ಪ್ರೇಯಸಿ ನೋಡಲು ಕದ್ದುಮುಚ್ಚಿ ಬಂದು ಬಾವಿಗೆ ಬಿದ್ದ – ನೀರಿಂದ ಎದ್ದ ಮೇಲೆ ಸಿಕ್ತು ಪ್ರೀತಿಗೆ ಒಪ್ಪಿಗೆ

ಪ್ರೇಯಸಿ ನೋಡಲು ಕದ್ದುಮುಚ್ಚಿ ಬಂದು ಬಾವಿಗೆ ಬಿದ್ದ – ನೀರಿಂದ ಎದ್ದ ಮೇಲೆ ಸಿಕ್ತು ಪ್ರೀತಿಗೆ ಒಪ್ಪಿಗೆ

ಈಗಿನ ಕಾಲದಲ್ಲಿ ಕೆಲ ಪ್ರೇಮಿಗಳಿಗೆ ತಮ್ಮ ಪ್ರೀತಿ ಉಳಿಸಿಕೊಳ್ಳಲು ಏನು ಬೇಕಾದರೂ ಮಾಡೋ ಭಂಡ ಧೈರ್ಯ ಬಂದಿರುತ್ತದೆ. ಹಾಗೇನೇ ಇಲ್ಲೊಬ್ಬ ಪ್ರೇಮಿಯಿದ್ದ. ಅವನಿಗೆ ಭಂಡಧೈರ್ಯವೋ, ಇಲ್ಲಾ ಪ್ರೇಯಸಿ ಮನೆಯವರ ಭಯವೋ.. ಏನೋ ಮಾಡಲು ಹೋಗಿ ಜೀವ ಉಳಿಸಿಕೊಂಡಿದ್ದೇ ಹೆಚ್ಚು. ಈ ಮರಾಯ ಮಧ್ಯರಾತ್ರಿ ಕದ್ದು ಮುಚ್ಚಿ ಹುಡುಗಿ ನೋಡಲು ಹೋಗಿ ಸೀದಾ ಹೋಗಿ ಬಿದ್ದಿದ್ದು ಬಾವಿಗೆ. ಪಾಪ.. ಪ್ರೇಮಿಯ ಆಯಸ್ಸೋ ಇಲ್ಲಾ ಪ್ರೀತಿಯ ಆಯಸ್ಸು ಗಟ್ಟಿಯಾಗಿರಬೇಕು. ಪ್ರೇಮಿ ಬಚಾವ್.. ಪ್ರೀತಿಯೂ ಸಕ್ಸಸ್.

ಈ ಘಟನೆ ನಡೆದದ್ದು, ಛಾಪ್ರ ಜಿಲ್ಲೆಯ ಮೋತಿರಾಜಪುರದಲ್ಲಿ. ಮುನ್ನರಾಜ್ ಎಂಬಾತ ನಾಲ್ಕು ವರ್ಷಗಳಿಂದ ಪ್ರೀತಿ ಬಲೆಗೆ ಸಿಲುಕಿದ್ದ. ಆಗಾಗ ಮುನ್ನರಾಜ್ ಪ್ರೇಯಸಿಯನ್ನು ಕದ್ದುಮುಚ್ಚಿ ಭೇಟಿಯಾಗಲು ಹೋಗುತ್ತಿದ್ದ. ಅಂತೆಯೇ ಮೊನ್ನೆ ಕೂಡ ಮುನ್ನರಾಜ್ ಮಧ್ಯರಾತ್ರಿ, ಮನೆಯಲ್ಲಿ ಎಲ್ಲರೂ  ಮಲಗಿರುವಾಗ ಪ್ರೇಯಸಿಯನ್ನು ಭೇಟಿಯಾಗಲು ತೆರಳಿದ್ದಾನೆ. ಮನೆ ಬಳಿ ಸಮೀಪಿಸುತ್ತಿದ್ದಂತೆ ಮೆಲ್ಲನೆ ಹೆಜ್ಜೆಗಳನ್ನಿಟ್ಟುಕೊಂಡು ಬಂದು ಮಹಡಿ ಮೇಲೆ ಹತ್ತಲು ಯತ್ನಿಸಿದ್ದಾನೆ. ಈ ವೇಳೆ ಸದ್ದು ಉಂಟಾಗಿದೆ. ಶಬ್ದ ಬಂದ ಕೂಡಲೇ ಮನೆಗೆ ಯಾರೋ ಬಂದಿದ್ದಾರೆ ಎಂದು ಯುವತಿ ಮನೆಯವರು ಎಚ್ಚರಗೊಂಡಿದ್ದಾರೆ.

ಇದನ್ನೂ ಓದಿ: ಕೊಳಕು ಜೀನ್ಸ್​ಪ್ಯಾಂಟ್ ಬೆಲೆ ಲಕ್ಷ ರೂಪಾಯಿ! – ಏನಿದರ ವಿಶೇಷತೆ?

ಮನೆ ಬಳಿ ಬಂದಿರುವವರು ಯಾರೆಂದು ನೋಡಿದ ವೇಳೆ ಮುನ್ನರಾಜ್ ಕಂಡಿದ್ದಾನೆ. ಗುರುತು ಪತ್ತೆಹಚ್ಚಲು ಹತ್ತಿರ ಹೋದಾಗ ಭಯದಿಂದ ಓಡಲು ಆರಂಭಿಸಿದ್ದಾನೆ. ಇನ್ನೇನು ಸಿಕ್ಕಿ ಬಿದ್ದು, ಪೆಟ್ಟು ತಿನ್ನುತ್ತೇನೆ ಎನ್ನುವಾಗ,  ಪ್ರಾಣ ಉಳಿಸಿಕೊಳ್ಳಲು ಮನೆ ಬಳಿ ಇದ್ದ ಬಾವಿಗೆ ಹಾರಿದ್ದಾನೆ.

ಈ ವೇಳೆ ಊರವರು ಮುನ್ನರಾಜ್​ನನ್ನು ಬಾವಿಯಿಂದ ಮೇಲಕ್ಕೆತ್ತಿ, ವಿಚಾರಿಸಿದ್ದಾರೆ. ಈ ವೇಳೆ ಇವರಿಬ್ಬರ ಪ್ರೇಮ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ಪ್ರೇಮಿಗಳು ಹಾಗೂ ಅವರಿಬ್ಬರ ಮನೆಯವರನ್ನು ಪಂಚಾಯ್ತಿ ಕಟ್ಟೆಯಲ್ಲಿ ಕೂರಿಸಿ ಸಂಧಾನ ಮಾಡಿಸಿದ್ದಾರೆ. ಅಲ್ಲದೇ ದೇವಸ್ಥಾನದಲ್ಲಿ ಮದುವೆ ಮಾಡಿಸಿರುವುದಾಗಿಯೂ ವರದಿಯಾಗಿದೆ.

suddiyaana