ಮನುಷ್ಯತ್ವವನ್ನೇ ಮರೆತರಾ ಜನ? – ಪ್ರೀತಿಸಿದ ಯುವತಿಯೊಂದಿಗೆ ಯುವಕ ಪರಾರಿಯಾಗಿದ್ದಕ್ಕೆ ತಾಯಿಯ ವಿವಸ್ತ್ರಗೊಳಿಸಿ ಹಲ್ಲೆ!

ಮನುಷ್ಯತ್ವವನ್ನೇ ಮರೆತರಾ ಜನ? – ಪ್ರೀತಿಸಿದ ಯುವತಿಯೊಂದಿಗೆ ಯುವಕ ಪರಾರಿಯಾಗಿದ್ದಕ್ಕೆ ತಾಯಿಯ ವಿವಸ್ತ್ರಗೊಳಿಸಿ ಹಲ್ಲೆ!

ಇಡೀ ದೇಶವೇ ತಲೆತಗ್ಗಿಸುವಂತಹ ಅಮಾನವೀಯ ಕೃತ್ಯವೊಂದು ಬೆಳಗಾವಿಯಲ್ಲಿ ನಡೆದಿದೆ. ಮಗ ಮಾಡಿದ ತಪ್ಪಿಗೆ ಗುಂಪೊಂದು ತಾಯಿಗೆ ಘನಘೋರ ಶಿಕ್ಷೆ ವಿಧಿಸಿದ್ದಾರೆ. ಪ್ರೀತಿಸಿದ ಯುವತಿಯೊಂದಿಗೆ ಮಗ ಓಡಿಹೋಗಿದ್ದಕ್ಕೆ ಆತನ ತಾಯಿಗೆ ಶಿಕ್ಷೆ ವಿಧಿಸಿದ್ದಾರೆ.

ಬೆಳಗಾವಿಯ ವಂಟಮೂರಿ ಗ್ರಾಮದಲ್ಲಿ ಈ ದುಷ್ಕೃತ್ಯ ನಡೆದಿದೆ. ಮಗ ಪ್ರೀತಿಸಿದ ಯುವತಿಯೊಂದಿಗೆ ಪರಾರಿಯಾಗಿದ್ದಕ್ಕೆ ಆಕೆಯ ಕುಟುಂಬಸ್ಥರು ಯುವಕನ  ತಾಯಿಯನ್ನು ಬೆತ್ತಲೆಗೊಳಿಸಿ ಅಮಾನವೀಯವಾಗಿ ಹಲ್ಲೆ ನಡೆಸಿದ್ದಾರೆ.

ಇದನ್ನೂ ಓದಿ: ಕಿಚ್ಚನ ಚಪ್ಪಾಳೆ ಬಗ್ಗೆ ನಮ್ರತಾ ಮತ್ತು ವಿನಯ್ ಅನುಮಾನ – ಸುದೀಪ್ ಮೇಲೆ ಇಂಥಾ ಅನುಮಾನ ಸರಿಯೇ ಬಿಗ್‌ಬಾಸ್?

ಅಷ್ಟಕ್ಕೂ ಆಗಿದ್ದೇನು?

ಮಹಿಳೆಯ ಮಗ ಅದೇ ಗ್ರಾಮದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಇದಕ್ಕೆ ಯುವತಿಯ ಕುಟುಂಬಸ್ಥರ ವಿರೋಧವಿತ್ತು. ಅಲ್ಲದೇ ಆಕೆಗೆ ಬೇರೆ ಯುವಕನ ಜೊತೆ ಮದುವೆ ಮಾಡಲು ಮುಂದಾಗಿದ್ದರು ಎಂದು ತಿಳಿದು ಬಂದಿದೆ. ಈ ವಿಚಾರ ಯುವಕನಿಗೆ ತಿಳಿಯುತ್ತಿದ್ದಂತೆ ಮಧ್ಯರಾತ್ರಿಯೇ ಯುವತಿಯೊಂದಿಗೆ ಪರಾರಿಯಾಗಿದ್ದಾನೆ.

ಪ್ರೇಮಿಗಳು ಮನೆಬಿಟ್ಟು ಹೋದ ವಿಚಾರ ತಿಳಿಯುತ್ತಿದ್ದಂತೆ, ರಾತ್ರೋ ರಾತ್ರಿ ಯುವತಿಯ ಕುಟುಂಬಸ್ಥರು ಯುವಕನ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಬಳಿಕ ಬಾಗಿಲು ಮುರಿದು ಒಳಗೆ ಮಲಗಿದ್ದ ಮಹಿಳೆಯ ಮೆರವಣಿಗೆ ಮಾಡಿ, ವಿವಸ್ತ್ರಗೊಳಿಸಿ ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ್ದಾರೆ.

ಈ ಸಂಬಂಧ ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಇದೀಗ ಪೊಲೀಸರು ಈ ಪ್ರಕರಣ ಸಂಬಂಧ 7 ಮಂದಿಯನ್ನು ಅರೆಸ್ಟ್‌ ಮಾಡಿದ್ದಾರೆ. ಅಷ್ಟೇ ಅಲ್ಲದೇ ಓಡಿ ಹೋಗಿರುವ ಯುವಕ, ಯುವತಿಗೆ ಪೊಲೀಸರ ಶೋಧ ಕಾರ್ಯ ಆರಂಭಿಸಿದ್ದಾರೆ. ಗ್ರಾಮದಲ್ಲಿ 2 ಕೆಎಸ್ ಆರ್ ಪಿ ತುಕಡಿ ಮತ್ತು ಪೊಲೀಸ್ ಬಂದೋಬಸ್ತ್​ ಅನ್ನು ಸಹ ನಿಯೋಜಿಸಲಾಗಿದೆ.

Shwetha M