಟ್ಟು ಗುಂಡಿಟ್ಟು ಕೊಲ್ಲೋದಾಗಿ ಜೀವ ಬೆದರಿಕೆ ಹಾಕಿದ್ದಾನೆ. ಘಟನೆ ಸಂಬಂಧ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ನಾಪತ್ತೆಯಾಗಿರುವ ನರಸಿಂಹನಿಗಾಗಿ ಶೋಧ ನಡೆಸಿದ್ದಾರೆ.

 

Shantha Kumari